ಶಿವಮೊಗ್ಗ: ಮೊಬೈಲ್ ನುಂಗಿದ ಕೇಂದ್ರ ಕಾರಾಗೃಹದ ಖೈದಿ; ಶಸ್ತ್ರಚಿಕಿತ್ಸೆ ವೇಳೆ ಪತ್ತೆ
ಶಿವಮೊಗ್ಗ : ಖೈದಿಯೊಬ್ಬ ಮೊಬೈಲ್ ನುಂಗಿದ ಘಟನೆ ನಗರದ ಹೊರವಲಯದಲ್ಲಿರುವ ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ದೌಲತ್ ಅಲಿಯಾಸ್ ಗುಂಡ (30) ಮೊಬೈಲ್ ನುಂಗಿದ ಖೈದಿ.
ಜೂನ್ 24ರಂದು ಜೈಲಿನ ಆಸ್ಪತ್ರೆಗೆ ಬಂದು, ತಾನು ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದ. ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದರು. ಎಕ್ಸ್ರೇ ಮಾಡಿದಾಗ ಖೈದಿ ದೌಲತ್ನ ಹೊಟ್ಟೆಯಲ್ಲಿ ಹೊರಗಿನ ವಸ್ತು ಇರುವುದು ಗೊತ್ತಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದಾಗ ಮೊಬೈಲ್ ಫೋನ್ ಪತ್ತೆಯಾಗಿದ್ದು,ಸದ್ಯ ಮೊಬೈಲ್ ಫೋನ್ ಹೊರಗೆ ತೆಗೆಯಲಾಗಿದೆ.ಪ್ರಕರಣವೊಂದರಲ್ಲಿ ದೌಲತ್ ಅಲಿಯಾಸ್ ಗುಂಡನಿಗೆ ಶಿವಮೊಗ್ಗದ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಜೈಲಿನೊಳಗೆ ಮೊಬೈಲ್ ಫೋನ್ ನಿಷೇಧವಿದ್ದರೂ, ಜೈಲಿನ ಒಳಗೆ ಮೊಬೈಲ್ ತಲುಪಿರುವ ಕುರಿತು ತನಿಖೆ ನಡೆಸುವಂತೆ ಕೇಂದ್ರ ಕಾರಾಗೃಹದ ಅಧೀಕ್ಷಕ ರಂಗನಾಥ್.ಪಿ ಅವರು ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.