×
Ad

ಬೃಂದಾವನದಿಂದ ಉಡುಪಿಯೆಡೆಗೆ ಸಾಂಝಿ ಕಲಾಕೃತಿಗಳ ಪ್ರದರ್ಶನ ಉದ್ಘಾಟನೆ

Update: 2025-01-22 21:18 IST

ಉಡುಪಿ, ಜ.23: ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ಮಧುರಂ ವೈಟ್ ಲೋಟಸ್ ಹೋಟೆಲ್ಸ್‌ನ ಸಹಯೋಗದೊಂದಿಗೆ ಆಯೋಜಿಸಲಾದ ಬೃಂದಾವನದಿಂದ ಉಡುಪಿಯೆಡೆಗೆ ಸಾಂಝಿ ಕಲಾಕೃತಿಗಳ ಪ್ರದರ್ಶನವನ್ನು ಆರ್ಕಿಟೆಕ್ಟ್ ಶ್ರೀಜಾ ಜಯಕುಮಾರ್ ಬುಧವಾರ ಉದ್ಘಾಟಿಸಿದರು.

ಭಾರತೀಯ ಕಲೆಯಲ್ಲಿಯೇ ಶ್ರೇಷ್ಠವಾದ ಹಾಗೂ ರಾಧೆಯ ಪ್ರೀತಿಯೊಂದಿಗೆ ಬೆಸೆದಿರುವ ಸಾಂಝಿಕಲೆಯನ್ನು ಉಡುಪಿಯ ಕಲಾ ರಸಿಕರಿಗೆ ಉಣ ಬಡಿಸುತ್ತಿರುವ ಭಾಸ ಗ್ಯಾಲರಿಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಇಂದಿನ ಕಟ್ಟಡಗಳ ಒಳಾಂ ಗಣ ವಿನ್ಯಾಸದಲ್ಲಿ ಈ ತೆರನಾದ ಕಲೆಗಳ ಮಹತ್ವತೆ ಉಡುಪಿಯ ಕಲಾಪ್ರಿಯರಲ್ಲಿ ಒಂದು ಹೊಸ ಸಂಚಲನವನ್ನೇ ಸೃಜಿಸಬಹುದು. ನಾವೆಲ್ಲ ಸೇರಿಕೊಂಡು ಈ ದೇಶೀಯ ಕಲೆಗೆ ಪ್ರೋತ್ಸಾಹಿಸಬೇಕಾಗಿದೆ ಎಂದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ ಶ್ರೀರಾಮ್ ಸೋನಿ, ಸಾಂಝಿ ಕಲೆಯ ಬೆಳವಣಿಗೆ ಹಾಗೂ ತಮ್ಮ ಕಲಾಕೃತಿಗಳಲ್ಲಿ ಕಂಡು ಕೊಳ್ಳುತ್ತಿರುವ ನವೀನ ಪ್ರಯೋಗಗಳ ಬಗೆಗೆ ವಿವರಿಸಿದರು. ಚಿನ್ನದ ಲೇಪದೊಂದಿಗೆ ಸಾಂಝಿಕಲೆಯ ನಿರ್ಮಾಣ ಸೋನಿಯವರ ವಿಶೇಷತೆ. ಸುಮಾರು 40ಕ್ಕೂ ಮಿಕ್ಕಿ ಪೇಪರ್ ಕಟ್ಟಿಂಗ್ ಕಲಾಕೃತಿಗಳೊಂದಿಗೆ ಚಿನ್ನ ಹಾಗೂ ಬೆಳ್ಳಿಯ ತೆಳುವಾದ ಪದರದ ಮೇಲೆ ಕೃಷ್ಣನ ವಿವಿಧ ಲೀಲೆಗಳನ್ನು ದರ್ಶಿಸಿರುವ ಕಲಾಕೃತಿಗಳೂ ಪ್ರದರ್ಶನದಲ್ಲಿವೆ.

ಕಲಾಪ್ರದರ್ಶನವು ಜ.26ರವರೆಗೆ ಅಪರಾಹ್ನ 3ರಿಂದ ಸಂಜೆ 7ರ ತನಕ ಸಾರ್ವಜನಿಕ ವೀಕ್ಷಣೆಗೆ ತೆರೆದಿರಲಿದ್ದು, ಇದೇ ಸಂದರ್ಭದಲ್ಲಿ ಶನಿವಾರ ಹಾಗೂ ರವಿವಾರ ಸಾಂಝಿ ಕಲೆ ಹಾಗೂ ನೀರಿನ ಮೇಲೆ ನಿರ್ಮಿಸುವ ರಂಗೋಲಿ ಕಲೆಯಾದ ಜಲ ಸಾಂಝಿ ಕಲೆಯ ಕಾರ್ಯಾಗಾರಗಳು ನೋಂದಾಯಿಸಿ ದವರಿಗಾಗಿ ಬಡಗುಪೇಟೆಯ ಗ್ಯಾಲರಿಯಲ್ಲಿ ನಡೆಯಲಿವೆಂದು ಕಾರ್ಯಕ್ರಮ ಸಂಯೋಜಕ ಡಾ.ಜನಾರ್ದನ ಹಾವಂಜೆ ಮಾಹಿತಿ ನೀಡಿದರು.

ಫೌಂಡೇಶನ್‌ನ ಅಧ್ಯಕ್ಷ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು. ಆಶ್ಲೇಷ್ ಆರ್.ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News