ರಾಜಕೀಯ ಹಿಂದುತ್ವ ಮತ್ತು ಧಾರ್ಮಿಕ ಹಿಂದುತ್ವ
ಆರೆಸ್ಸ್ಸೆಸ್ ಶತಮಾನೋತ್ಸವ ಸಂದರ್ಭದಲ್ಲಿ ದೇಶಾದ್ಯಂತ ಪ್ರತಿಯೊಂದು ಊರಿನಲ್ಲಿ ಹಿಂದೂ ಸಮಾವೇಶಗಳು ನಡೆಯುತ್ತಿವೆ. ಈ ಸಮಾವೇಶಗಳಲ್ಲಿ ಹಿಂದೂ ಧರ್ಮ ಅಪಾಯದಲ್ಲಿದೆ, ಅದನ್ನು ಕಾಪಾಡಲು ಹಿಂದೂಗಳು ಒಂದಾಗಬೇಕೆಂದು ಕರೆ ನೀಡಲಾಗುತ್ತಿದೆ.ಇಂಥ ಸಮಾವೇಶಗಳಲ್ಲಿ ಹಿಂದೂಗಳನ್ನು ಹಿಂದುತ್ವವಾದಿಗಳನ್ನಾಗಿ ಮಾಡಲು ಸಾಧ್ಯವಾಗಿಲ್ಲವಲ್ಲ ಎಂಬ ಹತಾಶೆ ಕಂಡುಬರುತ್ತಿದೆ. ವಾಸ್ತವವಾಗಿ ಹಿಂದೂ ಧರ್ಮ ಅಪಾಯದಲ್ಲಿರುವುದು ಕೋಮು ಉನ್ಮಾದವನ್ನು ಕೆರಳಿಸುತ್ತಿರುವ, ಶ್ರೇಣೀಕೃತ ಜಾತಿ ಪದ್ಧತಿಯನ್ನು ಮತ್ತೆ ಭಾರತದ ಮೇಲೆ ಹೇರಲು ಹೊರಟ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲು ಮಸಲತ್ತು ನಡೆಸಿರುವ ಕೋಮುವಾದಿಗಳಿಂದ.
ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಹೇಳಿದರೆ ತಪ್ಪಿಲ್ಲ. ಕಳೆದ ಹನ್ನೊಂದು ವರ್ಷಗಳಿಂದ ಮಾತ್ರವಲ್ಲ ಅದಕ್ಕಿಂತ ಮೊದಲಿನಿಂದಲೂ ಇವರಿಂದ ಏನೇನಾಗಿದೆ ಎಂಬುದನ್ನು ಬರೆಯುತ್ತ ಹೋದರೆ ಈ ಅಂಕಣದ ಜಾಗ ಸಾಲುವುದಿಲ್ಲ. ಬಹಳ ಹಿಂದೇನಲ್ಲ, ಕಳೆದ ವಾರ ದಿಲ್ಲಿಯ ವಿಶ್ವ ವಿದ್ಯಾನಿಲಯದಲ್ಲಿ ಉಪನ್ಯಾಸ ನೀಡಲು ಬಂದಿದ್ದ ಅಂತರ್ರಾಷ್ಟ್ರೀಯ ಖ್ಯಾತಿಯ ಇತಿಹಾಸಜ್ಞ ಡಾ. ಇರ್ಫಾನ್ ಹಬೀಬ್ ಅವರ ತಲೆಯ ಮೇಲೆ ಬಕೆಟ್ ನೀರನ್ನು ಇವರು ಸುರಿದರು. 94 ವರ್ಷದ ಇರ್ಫಾನ್ ಹಬೀಬ್ ನೀರಲ್ಲಿ ತೊಯ್ದ ಒದ್ದೆ ಬಟ್ಟೆಯಲ್ಲೇ ಚಳಿಯಲ್ಲೇ ತಮ್ಮ ಉಪನ್ಯಾಸವನ್ನು ಮುಂದುವರಿಸಿದರು.ಹಿಂದೆ ಸ್ವಾಮಿ ಅಗ್ನಿವೇಶ್, ಮೇಧಾ ಪಾಟ್ಕರ್, ಪ್ರಶಾಂತ ಭೂಷಣ್ ಅವರ ಮೇಲೆ ಇವರು ಯಾವ ಪರಿ ಹಲ್ಲೆ ಮಾಡಿದರೆಂಬುದನ್ನು ವಿವರಿಸಬೇಕಾಗಿಲ್ಲ.ಗಾಂಧಿ ಹತ್ಯೆ ಹಳೆಯದಾಯಿತು. ಇತ್ತೀಚಿನ ವರ್ಷಗಳಲ್ಲಿ ನಡೆದ ಡಾ. ನರೇಂದ್ರ ದಾಭೋಲ್ಕರ್ ,
