ವೀಡಿಯೊ ಮೂಲಕ ಅಸ್ಸಾಂ ಸರಕಾರಕ್ಕೆ ಟೀಕೆ : ಪತ್ರಕರ್ತ ಅಭಿಸಾರ್ ಶರ್ಮಾಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್
ಪತ್ರಕರ್ತ ಅಭಿಸಾರ್ ಶರ್ಮಾ (Photo credit : X/@abhisar_sharma)
ಹೊಸದಲ್ಲಿ : ರಾಜ್ಯ ಸರಕಾರವನ್ನು ಟೀಕಿಸುವ ಯೂಟ್ಯೂಬ್ ವೀಡಿಯೊಗೆ ಸಂಬಂಧಿಸಿ ಅಸ್ಸಾಂ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಪತ್ರಕರ್ತ ಅಭಿಸಾರ್ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ 4 ವಾರಗಳ ಕಾಲ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
ಆದರೆ, ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ಸೇರಿದಂತೆ ಇತರ ಆರೋಪಗಳಡಿ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಅಭಿಸಾರ್ ಶರ್ಮಾ ಮಾಡಿದ ಮನವಿಯನ್ನು ನ್ಯಾಯಮೂರ್ತಿಗಳಾದ ಎಂಎಂ ಸುಂದ್ರೇಶ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ನಿರಾಕರಿಸಿದೆ. ಎಫ್ಐಆರ್ ರದ್ಧತಿಗೆ ಗುವಾಹಟಿ ಹೈಕೋರ್ಟ್ ಅನ್ನು ಸಂಪರ್ಕಿಸಲು ಸೂಚಿಸಿದೆ.
ಯೂಟ್ಯೂಬ್ ವೀಡಿಯೊಗೆ ಸಂಬಂಧಿಸಿ ಶರ್ಮಾ ವಿರುದ್ಧ ಆಗಸ್ಟ್ 21ರಂದು ಎಫ್ಐಆರ್ ದಾಖಲಾಗಿತ್ತು. ಶರ್ಮಾ ಸರಕಾರವನ್ನು ಮತ್ತು ರಾಮರಾಜ್ಯದ ಪರಿಕಲ್ಪನೆಯನ್ನು ಅಪಹಾಸ್ಯ ಮಾಡಿದ್ದಾರೆ, ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಾರೆ ಮತ್ತು ರಾಷ್ಟ್ರೀಯ ಏಕತೆಗೆ ಧಕ್ಕೆಯುಂಟುಮಾಡಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿತ್ತು.