ಸಂದೇಹಾಸ್ಪದ ಒಪ್ಪಂದಗಳು, ನಿಗೂಢ ಹೂಡಿಕೆದಾರರು: ಆದಿತ್ಯನಾಥ್ ಸರ್ಕಾರದ ಹೂಡಿಕೆ ಅಂಕಿ-ಅಂಶಗಳು ಕೇವಲ ಪ್ರಚಾರ? - newslaundry ತನಿಖಾ ವರದಿ
ಆದಿತ್ಯನಾಥ್ | Photo Credit : PTI
2023ರ ಫೆಬ್ರವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ, ಭಾರತೀಯ ಮೂಲದ ಉದ್ಯಮ ಸಮೂಹವೊಂದು ಉತ್ತರ ಪ್ರದೇಶ ಸರ್ಕಾರದೊಂದಿಗೆ ಅಚ್ಚರಿ ಮೂಡಿಸುವಂತಹ ಒಪ್ಪಂದಗಳಿಗೆ ಸಹಿ ಹಾಕಿತು. ರಾಜ್ಯದಲ್ಲಿ "ಸೆಮಿಕಂಡಕ್ಟರ್ಗಳು, ಡಿಸ್ಪ್ಲೇ ಫ್ಯಾಬ್ ಮತ್ತು ಚಿಪ್ ಘಟಕಗಳನ್ನು" ಸ್ಥಾಪಿಸಲು ಹಾಗೂ ಇನ್ನಿತರ ಯೋಜನೆಗಳಿಗಾಗಿ ಬರೋಬ್ಬರಿ 1.65 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವುದಾಗಿ ಈ ಒಪ್ಪಂದದಲ್ಲಿ ತಿಳಿಸಲಾಗಿತ್ತು.
ಅದೇ ರೀತಿ, ಮತ್ತೊಂದು ದೇಶೀಯ ಕಂಪೆನಿಯು ಗಾಝಿಯಾಬಾದ್ ಮತ್ತು ಗೌತಮ್ ಬುದ್ಧ ನಗರದಲ್ಲಿ 18,000 ಕೋಟಿ ರೂಪಾಯಿ ವೆಚ್ಚದ ಯೋಜನೆಗಳನ್ನು ಕೈಗೊಳ್ಳಲು ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿತು.
ಮೂರನೇ ಒಪ್ಪಂದದಲ್ಲಿ, ಕಾಲೇಜೊಂದು ರಾಜ್ಯದಲ್ಲಿ 40,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಬದ್ಧತೆ ವ್ಯಕ್ತಪಡಿಸಿತ್ತು. ಇದರೊಂದಿಗೆ, ತುಲನಾತ್ಮಕವಾಗಿ ಚಿಕ್ಕದಾಗಿದ್ದರೂ ಗಣನೀಯವೆನಿಸುವ 1,400 ಕೋಟಿ ರೂಪಾಯಿಗಳ ಹೂಡಿಕೆಯ ಒಪ್ಪಂದಕ್ಕೆ ಸ್ವಯಂಸೇವಾ ಸಂಸ್ಥೆಯೊಂದರ ಜೊತೆ ಸಹಿ ಹಾಕಲಾಗಿತ್ತು.
ಈ ಒಪ್ಪಂದಗಳು ಸೇರಿದಂತೆ ಇನ್ನುಳಿದ ಒಪ್ಪಂದಗಳ ಒಟ್ಟು ಮೊತ್ತ 33.5 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಆದಿತ್ಯನಾಥ್ ಸರ್ಕಾರವು 2023ರ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಮುಕ್ತಾಯದ ಸಂದರ್ಭದಲ್ಲಿ ಇದರ ಬಗ್ಗೆ ಭಾರೀ ಪ್ರಚಾರ ನಡೆಸಿತ್ತು. 2030ರ ವೇಳೆಗೆ ಉತ್ತರ ಪ್ರದೇಶವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ರಾಜ್ಯದ ಗುರಿಯನ್ನು ಬಿಂಬಿಸಲು ಸಹ ಇದೇ ಅಂಕಿ-ಅಂಶವನ್ನು ಬಳಸಲಾಗುತ್ತಿದೆ.
ಆದರೆ, ಈ ಬೃಹತ್ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿರುವ ಕೆಲವು ಕಂಪೆನಿಗಳು ಮತ್ತು ಸಂಸ್ಥೆಗಳ ಹಿನ್ನೆಲೆಯನ್ನು ಗಮನಿಸಿದಾಗ ಈ ಲೆಕ್ಕಾಚಾರ ತಾಳೆಯಾಗುತ್ತಿಲ್ಲ.
ಸುಮಾರು 1.65 ಲಕ್ಷ ಕೋಟಿ ರೂಪಾಯಿಗಳ ತಿಳುವಳಿಕಾ ಪತ್ರಗಳಿಗೆ ಸಹಿ ಹಾಕಿರುವ 'ಆರ್ಜಿ ಸ್ಟ್ರಾಟಜೀಸ್ ಗ್ರೂಪ್' ಸಂಸ್ಥೆಗೆ ಸಂಬಂಧಿಸಿದಂತೆ ಭಾರತದಲ್ಲಿ ಯಾವುದೇ ಕಾರ್ಪೊರೇಟ್ ದಾಖಲೆಗಳು ಪತ್ತೆಯಾಗಿಲ್ಲ. ಇದನ್ನು '2ಬಿಇ ಎಜುಕೇಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್' ಸಂಸ್ಥೆಗೆ ಲಿಂಕ್ ಹೊಂದಿರುವ ಕುಟುಂಬವೊಂದು ನಡೆಸುತ್ತಿದೆ. ಇದೇ ಸಂಸ್ಥೆಯು 18,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಭರವಸೆ ನೀಡಿತ್ತು. ಈ ಕಂಪೆನಿಯು ಇದುವರೆಗೆ ತನ್ನ ಬ್ಯಾಲೆನ್ಸ್ ಶೀಟ್ ಅನ್ನು ಸಹ ಸಲ್ಲಿಕೆ ಮಾಡಿಲ್ಲ. ಕಂಪೆನಿಯ ನಿರ್ದೇಶಕರ ಪ್ರಕಾರ, ಸದ್ಯ ಇದನ್ನು ಮುಚ್ಚಲಾಗುತ್ತಿದೆ.
ಇನ್ನು 40,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜಿಸಿದ್ದ ಶಿಕ್ಷಣ ಸಂಸ್ಥೆಯು ಕೇವಲ 600 ವಿದ್ಯಾರ್ಥಿಗಳನ್ನು ಹೊಂದಿದ್ದು, ಅತ್ಯಂತ ಸಾಧಾರಣ ಬ್ಯಾಲೆನ್ಸ್ ಶೀಟ್ ಹೊಂದಿದೆ. ಹಾಗೆಯೇ, 1,400 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದ್ದ ಸ್ವಯಂಸೇವಾ ಸಂಸ್ಥೆಯ ವಿಳಾಸವನ್ನು ಪತ್ತೆಹಚ್ಚುವುದು ತೀವ್ರ ಕಷ್ಟಕರವಾಗಿ ಪರಿಣಮಿಸಿದ್ದು, ಅದರ ನಿರ್ದೇಶಕರು ಹಲವರಿಗೆ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ.
'newslaundry' ನಡೆಸಿದ ತನಿಖೆಯು ಇಂತಹ ಅಸಾಧಾರಣ ಮತ್ತು ಆಶ್ಚರ್ಯಕರ ವ್ಯತ್ಯಾಸಗಳನ್ನು ಬಯಲಿಗೆಳೆದಿದೆ. ಆದಿತ್ಯನಾಥ್ ಸರ್ಕಾರವು ಪ್ರದರ್ಶಿಸಿರುವ ಹತ್ತಾರು ಹೂಡಿಕೆ ಒಪ್ಪಂದಗಳಲ್ಲಿ ಇದೇ ರೀತಿಯ ಮಾದರಿಗಳು ಕಂಡುಬಂದಿವೆ.
ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ಸರ್ಕಾರದೊಂದಿಗಿನ 25,000 ಕೋಟಿ ರೂಪಾಯಿಗಳ 'ಪುಚ್ ಎಐ' (Puch AI) ಒಪ್ಪಂದವು ರದ್ದಾಗಿದ್ದು, ಹೂಡಿಕೆದಾರರ ಅರ್ಹತೆ ಹಾಗೂ ವಿಶ್ವಾಸಾರ್ಹತೆಯನ್ನು ಹೇಗೆ ಪರಿಶೀಲಿಸಲಾಗುತ್ತದೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಈ ತನಿಖೆಯು ಆ ಪ್ರಶ್ನೆಗಳು ಕೇವಲ ಒಂದು ಸ್ಟಾರ್ಟ್ಅಪ್ಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಹೂಡಿಕೆದಾರರ ಶೃಂಗಸಭೆಗಳಲ್ಲಿ ಸಹಿ ಹಾಕಲಾದ ತಿಳುವಳಿಕಾ ಪತ್ರಗಳು ಕಾನೂನಾತ್ಮಕ ಬದ್ಧತೆಗಳಲ್ಲದಿದ್ದರೂ, ಕೇವಲ ಸಕಾರಾತ್ಮಕ ಸುದ್ದಿಗಳನ್ನು ಸೃಷ್ಟಿಸುವುದನ್ನು ಹೊರತುಪಡಿಸಿ ಈ ಒಪ್ಪಂದಗಳಿಂದ ನಿಜಕ್ಕೂ ಆಗುವ ಪ್ರಯೋಜನವಾದರೂ ಏನು ಎಂಬ ದೊಡ್ಡ ಪ್ರಶ್ನೆಯನ್ನು ಈ ಆಘಾತಕಾರಿ ಅಂಶಗಳು ಹುಟ್ಟುಹಾಕುತ್ತವೆ. ಜೊತೆಗೆ, ಇವು ನೀಡಿದ ಭರವಸೆ ಮತ್ತು ವಾಸ್ತವದ ಅನುಷ್ಠಾನದ ನಡುವಿನ ಭಾರೀ ಅಂತರವನ್ನು ಎತ್ತಿ ತೋರಿಸುತ್ತವೆ.
ಕಳೆದ ವರ್ಷ ಉತ್ತರ ಪ್ರದೇಶದ ವಿಧಾನ ಪರಿಷತ್ತಿನಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಕೈಗಾರಿಕಾ ಅಭಿವೃದ್ಧಿ ಸಚಿವ ನಂದ್ ಗೋಪಾಲ್ ಗುಪ್ತಾ 'ನಂದಿ' ಅವರು 2023ರ ಶೃಂಗಸಭೆಯಲ್ಲಿ ಸಹಿ ಹಾಕಲಾದ ಎಲ್ಲಾ ತಿಳುವಳಿಕಾ ಪತ್ರಗಳ (MoU) ವಿವರಗಳನ್ನು ನೀಡಿದರು.
"ಇವುಗಳಲ್ಲಿ 7,382 ಕಂಪೆನಿಗಳು 'ವಾಣಿಜ್ಯ ಉತ್ಪಾದನೆ'ಯನ್ನು ಆರಂಭಿಸಿದ್ದು, 2.78 ಲಕ್ಷ ಕೋಟಿ ರೂ. ಹೂಡಿಕೆ ಹಾಗೂ 15.53 ಲಕ್ಷ ಉದ್ಯೋಗಗಳನ್ನು ಪ್ರತಿನಿಧಿಸುತ್ತವೆ" ಎಂದು ಅವರು ಹೇಳಿದರು. MOU ಸಹಿ ಮಾಡಿದ ಮತ್ತು ವಾಣಿಜ್ಯ ಉತ್ಪಾದನೆ ಪ್ರಾರಂಭಿಸಿವೆ ಎನ್ನಲಾದ ಕಂಪೆನಿಗಳ ಪಟ್ಟಿಗಳನ್ನು ನಂದಿ ಅವರು ಕೌನ್ಸಿಲ್ನಲ್ಲಿ ಮಂಡಿಸಿದರು.
ಇನ್ನೂ ವಾಣಿಜ್ಯ ಉತ್ಪಾದನೆ ಆರಂಭಿಸದ ಕಂಪೆನಿಗಳಿಂದಲೇ ತನ್ನ ಪರಿಶೀಲನೆಯನ್ನು ಆರಂಭಿಸಿದ newslaundry, ಆ ಪಟ್ಟಿಗಳಲ್ಲಿದ್ದ ಸಂಸ್ಥೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿತು.
ಸಂಬಂಧಪಟ್ಟ ಸಂಸ್ಥೆಗಳ ವಿಶ್ವಾಸಾರ್ಹತೆ, ಹಣಕಾಸು ಸ್ಥಿತಿ ಅಥವಾ ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ಅರ್ಥಪೂರ್ಣವಾಗಿ ಪರಿಶೀಲಿಸುವ ಮುನ್ನವೇ, ಕೆಲವು ಸಂದರ್ಭಗಳಲ್ಲಾದರೂ ಕೇವಲ ಪ್ರಚಾರಕ್ಕಾಗಿ ದೊಡ್ಡ ಹೂಡಿಕೆಯ ಅಂಕಿ-ಅಂಶಗಳನ್ನು ಘೋಷಿಸಿರಬಹುದು ಎಂಬುದನ್ನು newslaundry ತನಿಖೆಯು ಸಾಬೀತುಪಡಿಸುತ್ತದೆ.
►ಮೆಗಾ MOUಗಳು, ಆದರೆ ಇದು ಎಂಸಿಎ ದಾಖಲೆಗಳಲ್ಲಿಲ್ಲ
ಗಾಝಿಯಾಬಾದ್ ಮತ್ತು ಗೌತಮ್ ಬುದ್ಧ ನಗರದಲ್ಲಿ ಒಟ್ಟು 18,000 ಕೋಟಿ ರೂ. ಮೌಲ್ಯದ MOUಗೆ ಸಹಿ ಮಾಡಿದ 'ಟು-ಬಿಇ ಎಜುಕೇಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್' ಕಂಪೆನಿಯನ್ನೇ ತೆಗೆದುಕೊಳ್ಳಿ. 2021ರಲ್ಲಿ ನೋಂದಣಿಯಾದ ಈ ಕಂಪೆನಿಯು, ಎಂಸಿಎ ದಾಖಲೆಗಳ ಪ್ರಕಾರ, ಇದುವರೆಗೆ ತನ್ನ ಬ್ಯಾಲೆನ್ಸ್ ಶೀಟ್ ಅನ್ನೇ ಸಲ್ಲಿಸಿಲ್ಲ.
ಗಾಝಿಯಾಬಾದ್ನಲ್ಲಿ ಬಾಡಿಗೆಗೆ ಪಡೆದಿರುವ ಒಂದು ಫ್ಲ್ಯಾಟ್ ಇದರ ನೋಂದಾಯಿತ ಕಚೇರಿಯಾಗಿದ್ದು, ಆ ಸೊಸೈಟಿಯ ಮುಖ್ಯಸ್ಥರು ಆ ಆವರಣದಲ್ಲಿ ಎಂದಿಗೂ ಯಾವುದೇ ಕಚೇರಿ ಇರಲಿಲ್ಲ ಎಂದು ಹೇಳಿದ್ದಾರೆ. ಕಂಪೆನಿಯ ನಿರ್ದೇಶಕ ಪ್ರವೀಣ್ ಗೋಯೆಲ್ ಅವರಿಗೆ ಲಿಂಕ್ ಆಗಿರುವ ಎರಡನೇ ವಿಳಾಸಕ್ಕೆ ಭೇಟಿ ನೀಡಿದಾಗ, ಗೋಯೆಲ್ ಮೂರು ವರ್ಷಗಳ ಹಿಂದೆಯೇ ಅದನ್ನು ಖಾಲಿ ಮಾಡಿದ್ದಾರೆ ಎಂದು ಅಲ್ಲಿನ ಭದ್ರತಾ ಸಿಬ್ಬಂದಿ ತಿಳಿಸಿದರು. 'ಟು-ಬಿಇ ಎಜುಕೇಟ್' ಕಂಪೆನಿಯ ನೋಂದಣಿ ಪತ್ರಗಳಿಗೆ ಸಹಿ ಹಾಕಿದ್ದ ಚಾರ್ಟರ್ಡ್ ಅಕೌಂಟೆಂಟ್, ಕಂಪೆನಿಯನ್ನು ಸ್ಥಾಪಿಸಲು ಮಾಲೀಕರು ತಮ್ಮ ಕಚೇರಿಗೆ ಬಂದಿದ್ದರು, ಆದರೆ "ಅದರ ನಂತರ ಕಂಪೆನಿಯ ಯಾವುದೇ ಚಟುವಟಿಕೆಗಳು ನಡೆದಿಲ್ಲ" ಎಂದು ಹೇಳಿದರು.
