×
Ad

ಮಕ್ಕಳ ರಂಗಭೂಮಿಗೆ ಹೆತ್ತವರ ಪ್ರೋತ್ಸಾಹ ಅಗತ್ಯ: ಡಾ.ವಿಜಯ ಬಲ್ಲಾಳ್

Update: 2025-04-22 22:12 IST

ಉಡುಪಿ, ಎ.22: ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸಲು, ಸಾಮಾಜಿಕ ಮೌಲ್ಯಗಳನ್ನು ಉತ್ತೇಜಿ ಸಲು ಇಂತಹ ಚಟುವಟಿಕೆಗಳು ಬೇಕು. ಹೆತ್ತವರು ಇಂತಹ ರಂಗಶಿಕ್ಷಣ ಪಡೆಯಲು ಮಕ್ಕಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ಎನ್.ಬಿ.ವಿಜಯ ಬಲ್ಲಾಳ್ ಹೇಳಿದ್ದಾರೆ.

ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ರವಿವಾರ ನಡೆದ ಮಕ್ಕಳ ’ರಂಗ ತರಬೇತಿ ಶಿಬಿರ’ದ ಸಮಾರೋಪದಲ್ಲಿ ಅವರು ಮಾತನಾಡುತಿದ್ದರು.

ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ರಂಗಭೂಮಿ ಉಡುಪಿ ತನ್ನ 60ನೇ ಸಂಭ್ರಮಾಚರಣೆಯ ಪ್ರಯುಕ್ತ ಪ್ರೌಢಶಾಲಾ ಮಕ್ಕಳಿಗೆ ಹಮ್ಮಿಕೊಂಡ ರಂಗ ಶಿಕ್ಷಣ ಯೋಜನೆಗೆ ಶಿಕ್ಷಣ ಸಂಸ್ಥೆಗಳಿಟದ ಅಭೂತಪೂರ್ವ ಬೆಂಬಲ ದೊರೆತಿದೆ. ಈ ಸಾಲಿನಲ್ಲಿ ಈ ಯೋಜನೆಯನ್ನು ಸುಮಾರು 20 ಶಾಲೆಗಳಿಗೆ ವಿಸ್ತರಿಸಲು ಚಿಂತನೆ ನಡೆದಿದೆ ಎಂದರು.

ಶಾಲಾ ಮಕ್ಕಳಿಗೆ ರಂಗ ತರಬೇತಿಯನ್ನು ನೀಡಿದರೆ ಅವರು ಭವಿಷ್ಯದ ರಂಗಕರ್ಮಿಗಳಾಗುವ ಸಾಧ್ಯತೆ ಯಿದೆ. ಪೋಷಕರು ತಮ್ಮ ಮಕ್ಕಳಿಗೆ ರಂಗ ಶಿಕ್ಷಣ, ಯಕ್ಷಗಾನ, ಜಾನಪದ ಮೊದಲಾದ ಕೌಶಲ್ಯಗಳನ್ನು ಕಲಿಯಲು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಅವರು ತಿಳಿಸಿದರು.

ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ಶಿಬಿರದ ರಂಗನಿರ್ದೇಶಕ ವಿದ್ದು ಉಚ್ಚಿಲ್ ಅವರನ್ನು ಸನ್ಮಾನಿಸಲಾಯಿತು. ಅಮಿತಾಂಜಲಿ ಕಿರಣ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News