×
Ad

ಲಿಂಗಸುಗೂರು | ಕನಿಷ್ಟ ವೇತನ ಜಾರಿಗೆ ಒತ್ತಾಯಿಸಿ ಶಾಸಕರಿಗೆ ಮನವಿ

Update: 2026-03-07 20:02 IST

ಲಿಂಗಸುಗೂರು: ಲಕ್ಷಾಂತರ ದುರ್ಬಲ ಕಾರ್ಮಿಕ ವರ್ಗಕ್ಕೆ ಆರ್ಥಿಕ ಸ್ವಾವಲಂಬನೆ ಖಾತರಿಪಡಿಸುವ ಕನಿಷ್ಠ ವೇತನವನ್ನು ಜಾರಿಗೆ ತರಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿ ಸಿಐಟಿಯು ಕಾರ್ಯಕರ್ತರು ಶನಿವಾರ ಶಾಸಕ ಮಾನಪ್ಪ ವಜ್ಜಲ್ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕದ ಅಸಂಘಟಿತ, ಸಣ್ಣ ಹಾಗೂ ಮಧ್ಯಮ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಕಾರ್ಮಿಕರಲ್ಲಿ ಕನಿಷ್ಠ ವೇತನದ ಪುನರ್ವಿಮರ್ಶೆ ಕುರಿತು ಸರ್ಕಾರ ಆರಂಭಿಸಿದ್ದ ಪ್ರಕ್ರಿಯೆ ಭರವಸೆಯನ್ನು ಮೂಡಿಸಿದ್ದರೂ ಅದು ಇನ್ನೂ ನಿರೀಕ್ಷೆಯಲ್ಲಿಯೇ ಉಳಿದಿದೆ ಎಂದು ಕಾರ್ಯಕರ್ತರು ತಿಳಿಸಿದರು.

ಕೇಂದ್ರ ಸರ್ಕಾರವು ಕೈಗಾರಿಕಾ ಬಾಂಧವ್ಯ ಸಂಹಿತೆ–2020ರ ಕಲಂ 104(1ಎ) ಅನ್ವಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಕಾರ್ಮಿಕ ಕಾಯ್ದೆಗಳ ಸಂಹಿತೆ ಜಾರಿಗೆ ಬಂದಿದ್ದರೂ ಹೊಸ ಔದ್ಯೋಗಿಕ ನ್ಯಾಯಾಧೀಕರಣ ಹಾಗೂ ಇತರ ಪ್ರಾಧಿಕಾರಗಳನ್ನು ರಚಿಸುವ ತನಕ ಹಾಲಿ ವ್ಯವಸ್ಥೆಯೇ ಮುಂದುವರೆಯಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನವೆಂಬರ್ 2025ರಲ್ಲಿ ಹೊರಡಿಸಿದ ಅಧಿಸೂಚನೆಗೆ ರಾಷ್ಟ್ರಪತಿಯವರ ಅಂಕಿತ ದೊರೆತಿದ್ದು, ಅದರಿಂದ ಅದಕ್ಕೆ ಕಾನೂನಾತ್ಮಕ ಬಲ ದೊರೆತಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಕಾರ್ಮಿಕ ಸಂಹಿತೆಯ ಅನ್ವಯ ರಾಜ್ಯ ನಿಯಮಾವಳಿಗಳನ್ನು ರೂಪಿಸಿ, ಹೊಸ ಔದ್ಯೋಗಿಕ ನ್ಯಾಯಾಧೀಕರಣ ಮತ್ತು ಇತರ ಪ್ರಾಧಿಕಾರಗಳನ್ನು ರಚಿಸುವ ತನಕ ಹಾಲಿ ನ್ಯಾಯಾಧೀಕರಣ ಹಾಗೂ ಕಾರ್ಮಿಕ ಇಲಾಖೆಯ ಪ್ರಾಧಿಕಾರಗಳು ನಿರಂತರವಾಗಿ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ಈ ವಿಚಾರವನ್ನು ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪ್ರಕಟಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಸಿಐಟಿಯು ಕಾರ್ಯಕರ್ತರು ಶಾಸಕ ಮಾನಪ್ಪ ವಜ್ಜಲ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಮುಹಮ್ಮದ್‌ ಹನೀಫ್, ನಿಂಗಪ್ಪ ವೀರಾಪುರ, ಅಲ್ಲಾಭಕ್ಷ, ಪೆಂಚಲಯ್ಯ, ಶ್ರೀಧರ್, ಕಮಲ ಮುದಗಲ್, ಆಂಜಿನೆಯ್ಯ, ವೆಂಕಟೇಶ, ಶೈನಾಜ್‍ಬೇಗಂ, ಸಿದ್ದಮ್ಮ, ಬಾಬಾಜಾನಿ ಸೇರಿ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News