ಈ ಸಂಸ್ಥೆಯ ಇಬ್ಬರು ನಿರ್ದೇಶಕರಾದ ಪ್ರವೀಣ್ ಮತ್ತು ಪುಷ್ಕರ್ ಗೋಯೆಲ್ ತಂದೆ-ಮಗನಾಗಿದ್ದಾರೆ. ಮತ್ತೊಂದು MOU ಪ್ರವೀಣ್ ಅವರನ್ನು 'ಆರ್ಜಿ ಸ್ಟ್ರಾಟಜೀಸ್ ಗ್ರೂಪ್'ನ ಅಧ್ಯಕ್ಷ ಮತ್ತು ಸಿಇಒ ಎಂದು ಗುರುತಿಸುತ್ತದೆ. ಆದರೆ newslaundryಗೆ ಈ ಹೆಸರಿನ ಯಾವುದೇ ವ್ಯಾಪಾರ ಸಮೂಹದ ಕಾರ್ಪೊರೇಟ್ ದಾಖಲೆಗಳು ಭಾರತದಲ್ಲಿ ಸಿಗಲಿಲ್ಲ. ಪುಷ್ಕರ್ ತಮ್ಮ ಲಿಂಕ್ಡ್ಇನ್ ಪ್ರೊಫೈಲ್ನಲ್ಲಿ ತಮ್ಮನ್ನು ಈ ಸಂಸ್ಥೆಯ ಸಹ-ಸಂಸ್ಥಾಪಕ ಎಂದು ಗುರುತಿಸಿಕೊಂಡಿದ್ದಾರೆ.
ಆದಿತ್ಯನಾಥ್ ಸರ್ಕಾರವು ಈ ಗ್ರೂಪ್ ಜೊತೆ ತನ್ನ ಎರಡು ಅತ್ಯಂತ ದೊಡ್ಡ MOUಗಳಿಗೆ ಸಹಿ ಹಾಕಿರುವುದನ್ನು ಗಮನಿಸಿದರೆ, ಈ ದಾಖಲೆಗಳ ಅನುಪಸ್ಥಿತಿಯು ತೀರಾ ವಿಚಿತ್ರವಾಗಿ ಕಾಣುತ್ತದೆ. ಒಂದು 90,000 ಕೋಟಿ ರೂ. ಮತ್ತು ಇನ್ನೊಂದು 75,000 ಕೋಟಿ ರೂ.ಯದ್ದು, ಒಟ್ಟಾರೆಯಾಗಿ ಇವೆರಡೂ ಸೇರಿ ಸುಮಾರು 1.65 ಲಕ್ಷ ಕೋಟಿ ರೂ.ಯಾಗುತ್ತವೆ.
'ಆರ್ಜಿ ಸ್ಟ್ರಾಟಜೀಸ್' ಬ್ರಿಟನ್ ಮೂಲದ ಕಂಪೆನಿ ಎಂದು ಪುಷ್ಕರ್ newslaundryಗೆ ತಿಳಿಸಿದ್ದಾರೆ. ಆದರೆ MOU ಪ್ರಕಾರ, ಇದು ಭಾರತೀಯ ಕಾನೂನಿನಡಿ ನೋಂದಾಯಿಸಲ್ಪಟ್ಟ ಕಂಪೆನಿಯಾಗಿದೆ. ಆರ್ಜಿ ಸ್ಟ್ರಾಟಜೀಸ್ ಗ್ರೂಪ್ MOUನಲ್ಲಿ ನಮೂದಿಸಲಾದ ವಿಳಾಸವು ಗಾಝಿಯಾಬಾದ್ನ 'ಕ್ರಾಸಿಂಗ್ ರಿಪಬ್ಲಿಕ್' ಆಗಿದೆ. ಇದು 'ಟು-ಬಿಇ ಎಜುಕೇಟ್' ಕಚೇರಿಯ ವಿಳಾಸವಾಗಿರುವ ಅದೇ ಫ್ಲ್ಯಾಟ್ ಇರುವ ಪ್ರದೇಶವಾಗಿದೆ. ಅಲ್ಲದೆ, ಆರ್ಜಿ ಸ್ಟ್ರಾಟಜೀಸ್ ಗ್ರೂಪ್ನಲ್ಲಿರುವ 'ಆರ್ಜಿ' ಎಂದರೆ ರೇಖಾ ಗೋಯೆಲ್ (ತಮ್ಮ ತಾಯಿಯ ಹೆಸರು) ಎಂಬುದನ್ನು ಪುಷ್ಕರ್ ಅವರ ಲಿಂಕ್ಡ್ಇನ್ ಖಾತೆಯೇ ಸ್ಪಷ್ಟಪಡಿಸುತ್ತದೆ.
►ಆ ಬೃಹತ್ MOUಗಳು ಯಾವುದಕ್ಕಾಗಿ ಆಗಿದ್ದವು?
ಪುಷ್ಕರ್ ಅವರು ತಮ್ಮ ಲಿಂಕ್ಡ್ಇನ್ ಪೋಸ್ಟ್ ಒಂದರಲ್ಲಿ, ಇದು ಭಾರತದ "ಅತ್ಯಂತ ದೊಡ್ಡ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಫ್ಯಾಬ್ ಯೋಜನೆ"ಗಾಗಿ ಎಂದು ಹೇಳಿಕೊಂಡಿದ್ದಾರೆ. (ಹೋಲಿಕೆ ಮಾಡಿ ನೋಡುವುದಾದರೆ, ಖಾಸಗಿ ಹೂಡಿಕೆಯೊಂದಿಗೆ ಭಾರತದಲ್ಲಿ ಆರಂಭವಾಗುತ್ತಿರುವ ಅತ್ಯಂತ ದೊಡ್ಡ ಸೆಮಿಕಂಡಕ್ಟರ್ ಯೋಜನೆಯೆಂದರೆ, ಗುಜರಾತ್ನಲ್ಲಿ ಟಾಟಾ ಮತ್ತು ತೈವಾನ್ನ 'ಪವರ್ಚಿಪ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪ್' ಜಂಟಿ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ 91,000 ಕೋಟಿ ರೂ.ಯ ಪ್ಲಾಂಟ್ ಆಗಿದೆ.)
ಪಾಡ್ಕಾಸ್ಟ್ ಒಂದರಲ್ಲಿ ಪುಷ್ಕರ್ ತಾವೊಬ್ಬ ದೊಡ್ಡ ಉದ್ಯಮಿ ಎಂಬಂತೆ ಬಿಂಬಿಸಿಕೊಂಡಿದ್ದು, ಕೊಚ್ಚಿಯಲ್ಲಿ ತಮಗೆ 5,000 ಜನರಿಗೆ ಉದ್ಯೋಗ ನೀಡಿರುವ ಬೃಹತ್ ಸಂಸ್ಥೆಯಿದೆ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ತಮಗೆ ಪೇಪರ್ ಮಿಲ್ ತೆರೆಯಲು ಜಾಗ ನೀಡುವಲ್ಲಿ ಉತ್ತರ ಪ್ರದೇಶ ಸರ್ಕಾರ ವಿಫಲವಾಯಿತು ಎಂದು ಟೀಕಿಸಿರುವ ಅವರು, ಆ ಕಾರಣದಿಂದಲೇ ತಾವು ತಮ್ಮ ವ್ಯವಹಾರವನ್ನು ಕೇರಳಕ್ಕೆ ಸ್ಥಳಾಂತರಿಸಬೇಕಾಯಿತು ಎಂದೂ ಹೇಳಿಕೊಂಡಿದ್ದಾರೆ.
ಈ ಕಂಪೆನಿಯ ಇನ್ಸ್ಟಾಗ್ರಾಮ್ ಪುಟದಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್, ಸಿಇಒ, ಚೀಫ್ ಮಾರ್ಕೆಟಿಂಗ್ ಆಫೀಸರ್ ಮತ್ತು ಕಾರ್ಪೊರೇಟ್ ಆಫೀಸರ್ ಸೇರಿದಂತೆ ಗ್ರೂಪ್ನ ಉನ್ನತ ಅಧಿಕಾರಿಗಳ ಎಐ-ಜನರೇಟೆಡ್ ಚಿತ್ರಗಳನ್ನು ಪೋಸ್ಟ್ ಮಾಡಲಾಗಿತ್ತು. ಆದರೆ newslaundryಗೆ ಇವರಲ್ಲಿ ಯಾರೊಬ್ಬರ ಖಾತೆಯೂ ಲಿಂಕ್ಡ್ಇನ್ನಲ್ಲಿ ಪತ್ತೆಯಾಗಲಿಲ್ಲ.
