ಕೋಡಿ ಬ್ಯಾರೀಸ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ; ʼಸ್ವಚ್ಛ ಕಡಲತೀರ, ಹಸಿರು ಕೋಡಿ’ ಕಾರ್ಯಕ್ರಮ

Update: 2026-08-15 20:12 IST

ಕುಂದಾಪುರ, ಆ.15: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ ಅವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ 48ನೇ ‘ಸ್ವಚ್ಛ ಕಡಲತೀರ, ಹಸಿರು ಕೋಡಿ’ ಕಾರ್ಯಕ್ರಮವು ಜರಗಿತು.

ಮುಖ್ಯ ಅತಿಥಿಯಾಗಿ ಭಾರತದ ರಾಷ್ಟ್ರಪತಿಗಳಿಂದ ಗೌರವ ಸುಬೇದಾರ್ ಮೇಜರ್’ ಶ್ರೇಣಿ ಪುರಸ್ಕೃತ ಭಾರತೀಯ ಭೂಸೇನೆಯ ನಿವೃತ್ತ ಸುಬೇದಾರ್ ಮೇಜರ್ ದಯಾನಂದ ಶೇರಿಗಾರ್ ಧ್ವಜಾರೋಹಣ ನೆರವೇರಿಸಿ, ದೇಶವನ್ನು ಕಾಯುವುದು ಕೇವಲ ಗಡಿಯಲ್ಲಿರುವ ಸೈನಿಕನ ಕರ್ತವ್ಯ ಮಾತ್ರವಲ್ಲ, ಶಿಸ್ತು, ಪ್ರಾಮಾಣಿಕತೆಯಿಂದ ವ್ಯಾಸಂಗ ಮಾಡುತ್ತಾ ಹಿರಿಯರನ್ನು ಗೌರವಿಸಿ, ಪರಿಸರವನ್ನು ಸ್ವಚ್ಛವಾಗಿಡುವ ಪ್ರತಿಯೊಬ್ಬ ಪ್ರಜೆಯೂ ಒಬ್ಬ, ಯೋಧನೇ ಆಗಿದ್ದಾನೆ. ಆದ್ದರಿಂದ ಯುವಪೀಳಿಗೆಯು ಶಿಸ್ತು, ನಿರಂತರ ಕಲಿಕೆ ಮತ್ತು ಜವಾಬ್ದಾರಿಯನ್ನು ಮೈಗೂಡಿಸಿಕೊಂಡು ದೇಶದ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೈಯದ್ ಮೊಹಮ್ಮದ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಹೊಸ ಮಾದರಿಯ ಬೆಳವಣಿಗೆಗಳು ಕಂಡುಬರುತ್ತಿದ್ದು ಯುವಕರಲ್ಲಿ ವಿಭಿನ್ನ ರೀತಿಯ ಆಂದೋಲನ ಹಾಗೂ ಆಲೋಚನೆಗಳು ಹುಟ್ಟಿಕೊಳ್ಳುತ್ತಿದೆ. ಯುವಜನರಲ್ಲಿ ಅಪಾರ ಉತ್ಸಾಹ, ಕಾರ್ಯ ನಿರ್ವಹಿಸುವ ಛಲ ಹಾಗೂ ತಂತ್ರಜ್ಞಾನದ ಅರಿವಿದ್ದರೂ, ಅವರಿಗೆ ವಿಶಾಲವಾದ ದೇಶವನ್ನು ಮುನ್ನಡೆಸಲು ಬೇಕಾ ಗುವ ಆಡಳಿತಾತ್ಮಕ ಅನುಭವದ ಕೊರತೆ ಇದೆ. ಕೇವಲ ಶ್ರೀಮಂತರ ಪ್ರಗತಿಯಷ್ಟೇ ದೇಶದ ಅಭಿವೃದ್ಧಿಯಲ್ಲ ಬಡತನ ನಿರ್ಮೂಲನೆಯಾಗಿ ತಳಮಟ್ಟದ ಜನರಿಗೂ ಸೌಲಭ್ಯಗಳು ತಲುಪಿದಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದರು.

ಅಧ್ಯಕ್ಷ ಹಾಜಿ ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ಮಹಾನ್ ನಾಯಕರು ಹಾಗೂ ಲಕ್ಷಾಂತರ ಹೋರಾಟ ಗಾರರ ತ್ಯಾಗ ಮತ್ತು ಬಲಿದಾನದ ಫಲವಾಗಿ ನಮಗೆ ಈ ಸ್ವಾತಂತ್ರ್ಯ ಸಿಕ್ಕಿದೆ. ಈ ದಿನವು ನಮಗೆ ದೇಶಭಕ್ತಿ ರಾಷ್ಟ್ರೀಯ ಐಕ್ಯತೆ ಮತ್ತು ಸ್ವಾತಂತ್ರ್ಯದ ಮೌಲ್ಯವನ್ನು ನೆನಪಿಸುತ್ತದೆ. ಸುಲಭವಾಗಿ ಸಿಗದ ಈ ಸ್ವಾತಂತ್ರ್ಯವನ್ನು ಕಾಪಾಡುವುದು ಪತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳಿಂದ ಹೃದಯದಲ್ಲಿ ಸ್ವಾತಂತ್ರ್ಯ ಕ್ರಿಯೆಯಲ್ಲಿ ಸ್ವಚ್ಛತೆ ಎಂಬ ಪರಿಕಲ್ಪನೆಯಡಿ ಯಲ್ಲಿ ವೈವಿಧ್ಯಮಯ ಹಾಗೂ ಸಂದೇಶಾತ್ಮಕ ಟಾಬ್ಲೋ ಪ್ರದರ್ಶನ ಬ್ಯಾರೀಸ್ ಕ್ಯಾಂಪಸ್‌ನಿಂದ ಸುಮಾರು 2 ಕಿ.ಮೀ ದೂರದ ವರೆಗೆ ಜರಗಿತು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ತ ಮಂಡಳಿ ಸದಸ್ಯ ಆಸಿಫ್ ಬ್ಯಾರಿ, ನಿರ್ದೇಶಕಿ ಅಶ್ವಿನಿ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕ ರಕ್ಷಕ ಸಭೆಯ ಸದಸ್ಯರು, ವಿವಿಧ ವಿಭಾಗಗಳ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ದೈಹಿಕ ಶಿಕ್ಷಣ ಶಿಕ್ಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.

ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಬೀನಾ ಎಚ್. ಸ್ವಾಗತಿಸಿ, ಬ್ಯಾರೀಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ವೇತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಟ್ಯಾಬ್ಲೋ ಪ್ರದರ್ಶನದಲ್ಲಿ ಬಿ.ಎಡ್ ಪ್ರಶಿಕ್ಷಣಾರ್ಥಿಗಳಾದ ಅಂಜಲಿ ಕೆ.ಬಿ ಮತ್ತು ದೀಕ್ಷಿತಾ ನಿರೂಪಣೆ ಮಾಡಿದರು. 




 


 


 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News