ಕಮ್ಯುನಿಸ್ಟ್ ನಾಯಕ ಗೋವಿಂದ ಪಾನ್ಸರೆ, ಡಾ.ಎಂ.ಎಂ. ಕಲಬುರರ್ಗಿ, ಗೌರಿ ಲಂಕೇಶ್ ಹತ್ಯೆಗಳ ವಿವರಗಳೂ ಕೂಡ ಇಲ್ಲಿ ಅನಗತ್ಯ. ಹಂತಕರಿಗೆ ಯಾವ ಸಿದ್ಧಾಂತ ಪ್ರೇರಣೆ ನೀಡಿತೆಂಬುದು ಎಲ್ಲರಿಗೂ ತಿಳಿದ ಸಂಗತಿ. ಧರ್ಮ ರಕ್ಷಣೆಯ ಸೋಗು ಹಾಕಿದ ಫ್ಯಾಶಿಸಮ್ ಈ ಪರಿ ಬೆಳೆಯುತ್ತಿರಬೇಕಾದರೆ, ಇದನ್ನು ಒಂದಾಗಿ ವಿರೋಧಿಸಬೇಕಾದ ಜಾತ್ಯತೀತ ಪಕ್ಷಗಳಲ್ಲಿ ಸ್ಪಷ್ಟವಾದ ತಾತ್ವಿಕ ನಿಲುವು ಈ ವರೆಗೆ ಒಡಮೂಡಿಲ್ಲ. ಎಡಪಂಥೀಯ ಪಕ್ಷಗಳನ್ನು ಹೊರತು ಪಡಿಸಿ ಕಾಂಗ್ರೆಸ್ ಸೇರಿದಂತೆ ಸೆಕ್ಯುಲರ್ ಎಂದು ಕರೆದುಕೊಳ್ಳುವ ಪಕ್ಷಗಳು ಇನ್ನೂ ಗೊಂದಲದಲ್ಲಿವೆ. ಕಾಂಗ್ರೇಸ್ನ ಹಿರಿಯ ನಾಯಕರು ಕೋಮುವಾದಿಗಳನ್ನು ಟೀಕಿಸುತ್ತಿದ್ದರೂ ಕೆಲವು ಸ್ಥಳೀಯ ನಾಯಕರು ಅವರ ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿ ಪಾಲ್ಗೊಳ್ಳುತ್ತಿದ್ದಾರೆ. ಉದಾಹರಣೆಗೆ ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರಿನಲ್ಲಿ ಕಳೆದ ರವಿವಾರ ಹಿಂದೂ ಸಮಾಜ್ಯೋತ್ಸವದ ಶೋಭಾಯಾತ್ರೆ ನಡೆಯಿತು. ಈ ಶೋಭಾ ಯಾತ್ರೆಯಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕ ಬಾಬಾ ಸಾಹೇಬ ಪಾಟೀಲ ಮತ್ತು ಕೆಲ ಕಾಂಗ್ರೆಸ್ ನಾಯಕರು ಕೊರಳಿಗೆ ಕೇಸರಿ ಪಟ್ಟಿ ಧರಿಸಿಕೊಂಡು ಭಾಗವಹಿಸಿದ್ದರು,ಇದನ್ನು ಮಾಧ್ಯಮಗಳು ವಿಶೇಷ ಆಸಕ್ತಿ ವಹಿಸಿ ಪ್ರಕಟಿಸಿವೆ. ಕಾಂಗ್ರೆಸ್ ಶಾಸಕರು ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು ಇದೇ ಮೊದಲ ಸಲವೇನಲ್ಲ. ಮೂಡಿಗೆರೆಯ ಕಾಂಗ್ರೆಸ್ ಶಾಸಕಿ ನಯನಾ ಮೊಟಮ್ಮನವರು ಇತ್ತೀಚೆಗೆ ಇಂಥ ಕಾರ್ಯಕ್ರಮವೊಂದರಲ್ಲಿ ಪ್ರಮೋದ್ ಮುತಾಲಿಕ್ರೊಂದಿಗೆ ಭಾಗವಹಿಸಿದ್ದರು ಹಾಗೂ ಅದನ್ನು ಸಮರ್ಥಿಸಿಕೊಂಡಿದ್ದರು._ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ಜಮಖಂಡಿಯ ಮಾಜಿ ಶಾಸಕ ಆನಂದ ನ್ಯಾಮಗೌಡರು ಕೂಡ ಕೊರಳಿಗೆ ಕೇಸರಿ ಶಾಲು ಸುತ್ತಿಕೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದರು. ಕೆಲವರು ನೇರವಾಗಿ ಪಾಲ್ಗೊಳ್ಳದಿದ್ದರೂ ಸಂಘ ಪರಿವಾರದ ಸಂಘಟನೆಗಳಿಗೆ ಗುಟ್ಟಾಗಿ ಹಣಕಾಸಿನ ನೆರವನ್ನೂ ನೀಡುತ್ತಾರೆ ಎಂಬುದು ಗುಟ್ಟಿನ ಸಂಗತಿಯಲ್ಲ.
ಪಿ.ವಿ.ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನೆಲಸಮಗೊಂಡ ನಂತರ ಭಾರತದ ರಾಜಕೀಯ ಚಿತ್ರವೇ ಬದಲಾಗಿ ಹೋಯಿತು.ಅದಕ್ಕಿಂತ ಮುಂಚೆ 1975ರ ಜೆಪಿ ಚಳವಳಿಯ ಕಾಲದಲ್ಲಿ ಅವರ ಆಶೀರ್ವಾದದಿಂದ ಮುಂಚೂಣಿಗೆ ಬಂದ ಸಂಘ ಪರಿವಾರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಬಂತು.ಗಾಂಧಿ ಹತ್ಯೆಯ ನಂತರ ಜನರಿಂದ ತಿರಸ್ಕರಿಸಲ್ಪಟ್ಟಿದ್ದ ಸಂಘಟನೆ ಜೆಪಿ ಚಳವಳಿಯಲ್ಲಿ ಸೇರಿ ಮಾನ್ಯತೆ ಪಡೆಯಿತು.ನಂತರದ ತೊಂಭತ್ತರ ದಶಕದ ಆರಂಭದಲ್ಲಿ ಜಾಗತೀಕರಣ ಬಂತು. ಅದೇ ಕಾಲದಲ್ಲಿ ಮಾರುಕಟ್ಟೆ ಆರ್ಥಿಕತೆಯಿಂದ ಆಕರ್ಷಿತರಾದ ಹೊಸಾ ಪೀಳಿಗೆಯೂ ಬಂತು. ಈ ಹೊಸ ಪೀಳಿಗೆ ಮತ್ತು ನಂತರ ಬಂದ ಪೀಳಿಗೆಯನ್ನು ಆಕರ್ಷಿಸುವಲ್ಲಿ ಸಂಘ ಪರಿವಾರ ಯಶಸ್ವಿಯಾಯಿತು.