ಸೂಲ್ಪಡು ಮಡಿವಾಳಸಾಲು ಹೊಳೆ ಹೊಳೆತ್ತದಿದ್ದರೆ ಹೋರಾಟ: ರೈತಧ್ವನಿ ಎಚ್ಚರಿಕೆ
ಕೋಟ, ಎ.23: ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆದೂರುನಿಂದ ಕೋಟ ಗ್ರಾಪಂ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸೂಲ್ಪಡು ಮಡಿವಾಳ ಸಾಲು ಹೊಳೆ ಹೂಳು ಸಮಸ್ಯೆಗೆ ಶೀಘ್ರದಲ್ಲಿ ಟೆಂಡರ್ ಪ್ರಕ್ರೀಯೆ ಪೂರ್ಣಗೊಳಿಸಿ ಈ ವರ್ಷದ ಮಳೆಗಾಲದ ಆರಂಭಕ್ಕೂ ಮೊದಲು ಹೂಳೆ ಹೂಳು ತೆಗೆಯಬೇಕೆಂದು ರೈತಧ್ವನಿ ಸಂಘದ ಪ್ರಮುಖರಾದ ಟಿ.ಮಂಜುನಾಥ್ ಗಿಳಿಯಾರ್ ಆಗ್ರಹಿಸಿದ್ದಾರೆ.
ಕೋಟದ ಅಮೃತೇಶ್ವರಿ ದೇಗುಲದಲ್ಲಿ ಮಂಗಳವಾರ ನಡೆದ ಕೋಟದ ರೈತಧ್ವನಿ ಸಂಘಟನೆ ಸಭೆಯಲ್ಲಿ ಅವರು ಮಾತನಾಡುತಿದ್ದರು. ಕಳೆದ ಹಲವಾರು ವರ್ಷಗಳಿಂದ ತೆಕ್ಕಟ್ಟೆ ಉಳ್ಳೂರು, ಬೇಳೂರು, ಗಿಳಿಯಾರು, ಕಾರ್ತಟ್ಟು, ಚಿತ್ರಪಾಡಿ, ಬನ್ನಾಡಿ, ಉಪ್ಪಾಡಿ, ಸಾಲಿಗ್ರಾಮ ವ್ಯಾಪ್ತಿಯ ರೈತರು ಕೃತಕ ನೆರೆ ಹಾವಳಿಗೆ ತುತಾತಿಗುತ್ತಿರುವ ಹಿನ್ನಲ್ಲೆಯಲ್ಲಿ ಕಳೆದ ಸಾಕಷ್ಟು ವರ್ಷಗಳಿಂದ ರೈತಧ್ವನಿ ಹೋರಾಟ ನಡೆಸಿದ್ದು ಪ್ರಸ್ತುತ ರಾಜ್ಯ ಸರಕಾರ ವಾರಾಹಿ ಯೋಜನೆಯಡಿ ಹೊಳೆ ಹೂಳೆ ತೆಗೆಯುವ ಸಂಬಂಧ ಈಗಾಗಲೇ 4.5ಕೋಟಿ ರೂ. ಮಿಸಲಿರಿಸಿ ಟೆಂಡರ್ ಪ್ರಕೀಯೆ ಬಾಕಿ ಇರಿಸಿದೆ. ಈ ಬಗ್ಗೆ ರೈತರು ಈ ವರ್ಷದ ಮಳೆಗಾಲದೊಳಗೆ ಹೊಳೆ ಹೂಳಿನಿಂದ ಮುಕ್ತಗೊಳಿಸಿ ಕೃಷಿ ಕಾಯಕಕ್ಕೆ ಅನೂಲಕರ ವಾತಾವರಣ ಸೃಷ್ಠಿಯಾಗಬೇಕು, ಒಂದೊಮ್ಮೆ ವಿಳಂಬವಾದರೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ರೈತಧ್ವನಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ನಿಯೋಗ ಭೇಟಿ: ಬೆಳಗಾವಿ ಅಧಿವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮ್ಮುಖದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೊಳೆ ಸಾಲು ಹೂಳೆತ್ತುವ ಸಂಬಂಧ 4.5ಕೋಟಿ ರೂ. ಅನುದಾನಕ್ಕೆ ಅಂಕಿತ ಹಾಕಿದ್ದು ಇದರ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲು ರೈತ ಮುಖಂಡರ ನಿಯೋಗ ಬೆಂಗಳೂರಿಗೆ ತೆರಳಿ ಆಗ್ರಹಿಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.
ಅಲ್ಲದೆ ಶೀಘ್ರ ಕುಂದಾಪುರ ವಿಧಾನಸಭಾ ಕ್ಷೇತ್ರದ ಮುಖಂಡರಾದ ದಿನೇಶ್ ಮೊಳಹಳ್ಳಿ ಹಾಗೂ ಶಾಸಕರು, ಸಂಸದರನ್ನು ಸಂಪರ್ಕಿಸಲು ರೈತಧ್ವನಿ ಸಂಘದ ಗೌರವಾಧ್ಯಕ್ಷ ಆನಂದ್ ಸಿ.ಕುಂದರ್ ಸಭೆಯಲ್ಲಿ ಸೂಚಿಸಿದರು.
ರೈತ ಪರ ಹೆಸರಿಟ್ಟುಕೊಂಡು ರಾಜಕಾರಣಗೊಳಿಸುವುದು ಪ್ರಸ್ತುತ ವ್ಯವಸ್ಥೆಯಲ್ಲಿ ಸೂಕ್ತವಲ್ಲ. ರೈತಪರ ಹೋರಾಟದಲ್ಲಿ ರಾಜಕೀಯ ಮಾಡ ಬಾರದು. ಪಕ್ಷಬೇಧ ಮರೆತು ರೈತ ಪರವಾಗಿ ಹೋರಾಟಕ್ಕಿಳಿಯ ಬೇಕಾಗಿದೆ ಎಂದು ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ರೈತಧ್ವನಿ ಸಂಘದ ಪ್ರಮುಖರಾದ ತಿಮ್ಮ ಪೂಜಾರಿ, ವಿಜಯ ಕುಂದರ್, ಬಾಬು ಶೆಟ್ಟಿ, ಹಂಡಿಕೆರೆ ರಾಘವೇಂದ್ರ ಶೆಟ್ಟಿ, ಸುಬಾಷ್ ಶೆಟ್ಟಿ, ನಾಗರಾಜ್ ಗಾಣಿಗ ಸಾಲಿಗ್ರಾಮ, ಮಹಾಬಲ ಪೂಜಾರಿ, ತಿಮ್ಮ ಕಾಂಚನ್, ದಿನೇಶ್ ಪೂಜಾರಿ, ಶೀಲರಾಜ್ ಕಾಂಚನ್, ಜಗನಾಥ ಕಾಂಚನ್, ಪ್ರಕಾಶ್ಚಂದ್ರ ಶೆಟ್ಟಿ, ರಾಮಣ್ಣ ಶೆಟ್ಟಿ, ಭುಜಂಗ ಗುರಿಕಾರ, ಗೋಪಾಲ ಬಂಗೇರ, ಗಿರೀಶ್ ಗಾಣಿಗ ಬೆಟ್ಲಕ್ಕಿ, ಗುರುರಾಜ್ ಆಚಾರ್ ಉಪಸ್ಥಿತರಿದ್ದರು. ಚಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿದರು.