×
Ad

ನೆಟ್‌ವರ್ಕ್ ಸಮಸ್ಯೆ: ಬೆಟ್ಟ ಏರಿ ಎಸ್‌ಐಆರ್ ದಾಖಲಿಸಿದ ಸಿಬ್ಬಂದಿ

Update: 2026-07-10 15:00 IST

ಲಿಂಗಸುಗೂರು : ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇನ್ನೂ ಬಗೆಹರಿಯದ ಸಮಸ್ಯೆಯಾಗಿದ್ದು, ಇದರ ಪರಿಣಾಮಕಾರಿ ಸೇವೆಗಳ ಮೇಲೂ ಬೀರುತ್ತಿದೆ. ನೆಟ್‌ವರ್ಕ್ ಸಿಗದ ಕಾರಣ ಎಸ್‌ಐಆರ್ ದಾಖಲಿಸುವ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ದೇವಮ್ಮ, ರಾಧಾ ಗೌಡಪ್ಪ ಬೆಟ್ಟ ಏರಿ ಕುಳಿತು ಮಾಹಿತಿ ನಮೂದಿಸಿದ ಘಟನೆ ಗಮನ ಸೆಳೆದಿದೆ.

ಲಿಂಗಸುಗೂರು ತಾಲೂಕಿನ ಗೋಲ್‌ಪಲ್ಲಿ ಗ್ರಾಮದ ವ್ಯಾಪ್ತಿಯ ಸೂಗೂರ ದೊಡ್ಡಿಯಲ್ಲಿ ಮನೆ ಮನೆಗೆ ತೆರಳಿ ಎಸ್‌ಐಆರ್ ದಾಖಲಿಸುವ ಜವಾಬ್ದಾರಿ ಹೊತ್ತಿದ್ದ ಸಿಬ್ಬಂದಿಗೆ ಮೊಬೈಲ್ ಆ್ಯಪ್‌ನಲ್ಲಿ ಮಾಹಿತಿ ಅಪ್ಲೋಡ್ ಮಾಡಲು ತೀವ್ರ ತೊಂದರೆ ಎದುರಾಗಿದೆ. ಗ್ರಾಮದ ಸುತ್ತಮುತ್ತ ಯಾವುದೇ ಮೊಬೈಲ್ ನೆಟ್‌ವರ್ಕ್ ಲಭ್ಯವಾಗದ ಹಿನ್ನೆಲೆಯಲ್ಲಿ ಹಲವು ಬಾರಿ ಪ್ರಯತ್ನಿಸಿದರೂ ದಾಖಲೆ ಸಲ್ಲಿಕೆ ಸಾಧ್ಯವಾಗಲಿಲ್ಲ. ಕೊನೆಗೆ ಅನಿವಾರ್ಯವಾಗಿ ಗ್ರಾಮದ ಸಮೀಪದ ಬೆಟ್ಟ ಏರಿ ನೆಟ್‌ವರ್ಕ್ ಸಂಪರ್ಕ ಪಡೆದು ಎಸ್‌ಐಆರ್ ಮಾಹಿತಿಯನ್ನು ದಾಖಲಿಸಬೇಕಾಯಿತು.

ಸರಕಾರಿ ಕೆಲಸಕ್ಕೆ ಬೆಟ್ಟವೇ ಕಚೇರಿ:

ಬೆಟ್ಟದ ಮೇಲಿಂದಲೇ ಮೊಬೈಲ್ ಹಿಡಿದು ಮಾಹಿತಿ ದಾಖಲಿಸುತ್ತಿರುವ ಸಿಬ್ಬಂದಿಯ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಗ್ರಾಮೀಣ ಭಾಗದ ಡಿಜಿಟಲ್ ಸೌಲಭ್ಯಗಳ ವಾಸ್ತವ ಸ್ಥಿತಿಯನ್ನು ಬಯಲು ಮಾಡಿದೆ. ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದರೂ ಸಂಪರ್ಕ ವ್ಯವಸ್ಥೆ ಸರಿಯಾಗಿಲ್ಲ. ನೆಟ್‌ವರ್ಕ್‌ಗಾಗಿ ಬೆಟ್ಟ ಹತ್ತಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿಜಿಟಲ್ ಸೇವೆಗಳಿಗೆ ನೆಟ್‌ವರ್ಕ್ ಕೊರತೆ ಅಡ್ಡಿ:

ಸರಕಾರದ ಹಲವು ಯೋಜನೆಗಳು ಈಗ ಆನ್‌ಲೈನ್ ವ್ಯವಸ್ಥೆಯ ಮೂಲಕ ನಡೆಯುತ್ತಿವೆ. ಪಡಿತರ, ಆದಾಯ, ಜಾತಿ ಪ್ರಮಾಣ ಪತ್ರ, ಸಮೀಕ್ಷೆ, ಪರಿಶೀಲನೆ ಸೇರಿದಂತೆ ಬಹುತೇಕ ಕೆಲಸಗಳಿಗೆ ಇಂಟರ್‌ನೆಟ್ ಅವಶ್ಯಕವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಟವರ್‌ಗಳು ಕೊರತೆ ಹಾಗೂ ದುರ್ಬಲ ಸಂಪರ್ಕದಿಂದಾಗಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.

ಸರಕಾರ ಡಿಜಿಟಲ್ ಇಂಡಿಯಾ ಎಂದು ಹೇಳುತ್ತಿದೆ. ಆದರೆ ನಮ್ಮ ಗ್ರಾಮದಲ್ಲಿ ಒಂದು ದಾಖಲೆ ಮಾಡಲು ಸಹ ನೆಟ್‌ವರ್ಕ್ ಹುಡುಕಿಕೊಂಡು ಬೆಟ್ಟ ಹತ್ತಬೇಕಾಗಿದೆ. ತಕ್ಷಣ ಮೊಬೈಲ್ ಟವರ್ ಅಥವಾ ಉತ್ತಮ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಎಸ್‌ಐಆರ್ ಸೇರಿದಂತೆ ತುರ್ತು ಸರಕಾರಿ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಬೇಕಾದರೆ ಗ್ರಾಮೀಣ ಭಾಗಗಳಲ್ಲಿ ಗುಣಮಟ್ಟದ ನೆಟ್‌ವರ್ಕ್ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಇಲ್ಲವಾದರೆ ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆಯ ಉದ್ದೇಶವೇ ವಿಫಲವಾಗುವ ಆತಂಕವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಮರಯ್ಯ ಘಂಟಿ

contributor

Similar News