×
Ad

ಗೋವಾದಲ್ಲಿ ಅಪೂರ್ವ ಗಜಲಕ್ಷ್ಮಿಯ ಶಿಲ್ಪಪತ್ತೆ

Update: 2025-10-23 20:35 IST

ಉಡುಪಿ, ಅ.23: ಗೋವಾದ ಪರ್ಯೆ ಸಮೀಪದ ವಲವಂತಿ ನದಿಯಲ್ಲಿ ಆಕಸ್ಮಿಕವಾಗಿ ಪತ್ತೆಯಾದ ಗಜಲಕ್ಷ್ಮಿ ಶಿಲ್ಪ, ಚಾರಿತ್ರಿಕ ಮಹತ್ವವನ್ನು ಹೊಂದಿದೆ ಅಪೂರ್ವವಾದ ವಿಗ್ರಹವೆಂದು ಪುರಾತತ್ವ ಶಾಸ್ತ್ರಜ್ಞ ಹಾಗೂ ಉಡುಪಿಯ ಅದಿಮ ಕಲಾಟ್ರಸ್ಟ್‌ನ ಸ್ಥಾಪಕ ಸಂಚಾಲಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

ಉನ್ನತವಾದ ಪದ್ಮಪೀಠದ ಮೇಲೆ, ಅಭಯ ಮತ್ತು ವರದ ಹಸ್ತೆಯಾಗಿ ಕುಳಿತಿರುವ ಲಕ್ಷ್ಮಿಯು ಹಿಂದಿನ ಬಲಗೈ ಯಲ್ಲಿ ಕಮಲದ ಮೊಗ್ಗು, ಹಿಂದಿನ ಎಡಗೈಯಲ್ಲಿಯೂ ಸಹ ಕಮಲದ ಮೊಗ್ಗನ್ನು ಹಿಡಿದಿದ್ದಾಳೆ. ಕಿವಿಯಲ್ಲಿ ಮಕರ ಕುಂಡಲಗಳಿವೆ. ಆಕರ್ಷಕ ಕರಂಡಮುಕುಟವನ್ನು ಧರಿಸಿದ ದೇವಿಯ ಮುಖದಲ್ಲಿ ದೈವೀಕಳೆಯ ವರ್ಚಸ್ಸು ಎದ್ದು ತೋರುತ್ತದೆ.

ಗಂಡಭೇರುಂಡ ಲತಾಕೋಷ್ಟಕ: ದೇವಿಯ ಹಿಂಭಾಗದಲ್ಲಿ ಅಂಡಾಕಾರದ ಪ್ರಭಾವಳಿಯಿದ್ದು, ಮಧ್ಯದಲ್ಲಿ ಸಿಂಹದ ಲಲಾಟ ಬಿಂಬವಿದೆ. ಕಂಠೀಹಾರ, ಕೊರಳಹಾರ, ಕೇಯೂರ ಮುಂತಾದ ಆಭರಣಗಳಿಂದ ಆಲಂಕೃತಳಾದ ಲಕ್ಷ್ಮಿಯ ಎಡ-ಬಲಗಳಲ್ಲಿ ಪವಿತ್ರ ಕಳಸಗಳನ್ನು ಹಿಡಿದಿರುವ ಎರಡು ಆನೆಗಳಿವೆ. ಪೀಠದ ಮಧ್ಯಭಾಗದಲ್ಲಿ ಗಂಡ ಭೇರುಂಡದ ಲತಾಕೋಷ್ಟಕವಿದೆ. ಶಿಲ್ಪವು ಸುಮಾರು 10ನೇ ಶತಮಾನದ ಶಿಲ್ಪಶೈಲಿಯಲ್ಲಿದ್ದು, ಗೋವಾ ಕದಂಬರ ಶಿಲ್ಪಶೈಲಿಯ ಉತ್ತಮ ಉದಾಹರಣೆಯಾಗಿದೆ. ಈ ಶಿಲ್ಪವು 50 ಸೆ.ಮೀ. ಎತ್ತರ ಹಾಗೂ 61 ಸೆ.ಮೀ. ಅಗಲವಿದೆ.

ಚಾರಿತ್ರಿಕ ಮಹತ್ವ: ಗೋವಾದ ದೇವರ ಕಾಡುಗಳು ಹಾಗೂ ಕೆಲವು ದೇವಾಲಯಗಳ ಹೊರ ಆವರಣದಲ್ಲಿ ಕೆಲವು ಗಜಲಕ್ಷ್ಮಿ ಶಿಲ್ಪಫಲಕಗಳನ್ನು ಕಾಣಬಹುದಾಗಿದೆ. ಇದರಲ್ಲಿ ಬಹುತೇಕ ಶಿಲ್ಪಗಳಲ್ಲಿ ಗಜಲಕ್ಷ್ಮಿಯ ಶಿಲ್ಪದ ಜೊತೆಗೆ ಯುದ್ಧದ ಚಿತ್ರಣಗಳು ಇವೆ ಹಾಗೂ ಗಜಲಕ್ಷ್ಮಿಯನ್ನು ಬುಡಕಟ್ಟು ಶೈಲಿಯಲ್ಲಿ ಚಿತ್ರಿಸಲಾಗಿದೆ. ಆದ್ದರಿಂದ, ಅವುಗಳು ದೇಶಿ ಶೈಲಿಯ ಗಜಲಕ್ಷ್ಮಿಯ ಶಿಲ್ಪಗಳು.

ಆದರೆ, ಈಗ ಅಧ್ಯಯನಕ್ಕೆ ಒಳಪಡಿಸಿರುವ ಶಿಲ್ಪವು ಮಾರ್ಗ ಸಂಪ್ರದಾಯಕ್ಕೆ ಸೇರಿದ ಶಿಲ್ಪವಾಗಿದೆ. ಗಂಡ ಭೇರುಂಡದ ಸಾಂಕೇತಿಕ ಚಿತ್ರಣವು ಅತ್ಯಂತ ಸ್ಪಷ್ಟವಾಗಿ ಈ ಶಿಲ್ಪವು ಗೋವಾದ ವೈಷ್ಣವ ಸಂಪ್ರದಾಯಕ್ಕೆ ಸೇರಿದ ಶಿಲ್ಪವೆಂದು ಖಚಿತಪಡಿಸುತ್ತದೆ. ಗಂಡಭೇರುಂಡ ಶಿಲ್ಪವು ಕದಂಬ, ವಿಜಯನಗರ, ಮೈಸೂರಿನ ಒಡೆಯರ್ ಹಾಗೂ ಪ್ರಸ್ತುತ ಕರ್ನಾಟಕ ಸರಕಾರದ ರಾಜ ಲಾಂಛನವಾಗಿದೆ.

ನದಿಯಲ್ಲಿದ್ದ ಈ ಶಿಲ್ಪವನ್ನು ಗಮನಿಸಿ ರಕ್ಷಿಸಿದ ಉಡುಪಿಯ ಅದಿಮ ಕಲಾ ಟ್ರಸ್ಟ್‌ನ ಅಧ್ಯಕ್ಷ ಗೋವಾದ ಡಾ. ರಾಜೇಂದ್ರ ಕೇರ್ಕರ್ ಅವರಿಗೆ ತಾವು ಕೃತಜ್ಞರಾಗಿರುವುದಾಗಿ ಪ್ರೊ.ಮುರುಗೇಶಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News