ಅದೇ ಕಾಲಘಟ್ಟದಲ್ಲಿ ಕಾಂಗ್ರೆಸ್ನಲ್ಲಿ ಮೃದು ಹಿಂದುತ್ವದ ಪ್ರವೃತ್ತಿ ಕಾಣಿಸಿಕೊಂಡಿತು. ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆಯಂಥ ಸಂಘಟನೆಗಳ ಮೂಲಕ ಬಹುಸಂಖ್ಯಾತರನ್ನು ಒಟ್ಟುಗೂಡಿಸುವ ತಂತ್ರವನ್ನು ರೂಪಿಸಲಾಯಿತು. ರಾಜಕೀಯಕ್ಕೂ ತಮಗೂ ಸಂಬಂಧವಿಲ್ಲ ತಮ್ಮದು ಹಿಂದು ಧಾರ್ಮಿಕ ಸಂಘಟನೆ ಎಂದು ಪರಿಚಯಿಸಿಕೊಳ್ಳುತ್ತ ಬರಲಾಯಿತು. ಇಂಥ ಕಾರ್ಯಕ್ರಮಗಳಿಗೆ ಮಠಾಧೀಶರು, ಧಾರ್ಮಿಕ ಗುರುಗಳು, ಕಾಂಗ್ರೆಸ್ , ಜೆಡಿಎಸ್ನಂತಹ ಪಕ್ಷಗಳ ಸ್ಥಳೀಯ ನಾಯಕರನ್ನು ಆಹ್ವಾನಿಸಲಾಯಿತು. ಅವರೂ ಭಾಗವಹಿಸ ತೊಡಗಿದರು.ಅನೇಕ ಕಡೆ ಕಾಂಗ್ರೆಸ್ ನಾಯಕರು ಸಂಘ ಪರಿವಾರದ ಹಿಂದೂ ಸಂಘಟನೆಗಳಿಗೆ ಪದಾಧಿಕಾರಿಗಳಾದರು. ಕಾಂಗ್ರೆಸ್ನಲ್ಲಿ ಮೊದಲ ಬಾರಿ ಮಲ್ಲಿಕಾರ್ಜುನ ಖರ್ಗೆಯವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಇದನ್ನು ತಡೆಯಲು ಯತ್ನಿಸಲಾಯಿತು.ಆದರೂ ಇದು ಹಾಗೇ ನಡೆದುಕೊಂಡು ಬಂತು. ಸಿದ್ದರಾಮಯ್ಯನವರು ಸಂಘ ಪರಿವಾರದ ಬಗ್ಗೆ ನೇರವಾಗಿ ಮಾತಾಡುತ್ತಾರೆ. ಆದರೆ ಅವರ ಪಕ್ಷದಲ್ಲಿ ಅವರನ್ನು ಬೆಂಬಲಿಸಿ ಮಾತಾಡುವವರು ತುಂಬಾ ಕಡಿಮೆ. ಸದನದಲ್ಲಿ ಕೋಮುವಾದಿಗಳ ವಿರುದ್ಧ ಮಾತಾಡುವಾಗ ಬಿಜೆಪಿ ಶಾಸಕರು ಕೂಗಾಟ ಆರಂಭಿಸಿದರೆ ,ಕಾಂಗ್ರೆಸ್ ಶಾಸಕರು ತೆಪ್ಪಗೆ ಕುಳಿತಿರುತ್ತಾರೆ. ಇತ್ತೀಚೆಗೆ ಸ್ವತಃ ಮುಖ್ಯಮಂತ್ರಿ ಗಳೇ ತಮ್ಮ ಪಕ್ಷದ ಶಾಸಕರಿಗೆ ನೀವೇಕೆ ಸುಮ್ಮನಿದ್ದೀರಿ, ನೀವೂ ಏಳಿ ಎಂದು ಹೇಳಬೇಕಾಯಿತು.
