×
Ad

ಪಾಸ್‌ಪೋರ್ಟ್ ಶುಲ್ಕ, ವಾಣಿಜ್ಯ ಎಲ್‌ಪಿಜಿ ದರ, ಆಧಾರ್ ಅಪ್‌ಡೇಟ್, ITR ಗಡುವು ಮತ್ತು ಇನ್ನಷ್ಟು: ಜುಲೈ 1 ರಿಂದ ಏನೆಲ್ಲ ಬದಲಾಗುತ್ತಿದೆ?

Update: 2026-07-01 14:59 IST

ಸಾಂದರ್ಭಿಕ ಚಿತ್ರ (PTI)

ಜುಲೈ 1 ರಿಂದ ಹಲವು ಪ್ರಮುಖ ಆರ್ಥಿಕ ಮತ್ತು ನೀತಿ ಬದಲಾವಣೆಗಳು ಜಾರಿಗೆ ಬಂದಿದ್ದು, ಇವು ಕುಟುಂಬಗಳು, ಉದ್ಯಮಗಳು, ತೆರಿಗೆದಾರರು ಮತ್ತು ಬ್ಯಾಂಕಿಂಗ್ ಗ್ರಾಹಕರ ಮೇಲೆ ಪ್ರಭಾವ ಬೀರಲಿವೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಅಗ್ಗವಾಗಿದ್ದು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ವಾಣಿಜ್ಯ ಬಳಕೆದಾರರಿಗೆ ದೊಡ್ಡ ರಿಲೀಫ್ ನೀಡಿದೆ.

ಗ್ರಾಮೀಣ ಕೂಲಿ ಉದ್ಯೋಗವನ್ನು ವಿಸ್ತರಿಸುವ ಹೊಸ ಕಾಯ್ದೆಯೂ ಜಾರಿಗೆ ಬಂದಿದ್ದು, ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳು ಮತ್ತು ವಿಮಾನ ನಿಲ್ದಾಣದ ಲೌಂಜ್ ಪ್ರವೇಶಕ್ಕೆ ಹೊಸ ನಿಯಮಗಳನ್ನು ಪರಿಚಯಿಸಿವೆ.

ಆಧಾರ್ ಬಳಕೆದಾರರು ಈಗ ನಿಯಮಿತ ಅವಧಿಯವರೆಗೆ ತಮ್ಮ ನೋಂದಾಯಿತ ಇಮೇಲ್ ವಿಳಾಸವನ್ನು ಉಚಿತವಾಗಿ ಅಪ್‌ಡೇಟ್ ಮಾಡಿಕೊಳ್ಳಬಹುದು. ಇದರೊಂದಿಗೆ, ಹಣಕಾಸು ಉತ್ಪನ್ನಗಳ ಅನುಚಿತ ಮಾರಾಟವನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಕಟ್ಟುನಿಟ್ಟಾದ ಗ್ರಾಹಕ ಸಂರಕ್ಷಣಾ ನಿಯಮಗಳನ್ನು ಜಾರಿಗೆ ತಂದಿದೆ. ಮತ್ತೊಂದು ಪ್ರಮುಖ ಕ್ರಮದಲ್ಲಿ, ದೇಶದ ಇಂಧನ ಪೂರೈಕೆ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟದ ಮೇಲಿದ್ದ ತಾತ್ಕಾಲಿಕ ನಿರ್ಬಂಧಗಳನ್ನು ತೆಗೆದುಹಾಕಿದೆ.

