ಉಡುಪಿ ಜಿಲ್ಲೆಯ ದೇವಾಲಯಗಳು ಬಳಸಿ ಎಸೆದ ಹೂವುಗಳ ಮೌಲ್ಯವರ್ಧನೆ ‘ಉಡುಪಿ ಸುಗಂಧ’
ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಸಚಿವ ರಿಝ್ವಾನ್ ಅರ್ಷದ್
ಉಡುಪಿ, ಆ.15: ಜಿಲ್ಲೆಯಲ್ಲಿರುವ 500ಕ್ಕೂ ಅಧಿಕ ದೇವಾಲಯಗಳಲ್ಲಿ ಪ್ರತಿನಿತ್ಯ ಬಳಕೆಯಾಗುವ ಹೂವುಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಪ್ಪಿಸಲು ವಿ-ಕೇರ್ ಸೊಸೈಟಿ ಸಹಯೋಗದಲ್ಲಿ ವೈಜ್ಞಾನಿಕವಾಗಿ ಸಂಗ್ರಹಿಸಿ, ಪರಿಸರ ಸ್ನೇಹಿ ಅಗರಬತ್ತಿ, ಬಿದಿರು ರಹಿತ ದೂಪದಕಡ್ಡಿ ಸೇರಿದಂತೆ ಮೌಲ್ಯವರ್ಧಿತ ಱಉಡುಪಿ ಸುಗಂಧೞ ಉತ್ಪನ್ನಗಳಾಗಿ ಪರಿರ್ವತಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಯಂತ್ರೋ ಪಕರಣಗಳನ್ನು ಸ್ಥಳೀಯ ದಾನಿಗಳು ಉಚಿತವಾಗಿ ನೀಡಲು ಮುಂದೆ ಬಂದಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿರಾಗಿ ನಿಯುಕ್ತಿಗೊಂಡಿರುವ ರಿಝ್ವಾನ್ ಅರ್ಷದ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದೇಶದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥಸಂಚಲನದಲ್ಲಿ ಗೌರವರಕ್ಷೆ ಸ್ವೀಕರಿಸಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖಾ ಸಚಿವರಾಗಿರುವ ರಿಝ್ವಾನ್ ಅರ್ಷದ್ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿ ಮಾತನಾಡುತಿದ್ದರು.
ಜಿಲ್ಲೆಯಲ್ಲಿ ಮೀನುಗಾರಿಕಾ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅವರಿಗೆ ಉಚಿತವಾಗಿ ನೀಡುತಿದ್ದ ಮೀನುಗಾರಿಕಾ ಸಲಕರಣೆಗಳ ಮೊತ್ತವನ್ನು 10,000ರೂ.ಗಳಿಂದ 20,000ರೂ.ಗಳಿಗೆ ಹೆಚ್ಚಿಸಲಾಗಿದೆ. ಜೈವಿಕ ತಂತ್ರಜ್ಞಾನದ ಉದ್ಯಮಗಳು, ನವೀನ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಮುದ್ರ ಕೃಷಿ ಪ್ರೋತ್ಸಾಹಿಸಲು ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ‘ಶ್ರೇಷ್ಠತಾ ಕೇಂದ್ರ’ವನ್ನು ಸ್ಥಾಪಿಸಲಾಗುತ್ತಿದೆ. ಮೀನುಗಾರಿಕಾ ಕೊಂಡಿ ರಸ್ತೆ ಗಳ (ರಿಂಗ್ರೋಡ್) ನಿರ್ಮಾಣಕ್ಕಾಗಿ 20 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 1.98ಲಕ್ಷ ಮಂದಿ ಮೀನುಗಾರಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 2,114 ಯಾಂತ್ರಿಕ ಮೀನುಗಾರಿಕಾ ಬೋಟ್ಗಳು, 5,510 ಮೋಟಾರೀಕೃತ ಮೀನುಗಾರಿಕಾ ಬೋಟ್ಗಳು, 2,044 ಪಾತಿ ದೋಣಿಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ಸಾಲಿನಲ್ಲಿ ಕರಾವಳಿಯಲ್ಲಿ 3,51,893 ಮೆಟ್ರಿಕ್ ಟನ್ನಷ್ಟು ಮೀನು ಉತ್ಪಾದನೆ ಯಾಗಿದ್ದು, 1,797 ಕೋಟಿ ರೂ.ಮೌಲ್ಯದ ಮೀನು ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ ಎಂದರು.
ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ರಾಜ್ಯದಲ್ಲಿ ಉನ್ನತ ಸ್ಥಾನವನ್ನು ಉಳಿಸಿಕೊಂಡಿದೆ. ಕಳೆದ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.99.58ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದರೆ, ಪಿಯುಸಿಯಲ್ಲಿ ಶೇ.96.43 ಫಲಿತಾಂಶ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಪಡೆದು ಹೆಮ್ಮೆಯ ಸಾಧನೆ ಮಾಡಿದೆ ಎಂದರು.
