ಗ್ರಾಮ ಆಡಳಿತ ಅಧಿಕಾರಿಗಳಿಂದ ಮತ್ತೆ ಮುಷ್ಕರ: ಉಡುಪಿ ಜಿಲ್ಲೆಯ ಎಲ್ಲ ತಾಲೂಕು ಕಚೇರಿಗಳ ಮುಂದೆ ಧರಣಿ
ಉಡುಪಿ, ಫೆ.10: ಸರಕಾರ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳ ವಿಚಾರವಾಗಿ ಯಾವುದೇ ತೃಪ್ತಿಕರ ಕ್ರಮಗಳನ್ನು ಕೈಗೊಳ್ಳದ ಮತ್ತು ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ನೌಕರರು ಮತ್ತೆ ಮುಷ್ಕರವನ್ನು ಇಂದಿನಿಂದ ಆರಂಭಿಸಿ ದ್ದಾರೆ. ಅದರಂತೆ ಉಡುಪಿ ಜಿಲ್ಲೆಯ ಏಳು ತಾಲೂಕು ಕಚೇರಿಗಳ ಮುಂದೆ ಆಯಾ ತಾಲೂಕು ಗ್ರಾಮ ಆಡಳಿತ ಅಕಾರಿಗಳ ಸಂಘಗಳ ನೇತೃತ್ವ ದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಧರಣಿ ನಡೆಸಲಾಯಿತು.
ಕಳೆದ ವರ್ಷ ಸೆ.26ರಿಂದ ಅ.3ರವರೆಗೆ ನಡೆದ ರಾಜ್ಯಾದ್ಯಂತ ಮುಷ್ಕರದ ಹಿನ್ನೆಲೆಯಲ್ಲಿ ಸರಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಭೆ ನಡೆಸಿ, ಗ್ರಾಮ ಆಡಳಿತ ಅಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಅದರಂತೆ ರಾಜ್ಯವ್ಯಾಪಿ ಮುಷ್ಕರ ಹಿಂಪಡೆಯಲಾಗಿತ್ತು.
ಆದರೆ ಸರಕಾರವು ಬೇಡಿಕೆ ಈಡೇರಿಸುವ ಬದಲು, ಮುಷ್ಕರದ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡವನ್ನು ನೀಡಿದೆ ಎಂದು ಆರೋಪಿಸ ಲಾಗಿದೆ. ಆ ಹಿನ್ನೆಲೆಯಲ್ಲಿ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿಗೆ ಕೆಲಸಗಳನ್ನು ಸ್ಥಗಿತ ಗೊಳಿಸಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಇಂದು ಎಲ್ಲಾ ಬಗೆಯ ಮೊಬೈಲ್ ಆಪ್ ಹಾಗೂ ವೆಬ್ ಅಪ್ಲಿಕೇಷನ್ ಅನ್ನು ಸ್ಥಗಿತಗೊಳಿಸಿ, ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರವನ್ನು ಉಡುಪಿ, ಕುಂದಾಪುರ, ಕಾಪು, ಹೆಬ್ರಿ, ಕಾರ್ಕಳ, ಬೈಂದೂರು, ಬ್ರಹ್ಮಾವರ ತಾಲೂಕು ಕಚೇರಿಗಳ ಮುಂದೆ ಆರಂಭಿಸಲಾಯಿತು. ಮೂರು ದಿನಗಳ ಕಾಲ ತಾಲೂಕು ಹಂತದಲ್ಲಿ ನಡೆದು ಬಳಿಕ ಜಿಲ್ಲಾ ಹಂತದಲ್ಲಿ ಪ್ರತಿಭಟನೆ ನಡೆಯಲಿದೆ.
ಉಡುಪಿ ತಾಲೂಕು ಕಚೇರಿಯ ಎದುರು ನಡೆದ ಧರಣಿಯಲ್ಲಿ ತಾಲೂಕು ಸಂಘದ ಉಪಾಧ್ಯಕ್ಷೆ ರೇಷ್ಮಾ, ಕಾರ್ಯದರ್ಶಿ ವಿಜಯ್, ಜಿಲ್ಲಾ ಸಂಘದ ಪ್ರತಿನಿಧಿ ವಿದ್ಯಾ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರದ ಮಿನಿ ವಿಧಾನಸೌಧದ ಎದುರು ಕುಂದಾಪುರ ತಾಲೂಕು ಗ್ರಾಮ ಆಡಳಿತ ಅಕಾರಿಗಳ ಸಂಘದ ವತಿಯಿಂದ ನಡೆದ ಮುಷ್ಕರದಲ್ಲಿ 36 ಮಂದಿ ಭಾಗವಹಿಸಿದ್ದರು. ತಾಲೂಕು ಸಂಘ ಅಧ್ಯಕ್ಷ ಪ್ರಕಾಶ್ ರಾಥೋಡ್, ಉಪಾಧ್ಯಕ್ಷ ಆನಂದ ಕುಮಾರ್, ಕಾರ್ಯದರ್ಶಿ ವಿಶ್ವನಾಥ, ರಾಜ್ಯ ಸಂಘ ಮಾಧ್ಯಮ ವಕ್ತಾರ ಆನಂದ್, ಜಿಲ್ಲಾ ಉಪಾಧ್ಯಕ್ಷ ಶಿವರಾಯ್, ಉಪಾಧ್ಯಕ್ಷೆ ದೀಪಿಕಾ ಶೆಡ್ತಿ ಮೊದಲಾದವರು ಉಪಸ್ಥಿತರಿದ್ದರು.