ರೈಲ್ವೆ ಸೇತುವೆ ನಿರ್ಮಾಣ ಘಟಕಕ್ಕೆ ಶಾಸಕ ಯಶ್ಪಾಲ್ ಭೇಟಿ, ಪರಿಶೀಲನೆ
ಉಡುಪಿ, ನ.9: ಕಳೆದ ಕೆಲವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಇಂದ್ರಾಳಿಯ ರೈಲ್ವೆ ಸೇತುವೆ ಕಾಮಗಾರಿಗೆ ಸಂಬಂಧಿ ಸಿದಂತೆ ರೈಲ್ವೆ ಇಲಾಖೆ ಧಾರವಾಡದಲ್ಲಿ ನಿರ್ಮಿಸುತ್ತಿರುವ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಘಟಕಕ್ಕೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಸೂಚನೆಯ ಮೇರೆಗೆ ಯಶ್ಪಾಲ್ ಅವರು ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿಯ ಭಾಗವಾಗಿ ಧಾರವಾಡದ ಪದ್ಮಜಾ ಇಂಡಸ್ಟ್ರೀಸ್ನಲ್ಲಿ ಸಿದ್ಧಗೊಳ್ಳುತ್ತಿರುವ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಘಟಕಕ್ಕೆ ಭೇಟಿಕೊಟ್ಟು ಅಧಿಕಾರಿಗಳೊಂದಿಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಬಗ್ಗೆ ಸಮಾಲೋಚನೆ ನಡೆಸಿದರು.
ಈ ವೇಳೆ ಸೇತುವ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ ಸಂಬಂಧಿತರಿಗೆ ಹಸ್ತಾಂತರಿಸುವಂತೆ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುಮಾರು 5.20 ಕೋಟಿ ರೂ. ವೆಚ್ಚದಲ್ಲಿ 54 ಮೀ. ಉದ್ದ ಹಾಗೂ 12.5 ಮೀ. ಅಗಲದ 385 ಟನ್ ಭಾರದ ಸ್ಟೀಲ್ ಬ್ರಿಡ್ಜ್ನ ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಹದಿನೈದು ದಿನಗಳಲ್ಲಿ ಶೇ.80ರಷ್ಟು ನಿರ್ಮಾಣ ಪೂರ್ಣಗೊಂಡ ಬಳಿಕ ರೈಲ್ವೇ ಇಲಾಖೆಯ ತಾಂತ್ರಿಕ ವಿಭಾಗ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದೆ ಎಂದರು.
ಆ ಬಳಿಕ ಡಿಸೆಂಬರ್ ಮೊದಲ ವಾರದಲ್ಲಿ ಇಂದ್ರಾಳಿಯಲ್ಲಿ ಸ್ಟೀಲ್ ಬ್ರಿಡ್ಜ್ ಅಳವಡಿಕೆ ಪ್ರಕ್ರಿಯೆ ನಡೆಯಲಿದ್ದು, ಅನಂತರ ಸ್ಟೀಲ್ ಬ್ರಿಡ್ಜ್ ಮೇಲೆ 200 ಎಂ.ಎಂ. ಕಾಂಕ್ರಿಟೀಕರಣ ನಡೆಯಲಿದೆ.
ಡಿಸೆಂಬರ್ ಕೊನೆಯ ವಾರದಲ್ಲಿ ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಜನವರಿಯಲ್ಲಿ ಸಾರ್ವಜ ನಿಕರ ಸಂಚಾರಕ್ಕೆ ಇಂದ್ರಾಳಿ ರೈಲ್ವೆ ಸೇತುವೆ ಲಭ್ಯವಾಗಲಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು. ಈ ಸಂದರ್ಭದಲ್ಲಿ ಸುಗ್ಗಿ ಸುಧಾಕರ ಶೆಟ್ಟಿ, ಮಹೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.