×
Ad

ರಾಯಚೂರು | ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಸಿಪಿಐಎಂಎಲ್ ಲಿಬರೇಶನ್ ಪ್ರತಿಭಟನೆ : ಪ್ರತಿಕೃತಿ ದಹನ

Update: 2025-01-27 13:58 IST

ರಾಯಚೂರು : ಮೈಕ್ರೋ ಫೈನಾನ್ಸ್ ಕಂಪನಿಗಳು ಭದ್ರತೆ ಇಲ್ಲದೇ ಅಮಾಯಕ ಮಹಿಳೆಯರಿಗೆ ನಕಲಿ ದಾಖಲಾತಿ ಸೃಷ್ಠಿ ಮಾಡಿ ಸಾಲ ನೀಡಿ, ಸಾಲ ಮರುಪಾವತಿಗಾಗಿ ಕಿರುಕುಳ ನೀಡುವ ಖಾಸಗಿ ಬ್ಯಾಂಕ್ ಗಳ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿ ಸಿಪಿಐಎಂಎಲ್ ಲಿಬರೇಶನ್ ರಾಯಚೂರು ಜಿಲ್ಲಾ ಸಮಿತಿಯಿಂದ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಮೈಕ್ರೋ ಫೈನಾನ್ಸ್ ಪ್ರತಿಕೃತ ದಹನ ಮಾಡಿ ಪ್ರತಿಭಟನೆ ನಡೆಸಲಾಯಿತು.

ತಾವು ಪಡೆದ ಸಾಲವನ್ನು ಕಟ್ಟುವುದು ಮಾತ್ರವಲ್ಲ, ಆಯಾ ಗುಂಪಿನಲ್ಲಿ ಸಾಲ ಪಡೆದವರ ಮರುಪಾವತಿಯನ್ನು ಸಹ ಮಾಡಿಸಿಕೊಡಬೇಕಾಗುತ್ತದೆ. ಹತ್ತು ಜನರ ಗುಂಪಿನಲ್ಲಿ, ಸಾಲ ಪಡೆದ ಒಬ್ಬರು ಮರುಪಾವತಿ ಮಾಡದಿದ್ದರೆ, ಉಳಿದ ಒಂಬತ್ತು ಜನ ಅವರ ಮನೆಯ ಮುಂದೆ ನಿಂತು ಸಾಲ ವಸೂಲಿ ಮಾಡಬೇಕಾಗುತ್ತದೆ. ಹೀಗೆ ಸಾಲ ಮರುಪಾವತಿ ಕಿರುಕುಳ ಶುರುವಾಗುತ್ತದೆ.

ಈ ಸಂಸ್ಥೆಗಳಿಂದ ನೇಮಕಗೊಂಡಿರುವ ವಸೂಲಿಗಾರರ ಕಿರುಕುಳ ಹಾಗೂ ದಾಳಿಯ ಕಾರಣಕ್ಕೆ ರಾಜ್ಯದಲ್ಲಿ ಹಲವು ನೆಲೆಯ ಹೋರಾಟಗಳು ಶುರುವಾಗಿವೆ. ಮೈಕ್ರೊಫೈನಾನ್ಸ್ ಹೆಸರಿನಲ್ಲಿ ಕೆಲವು ಬೃಹತ್ ಸಂಸ್ಥೆಗಳು ತಮ್ಮ ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿವೆ. ಅಂತಹ ಹಲವು ಸಂಸ್ಥೆಗಳು ಮೈಕ್ರೊಫೈನಾನ್ಸ್ ಘಟಕಗಳನ್ನು ತೆರೆದು ಹಳ್ಳಿಗಳಿಗೆ ಲಗ್ಗೆ ಇಡುತ್ತಿವೆ ಎಂದು ದೂರಿದರು.

ಅವಿಭಜಿತ ಆಂಧ್ರಪ್ರದೇಶದಲ್ಲಿ ಮೈಕ್ರೊಫೈನಾನ್ಸ್ ಸಂಸ್ಥೆಗಳ ಹಾವಳಿ ಮಿತಿಮೀರಿದ್ದರಿಂದ, 2010ರಲ್ಲಿ ಸುಗ್ರೀವಾಜ್ಞೆ ಮೂಲಕ ಮೈಕ್ರೊಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನದಿಂದಾಗಿ ಮೈಕ್ರೊಫೈನಾನ್ಸ್ ಸಂಸ್ಥೆಗಳು ಆಂಧ್ರದಿಂದ ಕಾಲ್ಕಿತ್ತವು. ಅಂತಹ ಅನೇಕ ಸಂಸ್ಥೆಗಳು ಕರ್ನಾಟಕದಲ್ಲಿ ತಮ್ಮ ಅಂಗಡಿಗಳನ್ನು ತೆರೆದಿವೆ. ಮುಂಬರುವ ದಿನಗಳಲ್ಲಿ ನಮ್ಮ ರಾಜ್ಯದಲ್ಲಿಯೂ ಮೈಕ್ರೊಫೈನಾನ್ಸ್ ಸಂಸ್ಥೆಗಳಿಂದ ಪಡೆದ ಸಾಲ ತೀರಿಸಲಾಗದೆ, ಸಾಲ ವಸೂಲಾತಿಯ ಕಟ್ಟುಪಾಡುಗಳಿಂದ ತೀವ್ರ ತೊಂದರೆ ಅನುಭವಿಸುವವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಹೆಚ್ಚಳವಾಗಿದೆ ಎಂದು ಆರೋಪಿಸಿದರು.

