ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ವಿಕಾಸ್ ಕುಮಾರ್ ನೇಮಕ | ಸರಕಾರ, ಆರ್ಸಿಬಿ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿದ್ದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅವರನ್ನು ಆಂತಕರಿಕ ಭದ್ರತಾ ವಿಭಾಗದ ಐಜಿಪಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯ ಸರಕಾರ ಶುಕ್ರವಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಹಾಗೂ ನ್ಯಾಯಮೂರ್ತಿ ಟಿ.ಎಂ ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರ ಅಮಾನತು ರದ್ದುಪಡಿಸಿದ್ದ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಆದೇಶ ಪ್ರಶ್ನಿಸಿ ರಾಜ್ಯ ಸರಕಾರ ಮತ್ತು ಸಿಎಟಿ ಆದೇಶದಲ್ಲಿ ಆಕ್ಷೇಪಾರ್ಹ ಅಂಶಗಳನ್ನು ತೆಗೆಯುವಂತೆ ಕೋರಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಸಲ್ಲಿಸಿರುವ ಅರ್ಜಿಗಳನ್ನು ಇತ್ಯರ್ಥಪಡಿಸಿತು.
ಇದಕ್ಕೂ ಮುನ್ನ ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಮೂರ್ತಿ ಪಂಡಿತ್ ಅವರು, ಪೊಲೀಸ್ ಅಧಿಕಾರಿಗಳ ಮನವಿಯ ಕುರಿತು ಯಾವ ಆದೇಶ ಮಾಡಲಾಗಿದೆ ಎಂದು ಸರಕಾರವನ್ನು ಪ್ರಶ್ನಿಸಿತು.
ರಾಜ್ಯ ಸರಕಾರದ ಪರ ಹಾಜರಿದ್ದ ಹಿರಿಯ ವಕೀಲ ಪಿ.ಎಸ್. ರಾಜಗೋಪಾಲ್ ಅವರು, ಅಮಾನತು ಆದೇಶವನ್ನು ಸರಕಾರ ಹಿಂಪಡೆದಿದ್ದು, ಅವರಿಗೆ ಹುದ್ದೆ ತೋರಿಸಲಾಗಿದೆ. ಇಂದು ಬೆಳಗ್ಗೆ ವಿಕಾಸ್ ಕುಮಾರ್ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದರು.
ಆಗ ಮಧ್ಯಪ್ರವೇಶಿಸಿದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪಅವರು, ವಿಕಾಸ್ ಕುಮಾರ್ ಅವರನ್ನು ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹುದ್ದೆಗೆ ನೇಮಕ ಮಾಡುತ್ತಾರೆ ಎಂದು ನಿರೀಕ್ಷೆ ಹೊಂದಿದ್ದೆವು ಎಂದರು.
ಅಂತಿಮವಾಗಿ ನ್ಯಾಯಪೀಠ, ಸರಕಾರ ಆದೇಶ ಮಾಡಿರುವುದರಿಂದ ರಿಟ್ ಅರ್ಜಿಯಲ್ಲಿ ಏನು ಉಳಿಯಿತು ಎಂದು ಪ್ರಶ್ನಿಸಿತು. ಅದಕ್ಕೆ ಧ್ಯಾನ್ ಚಿನ್ನಪ್ಪ ಅವರು ಅರ್ಜಿ ಮುಕ್ತಾಯಗೊಳಿಸಬಹುದು ಎಂದರು.
ಈ ನಡುವೆ ರಾಜಗೋಪಾಲ್ ಅವರು, ಸರಕಾರದ ಅಮಾನತು ಆದೇಶವನ್ನು ಸಿಎಟಿ ರದ್ದುಪಡಿಸಿದೆ. ಆದರೆ, ಆಕ್ಷೇಪಾರ್ಹ ಆದೇಶದಲ್ಲಿ ಮಾಡಿರುವ ಕೆಲವು ಅಂಶಗಳು ಇಲಾಖಾ ವಿಚಾರಣೆಯ ಮೇಲೆ ಪರಿಣಾಮ ಉಂಟು ಮಾಡುತ್ತವೆ ಎಂದರು.
