ಸಿಂಧನೂರು | ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ದಾಸ್ತಾನು ಜಪ್ತಿ: ಪ್ರಕರಣ ದಾಖಲು
Update: 2026-01-30 17:15 IST
ಸಿಂಧನೂರು : ತಾಲ್ಲೂಕಿನ ಸಾಸಲಮರಿ ಕ್ಯಾಂಪಿನ ನಂದಿನಿ ಸುರೇಶ್ ಅವರ ಮನೆಯ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಆಹಾರ ಇಲಾಖೆಯ ಶಿರಸ್ತೆದಾರ ಆನಂದ ಮೋಹನ್ ಅವರು ನೀಡಿದ ದೂರಿನ ಆಧಾರದ ಮೇಲೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಶಕ್ಕೆ ಪಡೆಯಲಾದ ಪಡಿತರ ಅಕ್ಕಿ 40ರಿಂದ 50 ಕೆ.ಜಿ ತೂಕದ 33 ಪ್ಲಾಸ್ಟಿಕ್ ಬರ್ಕಾ ಚೀಲಗಳಲ್ಲಿ ಸಂಗ್ರಹಿಸಲಾಗಿದ್ದು, ಒಟ್ಟು ಸುಮಾರು 23,700 ರೂ. ಮೌಲ್ಯದ ಅಕ್ಕಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ವೆಂಕಟೇಶ್ವರ ಕ್ಯಾಂಪಿನ ಹನುಮಂತ ಯಂಕಪ್ಪ ಎಂಬವರ ವಿರುದ್ಧ ಅಕ್ರಮ ಪಡಿತರ ದಾಸ್ತಾನು ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಮೌನೇಶ ರಾಠೋಡ್ ಅವರು ತನಿಖೆ ಕೈಗೊಂಡಿದ್ದಾರೆ.