ಜನರಲ್ಲಿ ಆರ್ಥಿಕ ಸಂಪನ್ಮೂಲ ವೃದ್ಧಿಗೆ ಸಹಕಾರಿ ಪಾತ್ರ ಅಪಾರ: ಐವನ್ ಡಿ’ಸೋಜ
ಉಡುಪಿ, ಸೆ.19: ಸಹಕಾರ ಸಂಘಗಳು ಹೆಚ್ಚಿನ ಪತ್ರ ವ್ಯವಹಾರ ವಿಲ್ಲದೇ, ಸರಳ ರೀತಿಯಲ್ಲಿ ಜನರ ಅವಶ್ಯಕತೆ ಗಳಿಗೆ ಅನುಗುಣವಾಗಿ ಸಾಲ ಸೌಲಭ್ಯವನ್ನು ನೀಡುತ್ತವೆ. ಇದರಿಂದಾಗಿ ಜನರು ಸಹಕಾರ ಸಂಘಗಳಲ್ಲಿ ವ್ಯವಹಾರ ನಡೆಸಲು ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ. ಜನರಲ್ಲಿ ಆರ್ಥಿಕ ಉಳಿತಾಯ ಮನೋಭಾವ ಬೆಳೆಸುವಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ಮಹತ್ತರದ್ದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಹೇಳಿದ್ದಾರೆ.
ಉಡುಪಿ ಶೋಕಮಾತಾ ದೇವಾಲಯದ ಆವರಣದಲ್ಲಿರುವ ಆವೇ ಮರಿಯಾ ಸಭಾಂಗಣದಲ್ಲಿ ನಡೆದ ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 28ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡುತಿದ್ದರು.
ಸಹಕಾರ ಸಂಘಗಳು ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡಿದಂತೆ, ಸಾಲ ಪಡೆದ ಸದಸ್ಯರುಗಳು ಸಮಯಕ್ಕೆ ಸರಿಯಾಗಿ ಸಾಲಗಳನ್ನು ಮರು ಪಾವತಿ ಮಾಡಿದ್ದಲ್ಲಿ ಸಂಘವು ಅಭಿವೃದ್ಧಿಯ ಉತ್ತುಂಗಕ್ಕೇರುತ್ತದೆ. ಇಂದು ಸಹ ಕಾರ ಸಂಘಗಳು ರಾಷ್ಟೀಕೃತ ಬ್ಯಾಂಕ್ಗಳಿಗೆ ಸಮನಾಗಿ ಸೇವೆಯನ್ನು ನೀಡಿ, ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು.
ಉಡುಪಿ ಶೋಕಮಾತಾ ದೇವಾಲಯದ ಸಹಾಯಕ ಧರ್ಮಗುರು ವಂ.ಫಾ.ಲಿಯೋ ಪ್ರವೀಣ್ ಡಿಸೋಜ ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ಲೂವಿಸ್ ಲೋಬೊ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಪ್ರಧಾನ ವ್ಯವಸ್ಥಪಕ ಸಂದೀಪ್ ಫೆರ್ನಾಂಡಿಸ್ ವಾರ್ಷಿಕ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಜೇಮ್ಸ್ ಡಿಸೋಜ ಸ್ವಾಗತಿಸಿ, ನಿರ್ದೇಶಕ ಆರ್.ಮಾಕ್ಸಿಂ ಡಿಸೋಜ ವಂದಿಸಿದರು. ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.