ಪುಷ್ಕರ್ ಗೋಯೆಲ್ ಅವರ ಇನ್ಸ್ಟಾಗ್ರಾಮ್ ಪುಟದಲ್ಲಿ, ಆರ್ಜಿ ಸ್ಟ್ರಾಟಜೀಸ್ ಗ್ರೂಪ್ ಯುಎಸ್ಎಯ 'ಜಿನೋ ಯುಜೆಡ್' ಕಂಪೆನಿಯನ್ನು 3.2 ರಿಂದ 3.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ಸ್ವಾಧೀನಪಡಿಸಿಕೊಂಡಿದೆ ಎಂಬ ಸುದ್ದಿಯ ಸ್ಟೋರಿಗಳನ್ನು ಪಿನ್ ಮಾಡಲಾಗಿದೆ. ಆದರೆ ಈ ಬಗ್ಗೆ ಅಂತರ್ಜಾಲದಲ್ಲಿ ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ.
ಆರ್ಜಿ ಸ್ಟ್ರಾಟಜೀಸ್ ಗ್ರೂಪ್ನ ಇನ್ಸ್ಟಾಗ್ರಾಮ್ ಪುಟದಲ್ಲಿ, ಯುಪಿ ಸರ್ಕಾರದೊಂದಿಗೆ ಮಾಡಿಕೊಂಡ MOUನ ಎರಡು ಪೋಸ್ಟ್ಗಳಿವೆ. ಪುಷ್ಕರ್ ಅವರ ಇನ್ಸ್ಟಾಗ್ರಾಮ್ನಲ್ಲಿ ಅವರು ಪ್ರಧಾನಿ ಮೋದಿ, ಜಯ್ ಶಾ, ವಿರಾಟ್ ಕೊಹ್ಲಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಸೇರಿದಂತೆ ಪ್ರಮುಖ ಗಣ್ಯರೊಂದಿಗೆ ಪೋಸ್ ನೀಡಿದ ಚಿತ್ರಗಳಿವೆ.
ಐಟಿಸಿ ಮೌರ್ಯ ಹೋಟೆಲ್ ನೀಡಿದ ದೂರಿನ ಮೇರೆಗೆ ಪುಷ್ಕರ್ ದಿಲ್ಲಿಯಲ್ಲಿ ಎಫ್ಐಆರ್ ಕೂಡ ಎದುರಿಸುತ್ತಿದ್ದಾರೆ. ಅವರು ಎರಡು ರೂಮ್ಗಳನ್ನು ಬುಕ್ ಮಾಡಿ ವಾಸ್ತವ್ಯ ಹೂಡಿದ್ದರು ಮತ್ತು ತಂಗಿದ್ದಕ್ಕೆ ಹಣ ಪಾವತಿಸಿದ್ದೇನೆ ಎಂದು ಹೋಟೆಲ್ನ ಫ್ರಂಟ್ ಆಫೀಸಿಗೆ ತೋರಿಸಲು ನಕಲಿ ವಿಶಿಷ್ಟ ವಹಿವಾಟು ಸಂಖ್ಯೆಯನ್ನು ಬಳಸಿದ್ದರು ಎಂಬುದು ಅವರ ಮೇಲಿರುವ ಆರೋಪವಾಗಿದೆ. 2024ರ ಜೂನ್ 6ರಂದು ದಾಖಲಾದ ಈ ಪ್ರಕರಣವು ಪಟಿಯಾಲ ಹೌಸ್ ಕೋರ್ಟ್ನಲ್ಲಿ ಬಾಕಿ ಇದೆ. ಈಗಾಗಲೇ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದ್ದು, ಈ ವರ್ಷ ಜುಲೈ 14ರಂದು ಮುಂದಿನ ವಿಚಾರಣೆ ನಡೆಯಲಿದೆ.
newslaundry ಸಂಸ್ಥೆಯು ಪುಷ್ಕರ್ ಗೋಯೆಲ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿತು. 2BE Educate ಕಂಪೆನಿಯೊಂದಿಗೆ ಸಹಿ ಮಾಡಲಾದ MOU ಬಗ್ಗೆ ಕೇಳಿದಾಗ ಗೋಯೆಲ್, "ಹೌದು, ಅದು ನನ್ನದೇ ಕಂಪೆನಿ. ನಾವು MOUಗೆ ಸಹಿ ಮಾಡಿದ್ದೆವು. ಆದರೆ ತದನಂತರ, ನಾವು ಈ ಕಂಪೆನಿಯ ಮೂಲಕ ವ್ಯವಹಾರ ನಡೆಸಲಿಲ್ಲ. ಬದಲಾಗಿ, ಆರ್ಜಿ ಸ್ಟ್ರಾಟಜೀಸ್ ಗ್ರೂಪ್ ಮೂಲಕ ಕಾರ್ಯನಿರ್ವಹಿಸಿದೆವು" ಎಂದರು.
ಕಂಪೆನಿಯ ಅಸ್ತಿತ್ವದ ಬಗ್ಗೆ ಪ್ರಶ್ನಿಸಿದಾಗ, "ಇದು ಯುಎಸ್ ಮೂಲದ ಕಂಪೆನಿಯಾಗಿದೆ. ಇದರಲ್ಲಿ ನನ್ನ ಹೊರತಾಗಿ ಇನ್ನೂ ಹಲವರು ಭಾಗಿಯಾಗಿದ್ದಾರೆ" ಎಂದಿದ್ದಾರೆ ಗೋಯೆಲ್.
ಪ್ರಧಾನಿ ಮೋದಿ ಅವರಂತಹ ಪ್ರಮುಖ ವ್ಯಕ್ತಿಗಳೊಂದಿಗಿನ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ಗಳು ಮತ್ತು ಚಿತ್ರಗಳ ಬಗ್ಗೆ ಪ್ರಶ್ನಿಸಿದಾಗ, "ನಾನು ಅವರನ್ನು ಏಕೆ ಭೇಟಿಯಾಗಲು ಸಾಧ್ಯವಿಲ್ಲ?" ಎಂದು ಅವರು ಮರುಪ್ರಶ್ನಿಸಿದರು.
ತಮ್ಮ ತಂಡವು newslaundryಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿದೆ ಎಂದು ಪುಷ್ಕರ್ ಹೇಳಿದ್ದರಿಂದ, ಆರ್ಜಿ ಸ್ಟ್ರಾಟಜೀಸ್ ಕಂಪೆನಿಗೆ ಸಂಬಂಧಿಸಿದ ಕಾರ್ಪೊರೇಟ್ ದಾಖಲೆಗಳ ಕೊರತೆಯ ಬಗ್ಗೆ ಸೇರಿದಂತೆ ಹಲವು ಪ್ರಶ್ನೆಗಳ ಪಟ್ಟಿಯನ್ನು ಅವರಿಗೆ ವಾಟ್ಸಾಪ್ ಮತ್ತು ಇಮೇಲ್ ಮೂಲಕ ಕಳುಹಿಸಲಾಯಿತು.
ಅದಕ್ಕೆ ಇಮೇಲ್ ಮೂಲಕ ಬಂದ ಪ್ರತಿಕ್ರಿಯೆಯಲ್ಲಿ, MOUನಲ್ಲಿ ಉಲ್ಲೇಖಿಸಲಾದ ವಿಳಾಸವು "ಗ್ರೂಪ್ಗೆ ಸಂಬಂಧಿಸಿದ ಸಲಹೆಗಾರರೊಬ್ಬರದ್ದಾಗಿದ್ದು, ಅದನ್ನು ಗ್ರೂಪ್ನ ಮುಖ್ಯ ಕಾರ್ಯಾಚರಣಾ ಕಚೇರಿ ಎಂದು ಪರಿಗಣಿಸಬಾರದು" ಎಂದು ತಿಳಿಸಲಾಗಿತ್ತು. ಆದರೆ ಆರ್ಜಿ ಸ್ಟ್ರಾಟಜೀಸ್ ಕಂಪೆನಿಗೆ ಸಂಬಂಧಿಸಿದಂತೆ ಎಂಸಿಎ ದಾಖಲೆಗಳು ಇಲ್ಲದಿರುವ ಬಗ್ಗೆ ಕೇಳಲಾದ ನಿರ್ದಿಷ್ಟ ಪ್ರಶ್ನೆಗೆ ಯಾವುದೇ ಸ್ಪಷ್ಟ ಉತ್ತರವನ್ನೂ ನೀಡಿಲ್ಲ.
ಪ್ರಶ್ನೆಗಳನ್ನು ಕಳುಹಿಸಿದ ಬೆನ್ನಲ್ಲೇ ಪುಷ್ಕರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು 'ಪ್ರೈವೇಟ್' ಮಾಡಿಕೊಂಡಿದ್ದಾರೆ ಎಂದು newslaundry ವರದಿ ಹೇಳಿದೆ.
