ರಾಯಚೂರು | ಬಾಲ್ಯ ವಿವಾಹದ ಆರೋಪ: ಪತ್ನಿ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ ಪತಿಗೆ ಎದುರಾಯಿತು ಸಂಕಷ್ಟ
ರಾಯಚೂರು: ಗುರ್ಝಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಸೇತುವೆ ಮೇಲಿಂದ ಪತಿಯನ್ನು ಪತ್ನಿ ನದಿಗೆ ತಳ್ಳಿದ ಆರೋಪ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಬಾಲ್ಯ ವಿವಾಹದ ಆರೋಪ ಕೇಳಿ ಬಂದಿದೆ.
ರಾಯಚೂರು ಜಿಲ್ಲೆಯ ಗುರ್ಜಾಪುರ ಬ್ಯಾರೇಜ್ನಲ್ಲಿ ಪತ್ನಿಯೇ ಪತಿಯನ್ನು ನೂಕಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ನೀಡಲು ಹಿಂದೇಟು ಹಾಕಿ ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಮುಖ ಕಾರಣವೀಗ ಬಯಲಾಗಿದ್ದು, ಇದು ಬಾಲ್ಯವಿವಾಹ ನಡೆದಿರುವ ಸ್ಪೋಟಕ ಅಂಶ ಬೆಳಕಿಗೆ ಬಂದಿದೆ.
ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರು ಗುರ್ಜಾಪುರ ಬ್ಯಾರೇಜ್ನಿಂದ ಹರಿಯುವ ನೀರಿಗೆ ಪತಿಯನ್ನು ಪತ್ನಿಯೇ ನೂಕಿರುವ ಘಟನೆ ಜುಲೈ 11ರಂದು ನಡೆದಿತ್ತು. ಪತಿಯೇ ಪತ್ನಿಯ ವಿರುದ್ಧ ಆರೋಪ ಮಾಡಿದ್ದರೂ, ರಾಯಚೂರಿನ ಶಕ್ತಿನಗರ ಪೊಲೀಸ್ ಠಾಣೆಗೆ ದೂರು ನೀಡದೇ ರಾಜಿ ಸಂಧಾನದ ಮೂಲಕವೇ ವಿವಾಹ ವಿಚ್ಛೇದನ ಪತ್ರಕ್ಕೆ ಸಹಿ ಮಾಡಿಸಿಕೊಳ್ಳಲಾಗಿತ್ತು.
ಆದರೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲಕಿ ಓದಿರುವ ಶಾಲೆಗೆ ತೆರಳಿ ದಾಖಲಾತಿ ಪರಿಶೀಲನೆ ನಡೆಸಿದಾಗ ಶಾಲಾ ದಾಖಲಾತಿಯಲ್ಲಿ ಜನ್ಮ ದಿನಾಂಕ ಪರಿಶೀಲಿಸಿದಾಗ ಅಪ್ರಾಪ್ತ ಬಾಲಕಿ ಎಂಬುದು ತಿಳಿದುಬಂದಿದೆ.
ಬಾಲ್ಯ ವಿವಾಹ ನಿಷೇಧ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪತ್ರ:
ಬಾಲಕಿಯನ್ನು ಮದುವೆ ಮಾಡಿಕೊಂಡಿರುವುದು ದೃಢಪಟ್ಟಿರುವುದರಿಂದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲು ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗೆ ಪತ್ರ ಬರೆದಿದ್ದಾರೆ.
ಶಕ್ತಿನಗರದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಏಪ್ರೀಲ್ 18ರಂದು ಮದುವೆ ನಡೆದಿದ್ದು, ವಿವಾಹ ನಡೆದ ಸ್ಥಳ ರಾಯಚೂರು ವ್ಯಾಪ್ತಿಗೆ ಬರುವುದರಿಂದ ವಿವಾಹ ನೇರವೇರಿಸಿದವರ ಮತ್ತು ಭಾಗವಹಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕಚೇರಿಗೆ ವರದಿ ನೀಡುವಂತೆ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸುಂಬೆ ಮಾತನಾಡಿ, ಪತಿಯನ್ನು ಪತ್ನಿಯೇ ತಳ್ಳಿದ್ದಾಳೆ ಎನ್ನುವ ಘಟನೆಯಲ್ಲಿ ಅಪ್ರಾಪ್ತ ಬಾಲಕಿಗೆ ತಾತಪ್ಪ ಮದುವೆಯಾಗಿರುವುದು ದೃಢಪಟ್ಟಿದೆ. ಯಾದಗಿರಿ ಜಿಲ್ಲೆಯಲ್ಲಿ ಬಾಲಕಿ ವಿದ್ಯಾಭ್ಯಾಸ ಮಾಡಿರುವ ಶಾಲೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. 16 ವರ್ಷದೊಳಗಿನ ಬಾಲಕಿಯನ್ನು ಮದುವೆ ಆಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.