×
Ad

ಜ.18ಕ್ಕೆ ಕುಮಟ-ನಂದಿಕೂರು ನಡುವೆ ಹಳಿ ನಿರ್ವಹಣೆ; ಕೆಲ ರೈಲುಗಳ ಸಂಚಾರ ವ್ಯತ್ಯಯ

Update: 2024-01-13 21:07 IST

ಸಾಂದರ್ಭಿಕ ಚಿತ್ರ

ಉಡುಪಿ: ಕೊಂಕಣ ರೈಲು ಮಾರ್ಗದ ಕುಮಟಾ ಮತ್ತು ನಂದಿಕೂರು ನಡುವೆ ರೈಲು ಹಳಿಗಳ ನಿರ್ವಹಣಾ ಕಾರ್ಯ ನಡೆ ಯಲಿರುವುದರಿಂದ ಜ.18ರಂದು ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ನಿರ್ವಹಣೆಯ ಕಾರಣಕ್ಕಾಗಿ ಜ.18ರ ಗುರುವಾರ ಅಪರಾಹ್ನ 12:00ರಿಂದ 3:00ಗಂಟೆಗಳ ನಡುವೆ ಕುಮಟಾ- ಕುಂದಾ ಪುರ ಭಾಗದಲ್ಲಿ ಮೂರು ಗಂಟೆಗಳ ಕಾಲ ಈ ಸಂಚಾರ ರದ್ದಾಗಲಿದೆ. ಅದೇ ರೀತಿ ಕುಂದಾಪುರ ಮತ್ತು ನಂದಿಕೂರು ಭಾಗದಲ್ಲಿ ಅಪರಾಹ್ನ 12:15ರಿಂದ 2:15ರವರೆಗೆ ಎರಡು ಗಂಟೆಗಳ ಕಾಲ ಸಂಚಾರವನ್ನು ನಿಲ್ಲಿಸಲಾಗುವುದು.

ಇದರಿಂದ ಜ.17ರಂದು ಬೆಂಗಳೂರಿನಿಂದ ಪ್ರಯಾಣ ಬೆಳೆಸುವ ರೈಲು ನಂ. 16585 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು- ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಕುಂದಾಪುರದಲ್ಲೇ ಕೊನೆಗೊಳಿಸಲಾಗು ವುದು. ಹೀಗಾಗಿ ಅಂದು ರೈಲು ಕುಂದಾಪುರ- ಮುರ್ಡೇಶ್ವರ ನಡುವೆ ಸಂಚರಿಸುವುದಿಲ್ಲ.

ಅದೇ ರೀತಿ ರೈಲು ನಂ.16856 ಮುರ್ಡೇಶ್ವರ- ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಜ.18ರ ಪ್ರಯಾಣ ನಿಗದಿತ ಸಮ ಯಕ್ಕೆ ಕುಂದಾಪುರದಿಂದ ಪ್ರಾರಂಭ ಗೊಳ್ಳಲಿದೆ. ಮರ್ಡೇಶ್ವರ- ಕುಂದಾಪುರ ಭಾಗದ ಅಂದಿನ ಸಂಚಾರವನ್ನು ರದ್ದು ಪಡಿಸಲಾಗುವುದು.

ಉಳಿದಂತೆ ಜ.17ರಂದು ಪ್ರಯಾಣ ಆರಂಭಿಸುವ ಪನ್ವೇಲ್- ನಾಗರ ಕೊಯಿಲ್ ಜಂಕ್ಷನ್ ವಿಶೇಷ ರೈಲಿನ ಸಂಚಾರ ವನ್ನು ಮಡಗಾಂವ್-ಕುಮಟ ನಡುವೆ ಮೂರು ಗಂಟೆಗಳ ಕಾಲ ತಡೆ ಹಿಡಿಯಲಾಗುವುದು. ಕೊಚ್ಚುವೇಲ್- ಲೋಕಮಾನ್ಯ ತಿಲಕ್ ಟರ್ಮಿನಲ್ ನಡುವಿನ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಜ.18ರಂದು ಮಂಗಳೂರು ಜಂಕ್ಷನ್‌ನಲ್ಲಿ ಒಂದು ಗಂಟೆ ತಡೆ ಹಿಡಿಯಲಾಗುವುದು ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News