×
Ad

ಪಕ್ಷದ ನಿಯಮ ಉಲ್ಲಂಘನೆ ಮಾಡಿದ ಕಾರಣ ಯತ್ನಾಳ್ ಅವರ ಉಚ್ಛಾಟನೆಯಾಗಿದೆ : ಶಾಸಕ ಎಸ್.ಎನ್.ಚನ್ನಬಸಪ್ಪ‌

Update: 2025-03-27 12:49 IST

PC | X

ಶಿವಮೊಗ್ಗ: ಬಿಜೆಪಿ‌ ಅಶಿಸ್ತನ್ನು ಯಾವತ್ತೂ ಸಹಿಸಿಲ್ಲ. ಸಹಿಸುವುದೂ ಇಲ್ಲ. ಕ್ರಮ ಕೈಗೊಳ್ಳುವುದು ಸ್ವಲ್ಪ ತಡವಾಗಿರಬಹುದು. ಆದರೆ ಎಷ್ಟೇ ದೊಡ್ಡ ನಾಯಕರಾದರೂ ಪಕ್ಷದ ನಿಯಮ ಉಲ್ಲಂಘನೆ ಮಾಡಬಾರದು. ಯತ್ನಾಳ್ ಪಕ್ಷದ ನಿಯಮ ಉಲ್ಲಂಘನೆ ಮಾಡಿದ್ದಾರೆ. ಅದರ ಪರಿಣಾಮ ಯತ್ನಾಳ್ ಅವರ ಉಚ್ಛಾಟನೆಯಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ‌ ಹೇಳಿದ್ದಾರೆ.

ಯತ್ನಾಳ್ ಉಚ್ಚಾಟನೆ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾರ್ಯಕರ್ತರು ಸಹಜ ಶಿಸ್ತಿಗೆ ಒಳಪಟ್ಟಿರುತ್ತಾರೆ. ಇದಕ್ಕೆ ವಿಶೇಷ ಅರ್ಥ ಕೊಡುವ ಅವಶ್ಯಕತೆ ಇಲ್ಲ ಎನ್ನಿಸುತ್ತದೆ. ಹಿರಿಯರು, ಕಿರಿಯರು ಎಲ್ಲರಿಗೂ ಶಿಸ್ತು ಒಂದೆ. ಉಮಾಭಾರತಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು.‌ ದೊಡ್ಡವರು ಪಕ್ಷಕ್ಕೆ‌ ಕಸಿವಿಸಿ ತರುವ ಕೆಲಸ‌ ಮಾಡಿದಾಗ, ಕಾರ್ಯಕರ್ತರಿಗೆ ಮುಜುಗರವಾಗುತ್ತದೆ. ಅಶಿಸ್ತಿನಿಂದ ವರ್ತನೆ ಮಾಡಿದಾಗ ಕ್ರಮ‌ ಅನಿವಾರ್ಯ ಎಂದರು.

ಎಲ್ಲರೂ ಶಿಸ್ತಿನಿಂದ ಕೆಲಸ ಮಾಡಬೇಕಿತ್ತು.‌ ಬಿಜೆಪಿ ಯಾವತ್ತೂ ಶಿಸ್ತನ್ನು ಬಿಟ್ಟುಕೊಡಲ್ಲ. ನಾಲ್ಕುಗೋಡೆಯ ನಡುವೆ ಕುಳಿತು ಬಗೆಹರಿಸಿಕೊಳ್ಳಬಹುದಿತ್ತು. ಪಕ್ಷದ ಶಿಸ್ತನ್ನು ಅರ್ಥ ಮಾಡಿಕೊಳ್ಳದವರು ಈ ರೀತಿಯ ಕೆಲಸಕ್ಕೆ ಕೈ ಹಾಕುತ್ತಾರೆ. ಬಿಜೆಪಿ ಕೇಡರ್ ಬೇಸ್ಡ್ ಪಾರ್ಟಿ. ಹೈಕಮಾಂಡ್ ಕ್ರಮಕ್ಕೆ ಕಾರ್ಯಕರ್ತರು ಎದೆ ಒಡೆದುಕೊಳ್ಳಬಾರದು. ಇದು ಮೊದಲ ಬಾರಿ ಏನಲ್ಲ. ಎಷ್ಡೆ ದೊಡ್ಡ ವ್ಯಕ್ತಿಯಾದರೂ ತಪ್ಪನ್ನು ಸರಿ ಮಾಡಿಕೊಳ್ಳಬೇಕು. ತಡವಾದರೂ  ಹೈಕಮಾಂಡ್ ಕ್ರಮ‌ ಕೈಗೊಂಡಿದೆ ಎಂದರು.‌

ಯತ್ನಾಳ್ ಉಚ್ಚಾಟನೆಯಿಂದ ಯಾವುದೇ ಪ್ರಭಾವ ಬೀರುವುದಿಲ್ಲ. ನಮ್ಮದು ಒಂದೇ ಟೀಮ್, ಅದು ಬಿಜೆಪಿ. ಅವರು ಬದಲಾವಣೆ ಆಗಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಂಡಿರಬಹುದು. ನಾವು ಸಿದ್ದಾಂತಕ್ಕೆ ಬದ್ಧರಾದವರು.ಒಟ್ಟಾರೆ ನಾವು ವ್ಯಕ್ತಿಗತವಾಗಿ ಯೋಚಿಸಿಲ್ಲ. ಯಾರನ್ನೂ ಕಳೆದುಕೊಳ್ಳಬೇಕು ಎಂಬ ಭಾವನೆ ಇಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News