ಸಂವಿಧಾನಾತ್ಮಕ ವ್ಯಕ್ತಿ ಸ್ವಾತಂತ್ರ್ಯ, ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರ: ಪ್ರೊ.ಫಣಿರಾಜ್
ಉಡುಪಿ: ಇಂದು ನಮ್ಮ ಸಂವಿಧಾನದ ಮೂಲ ಆಶಯಗಳಾದ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ನಿಧಾನವಾಗಿ ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಪ್ರಭುತ್ವದ ಈ ನಡೆಗೆ ಪೂರಕವಾಗಿ ಕಾರ್ಯಾಂಗ ಹಾಗೂ ನ್ಯಾಯಾಂಗ ಕೂಡ ಕೆಲಸ ಮಾಡುತ್ತಿದೆ. ಈ ಮೂಲಕ ಸಂವಿಧಾನವನ್ನು ಇಲ್ಲವಾಗಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಹಿರಿಯ ಚಿಂತಕ ಪ್ರೊ.ಕೆ.ಫಣಿರಾಜ್ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ರಕ್ಷಣೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಬನ್ನಂಜೆಯ ಶ್ರೀನಾರಾಯಣ ಗುರು ಸಭಾಭವನದಲ್ಲಿ ರವಿವಾರ ಹಮ್ಮಿಕೊಳ್ಳಲಾದ ಉಡುಪಿ ಜಿಲ್ಲಾಮಟ್ಟದ ಜಾಗೃತಿ ಸಮಾವೇಶ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಂವಿಧಾನವನ್ನು ನಾಶ ಮಾಡುವ ಪ್ರಕ್ರಿಯೆ ನಮ್ಮ ಕಣ್ಣಿಗೆ ಕಾಣದ ರೀತಿಯಲ್ಲಿ ನಡೆಯುತ್ತಿದೆ. ಅದು ಪೂರ್ಣವಾಗಿ ಧ್ವಂಸಗೊಂಡ ಬಳಿಕ ನಾವು ಎಚ್ಚೆತ್ತು ಕೊಂಡರೆ ನಮಗೆ ಯಾವುದೇ ಸ್ವಾತಂತ್ರ್ಯ ಹಾಗೂ ಹಕ್ಕುಗಳು ಕೂಡ ಇರು ವುದಿಲ್ಲ. ಆದುದರಿಂದ ನಾವು ಇಂದು ಕೇವಲ ಸಂವಿಧಾನದ ಪುಸ್ತಕವನ್ನಲ್ಲ, ಅಂಬೇಡ್ಕರ್ ಸಂವಿಧಾನಕ್ಕೆ ನೀಡಿರುವ ಆತ್ಮ ಮತ್ತು ಚೇತನವನ್ನು ಉಳಿಸಿಕೊಳ್ಳಲು ನಮ್ಮನ್ನು ಜಾಗೃತಿಗೊಳಿಸಬೇಕಾಗಿದೆ. ಸಂವಿಧಾನದ ಆಶಯವನ್ನು ಉಳಿಸಲು ನಾವು ಪ್ರತಿ ಕ್ಷಣ ಹೋರಾಟ ಮಾಡಬೇಕಾಗಿದೆ ಎಂದರು.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನ ಬಾಹಿರವಾದ ನಡೆಯನ್ನು ನಡೆದುಕೊಳ್ಳಲಾಗಿದೆ. ಗುಂಪುಗುಂಪು ಆಗಿ ಸಂಸದರನ್ನು ಅಮಾನತುಗೊಳಿಸುವ ಯಾವುದೇ ಅವಕಾಶ ಇಲ್ಲದಿದ್ದರೂ ಸಂವಿಧಾನಕ್ಕೆ ಅಗೌರವ ತೋರುವ ರೀತಿ ಯಲ್ಲಿ 141 ಮಂದಿ ಸಂಸತ್ತರನ್ನು ಅಮಾನತುಗೊಳಿಸಲಾಗಿದೆ. ಇದು ಸಂವಿಧಾನಕ್ಕೆ ತೋರಿದ ಬಹಳ ದೊಡ್ಡ ಅಗೌರವವಾಗಿದೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವವನ್ನು