ರಾಯಚೂರು | ಕತ್ತಲಲ್ಲಿ ಮಸ್ಕಿ ಬಸ್ ನಿಲ್ದಾಣ : ಹೆಚ್ಚಿದ ಕಳ್ಳರ ಹಾವಳಿ
ಮಸ್ಕಿ: ಅಶೋಕ ಶಿಲಾಶಾಸನದಿಂದ ಐತಿಹಾಸಿಕವಾಗಿ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧ ಪಡೆದ ಮಸ್ಕಿ ತಾಲೂಕು ಬಸ್ ನಿಲ್ದಾಣದಲ್ಲಿ ವಿದ್ಯುತ್ ದೀಪ ಕೆಟ್ಟು ಹೋಗಿ ಪ್ರಯಾಣಿಕರು ಕತ್ತಲಲ್ಲಿ ಪರದಾಟ ನಡೆಸುವಂತಾಗಿದೆ.
ಮಸ್ಕಿಯಿಂದ ದಿನನಿತ್ಯ ಪಟ್ಟಣಕ್ಕೆ ನೂರಾರು ಬಸ್ಗಳು ಸಂಚರಿಸುತ್ತದೆ ಮತ್ತು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ ಹಲವು ತಿಂಗಳಿಂದ ಬಸ್ ನಿಲ್ದಾಣದಲ್ಲಿ ವಿದ್ಯುತ್ ದೀಪ ಕೆಟ್ಟು ಹೋಗಿದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ರಾತ್ರಿ ವೇಳೆ ಕಳ್ಳರು ಬಸ್ ನಿಲ್ದಾಣಕ್ಕೆ ನುಗ್ಗಿ ಪ್ರಯಾಣಿಕರ ಪರ್ಸ್, ಹಣ ಕಳ್ಳತನ ಮಾಡುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ.
"ಬಸ್ ನಿಲ್ದಾಣದಲ್ಲಿ ಸಮರ್ಪಕವಾಗಿ ಕುಡಿಯುವ ನೀರಿಲ್ಲ, ಸ್ವಚ್ಛತೆ, ಶೌಚಾಲಯದ ನಿರ್ವಹಣೆ ಸರಿಯಾಗಿಲ್ಲ. ರಸ್ತೆ ಹಾಳಾಗಿದ್ದುಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಮಳೆ ನೀರು ಶೇಖರಣೆಯಾಗಿ ಅವಾಂತರ ಸೃಷ್ಠಿಯಾಗಿದೆ. ಕೂಡಲೇ ಸಾರಿಗೆ ಅಧಿಕಾರಿಗಳು ಇತ್ತ ಗಮನಹರಿಸಿ ನಿಲ್ದಾಣದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿ ಮೂಲಸೌಕರ್ಯ ಒದಗಿಸಬೇಕು" ಎಂದು ಸ್ಥಳೀಯರಾದ ಮಾರುತಿ ಜಿನ್ನಾಪುರ ಒತ್ತಾಯಿಸಿದ್ದಾರೆ.