ಮಾ.5ಕ್ಕೆ ಪರಿಯಾಳ ಸಮಾಜ ಸಮುದಾಯ ಭವನ ಉದ್ಘಾಟನೆ
ಉಡುಪಿ: ಜಿಲ್ಲಾ ಪರಿಯಾಳ ಸಮಾಜ ಸುಧಾರಕ ಸಂಘದ ವತಿಯಿಂದ ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ ಉಚ್ಚಿಲದಲ್ಲಿ ನಿರ್ಮಿಸಲಾದ ಪರಿಯಾಳ ಸಮಾಜ ಸಮುದಾಯ ಭವನದ ಉದ್ಘಾಟನೆಯು ಇದೇ ಮಾ.5ರಂದು ಮಂಗಳವಾರ ಉಚ್ಚಿಲದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಯು.ಶಂಕರ ಸಾಲಿಯಾನ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 9 ವರ್ಷಗಳ ಹಿಂದೆ ಶಂಕುಸ್ಥಾಪನೆ ಯಾದರೂ, ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಂದ ಕಟ್ಟಡದ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿದ್ದು, ಇದೀಗ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 15 ಲಕ್ಷ ರೂ. ನೆರವು ದೊರಕಿದ್ದು, ಉಳಿದಂತೆ ದಾನಿಗಳಿಂದ ಸಂಗ್ರಹಿಸಿ ಕಟ್ಟಡವನ್ನು ನಿರ್ಮಿಸಲಾ ಗಿದೆ. ಕಟ್ಟಡವನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲು ಇನ್ನೂ 15 ಲಕ್ಷ ರೂ. ಅಗತ್ಯವಿದೆ. ಕ್ಷೌರಿಕ ವೃತ್ತಿಯ ಜಿಲ್ಲೆಯಲ್ಲಿ 3ರಿಂದ 4 ಸಾವಿರ ಜನಸಂಖ್ಯೆ ಇರುವ ಪರಿಯಾಳ ಸಮಾಜದ ಒಟ್ಟಾರೆ ಜನಸಂಖ್ಯೆ 17ರಿಂದ 20 ಸಾವಿರದಷ್ಟಿದೆ ಎಂದು ಶಂಕರ ಸಾಲಿಯಾನ್ ತಿಳಿಸಿದರು.
ಪರಿಯಾಳ ಸಮುದಾಯ ಭವನವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕಾಪು ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ದೀಪ ಬೆಳಗಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಬಡಾ ಗ್ರಾಪಂ ಉಧ್ಯಕ್ಷ ಶಿವಕುಮಾರ್ ಮೆಂಡನ್, ಮಾಜಿ ಶಾಸಕ ವಿನಯಕುಮಾರ್ ಸೊರಕೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನ ಡಾ.ಜಿ.ಶಂಕರ್ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸುಧಾಕರ ಸಾಲಿಯಾನ್, ಕೋಶಾಧಿಕಾರಿ ಶೇಖರ್ ಸಾಲಿಯಾನ್, ಮಹಿಳಾ ಘಟಕದ ಅಧ್ಯಕ್ಷೆ ವಸಂತಿ ಭಾಸ್ಕರ್, ಸಂದೀಪ ಸಾಲಿಯಾನ್ ಹಾರಾಡಿ ಉಪಸ್ಥಿತರಿದ್ದರು.