ನಾಶ ಮಾಡಲು ಕೇವಲ ಮದ್ದು ಗುಂಡು, ಸೈನಿಕರು ಬೇಕಾಗಿಲ್ಲ. ಸಂವಿಧಾನದ ಆಶಯವನ್ನು ಕೊಂದರೆ ನಮ್ಮ ಇಡೀ ಪ್ರಜಾ ಪ್ರಭುತ್ವವೇ ಕುಸಿದು ಹೋಗುತ್ತದೆ. ಅದು ಈಗ ನಮ್ಮಲ್ಲಿ ನಡೆಯುತ್ತಿದೆ. ನಮಗೆ ಸಂವಿಧಾನ ನೀಡಿರುವ ರಾಜಕೀಯ ಪ್ರಭುತ್ವದ ಮೂಲಕ ಸಾಮಾಜಿಕ ಪ್ರಜಾ ಪ್ರಭುತ್ವವನ್ನು ಸ್ಥಾಪಿಸದಿದ್ದರೆ ಈ ದೇಶವೇ ನಿರ್ಣಾಮವಾಗಿ ಹೋಗುತ್ತದೆ. ಆದುದರಿಂದ ಸಂವಿಧಾನವನ್ನು ರಕ್ಷಿಸುವುದರೊಂದಿಗೆ ಸಾಮಾಜಿಕ ಪ್ರಜಾಪ್ರಭುತ್ವ ತರಬೇಕಾಗಿದೆ. ಆಗ ಸಂವಿಧಾನದ ಆಶಯ ಪೂರ್ಣವಾಗುತ್ತದೆ ಎಂದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಗೈದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಈ ದೇಶದಲ್ಲಿ ಶೇ.80ರಷ್ಟಿರುವ ರೈತರು, ಕಾರ್ಮಿಕರು, ಬಡವರಿಗೆ ರಕ್ಷಣೆ ಇಲ್ಲವಾಗಿದೆ. ಅವರಿಗೆ ನಾವು ನಮ್ಮ ಸಂವಿಧಾನದ ಆಶಯವನ್ನು ತಿಳಿಸುವ ಕಾರ್ಯ ಮಾಡಬೇಕು. ಆ ಮೂಲಕ ಈ ದೇಶದ ಸಂವಿಧಾನ ಉಳಿಸಲು ಎಲ್ಲರು ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ವಹಿಸಿದ್ದರು. ದಸಂಸ ರಾಜ್ಯ ಉಪಪ್ರದಾನ ಸಂಚಾಲಕ ನಾಗಣ್ಣ ಬಡಿಗೇರ್, ಉದ್ಯಮಿ ಪ್ರಸಾದ್ರಾಜ್ ಕಾಂಚನ್, ರಾಜ್ಯ ಸಂಘಟನಾ ಸಂಚಾಲಕ ಮಲ್ಲೇಶ್ ಅಂಬುಗ, ನ್ಯಾಯವಾದಿ ಮಂಜುನಾಥ್ ಗಿಳಿಯಾರು, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ ಮುಖ್ಯ ಅತಿಥಿಗಳಾಗಿದ್ದರು.
ಸಿಐಟಿಯು ಮುಖಂಡ ಶಶಿಧರ್ ಗೊಲ್ಲ, ಇಂಜಿನಿಯರ್ ರಮೇಶ್ ಪಾಲ್, ಜಿಲ್ಲಾ ದೌರ್ಜನ್ಯ ಪರಿಹಾರ ಸಮಿತಿ ಸದಸ್ಯ ವಾಸುದೇವ ಮುದೂರು, ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ರಾದ ಅಣ್ಣಪ್ಪ ನಕ್ರೆ, ಪರಮೇಶ್ವರ ಉಪ್ಪೂರು, ಶಂಭು ಸುವರ್ಣ, ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ರಾಜೇಂದ್ರ ಮಾಸ್ತರ್, ದಲಿತ ನೌಕರರ ಒಕ್ಕೂಟದ ಜಿಲ್ಲಾ ಸಂಚಾಲಕ ರಾಘವೇಂದ್ರ ಬೆಳ್ಳೆ ಉಪಸ್ಥಿತರಿದ್ದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮ್ರಾಜ್ ಬಿರ್ತಿ ಸ್ವಾಗತಿಸಿ ದರು. ಶ್ಯಾಮ್ ಸುಂದರ್ ತೆಕ್ಕಟ್ಟೆ ವಂದಿಸಿದರು. ಶಂಕರ್ದಾಸ್ ಚೇಂಡ್ಕಳ ಕಾರ್ಯಕ್ರಮ ನಿರೂಪಿಸಿದರು.