×
Ad

ಗೊನೆ ಬಿಟ್ಟು ನಳನಳಿಸುತ್ತಿರುವ ಈಚಲು ಹಣ್ಣು

Update: 2023-08-07 08:30 IST

ನಾರಾಯಣ ಸ್ವಾಮಿ ಸಿ.ಎಸ್

ಹೊಸಕೋಟೆ, ಆ.6: ನೈಸರ್ಗಿಕವಾಗಿ ಬೆಳೆಯುವ ಈಚಲು ಗಿಡಗಳಲ್ಲಿ ಅಪರೂಪವಾಗುತ್ತಿವೆ. ಈಚಲುಹಣ್ಣನ್ನು ಗ್ರಾಮೀಣ ಪ್ರದೇಶದಲ್ಲಿ ಬಡವರ ಖರ್ಜೂರ ಎಂದು ಕರೆಯುತ್ತಾರೆ. ಸುಗ್ಗಿ ಸಮಯದಲ್ಲಿ ಮುಳ್ಳನ್ನು ಲೆಕ್ಕಿಸದೆ ಹಣ್ಣು ಕಿತ್ತು ತಿನ್ನುವವರೇ ಹೆಚ್ಚು ಈ ಹಣ್ಣಿನಲ್ಲಿ ಹೆಚ್ಚು ಪೌಷ್ಟಿಕತೆ ಇದೆ ಎಂದು ಹಿರಿಯರು ಹೇಳುತ್ತಾರೆ. ದಿನದಿಂದ ದಿನಕ್ಕೆ ಈಚಲು ಮರಗಳು ಕಣ್ಮರೆಯಾಗುತ್ತಿದ್ದು, ಬಹುತೇಕ ರೈತರು ಈಚಲು ಬೇಸಾಯದಿಂದ ದೂರ ಸರಿಯುತ್ತಿದ್ದಾರೆ.

ಈಚಲು ಹಣ್ಣನ್ನು ಬಯಲುಸೀಮೆಯ ಖರ್ಜೂರ ಎಂದೂ ಕೂಡ ಕರೆಯುವುದುಂಟು. ಬಣ್ಣದೊಂದಿಗೆ ಹಣ್ಣಾಗುವ ಈಚಲು ಹಣ್ಣು ಎಲ್ಲ ವಯೋಮಾನದವರಿಗೂ ಇಷ್ಟ. ಮಕ್ಕಳು ಖುಷಿಪಟ್ಟು ಸವಿಯುತ್ತಾರೆ. ಗ್ರಾಮೀಣ ಮಕ್ಕಳು ಬೆಳಗ್ಗೆ ಎದ್ದು ಈಚಲ ಮರದ ಕೆಳಗೆ ಉದುರಿದ ಹಣ್ಣನ್ನು ಆಯುವುದು ಸಾಮಾನ್ಯ. ಶಾಲಾ ಮಕ್ಕಳು ಶಾಲೆ ಬಿಟ್ಟ ಕೂಡಲೆ ಈಚಲು ಮರದ ಗೊಂಚಲಿಗೆ ಕಲ್ಲೆಸೆದು ಬೀಳಿಸಿ ಹಣ್ಣು ತಿನ್ನುತ್ತಾರೆ. ದಶಕಗಳ ಹಿಂದೆ ಹಳ್ಳಗಳಲ್ಲಿ ಸದಾ ನೀರು ಹರಿಯುವ ನಾಲೆಗಳ ದಂಡೆಗಳಲ್ಲಿ, ಚೌಗು ಪ್ರದೇಶಗಳಲ್ಲಿ ಹೇರಳವಾಗಿ ಈಚಲ ಗಿಡಗಳು ನಿಸರ್ಗದತ್ತವಾಗಿ ಬೆಳೆಯುತ್ತಿದ್ದವು.


ಇತ್ತೀಚಿಗೆ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಈಚಲು ಗಿಡಗಳ ಸಂತತಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಪ್ರದೇಶಗಳಲ್ಲಿ ಈಚಲು ಗಿಡಗಳು ಕಾಣಸಿಗುತ್ತವೆ. ಖರ್ಜೂರ ಮತ್ತು ಉತ್ತತ್ತಿ ತಳಿ ಹೋಲುವ ಈಚಲ ಗಿಡಗಳು ವಿಶಿಷ್ಟವಾಗಿದೆ.

ಹಿರಿಯರು ಸಹ ದೋಟಿಯೊಂದಿಗೆ ಹೋಗಿ ಹಳದಿ ಬಣ್ಣದ ಗೊಂಚಲು ಕೊಯ್ದು ತಂದು ಒಂದು ಕಡೆ ಇಟ್ಟು ಹಣ್ಣಾದ ಮೇಲೆ ಬಿಡಿಸಿ ಮಕ್ಕಳಿಗೆ ಕೊಡುತ್ತಾರೆ. ಬಡವರು ಈ ಕಾಯಿ ಸಂಗ್ರಹಿಸಿ ಶಾಲೆಗಳ ಎದುರು ಬುಟ್ಟಿಯಲ್ಲಿ ಇಟ್ಟು ಮಾರುತ್ತಾರೆ. ಈಚಲ ಮರಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಾಯಿಗಳು ಹಣ್ಣಾಗಲು ಪ್ರಾರಂಭವಾಗಿ ಜೂನ್ ವೇಳೆಗೆ ಕಟಾವಿಗೆ ಸಿದ್ದಗೊಳ್ಳುತ್ತವೆ. ಈಚಲು ಹಣ್ಣು ಖರ್ಜೂರದಂತೆಯೇ ಸಿಹಿಯಾಗಿರುತ್ತವೆ. ಈಚಲು ಕಾಯಿಗಳೆಂದರೆ ಆಡುಗಳಿಗೆ ತುಂಬಾ ಇಷ್ಟ ಈಚಲಕಾಯಿ ಸೀಜನ್‌ಗಳಲ್ಲಿ ಹಿಂದೆ ಆಡುಗಳನ್ನು ಈಚಲು ವನದಲ್ಲಿ ಬಿಡಲಾಗುತ್ತಿತ್ತು. ನೈಸರ್ಗಿಕವಾಗಿ ಬೆಳೆಯುವ ಈಚಲ ಹಣ್ಣುಗಳಲ್ಲಿ ನಾನಾ ಔಷಧೀಯ ಗುಣಗಳಿವೆ ಎಂದು ಹಿರಿಯರು ಹೇಳುತ್ತಾರೆ. ಈಚಲ ಮರಗಳು ತೆಂಗಿನ ಮರಗಳಂತೆ ಬಹು ಉಪಯೋಗಿಯಾಗಿವೆ. ಈಚಲು ಮರದ ಗರಿ ಹಾಗೂ ಕಡ್ಡಿಯನ್ನು ತಂದು ಚಾಪೆ, ಪೊರಕೆ, ಬುಟ್ಟಿ ತಯಾರಿಸಿ ಹಳ್ಳಿಗಳಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ಈಚಲು ಮರಗಳು ಕಣ್ಮರೆಯಾಗುತ್ತಿದ್ದು. ಈ ಕುಟುಂಬಗಳು ಬದುಕಿಗೆ ಪರ್ಯಾಯ ಮಾರ್ಗ ಹುಡುಕುವುದು ಅನಿವಾರ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ನಾರಾಯಣ ಸ್ವಾಮಿ ಸಿ.ಎಸ್

contributor

Similar News