ವಿಬಿ-ಗ್ರಾಮ್ ಜಿ ಕಾಯ್ದೆ: 125 ದಿನಗಳ ಗ್ರಾಮೀಣ ಉದ್ಯೋಗ ಖಾತರಿ ಜಾರಿ:

ಕೇಂದ್ರ ಸರ್ಕಾರವು ಈ ಹಿಂದಿನ ಗ್ರಾಮೀಣ ಉದ್ಯೋಗ ಚೌಕಟ್ಟಿನ ಬದಲಾಗಿ 'ವಿಕಸಿತ್ ಭಾರತ್ - ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಕಾಯ್ದೆ, 2025' (VB-GRAM G Act) ಅನ್ನು ಜಾರಿಗೆ ತಂದಿದ್ದು, ಇದು ಇಂದಿನಿಂದ ಕಾರ್ಯರೂಪಕ್ಕೆ ಬಂದಿದೆ. ಈ ಹೊಸ ಕಾನೂನು ಅರ್ಹ ಗ್ರಾಮೀಣ ಕುಟುಂಬಗಳಿಗೆ ಒಂದು ಆರ್ಥಿಕ ವರ್ಷದಲ್ಲಿ ನೀಡಲಾಗುವ ಉದ್ಯೋಗ ಖಾತರಿ ಅವಧಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಯನ್ನು ಯಾವುದೇ ಅಡೆತಡೆಯಿಲ್ಲದೆ ಅನುಷ್ಠಾನಗೊಳಿಸಲು ನೆರವಾಗುವಂತೆ ಸರ್ಕಾರವು ಆರಂಭಿಕ ಹಂಚಿಕೆಯಾಗಿ 95,692.31 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಿದೆ.

ಪ್ರಸ್ತುತ ಇ-ಕೆವೈಸಿ ಪರಿಶೀಲನೆ ಪೂರ್ಣಗೊಂಡಿರುವ ಜಾಬ್ ಕಾರ್ಡ್‌ಗಳನ್ನು ಹೊಂದಿರುವ ಕಾರ್ಮಿಕರು, ಹೊಸ ಯೋಜನೆಯಡಿ ಹೊಸ ಉದ್ಯೋಗ ಕಾರ್ಡ್‌ಗಳನ್ನು ನೀಡುವವರೆಗೆ ಅವುಗಳನ್ನೇ ಬಳಸುವುದನ್ನು ಮುಂದುವರಿಸಬಹುದು.

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಗಡುವು 

2025-26ರ ಆರ್ಥಿಕ ವರ್ಷಕ್ಕೆ (ಮೌಲ್ಯಮಾಪನ ವರ್ಷ 2026-27) ಐಟಿಆರ್-1 ಅಥವಾ ಐಟಿಆರ್-2 ಸಲ್ಲಿಸಬೇಕಾದ ವ್ಯಕ್ತಿಗಳು ಜುಲೈ 31, 2026 ರೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನಿಗದಿತ ಅವಧಿಗಿಂತ ತಡವಾಗಿ ತೆರಿಗೆ ಪಾವತಿಸಿದರೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ. ಅಲ್ಲದೆ, ಇದು ಅರ್ಹ ತೆರಿಗೆದಾರರಿಗೆ ಸಿಗುವ ತೆರಿಗೆ ಸಂಬಂಧಿತ ಸೌಲಭ್ಯಗಳನ್ನು ಸೀಮಿತಗೊಳಿಸುತ್ತದೆ ಮತ್ತು ಕೆಲವು ನಷ್ಟಗಳನ್ನು ಮುಂದಿನ ಮೌಲ್ಯಮಾಪನ ವರ್ಷಗಳಿಗೆ ಕೊಂಡೊಯ್ಯುವ ಅವಕಾಶದ ಮೇಲೂ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಐಟಿಆರ್-3 ಮತ್ತು ಐಟಿಆರ್-4 ಸಲ್ಲಿಸುವ ಕೊನೆಯ ದಿನಾಂಕವನ್ನು ಒಂದು ತಿಂಗಳು ಮುಂದೂಡಲಾಗಿದ್ದು,2026 ಆಗಸ್ಟ್ 31ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಫಾರ್ಮ್‌ಗಳನ್ನು ಸಾಮಾನ್ಯವಾಗಿ ಉದ್ಯಮಗಳು, ವೃತ್ತಿಪರರು, ಪಾಲುದಾರಿಕೆ ಸಂಸ್ಥೆಗಳು, ಚಾರಿಟಬಲ್ ಟ್ರಸ್ಟ್‌ಗಳು ಮತ್ತು ಇತರ ಕೆಲವು ತೆರಿಗೆದಾರರು ಬಳಸುತ್ತಾರೆ.