ಕಾಂಗ್ರೆಸ್ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಪಕ್ಷವಾಗಿದ್ದರೂ ಸ್ವಾತಂತ್ರ್ಯಾ ನಂತರ ಅಧಿಕಾರಕ್ಕಾಗಿ ಅಲ್ಲಿ ಸೇರಿದವರಿಗೆ ಯಾವ ಸಿದ್ಧಾಂತವೂ ಇಲ್ಲ.ಇದನ್ನು ಬಿಟ್ಟರೆ ಸಮಾಜವಾದದಲ್ಲಿ ನಂಬಿಕೆಯಿರುವ ಪುಟ್ಟ ಗುಂಪು ಕೂಡ ಕಾಂಗ್ರೆಸ್ನಲ್ಲಿದೆ. ಸೆಕ್ಯುಲರ್ ತತ್ವಗಳಿಗೆ ಈಗಲೂ ಬದ್ಧವಾಗಿರುವ ಏಕೈಕ ಪ್ರಭಾವೀ ಶಕ್ತಿಯೆಂದರೆ ಗಾಂಧಿ,ನೆಹರೂ ಮನೆತನದವರು.ಆಧುನಿಕ ಭಾರತದ ಶಿಲ್ಪಿ ನೆಹರೂ ಹಾಕಿಕೊಟ್ಟ ಮಾರ್ಗದಲ್ಲೇ ಭಾರತ ಈಗಲೂ ಸಾಗಿದೆ. ಅಂತಲೇ ತಮ್ಮ ಅಜೆಂಡಾಕ್ಕೆ ಅಡ್ಡಿಯಾಗಿರುವ ನೆಹರೂ ಕಂಡರೆ ಇವರಿಗೆ ಆಗುವುದಿಲ್ಲ. ಅರುವತ್ತು ವರ್ಷಗಳ ಹಿಂದೆ ನಿರ್ಗಮಿಸಿದ ನೆಹರೂ ಈಗಲೂ ಅವರಿಗೆ ಪ್ರಧಾನ ಶತ್ರು. ತಾನು ಶ್ರೇಷ್ಠ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದ ಮಹಾತ್ಮಾ ಗಾಂಧೀಜಿ ಕೂಡ ಇವರಿಗೆ ಇನ್ನೊಬ್ಬ ಮುಖ್ಯ ಶತ್ರು.
ಭಾರತೀಯರು ಅದರಲ್ಲೂ ಹಿಂದೂಗಳೆಂದು ಕರೆಯಲ್ಪಡುವವರು ತುಂಬಾ ಭಾವುಕರು. ದೇವರು , ಧರ್ಮದ ವಿಷಯ ಬಂದರೆ ತಮ್ಮನ್ನೇ ತಾವು ಮರೆತು ಬಿಡುತ್ತಾರೆ. ಪೆರಿಯಾರ ರಾಮಸ್ವಾಮಿ ನಾಯ್ಕರ್ ಅವರ ವೈಚಾರಿಕ ಜಾಗೃತಿ ಮೂಡಿಸಿದ ತಮಿಳುನಾಡಿನಂಥ ರಾಜ್ಯದಲ್ಲಿ ಕೂಡ ದೇವಾಲಯಗಳು ತುಂಬಿ ತುಳುಕುತ್ತಿವೆ. ಈ ದೇವಾಲಯಗಳಿಗೆ ಹೋಗುವ ಅಮಾಯಕ ಜನ ಧಾರ್ಮಿಕವಾಗಿ ಹಿಂದೂಗಳು, ರಾಜಕೀಯವಾಗಿ ದ್ರಾವಿಡ ಪಕ್ಷಗಳ ಬೆಂಬಲಿಗರು. ಈ ಧಾರ್ಮಿಕ ಹಿಂದೂಗಳನ್ನು ರಾಜಕೀಯ ಹಿಂದೂಗಳನ್ನಾಗಿ ಮಾಡಲು ಸಂಘ ಪರಿವಾರ ಇಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತ ಬಂದಿದೆ. ಗುಡಿ ಗುಂಡಾರಗಳಲ್ಲಿ, ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಅದು ತಳವೂರಲು ಯತ್ನಿಸುತ್ತಿದೆ.ಆದರೆ ದೇವರಿಗೆ ಕೈ ಮುಗಿಯುವ ,ಅಭಿಷೇಕ ಮಾಡಿಸುವ ಜನರನ್ನು ರಾಜಕೀಯ ಹಿಂದೂಗಳಾನ್ನಾಗಿ ಮಾಡಿ ಓಟಿನ ಬೆಳೆ ತೆಗೆಯುವ ಕೋಮುವಾದಿಗಳ ಮಸಲತ್ತುಈ ವರೆಗೆ ಯಶಸ್ವಿಯಾಗಿಲ್ಲ.