►ನಿಗೂಢ NGO
ಗೌತಮ್ ಬುದ್ಧ ನಗರದಲ್ಲಿ 'ಪಲಕ್ – ಎ ಹ್ಯೂಮನ್ ವೆಲ್ಫೇರ್ ಸೊಸೈಟಿ' ಜೊತೆಗೆ ಸರ್ಕಾರ ಪಟ್ಟಿ ಮಾಡಿರುವ 1,400 ಕೋಟಿ ರೂ.ಯ ಒಪ್ಪಂದವನ್ನು ತೆಗೆದುಕೊಳ್ಳಿ. ಪಲಕ್ ಒಂದು ಸರ್ಕಾರೇತರ ಸಂಸ್ಥೆಯಾಗಿದೆ. ಈ NGOದ ನಿರ್ದೇಶಕರು ಸಂಜೀವ್ ಕುಮಾರ್ ಜುನೇಜಾ.
ಈ NGO ಎಲ್ಲಿದೆ ಎಂದು ಪತ್ತೆ ಹಚ್ಚುವುದೆಂದರೆ ಒಂದು ಸುದೀರ್ಘ ಹಾದಿಯನ್ನು ಬೆನ್ನಟ್ಟಿದಂತೆ. ಇಂಟರ್ನೆಟ್ನಲ್ಲಿ ಎರಡು ವಿಳಾಸಗಳು ಕಾಣಿಸುತ್ತವೆ. ಒಂದು ಪಲಕ್ ಸಂಸ್ಥೆಯ ಸ್ವಂತ ದಾಖಲೆಗಳಲ್ಲಿರುವ ಹೌಜ್ ರಾನಿ ವಿಳಾಸ, ಮತ್ತೊಂದು ಇದಕ್ಕೆ ಲಿಂಕ್ ಆಗಿರುವ ಬೇರೊಂದು NGO ಪಟ್ಟಿ ಮಾಡಿರುವ ಮೆಹ್ರೌಲಿ ವಿಳಾಸ.
ಹೌಜ್ ರಾನಿಯ ಜಾಗದ ಮಾಲೀಕರು, ಸಂಜೀವ್ ಕುಮಾರ್ ಜುನೇಜಾ ಹೆಸರಿನ ಯಾರೊಬ್ಬರೂ ಅಲ್ಲಿ ಎಂದಿಗೂ ವಾಸವಾಗಿರಲಿಲ್ಲ ಮತ್ತು ಆ ಆವರಣದಿಂದ ಯಾವುದೇ NGO ಎಂದೂ ಕಾರ್ಯನಿರ್ವಹಿಸಿಲ್ಲ ಎಂದು ಹೇಳಿದರು. ಮೆಹ್ರೌಲಿ ವಿಳಾಸದಲ್ಲಿದ್ದ ಮನೆಯ ಬಾಗಿಲು ಲಾಕ್ ಆಗಿತ್ತು. ಅಲ್ಲಿ ಮಹಿಳೆಯೊಬ್ಬರು ವಾಸಿಸುತ್ತಿದ್ದಾರೆ ಎಂದು ಹೇಳಿದ ಸೆಕ್ಯುರಿಟಿ ಗಾರ್ಡ್, ಅವರಿಗೆ ತಲುಪಿಸಲು ಒಂದು ಫೋನ್ ನಂಬರ್ ಅನ್ನು ಬರೆದುಕೊಂಡರು.
ಜುನೇಜಾ ಅವರ ಹೆಸರು ಹಳೆಯ ದಿಲ್ಲಿಯ ನಯಾ ಬಜಾರ್ನ ರಾಧೆ ಶ್ಯಾಮ್ ಚೇಂಬರ್ಸ್ ನಲ್ಲಿ ನೋಂದಾಯಿತವಾಗಿರುವ 'ಐಯಾನ್ ಫುಡ್ಸ್ ಪ್ರೈವೇಟ್ ಲಿಮಿಟೆಡ್' ಎಂಬ ಕಂಪೆನಿಯೊಂದರಲ್ಲೂ ಕಾಣಿಸಿಕೊಂಡಿದೆ. ಆದರೆ ಅವರು ಅಲ್ಲೂ ಪತ್ತೆಯಾಗಲಿಲ್ಲ. ಆ ಚೇಂಬರ್ಸ್ನ ಮಾಲೀಕರು, ಜನರು ನಿಯಮಿತವಾಗಿ ಜುನೇಜಾ ಅವರನ್ನು ಹುಡುಕಿಕೊಂಡು ಬರುತ್ತಿರುತ್ತಾರೆ ಎಂದು ಹೇಳಿದ್ದಾರೆ. "ಅವರು ನನ್ನ 25,000 ರೂ. ಹಣವನ್ನೂ ತೆಗೆದುಕೊಂಡು ಓಡಿಹೋಗಿದ್ದಾರೆ. ನನ್ನನ್ನು ಹೊರತುಪಡಿಸಿ, ಕರ್ನಾಲ್ನಿಂದಲೂ ಜನರು ಅವರನ್ನು ಹುಡುಕಿಕೊಂಡು ಬರುತ್ತಾರೆ. ಅವರಿಗೆ ಜುನೇಜಾ 15 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದಾರೆ ಮತ್ತು ಅವರು ಮೊಕದ್ದಮೆಯನ್ನೂ ದಾಖಲಿಸಿದ್ದಾರೆ" ಎಂದು ಅವರು ಆರೋಪಿಸಿದರು.
ಜುನೇಜಾ ಅವರ ಕಾರ್ಪೊರೇಟ್ ದಾಖಲೆಗಳೊಂದಿಗೆ ಸಲ್ಲಿಸಲಾಗಿದ್ದ ವೋಟರ್ ಐಡಿ ಕಾರ್ಡ್, ಮಾಳವೀಯ ನಗರದ ವಸತಿ ವಿಳಾಸವೊಂದಕ್ಕೆ ದಾರಿ ತೋರಿಸಿತು. ಅದರ ಮಾಲೀಕರಾದ ರಾಘವ್ ಶರ್ಮಾ, ಜುನೇಜಾ ಮೂರ್ನಾಲ್ಕು ತಿಂಗಳು ಅಲ್ಲಿ ತಂಗಿದ್ದರು, ಆದರೆ ಬಾಡಿಗೆ ಪಾವತಿಸದೆ ಹೊರಟುಹೋದರು ಎಂದು ಹೇಳಿದರು.
ಕಾಲರ್ ಐಡಿ ಆಪ್ ಆದ ಟ್ರೂಕಾಲರ್ ನಲ್ಲಿ ಜುನೇಜಾ ಹೆಸರಿನಲ್ಲಿದ್ದ ನಂಬರ್ಗೆ ಕರೆ ಮಾಡಿದಾಗ ಮಹಿಳೆಯೊಬ್ಬರು ಉತ್ತರಿಸಿದರು. ಆದರೆ ತಮ್ಮ ಹೆಸರನ್ನು ಹೇಳಲು ನಿರಾಕರಿಸಿದ ಅವರು, ತಾವು ಜುನೇಜಾ ಅವರ ದೂರದ ಸಂಬಂಧಿ ಎಂದು ಹೇಳಿಕೊಂಡರು. ಅಲ್ಲದೆ, ಈ ಮಾಹಿತಿ ಎಲ್ಲಿಂದ ಸಿಕ್ಕಿತು ಎಂದು ಪ್ರಶ್ನಿಸಿದ ಆಕೆ, ಜುನೇಜಾ ಯಾರನ್ನೂ ಭೇಟಿಯಾಗಲು ಬಯಸುವುದಿಲ್ಲ ಎಂದು ಹೇಳಿ, ಈ ವರದಿಯನ್ನು ಕೈಬಿಡುವಂತೆ ಒತ್ತಾಯಿಸಿದರು. ಬಳಿಕ ಅದೇ ನಂಬರ್ ಗೆ ಪ್ರಶ್ನೆಗಳನ್ನು ಕಳುಹಿಸಲಾಯಿತಾದರೂ, ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
►600 ವಿದ್ಯಾರ್ಥಿಗಳಿರುವ ಕಾಲೇಜಿಗೆ 40,000 ರೂ.ಕೋಟಿಯ MOU!
MOU ಪಟ್ಟಿಯಲ್ಲಿರುವ ಇಂತಹ ವಿಶ್ವಾಸಾರ್ಹತೆಯ ಕೊರತೆಗಳು ಅಷ್ಟಕ್ಕೇ ಮುಗಿಯುವುದಿಲ್ಲ.
