ಸಖೀಗೀತದ ನೋವಿನ ನರ್ತನ
ಬಾನು ಮುಷ್ತಾಕ್ ಅವರ ಕಥೆಗಳಲ್ಲಿ ಮುಖ್ಯವಾಗಿ ಮೂರು ನೆಲೆಗಳಿವೆ. ವ್ಯವಸ್ಥೆಯೊಂದಿಗಿನ ಮುಖಾಮುಖಿ, ಬಡತನ ಮತ್ತು ಹೆಣ್ಣಿನ ಕೊನೆಯಿರದ ನೋವಿನ ಬದುಕು - ಇವು ಅವರ ಕಥೆಗಳ ಪ್ರಧಾನ ವಸ್ತು ವಿಶೇಷಗಳು. ‘ನನ್ನ ಕೃತಿಗಳಲ್ಲಿ ಹೆಣ್ಣೇ ವಿರಾಜಮಾನಳಾಗಿದ್ದಾಳೆ’ ಎಂದು ಸ್ವತಃ ಲೇಖಕಿಯೇ ಘೋಷಿಸಿದ್ದರೂ ಅವರ ಕೃತಿಗಳಲ್ಲಿ ಹೆಣ್ಣಿನಷ್ಟೇ ಈ ಎರಡೂ ಅಂಶಗಳೂ ಪ್ರಧಾನವಾಗಿ ಕಾಣಿಸುತ್ತವೆ. ಈ ಮೂರರ ಅನನ್ಯ ನೇಯ್ಗೆಯೇ ಬಾನು ಅವರ ಕಥೆಗಳ ಮೂಲ ವಿನ್ಯಾಸ ಎಂದು ನನಗನ್ನಿಸುತ್ತದೆ.
ವ್ಯವಸ್ಥೆಯನ್ನು ಬಾನು ಮುಖಾಮುಖಿಯಾಗುವ ನಿಲುವೇ ನನಗೆ ತುಂಬಾ ವಿಶಿಷ್ಟವಾಗಿ ಕಾಣಿಸುತ್ತದೆ. ಬಾನು ಅವರ ಕಥೆಗಳ ಮಹತ್ವವಿರುವುದೇ ಈ ಅಂಶದಲ್ಲಿ. ತನ್ನ ವಾರಿಗೆಯ ಲೇಖಕಿಯರಿಗಿಂತ ಇವರು ಭಿನ್ನರಾಗುವುದು ಈ ಕಾರಣಕ್ಕೆ. ವ್ಯವಸ್ಥೆಯನ್ನು ಬಾನು ಸ್ತ್ರೀವಾದಿ ಹಿನ್ನೆಲೆಯಲ್ಲಿ, ಬದಲಾದ ಕಾಲ-ಸನ್ನಿವೇಶದ ಹಿನ್ನೆಲೆಯಲ್ಲಿ ಎನ್ನುವುದಕ್ಕಿಂತ ಹೆಚ್ಚಾಗಿ ಶುದ್ಧ ಮಾನವೀಯ ನೆಲೆಯಲ್ಲಿ ಮುಖಾಮುಖಿಯಾಗುತ್ತಾರೆ. ಅವರ ಈ ನಿಲುವಿನಿಂದಾಗಿ ಸ್ತ್ರೀವಾದಿ ದೃಷ್ಟಿಕೋನಕ್ಕಿರಬಹುದಾದ ಮಿತಿ ಮತ್ತು ಅಪಾಯಗಳನ್ನು ಅವರು ಶಕ್ತವಾಗಿ ದಾಟಿಬಿಟ್ಟಿದ್ದಾರೆ. ಅವರ ಕಥೆಗಳಿಗೆ ವಿಸ್ತಾರ ಒದಗಿ ಬರುವುದು ಮೂಲತಃ ಈ ಕಾರಣಕ್ಕೆ. ಅಪ್ಪಟ ಮಾನವೀಯ ನೆಲೆಯಲ್ಲಿ ಹೇಗೂ ಸಮರ್ಥಿಸಿಕೊಳ್ಳಲು ಅಸಾಧ್ಯವಾದ ವ್ಯವಸ್ಥೆಯ ಕ್ರೌರ್ಯದ ಅನಾವರಣ ಈ ಕಥಾ ಸಂಕಲನದ ಮುಖ್ಯ ಸಾಧನೆಗಳಲ್ಲಿ ಒಂದು. ಲೇಖಕಿಯರನ್ನೂ ವಿಸ್ತೃತ ಹಿನ್ನೆಲೆಯಲ್ಲಿಟ್ಟು ಚರ್ಚೆ ಮಾಡಬೇಕಾಗಿರುವುದು ನಮ್ಮ ಈ ಹೊತ್ತಿನ ಅಗತ್ಯ ವಸ್ತು ಅನಿವಾರ್ಯತೆ ಎನ್ನುವ ನನ್ನ ಮಾತಿಗೆ ಪೂರಕವಾದ, ಬಲವಾದ ಕಾರಣ ಇದು.
(‘ಎದೆಯ ಹಣತೆ’ ಸಂಕಲನದ ಮುನ್ನುಡಿಯಿಂದ ಆಯ್ದ ಭಾಗ)