ಸಾಮಾನ್ಯವಾಗಿ ಅತ್ಯಂತ ಧಾರ್ಮಿಕರು,ದೇವಿ ಉಪಾಸಕರು, ಕೋಮುವಾದಿಗಳಾಗಿರುವುದಿಲ್ಲ. ಆಳದಲ್ಲಿ ಜಾತಿಯ ಮಡಿವಂತಿಕೆ ಇದ್ದರೂ ಬಹಿರಂಗವಾಗಿ ವ್ಯಕ್ತಪಡಿಸುವುದಿಲ್ಲ. ಇವರು ತಮ್ಮ ಪಾಡಿಗೆ ತಾವಿರುತ್ತಾರೆ. ಚುನಾವಣೆ ಬಂದಾಗ ಪಕ್ಷಭೇದ ವಿಲ್ಲದೇ ಒಳ್ಳೆಯ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ.ಬಹುಸಂಖ್ಯಾತರಾಗಿರುವ ಇಂಥವರ ಮೇಲೆ ಕಣ್ಣು ಹಾಕಿರುವ ಬಿಜೆಪಿ ಈ ಧಾರ್ಮಿಕ ಹಿಂದೂಗಳನ್ನು ರಾಜಕೀಯ ಹಿಂದೂಗಳನ್ನಾಗಿ ಮಾಡಲು ನಾನಾ ವಿಧದ ಮಸಲತ್ತುಗಳನ್ನು ಮಾಡುತ್ತ ಬಂದಿದೆ .
ಕರಾವಳಿಯ ಮಂಗಳೂರು ಮತ್ತು ಉಡುಪಿಯಂಥ ಜಿಲ್ಲೆಗಳಲ್ಲಿ ಅದು ದೇವಾಲಯಗಳ ಪರಿಸರದಲ್ಲಿ ಆಳವಾಗಿ ಬೇರು ಬಿಟ್ಟಿದೆ.
ನಮ್ಮದು ಬಹು ಧರ್ಮಗಳ ,ಬಹು ಭಾಷೆಗಳ ವಿಭಿನ್ನ ಆಚಾರ ವಿಚಾರಗಳ ಒಕ್ಕೂಟ ದೇಶ.ಇಲ್ಲಿ ದೇವಾಲಯಗಳಿಗೆ ಹೋಗುವ ಅಲ್ಪಸಂಖ್ಯಾತರಿದ್ದಾರೆ. ದರ್ಗಾಗಳಿಗೆ ಹೋಗುವ ಬಹುಸಂಖ್ಯಾತರಿದ್ದಾರೆ.ಜಾತ್ರೆಗಳಲ್ಲಿ ಅಂಗಡಿಗಳನ್ನಿಟ್ಟು ವ್ಯಾಪಾರ ಮಾಡುವ ಮುಸಲ್ಮಾನರಿರುವಂತೆ ,ಉರೂಸುಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸುವ ಹಿಂದೂಗಳೆಂದು ಕರೆದುಕೊಳ್ಳುವವರು ಸೇರಿದಂತೆ ಎಲ್ಲ ಜಾತಿಗಳ ಜನರೂ ಇದ್ದಾರೆ.ಇದು ರಾಜಕೀಯವಾಗಿ ಹಿಂದುತ್ವದವರಿಗೆ ಅವರ ಕಾರ್ಯಸೂಚಿಯನ್ನು ಜಾರಿಗೆ ತರಲು ಅಡ್ಡಿಯಾಗಿದೆ.