ಝಾನ್ಸಿಯಲ್ಲಿರುವ 'ಪಂಡಿತ್ ವಾಸುದೇವ್ ತಿವಾರಿ ಸ್ಕಿಲ್ ಯೂನಿವರ್ಸಿಟಿ'ಯ ಹೆಸರಿನಲ್ಲಿ 40,000 ಕೋಟಿ ರೂ.ಹೂಡಿಕೆಯ ಪ್ರಸ್ತಾವನೆಯನ್ನು ಸರ್ಕಾರ ದಾಖಲಿಸಿದೆ. ಆದರೆ ಇದು ಯಾವುದೇ ದೊಡ್ಡ ಅಥವಾ ಸುಪ್ರಸಿದ್ಧ ವಿಶ್ವವಿದ್ಯಾಲಯವಲ್ಲ. ಇದು ಬುಂದೇಲ್ಖಂಡ್ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಒಂದು ಕಾಲೇಜು ಆಗಿದ್ದು, ತನ್ನ ವೆಬ್ಸೈಟ್ ಪ್ರಕಾರ ಒಟ್ಟು ಮೂರು ಕೋರ್ಸ್ಗಳನ್ನು (ಬಿ.ಎಡ್, ಬಿ.ಕಾಮ್ ಮತ್ತು ಬಿ.ಎ) ಮಾತ್ರ ಹೊಂದಿದ್ದು, ಒಟ್ಟು 600 ವಿದ್ಯಾರ್ಥಿಗಳು ಇಲ್ಲಿದ್ದಾರೆ.
2022-23ರ ಆರ್ಥಿಕ ವರ್ಷದವರೆಗಿನ ಅದರ ಇತ್ತೀಚಿನ ಬ್ಯಾಲೆನ್ಸ್ ಶೀಟ್ ಅನ್ನು ಗಮನಿಸಿದರೆ, ಅದರ ಆರ್ಥಿಕ ಸ್ಥಿತಿಯು ಅದರ ಬೃಹತ್ ಮಹತ್ವಾಕಾಂಕ್ಷೆಗೆ ತಕ್ಕದಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬ್ಯಾಂಕ್ ಠೇವಣಿಗಳು, ನಗದು ಮತ್ತು ಸ್ಥಿರ ಆಸ್ತಿಗಳು ಸೇರಿದಂತೆ ಅದರ ಒಟ್ಟು ಆಸ್ತಿಯ ಮೌಲ್ಯ ಸುಮಾರು 4 ಕೋಟಿ ರೂ.ಮಾತ್ರ. ಅದರ ಲಾಭ 23.6 ಲಕ್ಷ ರೂ.ಆಗಿತ್ತು. ಆಶ್ಚರ್ಯವೆಂದರೆ, ಅದು ತನ್ನ ಆಸ್ತಿಗಳ ಪಟ್ಟಿಯಲ್ಲಿ 3,000 ರೂ. ಮೌಲ್ಯದ ಪಾತ್ರೆಗಳನ್ನೂ ಸೇರಿಸಿದೆ. ಇವೆಲ್ಲವನ್ನೂ ನೋಡಿದರೆ, 40,000 ಕೋಟಿ ರೂ.ಯ ಹೂಡಿಕೆಯ ಘೋಷಣೆ ತೀರಾ ಅತಿರೇಕದ ಆಸೆಯಂತೆ ಕಾಣುತ್ತದೆ.
ಇದು 2023ರ ಶೃಂಗಸಭೆಯಲ್ಲಿ ಸಹಿ ಮಾಡಲಾದ ಒಟ್ಟು 19,250 MOUಗಳ ಸಂಪೂರ್ಣ ಆಡಿಟ್ ಅಲ್ಲ. ಹಾಗೆಯೇ, MOU ಇರುವುದರಿಂದಲೇ ಹೂಡಿಕೆ ನಿಜವಾಗಿಯೂ ಕಾರ್ಯಪ್ರವೃತ್ತವಾಗುತ್ತದೆ ಎಂದೂ ಖಾತರಿಯಿಲ್ಲ. ಏಕೆಂದರೆ ವ್ಯಾಖ್ಯಾನದ ಪ್ರಕಾರ, MOU ಎಂದರೆ ಕೇವಲ ಒಂದು 'ಉದ್ದೇಶದ ಅಭಿವ್ಯಕ್ತಿ' (ಅಂದರೆ ಹೂಡಿಕೆ ಮಾಡುವ ಇಚ್ಛೆ) ಅಷ್ಟೇ.
ಇದೇ ಕಾಲೇಜು ಝಾನ್ಸಿಯಲ್ಲಿ 'ಹಜಾರಿ ಸೈಯದ್ ಅಬಾಜ್ ಅಲಿ ಸಹಾ ರಹಮತುಲ್ಲಾ ಸ್ಕಿಲ್ ಯೂನಿವರ್ಸಿಟಿ'ಯನ್ನು ಸ್ಥಾಪಿಸಲು 3,000 ಕೋಟಿ ರೂ.ಯ ಮತ್ತೊಂದು ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಈ MOUಗೆ ಹಣಕಾಸಿನ ನೆರವು ಎಲ್ಲಿಂದ ಬರುತ್ತದೆ ಎಂದು ಕೇಳಿದಾಗ, ಕಾಲೇಜಿನ ಮುಖ್ಯಸ್ಥ ಅಭಿಷೇಕ್ ತಿವಾರಿ, "ನಾವು ಸ್ವಲ್ಪ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಮತ್ತು ಹಣವನ್ನು ಸಂಗ್ರಹಿಸುತ್ತಿದ್ದೇವೆ. ಆ ಹಂತದಲ್ಲಿ ನಮಗೆ ಕೆಲವು ತೊಂದರೆಗಳು ಎದುರಾಗುತ್ತಿವೆ" ಎಂದು ಹೇಳಿದರು.
►ಹಿಂದೂಗಳಿಗಾಗಿ ವ್ಯಾಟಿಕನ್ ನಗರ, ಆದರೆ ಇದೆ ಸರ್ಕಾರದ ಸಹಕಾರದ ಕೊರತೆ
ಸನಾತನ ಧರ್ಮದ ಉದ್ಧಾರಕ್ಕಾಗಿ ಶ್ರಮಿಸುವ NGO ಎಂದು ಸ್ವತಃ ಬಿಂಬಿಸಿಕೊಂಡಿರುವ 'ಸನಾತನ ಧರ್ಮ ಫೌಂಡೇಶನ್' ಹೆಸರಿನಲ್ಲಿ ಮಹೋಬಾ ಮತ್ತು ಚಿತ್ರಕೂಟದಲ್ಲಿ ತಲಾ 20,000 ಕೋಟಿ ರೂ.ಯ ಇನ್ನೂ ಎರಡು MOUಗಳು ದಾಖಲಾಗಿವೆ. 'ಜೈಂಟ್ ಗ್ರೂಪ್ ಆಫ್ ಇಂಡಸ್ಟ್ರೀಸ್'ನ ಸುದೇಶ್ ಅಗರ್ವಾಲ್ ಇದರ ಮುಖ್ಯಸ್ಥರಾಗಿದ್ದು, 2022ರಲ್ಲಿ 5 ಕೋಟಿ ರೂ.ಬಂಡವಾಳದೊಂದಿಗೆ ಇದನ್ನು ಪ್ರಾರಂಭಿಸಲಾಯಿತು.
ಆದರೆ, ಈ ಸಂಸ್ಥೆಯ ಪ್ರಕಾರ, ಚಿತ್ರಕೂಟದಲ್ಲಿ 'ಸನಾತನ ಧರ್ಮ ಪವಿತ್ರ ನಗರ'ವನ್ನು ಸ್ಥಾಪಿಸಲು ಕೇವಲ ಒಂದು MOU ಮಾತ್ರ ಮಾಡಿಕೊಳ್ಳಲಾಗಿದೆ. newslaundry ಸಂಸ್ಥೆಯು ಈ NGO ವೆಬ್ಸೈಟ್ ನಲ್ಲಿ ನೀಡಲಾಗಿದ್ದ ಪ್ರಧಾನ ಕಚೇರಿಯ ನಂಬರ್ಗೆ ಕರೆ ಮಾಡಿದಾಗ, ತಮ್ಮನ್ನು ವೇದ್ ಎಂದು ಪರಿಚಯಿಸಿಕೊಂಡ ಹಾಗೂ ಕಾರ್ಯಾಚರಣೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು, ಚಿತ್ರಕೂಟದಲ್ಲಿ ವ್ಯಾಟಿಕನ್ ಮಾದರಿಯ ಪವಿತ್ರ ನಗರವನ್ನು ಅಭಿವೃದ್ಧಿಪಡಿಸುವ ಯೋಜನೆ ತಮಗಿದೆ ಎಂದು ತಿಳಿಸಿದರು. ಆದರೆ, "ಸರ್ಕಾರದ ಸಹಕಾರದ ಕೊರತೆಯಿಂದಾಗಿ" ಈ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅವರು ಹೇಳಿದರು.
