×
Ad

ಕಾರವಾರ ಸಮುದ್ರದಲ್ಲಿ ಗಂಗೊಳ್ಳಿಯ ಬೋಟು ಮುಳುಗಡೆ: 8 ಮಂದಿಯ ರಕ್ಷಣೆ

Update: 2025-01-16 20:35 IST

ಉಡುಪಿ, ಜ.16: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಕಾರವಾರ ಸಮೀಪದ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಎಂಟು ಮಂದಿಯನ್ನು ರಕ್ಷಿಸಲಾಗಿದೆ.

ಗಂಗೊಳ್ಳಿಯ ಮೊಮಿನ್ ನಾಜೆಮಾ ಎಂಬವರ ಮಾಲಕತ್ವದ ಸೀ ಹಂಟರ್ ಎಂಬ ಹೆಸರಿನ ಮೀನುಗಾರಿಕಾ ಬೋಟು ಜ.11ರಂದು ಬೆಳಗ್ಗೆ ಮೀನುಗಾರಿಕೆ ಗಾಗಿ ಮಲ್ಪೆ ಬಂದರಿನಿಂದ ಹೊರಟಿದ್ದು, ಜ.12ರಂದು ರಾತ್ರಿ ಕಾರವಾರದ ಸಮೀಪದ ಮಾಜಾಲಿ ಸಮುದ್ರದಲ್ಲಿ ಬೋಟಿನ ಕೆಳಭಾಗಕ್ಕೆ ವಸ್ತುವೊಂದು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಬಳಿಕ ಬೋಟಿನ ಎದುರು ಬದಿಯ ಸ್ಟೋರೇಜ್‌ನಲ್ಲಿ ನೀರು ಒಳ ಬರಲು ಪ್ರಾರಂಭವಾಯಿತು. ಮೀನುಗಾರರು ನೀರು ಖಾಲಿ ಮಾಡಲು ಪ್ರಯತ್ನಿಸಿ ದರೂ ನೀರಿನ ಒಳ ಹರಿವು ಹೆಚ್ಚಾಗಿ ಇಂಜಿನ್ ರೂಮ್ ಮುಳುಗಲು ಪ್ರಾರಂಭವಾಯಿತು.

ನಂತರ ಸಮೀಪ ಮೀನುಗಾರಿಕೆ ಮಾಡುತ್ತಿದ್ದ ನಿದಿತ ಬೋಟಿನವರು ಸಹಾಯಕ್ಕೆ ಬಂದು ಬೋಟಿನಲ್ಲಿದ್ದ ಎಂಟು ಮೀನುಗಾರರನ್ನು ರಕ್ಷಿಸಿದರು. ಸೀ ಹಂಟರ್ ಬೋಟನ್ನು ನಿದಿತ ಬೋಟಿಗೆ ಕಟ್ಟಿ ಕಾರವಾರ ತನಕ ಎಳೆದು ತರಲಾಯಿತು. ಆದರೂ ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದು, ಇದರಿಂದ ಸುಮಾರು 70ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News