ಸ್ವಚ್ಛತೆಗೆ ಆದ್ಯತೆ: ಜಿಲ್ಲೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸಗಳನ್ನು ವಿಲೇವಾರಿಗೆ ‘ಉಡುಪಿ ಸಿವಿಕ್ ವಾಚ್’ ಆ್ಯಪ್ನ್ನು ಅಭಿವೃದ್ಧಿ ಪಡಿಸಿದ್ದು, ಇದನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಅನುಷ್ಠಾನಗೊಳಿಸಲು ಇಂದು ಅನಾವರಣಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಉಡುಪಿ ಜಿಲ್ಲೆಯಾದ್ಯಂತ ಪ್ರಾಯೋಗಿಕವಾಗಿ ಕಾರ್ಯಗತಗೊಳಿಸ ಲಾಗುವುದು ಎಂದು ರಿಝ್ವಾನ್ ಅರ್ಷದ್ ನುಡಿದರು.
ಮಾದಕ ವ್ಯಸನ ನಮ್ಮ ಯುವಜನಾಂಗವನ್ನು ನಾಶ ಮಾಡುತ್ತಿದೆ. ಉಡುಪಿ ಜಿಲ್ಲೆಯನ್ನು ವ್ಯಸನ ಮುಕ್ತ ಸಮಾಜ ಮಾಡಲು ಜಿಲ್ಲೆಯ ಪೊಲೀಸ್ ಇಲಾಖೆ ವಿಶೇಷ ಪ್ರಯತ್ನ ನಡೆಸುತಿದ್ದು, ಈ ನಿಟ್ಟಿನಲ್ಲಿ ಕ್ಯೂಆರ್ ಕೋಡ್ನ್ನು ಬಳಕೆಗೆ ಬಿಟ್ಟಿದ್ದು, ಜಿಲ್ಲೆಯ ನಾಗರಿಕರು ಸ್ವಯಂಪ್ರೇರಿತರಾಗಿ ಇದರ ಮೂಲಕ ಮಾಹಿತಿ ಹಂಚಿಕೊಂಡು ಇಲಾಖೆಯ ಪ್ರಯತ್ನದಲ್ಲಿ ಕೈಜೋಡಿಸಬೇಕು ಎಂದರು.
ಕುಡಿಯುವ ನೀರು: ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯತ್ಗಳ 3,402 ಗ್ರಾಮಗಳ ಜನವಸತಿ ಪ್ರದೇಶ ಗಳಲ್ಲಿರುವ 2.47 ಲಕ್ಷ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಜಲಜೀವನ್ ಮಿಷನ್ ಯೋಜನೆಯಡಿ 734.02 ಕೋಟಿ ರೂ.ಗಳ 525 ಕಾಮಗಾರಿಕೈಗೊಂಡಿದ್ದು, ಇವುಗಳಲ್ಲಿ 487 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ ಎಂದರು.
ಉಡುಪಿ ನಗರಕ್ಕೆ 24 ಗಂಟೆ ಕುಡಿಯುವ ನೀರು ಸರಬರಾಜುಮಾಡುವ ಉದ್ದೇಶದಿಂದ 238.63 ಕೋಟಿ ರೂ. ವೆಚ್ಚದಲ್ಲಿ ವಾರಾಹಿ ನದಿಯ ಮೂಲಕ ಮಣಿಪಾಲದ ಜಿಎಲ್ಎಸ್ಆರ್ಗೆ ನಿರಂತರವಾಗಿ ನೀರು ಸರಬರಾಜು ಮಾಡುವ ಕಾಮಗಾರಿ ಮುಕ್ತಾಯಹಂತದಲ್ಲಿದೆ ಎಂದು ಅರ್ಷದ್ ತಿಳಿಸಿದರು.
ಇದೇ ವೇಳೆ ಸಚಿವರು ಜಿಲ್ಲೆಯ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ರೂಪಿಸಲಾದ ಆಕರ್ಷಕ ಉಪ್ಪಿಲಿ ಮಾಸ್ಕಾಟ್ನ್ನು ಅನಾವರಣಗೊಳಿಸಿದರು. ಇದರೊಂದಿಗೆ ‘ಉಡುಪಿ ಸುಗಂಧ’’ವನ್ನು ಬಿಡುಗಡೆಗೊಳಿಸಿದರು.
ಶಾಸಕ ಯಶಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಮಂಡಳಿಯ ಎಂ.ಎ.ಗಫೂರ್, ಜಿಲ್ಲಾ ಗ್ಯಾರಂಟಿ ಸಮಿತಿಯ ಅಶೋಕ್ಕುಮಾರ್ ಕೊಡವೂರು, ನಗರಾಭಿವೃದ್ಧಿ ಪ್ರಾಧಿಕಾರದ ದಿನಕರ ಹೇರೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಜಿಪಂ ಸಿಇಒ ಪ್ರತೀಕ್ ಬಾಯಲ್ ಮುಂತಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಜಿಲ್ಲೆಯ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಉಡುಪಿ ಆಸುಪಾಸಿನ ವಿದ್ಯಾರ್ಥಿಗಳು ಆಕರ್ಷಕ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.