ರಾಜ್ಯದಲ್ಲಿ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸುವಂತೆ ಸಿಎಂಗೆ ಮನವಿ
ಉಡುಪಿ: ರಾಜ್ಯದ ಛಾಯಾಗ್ರಾಹಕರ ಬಹು ವರ್ಷಗಳ ಬೇಡಿಕೆ ಯಂತೆ ರಾಜ್ಯದಲ್ಲಿ ಛಾಯಾಗ್ರಹಣ ಅಕಾಡೆಮಿ ಆರಂಭಿಸಿ ಛಾಯಾಗ್ರಾಹಕರ ವೃತ್ತಿಗೆ ಮಾನ್ಯತೆ ಒದಗಿಸಿ ಛಾಯಾಗ್ರಹಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪ್ರಸ್ತುತ ಕರ್ನಾಟಕದಲ್ಲಿ ರಾಜ್ಯದಲ್ಲಿ ಸುಮಾರು 4ಲಕ್ಷಕ್ಕೂ ಹೆಚ್ಚು ಛಾಯಾ ಗ್ರಾಹಕರು ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದು, ಈ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯ ಪ್ರತಿಭಾವಂತರಿದ್ದಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ಸರಕಾರದ ಆಶ್ರಯದಲ್ಲಿ ಛಾಯಾಗ್ರಹಣ ಅಕಾಡೆಮಿಯನ್ನು ಸ್ಥಾಪಿಸಲಾಗಿದ್ದು, ನಮ್ಮ ರಾಜ್ಯದಲ್ಲಿ ಛಾಯಾಗ್ರಹಣ ಅಕಾಡೆಮಿ ಸ್ಥಾಪನೆಯು ಅತ್ಯಗತ್ಯವಾಗಿ ಬೇಕಾಗಿದೆ.
ಛಾಯಾಗ್ರಹಕರು ಸಮಾಜಕ್ಕೆ ನೀಡುತ್ತಿರುವ ಸೇವೆಗೆ ಸರಿಯಾದ ಗೌರವ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಛಾಯಾಗ್ರಹಣ ಅಕಾಡೆಮಿ ಸ್ಥಾಪನೆ ಯಾಗುವುದು ಅತ್ಯಂತ್ಯ ಅವಶ್ಯಕವಾಗಿದೆ. ಕರ್ನಾಟಕದಲ್ಲಿ ರಾಜ್ಯಮಟ್ಟದ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸುವ ಬಗ್ಗೆ ಕ್ರಮ ವಹಿಸುವಂತೆ ರಾಜ್ಯದ ಸಮಸ್ತ ಛಾಯಾಗ್ರಾಹಕರ ಪರವಾಗಿ ಮನವಿ ಮಾಡುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.