ಈ NGO ವೆಬ್ಸೈಟ್ ಹೀಗೆ ಹೇಳುತ್ತದೆ: "ಈ ಹಂತದಲ್ಲಿ, ಪವಿತ್ರ ನಗರವನ್ನು ನಿರ್ಮಿಸಲು ಎಷ್ಟು ಹಣದ ಅಗತ್ಯವಿದೆ ಎಂದು ನಮಗೆ ತಿಳಿದಿಲ್ಲ. ಆದರೆ ಇದು 20,000 ಕೋಟಿ ರೂ.ಗಿಂತ ಕಡಿಮೆ ಇರಲಾರದು ಎಂದು ಅಂದಾಜಿಸಲಾಗಿದೆ. ದೇಣಿಗೆಗಳು, ಕೊಡುಗೆಗಳು, ಸಾಲಗಳು, ಇಕ್ವಿಟಿ, ಡಿಬೆಂಚರ್ ಗಳು ಇತ್ಯಾದಿಗಳ ಮೂಲಕ ಹಣವನ್ನು ಸಂಗ್ರಹಿಸಲಾಗುವುದು. ಹಣಕಾಸು ಸಂಗ್ರಹಣೆಯ ಎಲ್ಲಾ ಮಾರ್ಗಗಳನ್ನು ಅನ್ವೇಷಿಸಲಾಗುವುದು. ನಮಗೆ ಹಣ ಸಂಗ್ರಹಿಸುವಲ್ಲಿ ಯಾವುದೇ ತೊಂದರೆ ಕಾಣಿಸುತ್ತಿಲ್ಲ."
►ಜಾನ್ವಿಕಾ ಲ್ಯಾಬ್ಸ್, ಹಮ್ಸಫರ್ ಡೀಲರ್ ಮತ್ತು ಆರಂಭಿಕ ಹಂತದಲ್ಲಿವೆ ಎನ್ನಲಾದ ಯೋಜನೆಗಳು
2023ರಲ್ಲಿ 'ಜಾನ್ವಿಕಾ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್' ಎಂಬ ಕಂಪೆನಿಯೊಂದಿಗೆ 553 ಕೋಟಿ ರೂ. ಮೌಲ್ಯದ ಮತ್ತೊಂದು MOUಗೆ ಸಹಿ ಮಾಡಲಾಗಿತ್ತು. ಆದರೆ ಈ ಸಂಸ್ಥೆಯು ಅಂತರ್ಜಾಲದಲ್ಲಾಗಲಿ ಅಥವಾ ಎಂಸಿಎ ದಾಖಲೆಗಳಲ್ಲಾಗಲಿ ಪತ್ತೆಯಾಗಿಲ್ಲ. ಇದೇ ವರ್ಷದ ಫೆಬ್ರವರಿಯಲ್ಲಿ ನಡೆದ ಉತ್ತರ ಪ್ರದೇಶ ಫಾರ್ಮಾ ಕಾನ್ಕ್ಲೇವ್ನಲ್ಲಿ ಸಹಿ ಮಾಡಲಾದ 11 MOUಗಳ ಪಟ್ಟಿಯಲ್ಲೂ ಸರ್ಕಾರ ಇದೇ MOUವನ್ನು ಸೇರಿಸಿತ್ತು.
ಲಕ್ನೋದಲ್ಲಿ 2,400 ಕೋಟಿ ರೂ.ಯ MOUವನ್ನು 2023ರಲ್ಲಿ 'ಹಮ್ಸಫರ್ ಡೀಲರ್ ಪ್ರೈವೇಟ್ ಲಿಮಿಟೆಡ್' ಹೆಸರಿನಲ್ಲಿ ದಾಖಲಿಸಲಾಗಿದೆ. ಈ ಕಂಪೆನಿಯ ಬಹುಪಾಲು ಪಾಲುದಾರರಾದ ನಂದಕಿಶೋರ್ ಚತುರ್ವೇದಿ ಅವರು MOUಗೆ ಸಹಿ ಮಾಡುವಾಗಲೇ ಮನಿ ಲಾಂಡರಿಂಗ್ ಪ್ರಕರಣವನ್ನು ಎದುರಿಸುತ್ತಿದ್ದರು. ಆ ನಂತರ ಅವರು ತಲೆಮರೆಸಿಕೊಂಡಿದ್ದರು. ಈ ಕಂಪೆನಿಯು ಈಗ ತನ್ನ ಹೆಸರನ್ನು 'ಟ್ರೂ-ಲೈವ್ ಹೋಮ್ಸ್ ಪ್ರೈವೇಟ್ ಲಿಮಿಟೆಡ್' ಎಂದು ಬದಲಾಯಿಸಿಕೊಂಡಿದೆ.
►ಆರಂಭಿಕ ಹಂತದಲ್ಲಿವೆ ಎನ್ನಲಾದ ಯೋಜನೆಗಳು
ಮತ್ತೊಂದು ವಾದವೆಂದರೆ, ಕೆಲವು ಯೋಜನೆಗಳು ಈಗಾಗಲೇ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿವೆ ಅಥವಾ ಆರಂಭಿಕ ಹಂತದಲ್ಲಿವೆ ಎಂಬುದಾಗಿದೆ.
ಬರೇಲಿಯಲ್ಲಿ 400 ಕೋಟಿ ರೂ.ಮತ್ತು ಷಾಜಹಾನ್ಪುರದಲ್ಲಿ 300 ಕೋಟಿ ರೂ. ಹೂಡಿಕೆ ಮಾಡಲು 'ರಿಂಕು ಡೈರಿ' ಪ್ರಸ್ತಾಪಿಸಿದೆ ಎಂದು ದಾಖಲಾಗಿದೆ. ಈ ಯೋಜನೆಯು ಈಗಾಗಲೇ ಚಾಲ್ತಿಯಲ್ಲಿದ್ದು, ಹಾಲು, ಚೀಸ್, ಖೋವಾ ಮತ್ತು ಚಿಲ್ಲಿಂಗ್ ಪ್ಲಾಂಟ್ಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ 700 ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ವಾಣಿಜ್ಯ ಉತ್ಪಾದನೆ ಆರಂಭಿಸಿರುವ ಕಂಪೆನಿಗಳ ಪಟ್ಟಿಯಲ್ಲಿ ವಿವರಿಸಲಾಗಿದೆ.
ಆದರೆ, ಷಾಜಹಾನ್ ಪುರದ ಡೈರಿ ಅಧಿಕಾರಿ ಅಭಿಷೇಕ್ ಸಿಂಗ್ ಅವರು newslaundryಗೆ ತಿಳಿಸಿದ ಪ್ರಕಾರ, ಕಂಪೆನಿಯು MOUಗೆ ಸಹಿ ಹಾಕಿದ್ದರೂ ಸಹ, ಅದಕ್ಕೆ ಬ್ಯಾಂಕ್ ಸಾಲ ಮಂಜೂರಾಗದ ಕಾರಣ ಕೆಲಸ ಇನ್ನೂ ಪ್ರಾರಂಭವೇ ಆಗಿಲ್ಲ.
'ಒಬ್ದು ಡಿಜಿಟಲ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು 3,350 ಕೋಟಿ ರೂ. ವೆಚ್ಚದಲ್ಲಿ "ಡಿಜಿಟಲ್ ಡಾಕ್ಟರ್ ಕ್ಲಿನಿಕ್ಸ್" ಯೋಜನೆಯನ್ನು ಸ್ಥಾಪಿಸುವುದಾಗಿ ಮತ್ತು ಅದರಿಂದ 70,000 ಜನರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತದೆ ಎಂದು ವಾಗ್ದಾನ ಮಾಡಿರುವುದು ದಾಖಲಾಗಿದೆ. ಆದರೆ ಈ ಕಂಪೆನಿಯು ನೋಂದಣಿಯಾಗಿದ್ದೇ ಜನವರಿ 2024ರಲ್ಲಿ! ಈ 'ಡಿಜಿಟಲ್ ಡಾಕ್ಟರ್ ಕ್ಲಿನಿಕ್ಸ್' ಉದ್ಯಮವು ಈಗ ವಂಚನೆ ಆರೋಪದ ತನಿಖೆಯ ನೆರಳಿನಲ್ಲಿದೆ ಎಂಬುದನ್ನು newslaundry ಈ ಹಿಂದೆಯೇ ವಿವರವಾಗಿ ವರದಿ ಮಾಡಿತ್ತು.