ಆಂಧ್ರ ಸರಕಾರ ಜಾರಿಗೊಳಿಸಿದ ಮೈಕ್ರೊಫೈನಾನ್ಸ್ ನಿಯಂತ್ರಣ ಕಾಯ್ದೆಯ ಮಾದರಿಯಲ್ಲಿ ನಮ್ಮ ರಾಜ್ಯ ಸರಕಾರವೂ ಈ ಫೈನಾನ್ಸ್ ಸಂಸ್ಥೆಗಳ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಒತ್ತಾಯಿಸಿದರು.

ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಮೈಕ್ರೋ ಫೈನಾನ್ಸ್ ಖಾಸಗಿ ಬ್ಯಾಂಕ್ ಗಳ ಎಷ್ಟು ಪರವಾನಿಗೆ ತೆಗೆದುಕೊಂಡಿದ್ದಾರೆ, ಎಷ್ಟು ಅನಧಿಕೃತವಾಗಿ ನಡೆಯುತ್ತೀವೆ. ಸಮಗ್ರ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಬಂಧಿಸಬೇಕೆಂದು ಆಗ್ರಹಿಸಿದರು.

ಧರ್ಮಸ್ಥಳ ಸಂಘ, ಎಲ್ ಎಂ ಟಿ ಸಂಘ, ಸ್ಪಂದನ ಸಂಘ, ಕೆಬಿಎಸ್ ಬ್ಯಾಂಕ್, ಮಹೇಂದ್ರ ಫೈನಾನ್ಸ್, ಬಜಾಜ್ ಫೈನಾನ್ಸ್ ,ಶ್ರೀರಾಮ್ ಫೈನಾನ್ಸ್, ಫೈವ್ ಸ್ಟಾರ್ ಫೈನಾನ್ಸ್ ಲಿಮಿಟೆಡ್, ಗ್ರಾಮಶಕ್ತಿ ಸ್ವಸಹ ಸಂಘ, ಎಲ್ ಆಂಡ್ ಟಿ, ಸ್ವಸಹ ಸಂಘ, ಗ್ರಾಮೀಣ ಕೂಟ ಸ್ವಸಹಾಯ ಸಂಘ, ಉಜ್ವನ್ ಫೈನಾನ್ಸ್, ಕೃಷ್ಣ ಭೀಮಾ ಬ್ಯಾಂಕ್, ಇತರೆ ಸಂಸ್ಥೆಗಳು ಮೇಲೆ ಕಾನೂನು ಉಲ್ಲಂಘಿನೆ ವಿರುದ್ಧ ಸಮಗ್ರ ತನಿಖೆಗೆ ಒಳಪಡಿಸಬೇಕು.

ಜಿಲ್ಲೆಯ ಮೈಕ್ರೋ ಫೈನಾನ್ಸ್ ಕಂಪನಿಗಳು ಭದ್ರತೆ ಇಲ್ಲದೇ ಅಮಾಯಕ ಮಹಿಳೆಯರಿಗೆ ನಕಲಿ ದಾಖಲಾತಿ ಸೃಷ್ಠಿ ಮಾಡಿ ಸಾಲ ನೀಡಿ, ಸಾಲ ಮರುಪಾವತಿಗಾಗಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ತಕ್ಷಣವೇ ನಿಲ್ಲಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.

ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧ ದೂರು ಸಲ್ಲಿಸಲು ತಕ್ಷಣವೇ ಸಹಾಯವಾಣಿ ಪ್ರಾರಂಭಿಸಬೇಕು. ಮೈಕ್ರೋ ಫೈನಾನ್ಸ್ ಖಾಸಗಿ ಬ್ಯಾಂಕುಗಳ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ 50 ಲಕ್ಷ ರೂ. ಗಳು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಎನ್. ಆರ್ .ಎಲ್ .ಎಂ ಯೋಜನೆಯ ಎಲ್ಲಾ ಗ್ರಾಮ ಪಂಚಾಯಿತ್ ಒಕ್ಕೂಟಗಳ ಸ್ವ-ಸಹಾಯ ಗುಂಪುಗಳಿಗೆ ತಲಾ 10 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಬೇಕು ಎಂದು ಸಹಾಯಕ ನಿಬಂಧಕರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್, ಜಿಲ್ಲಾ ಮುಖಂಡರದ ಅಜೀಜ್ ಜಾಗೀರ್ದಾರ್, ಚಾಂದಾಸಾಬ್ ಬೆಳ್ಳಿಗಿನೂರು, ದೇವರಾಜ ಮಡಿವಾಳ, ಶ್ರೀನಿವಾಸ ಬುಕ್ಕನ್ನಟ್ಟಿ, ನರಸಮ್ಮ ಮಸ್ಕಿ, ಬಸವರಾಜ ಹಿರೇದಿನ್ನಿ, ರವಿಚಂದ್ರ, ಮಹಾದೇವ ಅಮರಾಪರ, ಜಿಲಾನಿ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News