ಮಾ.4, 5: ಬಿಸಿಯೂಟ ನೌಕರರ ಅಹೋರಾತ್ರಿ ಹೋರಾಟ
ಕುಂದಾಪುರ: ರಾಜ್ಯ ಸರಕಾರ ಮಾರ್ಚ್ ಮೊದಲ ವಾರದಲ್ಲಿ ಮಂಡಿಸುವ ಬಜೆಟ್ನಲ್ಲಿ ಬಿಸಿಯೂಟ ನೌಕರರ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಇದೇ ಮಾ.4 ಮತ್ತು 5ರಂದು ರಾಜ್ಯಾದ್ಯಂತ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಅಕ್ಷರ ದಾಸೋಹ ನೌಕರರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಸಿಯೂಟ ನೌಕರರು ಹಲವು ವರ್ಷಗಳಿಂದ ವೇತನ ಹೆಚ್ಚಳಕ್ಕಾಗಿ ಸರಕಾರವನ್ನು ಒತ್ತಾಯಿಸುತಿದ್ದರೂ ಈವರೆಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಮಾ.4 ಮತ್ತು 5 ರಂದು ಬಿಸಿಯೂಟ ನೌಕರರ ರಾಜ್ಯ ಮಟ್ಟದ ಅಹೋರಾತ್ರಿ ಹೋರಾಟಕ್ಕೆ ನಿಶ್ಚಯಿಸಲಾಗಿದೆ ಎಂದು ಅಕ್ಷರ ದಾಸೋಹ ನೌಕರರ ಸಂಘ ತಿಳಿಸಿದೆ.
ತಮ್ಮ ಪ್ರಮುಖ ಬೇಡಿಕೆಗಳಾದ ಚುನಾವಣಾ ಸಂದರ್ಭದ ಭರವಸೆಯಂತೆ ವೇತನ ಹೆಚ್ಚಳ, ಎಪ್ರಿಲ್-ಮೇ ತಿಂಗಳಿನಲ್ಲಿ ಬರಗಾಲ ಘೋಷಿತ ಜಿಲ್ಲೆಗಳಲ್ಲಿ ಕೆಲಸ ಮಾಡಿದ ವೇತನ ಬಿಡುಗಡೆ, ಅಡುಗೆ ಕೇಂದ್ರಗಳ ಪುನಶ್ಚೇತನ, ಗುಣಮಟ್ಟದ ಆಹಾರ ಪದಾರ್ಥಗಳ ಸರಬರಾಜು, ತಿಂಗಳಿಗೆ ಸರಿಯಾಗಿ ಗೌರವಧನ, ಸಾದಿಲ್ವಾರು ಹಣ, ಮೊಟ್ಟೆ ಖರೀದಿಯ ಬಾಕಿ ಹಣವನ್ನು ಸೂಕ್ತವಾಗಿ ಬಿಡುಗಡೆಗೊಳಿಸಲು ಒತ್ತಾಯಿಸಲಾಗಿದೆ.
ರಾಜ್ಯಾದ್ಯಂತ ಅಕ್ಷರದಾಸೋಹ ನೌಕರರು ತಮ್ಮ ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನಲ್ಲಿ ಮಾ.4 ಮತ್ತು 5ರಂದು ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದು ಉಡುಪಿ ಜಿಲ್ಲಾ ಸಂಘವು ಇದರಲ್ಲಿ ಭಾಗವಹಿಸಲಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಅಕ್ಷರದಾಸೋಹ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಉಡುಪಿ ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಜಯಶ್ರೀ ಪಡುವರಿ, ಪ್ರ.ಕಾರ್ಯದರ್ಶಿ ಸಿಂಗಾರಿ, ಖಜಾಂಚಿ ನಾಗರತ್ನಾ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.