ಆಗ ನ್ಯಾಯಪೀಠ, ಸಿಎಟಿ ಆದೇಶದಲ್ಲಿನ ಅಭಿಪ್ರಾಯಗಳು ಅಮಾನತು ಪರಿಗಣಿಸುವುದಕ್ಕೆ ಸಂಬಂಧಿಸಿದ್ದಾಗಿವೆ. ಅದಕ್ಕೆ ಸೀಮಿತವಾಗಿ ಆದೇಶದಲ್ಲಿ ಸ್ಪಷ್ಟಪಡಿಸಲಾಗುವುದು ಎಂದು ಹೇಳಿತಲ್ಲದೆ, ಇಲಾಖಾ ವಿಚಾರಣೆ ನಡೆಸಲು ವರ್ಷಗಳನ್ನು ತೆಗೆದುಕೊಂಡರೆ?’’ ಎಂದು ಸರಕಾರವನ್ನು ಕುರಿತು ಹೇಳಿತು. ಅದಕ್ಕೆ ರಾಜಗೋಪಾಲ್ ಅವರು, ಇಲಾಖಾ ವಿಚಾರಣೆ ವಿಳಂಬವಾಗುವುದಿಲ್ಲ. ಏಕೆಂದರೆ, ನಮ್ಮ ಅಮಾನತು ಆದೇಶಕ್ಕೆ ಒಪ್ಪಿಗೆ ನೀಡುವಾಗ ಕೇಂದ್ರ ಸರಕಾರ ಆಗಸ್ಟ್ 3ರೊಳಗೆ ಆರೋಪ ಪಟ್ಟಿ ಸಲ್ಲಿಸಬೇಕು ಎಂದಿದೆ ಎಂದರು. ಇದಕ್ಕೆ ಧ್ಯಾನ್ ಚಿನ್ನಪ್ಪ ಅವರು, ಸಿಎಟಿ ಆದೇಶ ಪರಿಗಣಿಸಿ ವಿಕಾಸ್ ಅವರಿಗೆ ನೀಡಬೇಕಾದ ಎಲ್ಲ ಸೌಲಭ್ಯಗಳನ್ನೂ ನೀಡಬೇಕು ಎಂದರು. ಇದನ್ನು ಆಲಿಸಿದ ನ್ಯಾಯಪೀಠವು ಸೂಕ್ತ ಆದೇಶ ಮಾಡಲಾಗುವುದು ಎಂದಿತು.
ಆಗ ಆರ್ಸಿಬಿ ಪರ ಹಿರಿಯ ವಕೀಲ ಸಂದೇಶ್ ಚೌಟ, ಆರ್ಸಿಬಿಯು ಪಕ್ಷಕಾರನಾಗಿಲ್ಲದಿದ್ದರೂ ಆದೇಶದಲ್ಲಿ ಆಕ್ಷೇಪಾರ್ಹವಾದ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಚಿನ್ನಪ್ಪ, ಸಿಎಟಿ ಆದೇಶದಲ್ಲಿ ಅಂಶಗಳು ಆರ್ಸಿಬಿಗೆ ಅನ್ವಯಿಸುವುದಿಲ್ಲ. ಹೀಗಾಗಿ, ಅದನ್ನು ತೆಗೆಯಲಾಗದು. ಆರ್ಸಿಬಿ ಹೇಳುವ ಅಂಶಗಳನ್ನು ತೆಗೆಯುವುದು ಎಂದರೆ, ಸಿಎಟಿ ಆದೇಶ ತಳ್ಳಿಹಾಕುವುದು ಎಂಬಂತಾಗಲಿದೆ ಎಂದರು.
ನ್ಯಾಯಪೀಠ, ಇದು ಅನ್ವಯಿಸುತ್ತದೋ, ಬಿಡುತ್ತದೋ. ನ್ಯಾಯಾಲಯದ ಮುಂದೆ ಇರದ ವ್ಯಕ್ತಿಯ ವಿರುದ್ಧ ಆ ಹೇಳಿಕೆ ನೀಡಬಹುದೇ? ಎಂದು ಧ್ಯಾನ್ ಅವರನ್ನು ಪ್ರಶ್ನಿಸಿತು. ಧ್ಯಾನ್ ಚಿನ್ನಪ್ಪ ಉತ್ತರಿಸಿ, ರಾಜ್ಯ ಸರಕಾರ ನೀಡಿದ ಹೇಳಿಕೆಯನ್ನು ಆಧರಿಸಿ ಸಿಎಟಿಯು ಆ ಅಂಶಗಳನ್ನು ಉಲ್ಲೇಖಿಸಿದೆ ಎಂದರು. ಇದನ್ನು ಆಲಿಸಿದ ನ್ಯಾಯಪೀಠ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಆದೇಶಿಸಿತು.