ಉಡುಪಿ ಧರ್ಮಪ್ರಾಂತ್ಯದಲ್ಲಿ ಕ್ರಿಸ್ತ ಜಯಂತಿ ಜುಬಿಲಿ ಸಿದ್ಧತೆಗೆ ಚಾಲನೆ
ಉಡುಪಿ : ಉಡುಪಿ ಕಥೊಲಿಕ ಧರ್ಮಕ್ಷೇತ್ರದಲ್ಲಿ ಯೇಸು ಕ್ರಿಸ್ತರ ಜನನದ 2025 ವರ್ಷಗಳ ಸ್ಮರಣಾರ್ಥವಾಗಿ ಕ್ರಿಸ್ತ ಜಯಂತಿ ಜುಬಿಲಿ 2025 ಸಂಭ್ರಮಾಚರಣೆಯ ಎರಡು ವರ್ಷಗಳ ಪೂರ್ವ ತಯಾರಿಗೆ ರವಿವಾರ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಭರವಸೆಯ ಯಾತ್ರಿಕರು ಎಂಬ ಧ್ಯೇಯ ವಾಕ್ಯವನ್ನು ಒಳಗೊಂಡ ಲಾಂಛನ ಅನಾವರಣ ದೊಂದಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜಗದ್ಗುರು ಪೋಪ್ ಫ್ರಾನ್ಸಿಸ್ರವರು ಕಲಿಕಾ ವರ್ಷದಲ್ಲಿ ಎರಡನೇ ವ್ಯಾಟಿಕನ್ ಕೌನ್ಸಿಲ್ನ ನಾಲ್ಕು ಸಂವಿಧಾನಗಳ ಅಧ್ಯಯನ ವನ್ನು ನಡೆಸಲು ನಿರ್ದೇಶಿಸಿದ್ದಾರೆ. ಈ ಸಂವಿಧಾನಗಳ ಆಧ್ಯಯನದಿಂದ ನಮ್ಮ ವಿಶ್ವಾಸವನ್ನು ಆಳವಾಗಿ ಆರಿಯಲು ಮತ್ತು ಪ್ರಾರ್ಥನಾ ಸ್ಪೂರ್ತಿಯಿಂದ ಈ ಜಯಂತಿಯನ್ನು ಆಚರಿಸಲು ನಮಗೆ ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಧರ್ಮ ಪ್ರಾಂತ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಧರ್ಮಾಧ್ಯಕ್ಷರು ಜಯಂತ್ಯುತ್ಸವಕ್ಕೆ ಸಮರ್ಪಿತವಾದ ಪ್ರಾರ್ಥನೆಯನ್ನು, ಯಾಜಕರೊಂದಿಗೆ ಮತ್ತು ನೆರೆದ ವಿಶ್ವಾಸಿ ಗಳೊದಿಗೆ ಪಠಿಸಿದರು. ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲಿ ಏಕಕಾಲದಲ್ಲಿ ಈ ಉದ್ಘಾಟನಾ ಸಮಾರಂಭ ವನ್ನು ನಡೆಸಿ ಜುಬಿಲಿ ಲಾಂಛನವನ್ನು ಅನಾವರಣಗೊಳಿಸ ಲಾಯಿತು. ಸಮರ್ಪಿತ ಪ್ರಾರ್ಥನೆಗಳನ್ನು ಪಠಿಸಿ, ಪ್ರತೀ ಚರ್ಚುಗಳಲ್ಲಿ ಯಾಜಕರು ಲಾಂಛನದ ಮಹತ್ವವನ್ನು ಮತ್ತು ಅದರ ಸಂಕೇತವನ್ನು ಸಭೆಗೆ ವಿವರಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ.ಡಾ.ರೋಶನ್ ಡಿಸೋಜ, ಕಲ್ಯಾಣ ಪುರ, ಶಿರ್ವ, ಕಾರ್ಕಳ, ಉಡುಪಿ ವಲಯಗಳ ಪ್ರಧಾನ ಧರ್ಮಗುರುಗಳಾದ ವಂ.ವಲೇರಿಯನ್ ಮೆಂಡೊನ್ಸಾ, ವಂ.ಡಾ.ಲೆಸ್ಲಿ ಡಿಸೋಜ, ವಂ.ಪಾವ್ಲ್ ರೇಗೊ, ವಂ.ಚಾಲ್ಸ್ ಮಿನೇಜಸ್, ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ.ರೋಕ್ ಡೆಸಾ, ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಲೆಸ್ಲಿ ಅರೋಝಾ ಉಪಸ್ಥಿತರಿದ್ದರು.