ವಾರಾಹಿ ಯೋಜನೆಯ ಅಡ್ಡ ಪರಿಣಾಮಗಳ ಕುರಿತ ‘ಮುಳುಗಡೆಯ ಒಡಲಾಳ’ ಕೃತಿ ಬಿಡುಗಡೆ
ಕುಂದಾಪುರ: 1970 ದಶಕದಲ್ಲಿ ಜಲವಿದ್ಯುತ್ ಅನಿವಾರ್ಯತೆ ಇತ್ತು. ಹಾಗಾಗಿ ಶರಾವತಿ, ವಾರಾಹಿಯ ಯೋಜನೆ ನಿರ ರ್ಥಕ ಎಂದು ನಾನು ಹೇಳಲಾರೆ. ಆದರೆ ಈ ಯೋಜನೆಗಾಗಿ ಸರ್ವಸ್ವ ಕಳೆದುಕೊಂಡ ಜನರನ್ನು ನ್ಯಾಯಯುತವಾಗಿ ನಡೆಸಿ ಕೊಂಡಿಲ್ಲ ಎಂದು ಸಾಹಿತಿ ಬೆಂಗಳೂರಿನ ಡಾ.ಗಜಾನನ ಶರ್ಮ ಹೇಳಿದ್ದಾರೆ.
ಹೊಸಂಗಡಿ ಸಮೀಪದ ಮೇಲುಸುಂಕ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ರವಿವಾರ ಪತ್ರಕರ್ತ ಪ್ರಭಾಕರ ಕಾರಂತರ ಮುಳುಗಡೆ ಒಡಲಾಳ ಪುಸ್ತಕ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಅಧಿಕಾರದಲ್ಲಿದ್ದವರು ಇಂತಹ ಸಂದರ್ಭ ಹೆಚ್ಚು ಮಾನವೀಯತೆಯಿಂದ ನಡೆದುಕೊಂಡಿದ್ದರೆ ಸಂತ್ರಸ್ತರ ನೋವು ಕಡಿಮೆ ಮಾಡಬಹುದಿತ್ತು. ಇಲ್ಲಿ ಯೋಜನೆಯ ಸಂತ್ರಸ್ತರನ್ನು ಮರೆಯಲಾಗಿದೆ. ಮುಳುಗಡೆಯ ನೋವಿನ ವಿವರ ಇರುವ ಇಂತಹ ಕೃತಿ ಈಗಿನ ತಲೆಮಾರಿಗೆ ಪೂರ್ವಿಕರ ಕುರಿತು ಅರಿಯಲು ಅವಕಾಶ ಕಲ್ಪಿಸಿದೆ ಎಂದರು.
ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಂಕಟ ಮತ್ತು ಮಲೆನಾಡಿನಿಂದ ಜನ ಗುಳೇ ಹೋದಂತೆ ಅಡಿಕೆ ಸಹ ಬಯಲುನಾಡಿಗೆ ಗುಳೇ ಹೋದಂತಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉದ್ಘಾಟಿಸಿದರು. ಕೃತಿಯ ಸಮಕಾಲೀನ ಮಹತ್ವದ ಕುರಿತು ಚಿಕ್ಕಮಗಳೂರಿನ ಪತ್ರಕರ್ತ ಸ.ಗಿರಿಜಾ ಶಂಕರ್ ಮಾತನಾಡಿದರು. ಮಲೆನಾಡಿನ ತಲ್ಲಣಗಳ ಕುರಿತು ಪರಿಸರ ಬರಹಗಾರ, ಸಾಹಿತಿ ಶಿವಾನಂದ ಕಳವೆ ಮಾತನಾಡಿದರು. ಸಾಹಿತಿ ಶರತ್ ಕಲ್ಕೋಡ್ ಮಾತನಾಡಿದರು.
ಕೃತಿಯನ್ನು ಸಾಹಿತಿಗಳಾದ ರೂಪಕಲಾ, ಅಂಕಣಕಾರ್ತಿ ಕಮಲ ಶಿಲೆಯ ಪೂರ್ಣಿಮಾ ನರಸಿಂಹ, ಹಿರಿಯ ಪತ್ರಕರ್ತ ರಾದ ಜಯರಾಮ ಅಡಿಗ ಮತ್ತು ಮುರಳೀಕೃಷ್ಣ ಮಡ್ಡೀಕೇರಿ, ಸಾಹಿತಿಗಳಾದ ಡಾ.ಜಯಪ್ರಕಾಶ ಮಾವಿನಕುಳಿ, ತಿರುಪತಿ ನಾಯಕ್, ಡಾ.ಮಂಜುಳಾ ಹುಲ್ಲಹಳ್ಳಿ, ಜಿ.ವಿ ಗಣೇಶಯ್ಯ, ಕಿಶೋರ್ ಶೀರ್ನಾಳಿ ಜೊತೆಯಾಗಿ ಲೋಕಾರ್ಪಣೆ ಗೊಳಿಸಿದರು.
ಈ ಸಂದರ್ಭದಲ್ಲಿ ಚಿತ್ರ ನಟಿ ನಾಗಶ್ರೀ ಬೇಗಾರ್ ಅವರನ್ನು ಸನ್ಮಾನಿಸ ಲಾಯಿತು. ಚಂದ್ರಶೇಖರ ಶಾಸ್ತ್ರಿ ಸ್ವಾಗತಿಸಿದರು. ಲೇಖಕ ಪ್ರಭಾಕರ ಕಾರಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾರಾ ನಾಗರಾಜ್ ವಂದಿಸಿದರು. ಚಲನ ಚಿತ್ರ ನಿರ್ದೇಶಕ ರಮೇಶ್ ಬೇಗಾರ್ ಕಾರ್ಯಕ್ರಮ ನಿರ್ವಹಿಸಿದರು.