ಅಂತಲೇ ಹಿಂದೂ ಜಾತ್ರೆ, ಉತ್ಸವಗಳಲ್ಲಿ ಮುಸಲ್ಮಾನರು ಅಂಗಡಿಗಳನ್ನು ಇಡಬಾರದೆಂದು ನಿರ್ಬಂಧಿಸಲು ಯತ್ನಿಸುತ್ತಿದ್ದಾರೆ. ಆದರೆ ದೇವಾಲಯಗಳ ಭಕ್ತರಿಂದಲೇ ಇದಕ್ಕೆ ತೀವ್ರ ವಿರೋಧ ಬರುತ್ತಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಹಿರಂಗವಾಗಿ ಏನನ್ನೇ ಹೇಳಲಿ ಅದರ ಒಳಗುರಿ ಪ್ರಜಾಪ್ರಭುತ್ವದ ಬಹುತ್ವ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವುದಾಗಿದೆ.ಅದಕ್ಕಾಗಿ ಶೇಕಡ 90 ರಷ್ಟಿರುವ ಹಿಂದೂಗಳನ್ನು ಒಟ್ಟುಗೂಡಿಸಿ ಮುಸ್ಲಿಮರು ಹಾಗೂ ಕ್ರೈಸ್ತರನ್ನು ಪ್ರತ್ಯೇಕಿಸುವ ಪ್ರಯತ್ನ ನಡೆಸಿದೆ. ಇದನ್ನು ಗುರು ಗೋಳ್ವಾಲ್ಕರ್ ತಮ ್ಮ‘ಬಂಚ್ ಆಫ್ ಥಾಟ್ಸ್ ’ ಪುಸ್ತಕ ಸೇರಿದಂತೆ ಹಲವಾರು ಪುಸ್ತಕಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.ಅವರ ದೃಷ್ಟಿ ಯಲ್ಲಿ ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ಅವರ ಪ್ರಧಾನ ಶತ್ರುಗಳಾಗಿದ್ದಾರೆ. ಅದೇ ಮಾತನ್ನು ಈಗ ಆರೆಸ್ಸೆಸ್ ಸಂಘ ಚಾಲಕ ಮೋಹನ್ ಭಾಗವತರು ನಯವಾದ ಭಾಷೆಯಲ್ಲಿ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಒರಟಾದ ಭಾಷೆಯಲ್ಲಿ ಹೇಳಿದ್ದಾರೆ. ಭಾರತದಲ್ಲಿ ಇರುವವರೆಲ್ಲ ಹಿಂದೂಗಳು ಎಂದು ಭಾಗವತ್ ಹೇಳಿದರೆ,ಕಮ್ಯುನಿಸ್ಟ್ ಮುಕ್ತ ಭಾರತ ತಮ್ಮ ಮುಂದಿನ ಎಂದು ಅಮಿತ್ ಶಾ ಹೇಳಿದ್ದಾರೆ.
