ನಿಮಿಷಾ ಪ್ರಿಯಾರನ್ನು ಬಿಡುಗಡೆ ಮಾಡುವುದಾದರೆ 11 ಕೋಟಿ ʼಬ್ಲಡ್ ಮನಿʼ ನೀಡುವ ಭರವಸೆ ನೀಡಿದ ಟ್ರಸ್ಟ್
photo | indianexpress
ಹೊಸದಿಲ್ಲಿ : ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹ್ದಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷ ಪ್ರಿಯಾ ಅವರ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿದೆ. ಕ್ಷಮಾದಾನ ಮತ್ತು ಬ್ಲಡ್ ಮನಿ ಕುರಿತು ಕೂಡ ಮಾತುಕತೆ ನಡೆಯುತ್ತಿದೆ.
ಈ ಮಧ್ಯೆ ಸೌದಿ ಅರೇಬಿಯಾದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಬ್ದುಲ್ ರಹೀಮ್ ಬಿಡುಗಡೆಗೆ ಸಹಾಯಾರ್ಥವಾಗಿ ನಿರ್ಮಿಸಿದ್ದ ಟ್ರಸ್ಟ್ ಈಗ ಸಂತ್ರಸ್ತ ಕುಟುಂಬವು ʼಬ್ಲಡ್ ಮನಿʼ ಸ್ವೀಕರಿಸಲು ಒಪ್ಪಿದರೆ 11 ಕೋಟಿ ರೂ.ನೀಡುವುದಾಗಿ ತಿಳಿಸಿದೆ.
ಮಾಧ್ಯಮದ ಜೊತೆ ಮಾತನಾಡಿದ ನಿಮಿಷಾ ಪ್ರಿಯಾ ಪರ ವಕೀಲ ಮತ್ತು ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್ ಪ್ರತಿನಿಧಿ ವಕೀಲ ಸುಭಾಷ್ ಚಂದ್ರನ್ ಕೆ ಆರ್, ʼಮರಣದಂಡನೆಯನ್ನು ಮುಂದೂಡುವುದು ಮತ್ತು ಹೆಚ್ಚಿನ ಮಾತುಕತೆಗಳಿಗೆ ಅವಕಾಶ ಕಲ್ಪಿಸುವುದು ತಕ್ಷಣದ ಆದ್ಯತೆಯಾಗಿದೆ. ಆ ಬಳಿಕ ಬ್ಲಡ್ ಮನಿ ಸ್ವೀಕರಿಸಲು ಸಂತ್ರಸ್ತ ಕುಟುಂಬ ಒಪ್ಪಿದರೆ ಆಕೆಯ ಬಿಡುಗಡೆ ಸಾಧ್ಯ ಎಂದು ನಾವು ಭಾವಿಸುತ್ತೇವೆʼ ಎಂದು ಹೇಳಿದ್ದಾರೆ.
ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅವರ ಮಧ್ಯಸ್ಥಿಕೆ ಬಳಿಕ ಪ್ರಸಿದ್ಧ ಸೂಫಿ ವಿದ್ವಾಂಸ ಹಬೀಬ್ ಉಮರ್ ಬಿನ್ ಹಫೀಳ್ ನೇತೃತ್ವದಲ್ಲಿ ತಲಾಲ್ ಅಬ್ದೋ ಮಹ್ದಿ ಅವರ ಸಹೋದರ ಮತ್ತು ಕುಟುಂಬಸ್ಥರ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಸುಭಾಷ್ ಹೇಳಿದ್ದಾರೆ.
ಸೌದಿ ಅರೇಬಿಯಾದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಅಬ್ದುಲ್ ರಹೀಮ್ ಬಿಡುಗಡೆಗೆ ಸಹಾಯಾರ್ಥವಾಗಿ ರಚಿಸಲಾದ ಟ್ರಸ್ಟ್, ನಿಮಿಷಾ ಪ್ರಿಯಾ ಬಿಡೆಗಡೆಗೆ 11 ಕೋಟಿಯವರೆಗೆ ಬಳಕೆಯಾಗದ ಹಣವನ್ನು ನೀಡುವುದಾಗಿ ಹೇಳಿದೆ ಎಂದು ಸುಭಾಷ್ ಹೇಳಿದ್ದಾರೆ.
ಇದಲ್ಲದೆ ಉದ್ಯಮಿಗಳಾದ ಎಂ ಎ ಯೂಸುಫ್ ಅಲಿ ಮತ್ತು ಬಾಬಿ ಚೆಮ್ಮನೂರು ಕೂಡ ಯಾವುದೇ ಸಂಭಾವ್ಯ ಇತ್ಯರ್ಥಕ್ಕಾಗಿ ತಲಾ 1 ಕೋಟಿ ರೂ. ನೀಡುವುದಾಗಿ ವಾಗ್ದಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.