ರಾಮದೇವ್ ತನ್ನದೇ ಲೋಕದಲ್ಲಿ ಬದುಕುತ್ತಿದ್ದಾರೆ : ಶರಬತ್ ಜಿಹಾದ್ ಹೇಳಿಕೆಗೆ ದಿಲ್ಲಿ ಹೈಕೋರ್ಟ್ ತರಾಟೆ
Photo | PTI
ಹೊಸದಿಲ್ಲಿ: ʼಯೋಗ ಗುರು ರಾಮದೇವ್ ಯಾರ ನಿಯಂತ್ರಣದಲ್ಲೂ ಇಲ್ಲ, ತನ್ನದೇ ಆದ ಲೋಕದಲ್ಲಿ ಬದುಕುತ್ತಿದ್ದಾರೆʼ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
ಹಮ್ದರ್ದ್ ಅವರ ರೂಹ್ ಅಫ್ಝಾ ಪಾನೀಯ ಬಗ್ಗೆ ನೀಡಿದ್ದ ವಿವಾದಾತ್ಮಕ ʼಶರಬತ್ ಜಿಹಾದ್ʼ ಹೇಳಿಕೆಗೆ ಸಂಬಂಧಪಟ್ಟಂತೆ ಅವರು ಮೇಲ್ನೋಟಕ್ಕೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯವು ಈ ಹಿಂದೆ ಹಮ್ದರ್ದ್ ಉತ್ಪನ್ನಗಳ ಕುರಿತು ಯಾವುದೇ ಹೇಳಿಕೆ ನೀಡಬಾರದು ಅಥವಾ ವೀಡಿಯೊಗಳನ್ನು ಹಂಚಿಕೊಳ್ಳಬಾರದು ಎಂದು ಆದೇಶಿಸಿತ್ತು.
ಎಪ್ರಿಲ್ 22ರ ನ್ಯಾಯಾಲಯದ ನಿರ್ದೇಶನಗಳ ಹೊರತಾಗಿಯೂ, ರಾಮದೇವ್ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ವೀಡಿಯೊವನ್ನು ಪ್ರಕಟಿಸಿದ್ದಾರೆ ಎಂದು ಗಮನಿಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್, ʼಕಳೆದ ಆದೇಶವನ್ನು ಗಮನದಲ್ಲಿಟ್ಟುಕೊಂಡು, ಅಫಿಡವಿಟ್ ಮತ್ತು ಮೇಲ್ಮೋಟಕ್ಕೆ ಈ ವೀಡಿಯೊ ನ್ಯಾಯಾಂಗ ನಿಂದನೆ ಎಂದು ಗಮನಕ್ಕೆ ಬಂದಿದೆ. ಅವರಿಗೆ ನ್ಯಾಯಾಂಗ ನಿಂದನೆ ನೊಟೀಸ್ ಜಾರಿ ಮಾಡುತ್ತೇನೆʼ ಎಂದು ಹೇಳಿದ್ದಾರೆ.
ʼಅವರು (ರಾಮ್ದೇವ್) ಯಾರ ನಿಯಂತ್ರಣದಲ್ಲೂ ಇಲ್ಲ. ಅವರು ತಮ್ಮದೇ ಆದ ಲೋಕದಲ್ಲಿ ಬದುಕುತ್ತಿದ್ದಾರೆʼ ಎಂದು ನ್ಯಾಯಾಧೀಶರು ಹೇಳಿದರು.