ಮುಝಾಫರ್ನಗರದ 'ರೇಷು ಅಡ್ವರ್ಟೈಸಿಂಗ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು "ದೀಪಾವಳಿ ಪೂಜಾ ಬಾಕ್ಸ್ಗಳ" ತಯಾರಿಕೆಗಾಗಿ 600 ಕೋಟಿ ರೂ.ಹೂಡಿಕೆ ಮತ್ತು 150 ಉದ್ಯೋಗಗಳ ಸೃಷ್ಟಿಯ MOUಗೆ ಸಹಿ ಹಾಕಿತ್ತು. ಆದರೆ newslaundry ಪರಿಶೀಲಿಸಿದಾಗ, ಅದು ಕೇವಲ ಒಂದು ಸಾರ್ವಜನಿಕ ಸಂಪರ್ಕ ಮತ್ತು ಪ್ರಿಂಟಿಂಗ್ ಏಜೆನ್ಸಿಯಾಗಿದ್ದು, ಅದರ ವಾರ್ಷಿಕ ಆದಾಯ 4.7 ಕೋಟಿ ರೂ.ಯಿಂದ 6.4 ಕೋಟಿ ರೂ. ಮಾತ್ರ ಇರುವುದು ಕಂಡುಬಂದಿದೆ.
ಕಂಪೆನಿಯ ನಿರ್ದೇಶಕ ಸತ್ಯ ಪ್ರಕಾಶ್ ರೇಷು ಅವರು ತಾವು ದೀಪಾವಳಿ ಬಾಕ್ಸ್ ತಯಾರಿಸುವ ಉದ್ಯಮವನ್ನು ಮುಚ್ಚಿರುವುದಾಗಿ ತಿಳಿಸಿದರು. "ನನ್ನ ಆ ವ್ಯವಹಾರ ಯಶಸ್ವಿಯಾಗಲಿಲ್ಲ, ಆದ್ದರಿಂದ ನಾನು ಅದನ್ನು ಮುಚ್ಚಿದೆ" ಎಂದಿದ್ದಾರೆ ಅವರು. ತಮ್ಮ ಹೂಡಿಕೆಯ ಬಗ್ಗೆ ಕೇಳಿದಾಗ, "ಈ ದೇಶದಲ್ಲಿ ಸುಮಾರು ನೂರು ಕೋಟಿ ಜನರು ದೀಪಾವಳಿಯನ್ನು ಆಚರಿಸುವುದರಿಂದ ಇದು ದೊಡ್ಡ ಉದ್ಯಮವಾಗಬಹುದು ಎಂದು ನಾನು ಭಾವಿಸಿದ್ದೆ. ನಾವು ಪ್ರಮುಖ ಸಂತರ ಸಮ್ಮುಖದಲ್ಲಿ ಇದನ್ನು ಪ್ರಾರಂಭಿಸಿದ್ದೆವು, ಆದರೆ ಅದು ವರ್ಕೌಟ್ ಆಗಲಿಲ್ಲ" ಎಂದರು.
ಇಂತಹ ಸಂಸ್ಥೆಗಳೊಂದಿಗಿನ MOUಗಳ ಬಗ್ಗೆ ಮತ್ತು ಪ್ರಸ್ತಾಪಗಳಿಗೆ ಸಹಿ ಹಾಕುವ ಮೊದಲು ಕಂಪೆನಿಯ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಬೇಕೇ ಎಂದು ಕೇಳಿದಾಗ, ಕೇಂದ್ರ ಸರ್ಕಾರದ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್, "ಅದು ಸಾಮಾನ್ಯ ನಿಯಮ ಮತ್ತು ಪದ್ಧತಿ. ಆದರೆ, ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರ ಶೃಂಗಸಭೆಗಳಲ್ಲಿ, ನಿಗದಿತ ಗುರಿಗಳನ್ನು ತಲುಪುವ ಮತ್ತು ಹೂಡಿಕೆಯ ಬೃಹತ್ ಅಂಕಿ-ಅಂಶಗಳನ್ನು ಪ್ರದರ್ಶಿಸುವ ಧಾವಂತದಲ್ಲಿ ಇಂತಹ ಸೂಕ್ತ ಪರಿಶೀಲನೆಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ" ಎಂದರು.
ಹೂಡಿಕೆ ಶೃಂಗಸಭೆಯ ಉಸ್ತುವಾರಿ ಹೊಂದಿರುವ 'ಇನ್ವೆಸ್ಟ್ ಯುಪಿ' ಇಲಾಖೆಯು, "ಒಂದು ಸಂಸ್ಥೆಯ ಪ್ರಸ್ತುತ ಆಸ್ತಿ ಮೂಲ ಅಥವಾ ಹಿಂದಿನ ವಹಿವಾಟು ಮಾತ್ರವೇ ಅದರ ಪ್ರಸ್ತಾವಿತ ಹೂಡಿಕೆ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಿಂಬಿಸುವುದಿಲ್ಲ. ಏಕೆಂದರೆ ಯೋಜನೆಗಳಿಗೆ ಇಕ್ವಿಟಿ, ಸಾಲ, ಸಾಂಸ್ಥಿಕ ಹಣಕಾಸು, ಜಂಟಿ ಉದ್ಯಮಗಳು, ಕಾರ್ಯತಂತ್ರದ ಪಾಲುದಾರಿಕೆಗಳು ಅಥವಾ ಹಂತ-ಹಂತದ ಬಂಡವಾಳ ವೆಚ್ಚಗಳ ಮೂಲಕ ಹಣಕಾಸು ಒದಗಿಸಬಹುದು" ಎಂದು ಹೇಳಿದೆ.
"ಯಾವುದೇ ವ್ಯತ್ಯಾಸಗಳು, ತಪ್ಪು ಮಾಹಿತಿ, ಅನುಷ್ಠಾನಗೊಳಿಸದಿರುವುದು ಅಥವಾ ಪ್ರತಿಕೂಲ ಮಾಹಿತಿ ಗಮನಕ್ಕೆ ಬಂದಾಗಲೆಲ್ಲಾ, ಅನ್ವಯವಾಗುವ ನಿಯಮಗಳ ಪ್ರಕಾರ ವಿಷಯವನ್ನು ಪರಿಶೀಲಿಸಲಾಗುತ್ತದೆ. ಅರ್ಹತೆ ಅಥವಾ ಅನುಸರಣೆಯ ಅಗತ್ಯತೆಗಳನ್ನು ಪೂರೈಸದ ಪ್ರಸ್ತಾಪಗಳು ಯಾವುದೇ ಪ್ರೋತ್ಸಾಹಕಗಳು ಅಥವಾ ಮುಂದಿನ ಪ್ರಯೋಜನಗಳಿಗೆ ಅರ್ಹತೆ ಪಡೆಯುವುದಿಲ್ಲ" ಎಂದು ಅದು ಹೇಳಿದೆ.
ಆದರೂ, ಆರ್ಜಿ ಸ್ಟ್ರಾಟಜೀಸ್ ಸೇರಿದಂತೆ ಈ ವರದಿಯಲ್ಲಿ ಉಲ್ಲೇಖಿಸಲಾದ ಸಂಸ್ಥೆಗಳ ಕುರಿತಾದ newslaundryಯ ನಿರ್ದಿಷ್ಟ ಪ್ರಶ್ನೆಗಳಿಗೆ ಅದು ಪ್ರತಿಕ್ರಿಯಿಸಲಿಲ್ಲ.
newslaundry ಸಂಸ್ಥೆಯು ಈ ವರದಿಯಲ್ಲಿ ಹೆಸರಿಸಲಾದ ಹಲವಾರು ಇತರ ಕಂಪೆನಿಗಳು ಮತ್ತು ವ್ಯಕ್ತಿಗಳಿಗೆ ಹಾಗೂ ಉತ್ತರ ಪ್ರದೇಶದ ಕೈಗಾರಿಕಾ ಅಭಿವೃದ್ಧಿ ಸಚಿವ ನಂದ್ ಗೋಪಾಲ್ ಗುಪ್ತಾ 'ನಂದಿ' ಅವರಿಗೆ ಪ್ರಶ್ನೆಗಳನ್ನು ಕಳುಹಿಸಿದೆ. ಇಲ್ಲಿಯವರೆಗೆ ಪ್ರತಿಕ್ರಿಯೆ ಲಭಿಸಿಲ್ಲ ಎಂದು ವರದಿ ಉಲ್ಲೇಖಿಸಿದೆ.
ಸೌಜನ್ಯ: newslaundry.com