ಆರ್‌ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯದ ಟಾಸ್‍ನಲ್ಲಿ ಫಿಕ್ಸಿಂಗ್?

Update: 2024-04-13 16:17 GMT

PC : @IPL 

ಮುಂಬೈ: ಗುರುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಏಕಪಕ್ಷೀಯ ಪಂದ್ಯವೊಂದರಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು 27 ಎಸೆತಗಳು ಬಾಕಿಯಿರುವಂತೆಯೇ ಏಳು ವಿಕೆಟ್‍ಗಳಿಂದ ಸೋಲಿಸಿತು.

ಆದರೆ, ಆ ಪಂದ್ಯದ ಟಾಸ್ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿವಾದಕ್ಕೆ ಕಾರಣವಾಯಿತು. ಪಂದ್ಯ ರೆಫರಿ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಟಾಸ್‍ನ ಫಲಿತಾಂಶವನ್ನು ಮುಂಬೈ ಇಂಡಿಯನ್ಸ್ ಪರವಾಗಿ ತಿರುಚಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿದರು.

ಚಿಮ್ಮುಗೆಯ ಬಳಿಕ ನಾಣ್ಯವನ್ನು ಮೇಲಕ್ಕೆ ಎತ್ತುವಾಗ ಅದನ್ನು ತಿರುಗಿಸಿ ಅವರು ಟಾಸ್‍ನ ಫಲಿತಾಂಶವನ್ನೇ ಬದಲಾಯಿಸಿದ್ದಾರೆ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹೇಳಿಕೊಂಡರು.

ಆದರೆ, ಬಳಿಕ, ಈ ವಿಷಯದಲ್ಲಿ ಇನ್ನೋರ್ವ ‘ಎಕ್ಸ್’ ಬಳಕೆದಾರ “ವಾಸ್ತವಾಂಶ ತನಿಖೆ” ನಡೆಸಿ ಟಾಸ್‍ನ “ಸ್ಪಷ್ಟ ವೀಡಿಯೊ’’ಗಳನ್ನು ಹಂಚಿಕೊಂಡರು. ನಾಣ್ಯವನ್ನು ಮೇಲೆತ್ತುವಾಗ ಶ್ರೀನಾಥ್ ಅದರ ಮುಖಗಳನ್ನು ತಿರುಗಿಸಿಲ್ಲ, ಆದರೆ, RCB ನಾಯಕ ಫಫ್ ಡು ಪ್ಲೆಸಿಸ್ ಹೇಳಿರುವ ಆಯ್ಕೆ ಏನು ಎನ್ನುವುದನ್ನು ಅವರು ಮರೆತಿದ್ದರು ಎನ್ನುವುದು ಈ ವೀಡಿಯೊದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.

“ಇದು ಟಾಸ್‍ನ ಸ್ಪಷ್ಟವಾದ ವೀಡಿಯೊ. ನಿಮಗೆ ಈಗಲೂ ಅನುಮಾನವಿದ್ದರೆ ಒಂದೋ ಕಣ್ಣಿನ ಆಸ್ಪತ್ರೆಗೆ ಹೋಗಿ ಅಥವಾ ಮಾನಸಿಕ ಆಸ್ಪತ್ರೆಗೆ ಹೋಗಿ’’ ಎಂಬುದಾಗಿ ಆ ವೀಡಿಯೊದ ಕ್ಯಾಪ್ಶನ್‍ನಲ್ಲಿ ಬರೆಯಲಾಗಿದೆ!

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News