ಉಡುಪಿ : ಯೂನಿಯನ್ಗಳ ಬಾಡಿಗೆ ವಿವಾದ; ರಿಕ್ಷಾ ಚಾಲಕನ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು
ಪ್ರಸಾದ್
ಉಡುಪಿ: ಉಡುಪಿ ನಗರದಲ್ಲಿ ಬಾಡಿಗೆ ಮಾಡುವ ವಿಚಾರದಲ್ಲಿ ಆಟೋ ಯೂನಿಯನ್ ಗಳ ಮಧ್ಯೆ ಹಲವು ಸಮಯಗಳಿಂದ ನಡೆಯುತ್ತಿರುವ ಗಲಾಟೆ ಮುಂದುವರೆದ ಭಾಗವಾಗಿ ಕೆಲವು ಚಾಲಕರು ಸೇರಿ ಓರ್ವ ಚಾಲಕನಿಗೆ ಗಂಭೀರ ಹಲ್ಲೆ ನಡೆಸಿದ್ದಾರೆ. ಗಾಯಾಳು ಚಾಲಕ ಆಸ್ಪತ್ರೆಗೆ ದಾಖಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಗರದ ಬಿಗ್ ಬಝಾರ್ ಸಮೀಪದ ಪಾರ್ಕಿಂಗ್ ನಲ್ಲಿ ಹಲ್ಲೆ ನಡೆದಿದ್ದು, ಪ್ರಸಾದ್ ಎಂಬ ಆಟೋ ಚಾಲಕ ಗಾಯಗೊಂಡಿದ್ದಾರೆ. ರಾಘು ಮತ್ತು ಸಹಚರರು ಹಲ್ಲೆ ನಡೆಸಿದ್ದಾಗಿ ಸಹೋದ್ಯೋಗಿಗಳು ಆರೋಪಿಸಿದ್ದಾರೆ. ಗಾಯಗೊಂಡ ಆಟೋ ಚಾಲಕ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಹತ್ತಾರು ಚಾಲಕರು ಆಸ್ಪತ್ರೆ ಬಳಿ ನೆರೆದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ನಗರದೊಳಗೇ ನಮಗೆ ಬಾಡಿಗೆ ಮಾಡಲು ಬಿಡುತ್ತಿಲ್ಲ. ನಗರದೊಳಗೆ ಐದು ಯೂನಿಯನ್ ಗಳಿವೆ. ಅವರವರ ಸಂಘ ಅವರವರಿಗೆ. ಆದರೆ ನಗರದೊಳಗೆ ಬಾಡಿಗೆ ಮಾಡಲು ಬಿಡುತ್ತಿಲ್ಲ. ಈ ಹಿಂದೆ ಕೂಡ ಹಲ್ಲೆ ನಡೆದಿದೆ. ನಾವೆಲ್ಲಿಗೆ ಹೋಗಬೇಕು? ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಿ ಬೇಕಿದ್ದರೂ ಬಾಡಿಗೆ ಮಾಡಬಹುದು ಎಂದು ಪೊಲೀಸ್ ಇಲಾಖೆ ,ನಗರಸಭೆ ಈಗಾಗಲೇ ಅನುಮತಿ ಕೊಟ್ಟಿದೆ. ಆದರೂ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ವಿಷಯವನ್ನು ಶಾಸಕರು ಮತ್ತಿತರರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ .ನಮಗೆ ನ್ಯಾಯ ಬೇಕು ಎಂದು ಆಟೋ ಚಾಲಕರು ಒತ್ತಾಯ ಮಾಡಿದ್ದಾರೆ.