ಬುಡಕಟ್ಟು ಸಮುದಾಯಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಅದರ ಗುರಿ ಈಡೇರಿಲ್ಲ.ಉತ್ತರ ಭಾರತದಂತೆ ದಕ್ಷಿಣ ಭಾರತವನ್ನು ಗೆಲ್ಲಲು ಆಗುತ್ತಿಲ್ಲ. ಮುಖ್ಯವಾಗಿ ಕೇರಳ ಮತ್ತು ತಮಿಳುನಾಡುಗಳಲ್ಲಿ ನೆಲೆಯೂರಲು ಅದು ಹರಸಾಹಸ ಮಾಡುತ್ತಿದೆ.ಈ ರಾಜ್ಯಗಳ ಲ್ಲಿನ ಸಾಕ್ಷರತೆ ಮತ್ತು ಭಾಷೆ ಅದಕ್ಕೆ ದೊಡ್ಡ ಅಡ್ಡಿಯಾಗಿವೆ.ದಕ್ಷಿಣದಲ್ಲಿ ಅದಕ್ಕೆ ಇರುವ ಏಕೈಕ ಭರವಸೆ ಅಂದರೆ ಕರ್ನಾಟಕ. ಇಲ್ಲೂ ಸ್ವಂತ ಶಕ್ತಿಯಿಂದ ನಿಚ್ಚಳ ಬಹುಮತವನ್ನು ಪಡೆದು ಅಧಿಕಾರಕ್ಕೆ ಬರಲು ಬಿಜೆಪಿಗೆ ಸಾಧ್ಯವಾಗಿಲ್ಲ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಜನರು ಅದನ್ನು ಒಪ್ಪಲು ತಯಾರಿಲ್ಲ.
ಹೀಗಾಗಿ ಬಿಜೆಪಿ ಈಗ ಚುನಾವಣಾ ಆಯೋಗದ ಮೂಲಕ ಮತ ದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಮೂಲಕ ( ಎಸ್.ಐ.ಆರ್ ) ಬಡವರು ಮತ್ತು ಮುಸಲ್ಮಾನರ ನಾಗರಿಕತ್ವದ ಹಕ್ಕನ್ನೇ ಕಸಿಯಲು ಹೊರಟಿದೆ.ತಮಿಳುನಾಡಿನಲ್ಲಿ 90 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ .ಚುನಾವಣಾ ಆಯೋಗ ಸೇರಿದಂತೆ ಬಹುತೇಕ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅದು ಹಿಡಿತ ಸಾಧಿಸಿದೆ.ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿರುವ ಇಂಥ ಸಂದರ್ಭದಲ್ಲಿ ಕಾಂಗ್ರೆಸ್ನಂಥ ಸೆಕ್ಯುಲರ್ ಎಂದು ಕರೆದುಕೊಳ್ಳುವ ಪಕ್ಷಗಳು ತನ್ನ ಕಾರ್ಯಕರ್ತರು, ಶಾಸಕರು ,ಚುನಾಯಿತ ಸದಸ್ಯರು ದಾರಿ ತಪ್ಪದಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ.ಕಾರ್ಯಕರ್ತರಿಗೆ ತಾತ್ವಿಕ ಮತ್ತು ರಾಜಕೀಯ ತಿಳುವಳಿಕೆ ನೀಡಬೇಕಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಕೆಲವರು ಮಾತಾಡಿದರೆ ಸಾಲದು ಇಡೀ ಪಕ್ಷವೇ ದೊಡ್ಡ ಧ್ವನಿಯಲ್ಲಿ ಮಾತಾ
ಡಬೇಕಾಗಿದೆ.ದೊಡ್ಡ ಪಕ್ಷವಾಗಿ ಎಲ್ಲ ಜಾತ್ಯತೀತ, ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಒಟ್ಟುಗೂಡಿಸಬೇಕಾಗಿದೆ.ಅದೊಂದೇ ಉಳಿದ ದಾರಿಯಾಗಿದೆ. ಒಂದು ಪ್ರಬಲ ಜಾತ್ಯತೀತ ಶಕ್ತಿ ರೂಪುಗೊಂಡರೆ ಜನರೂ ಜೊತೆಗೆ ಬರುತ್ತಾರೆ. ಭಾರತೀಯರನ್ನು ಹಿಂದೂಗಳನ್ನಾಗಿ ಮಾಡುವುದಲ್ಲ,ಭಾರತೀಯರನ್ನು ನೈಜ ಭಾರತೀಯರನ್ನಾಗಿ ಮಾಡಬೇಕಾಗಿದೆ.