×
Ad

ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ 138ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

Update: 2023-12-28 21:33 IST

ಉಡುಪಿ: ದೇಶಕ್ಕೆ ಸ್ವಾತಂತ್ರ್ಯ ದೊರಕಿದಾಗ ದೇಶದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿರಲಿಲ್ಲ. ಉದ್ಯಮ ಗಳಾಗಲಿ, ಅಣೆಕಟ್ಟಾಗಲಿ, ಸಂಪರ್ಕ ಸೇತುವೆಗಳಾಗಲಿ ಇರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಭಾರತವನ್ನು ಒಂದು ಸದೃಢ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಯಿತು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೊಂಡು 138 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಹಾಗೂ ಸೇವಾದಳ ಜಂಟಿಯಾಗಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಗುರುವಾರ ಹಮ್ಮಿಕೊಂಡ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ದಿಕ್ಸೂಚಿ ಭಾಷಣ ಮಾಡಿದ ಬಸ್ರೂರು ಶ್ರೀಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಮೊಳಹಳ್ಳಿ ದಿನೇಶ್ ಹೆಗ್ಡೆ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಒಂದು ರಾಜಕೀಯ ಪಕ್ಷ ಇಷ್ಟು ದೀರ್ಘಾವಧಿವರೆಗೆ ಸಂಘಟಿತವಾಗಿ ನಿಲ್ಲಬೇಕಾದರೆ ಅದರ ಸಿದ್ಧಾಂತಗಳು ಹಾಗೂ ಯೋಜನೆ ಗಳು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಪಕ್ಷ ಸ್ಥಾಪನೆಯಾದ ನಂತರ ಹಲವಾರು ಏರುಪೇರುಗಳನ್ನು ಕಂಡಿದೆ. ಗಾಂಧೀಜಿಯವರು ಸತ್ಯ ಹಾಗೂ ಅಹಿಂಸೆಯ ಮೂಲಕ ಹೋರಾಟ ನಡೆಸುತ್ತಾ ಪಕ್ಷವನ್ನು ಮಾಸ್ ಪಕ್ಷವಾಗಿ ರೂಪಿಸಿದ್ದರು. ಜಾತಿ, ಧರ್ಮರಹಿತವಾಗಿ ಜನರ ಬೇಕು ಬೇಡಗಳಿಗೆ ಸ್ಪಂಧಿಸುವುದು ಕಾಂಗ್ರೆಸ್‌ನ ಉದ್ದೇಶವಾಇತ್ತು. ಬ್ರಿಟಿಷರಿಂದ ಮುಕ್ತಿ ದೊರೆಯುವಲ್ಲಿ ಹೋರಾಟ ನಡೆಸಿದ ಕಾಂಗ್ರೆಸ್ ಸ್ವಾತಂತ್ರ ದೊರೆತ ನಂತರ ದೇಶದ ಅಭಿವೃದ್ಧಿಯಲ್ಲಿ ತನ್ನ ಕೊಡುಗೆ ಸಲ್ಲಿಸಿದೆ ಎಂದು ಡಾ.ಹೆಗ್ಡೆ ಹೇಳಿದರು.

ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನೇಶ್ ಪುತ್ರನ್, ಬಿ.ನರಸಿಂಹ ಮೂರ್ತಿ, ಶಂಕರ್ ಕುಂದರ್, ಶಬ್ಬಿರ್ ಅಹಮ್ಮದ್ , ಹರೀಶ್ ಶೆಟ್ಟಿ ಪಾಂಗಾಳ, ನವೀನ್‌ಚಂದ್ರ ಸುವರ್ಣ, ಮಹಾಬಲ ಕುಂದರ್, ಶಶಿಧರ ಶೆಟ್ಟಿ ಎಲ್ಲೂರು, ಇಸ್ಮಾಯಿಲ್ ಆತ್ರಾಡಿ, ನಾಗೇಶ್ ಕುಮಾರ್ ಉದ್ಯಾವರ, ಲೂಯಿಸ್ ಲೋಬೊ, ರಾಜು ಪೂಜಾರಿ, ಶಂರತ್ ನಾಯಕ್, ಲಕ್ಷ್ಮೀ ನಾಯಕ್, ಅಬ್ದುಲ್ ಶೇಖ್ ಮುಂತಾದವರು ಉಪಸ್ಥಿತರಿದ್ದರು.

ವಂ.ವಿಲಿಯಂ ಮಾರ್ಟಿಸ್ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷ ಪ್ರಖ್ಯಾತ ಶೆಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು. ಜ್ಯೋತಿ ಹೆಬ್ಬಾರ್ ಅತಿಥಿಗಳನ್ನು ಪರಿಚಯಿಸಿದರು. ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ ಸ್ವಾಗತಿಸಿದರು. ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರೆ, ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News