ಕಸದ ತೊಟ್ಟಿಯಾದ ಜೀವಸೆಲೆ: ದುಬಲಗುಂಡಿ ಹಳ್ಳ ಕಲುಷಿತ
ಗ್ರಾಪಂ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಹುಮನಾಬಾದ್: ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಕೆಲ ವರ್ಷಗಳ ಹಿಂದೆ ಜನರಿಗೆ ಆಸರೆಯಾಗಿದ್ದ ಹಳ್ಳ ಇದೀಗ ಸಂಪೂರ್ಣ ಕಲುಷಿತಗೊಂಡು ಬಳಕೆಗೆ ಅಸಾಧ್ಯವಾಗಿದೆಯೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮೊದಲೆಲ್ಲ ಸದಾ ಶುದ್ಧ ನೀರಿನಿಂದ ತುಂಬಿರುತ್ತಿದ್ದ ಈ ಹಳ್ಳದಲ್ಲಿ ಗ್ರಾಮಸ್ಥರು ಸ್ನಾನ, ಬಟ್ಟೆ ಒಗೆಯುವಂತಹ ದೈನಂದಿನ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮದ ತ್ಯಾಜ್ಯ, ಪ್ಲಾಸ್ಟಿಕ್ ಹಾಗೂ ಕೊಳಚೆ ನೀರನ್ನು ಹಳ್ಳದ ಪಕ್ಕದಲ್ಲೇ ಬಿಸಾಡುತ್ತಿರುವುದರಿಂದ ನೀರು ಸಂಪೂರ್ಣ ಮಲಿನಗೊಂಡಿದೆ. ಇದರಿಂದ ಜಲಚರ ಪ್ರಾಣಿಗಳು ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಗ್ರಾಮದ ವಿವಿಧ ವಾರ್ಡ್ಗಳಿಂದ ಪ್ರತಿದಿನ ಸಂಗ್ರಹವಾಗುವ ಕಸವನ್ನು ನೇರವಾಗಿ ಹಳ್ಳಕ್ಕೆ ಎಸೆಯಲಾಗುತ್ತಿದ್ದು, ಜೊತೆಗೆ ಚರಂಡಿ ನೀರೂ ಇದೇ ಹಳ್ಳವನ್ನು ಸೇರುತ್ತಿದೆ. ಹಳ್ಳದ ಪರಿಸ್ಥಿತಿ ಹದಗೆಟ್ಟಿದ್ದು, ರೋಗರುಜಿನಗಳ ತಾಣವಾಗುವ ಭೀತಿ ಎದುರಾಗಿದೆ. ಹಳ್ಳದ ಸುತ್ತಮುತ್ತ ಸತ್ತ ಪ್ರಾಣಿಗಳನ್ನು ಕೂಡ ಬಿಸಾಡುತ್ತಿರುವುದರಿಂದ ದುರ್ವಾಸನೆ ವ್ಯಾಪಿಸಿದೆ.
ಈ ಮಾರ್ಗದಲ್ಲೇ ರೈತರು ತಮ್ಮ ಹೊಲಗಳಿಗೆ ತೆರಳುತ್ತಿದ್ದು, ದಲಿತರ ಸ್ಮಶಾನ ಭೂಮಿಗೂ ಇದೇ ದಾರಿ ಸಂಪರ್ಕ ಹೊಂದಿದೆ. ಹಳ್ಳದ ಸಮೀಪದಲ್ಲೇ ದಲಿತರ ಓಣಿ ಇರುವುದರಿಂದ ಮಳೆಗಾಲದ ಸಂದರ್ಭದಲ್ಲಿ ರೋಗಗಳು ಹರಡುವ ಆತಂಕ ಹೆಚ್ಚಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪರಿಸರ ಸ್ವಚ್ಛತೆ ಕಾಪಾಡುವುದು ಹಾಗೂ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ರೂಪಿಸುವುದು ಗ್ರಾಮ ಪಂಚಾಯತಿಯ ಕರ್ತವ್ಯವಾಗಿದ್ದರೂ, ಆಡಳಿತ ನಿರ್ಲಕ್ಷ್ಯ ತೋರಿಸುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಕಸದ ವೈಜ್ಞಾನಿಕ ವಿಲೇವಾರಿಗೆ ಸೂಕ್ತ ಸ್ಥಳವನ್ನು ಗುರುತಿಸದಿರುವುದು ಸಾರ್ವಜನಿಕರಲ್ಲಿ ಪ್ರಶ್ನೆ ಹುಟ್ಟಿಸಿದೆ.
ಕೆಲ ವರ್ಷಗಳ ಹಿಂದಷ್ಟೇ ಶುದ್ಧವಾಗಿದ್ದ ಹಳ್ಳ ಇಂದು ಕಸದ ತೊಟ್ಟಿಯಾಗಿ ಮಾರ್ಪಟ್ಟಿರುವುದು ಗ್ರಾಮ ಪಂಚಾಯತಿಯ ಇಚ್ಛಾಶಕ್ತಿಯ ಕೊರತೆಯನ್ನೇ ತೋರಿಸುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಹಳ್ಳದ ಸ್ವಚ್ಛತೆಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸರಕಾರದಿಂದ ಕಸ ವಿಲೇವಾರಿ ಘಟಕಕ್ಕೆ ಅನುದಾನ ಬಂದಿದ್ದು, ಸ್ಥಳದ ಕೊರತೆಯಿಂದ ಕಾಮಗಾರಿ ಪ್ರಾರಂಭವಾಗಿಲ್ಲ. ತಹಶೀಲ್ದಾರ್ ಕಚೇರಿಯಿಂದ ಶೀಘ್ರದಲ್ಲೇ ಸ್ಥಳ ನೀಡಲಾಗುತ್ತದೆ. ಸ್ಥಳ ನಿಗದಿಯಾದ ಬಳಿಕ ಘಟಕ ನಿರ್ಮಾಣ ಮಾಡಲಾಗುವುದು. ಸೋಮವಾರ ಸಭೆ ಕರೆದು ಹಳ್ಳ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗುವುದು.
-ವೀರಶೆಟ್ಟಿ ಬಿರಾದಾರ್, ಪಿಡಿಓ, ದುಬಲಗುಂಡಿ
ದಲಿತ ಸಮುದಾಯದ ಸ್ಮಶಾನಕ್ಕೆ ಇದೇ ದಾರಿ ಇದ್ದು, ರೈತರ ಹೊಲಗಳಿಗೂ ಇದೇ ಮಾರ್ಗ ಬಳಸಲಾಗುತ್ತದೆ. ಹಳ್ಳದ ಬಳಿಯೇ ಜನ ವಾಸವಿರುವುದರಿಂದ ರೋಗಗಳ ಭೀತಿ ಹೆಚ್ಚಾಗಿದೆ. ಪಂಚಾಯತಿ ಹಾಗೂ ಮೇಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಜಲ ಮತ್ತು ವಾಯು ಮಾಲಿನ್ಯ ತಡೆಯಬೇಕು.
-ವಿಜಯಕುಮಾರ್ ನಾತೆ, ಮಾಜಿ ಗ್ರಾಪಂ ಸದಸ್ಯ ಹಾಗೂ ವಕೀಲ