ಆಧಾರ್‌ನಲ್ಲಿ ಉಚಿತ ಇಮೇಲ್ ಅಪ್‌ಡೇಟ್ ಸೌಲಭ್ಯ

ತಮ್ಮ ಆಧಾರ್‌ಗೆ ಇಮೇಲ್ ವಿಳಾಸವನ್ನು ಸೇರಿಸಲು ಅಥವಾ ಬದಲಾಯಿಸಲು ಬಯಸುವ ಸಾರ್ವಜನಿಕರು ಈಗ ಆಧಾರ್ ಮೊಬೈಲ್ ಆಪ್ ಮೂಲಕ ಯಾವುದೇ ಶುಲ್ಕವಿಲ್ಲದೆ ಇದನ್ನು ಮಾಡಬಹುದು. ಯುಐಡಿಎಐ ಈ ಸೇವೆಗಾಗಿ ಇದ್ದ 75 ರೂಪಾಯಿಗಳ ಶುಲ್ಕವನ್ನು ಈ ವರ್ಷದ ಕೊನೆಯವರೆಗೆ ಮನ್ನಾ ಮಾಡಿದ್ದು, ಬಳಕೆದಾರರು ತಮ್ಮ ಆಧಾರ್ ವಿವರಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಅಪ್‌ಡೇಟ್ ಮಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ.

ಕ್ರೆಡಿಟ್ ಕಾರ್ಡ್ ಸೌಲಭ್ಯಗಳ ಪರಿಷ್ಕರಣೆ

ಆಯ್ದ ಫೋನ್‌ಪೇ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರ ರಿವಾರ್ಡ್ ಪಾಯಿಂಟ್‌ಗಳ ಗಳಿಕೆಯಲ್ಲಿ ಕೆಲವು ಬದಲಾವಣೆಗಳಾಗಲಿವೆ. ಪರಿಷ್ಕೃತ ನಿಯಮದ ಪ್ರಕಾರ ರಿವಾರ್ಡ್ ಪಾಯಿಂಟ್‌ಗಳ ಸಂಗ್ರಹಣೆಗೆ ಮಿತಿಗಳನ್ನು ಹೇರಲಾಗಿದ್ದು, ಇನ್ನು ಕೆಲವು ನಿರ್ದಿಷ್ಟ ವಹಿವಾಟುಗಳನ್ನು ರಿವಾರ್ಡ್ ಪಾಯಿಂಟ್ ಗಳಿಕೆಯಿಂದ ಹೊರಗಿಡಲಾಗಿದೆ. ಇದರೊಂದಿಗೆ, ಎಚ್‌ಡಿಎಫ್‌ಸಿ ಬ್ಯಾಂಕ್, ಉಚಿತ ದೇಶೀಯ ವಿಮಾನ ನಿಲ್ದಾಣದ ಲೌಂಜ್ ಪ್ರವೇಶವನ್ನು ಗ್ರಾಹಕರ ಖರ್ಚಿನ ಮಿತಿಗೆ ಲಿಂಕ್ ಮಾಡಿದೆ. ಕಾರ್ಡ್‌ದಾರರು ಮುಂದಿನ ತ್ರೈಮಾಸಿಕದಲ್ಲಿ ಮೂರು ಉಚಿತ ಲೌಂಜ್ ಭೇಟಿಗಳ ಸೌಲಭ್ಯವನ್ನು ಪಡೆಯಲು, ಹಿಂದಿನ ತ್ರೈಮಾಸಿಕದಲ್ಲಿ ಕನಿಷ್ಠ 60,000 ರೂಪಾಯಿಗಳನ್ನು ಖರ್ಚು ಮಾಡಿರಬೇಕಾಗುತ್ತದೆ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಅಗ್ಗ

ತೈಲ ಮಾರಾಟ ಕಂಪನಿಗಳು ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 183.50 ರೂಪಾಯಿಗಳಷ್ಟು ಕಡಿತಗೊಳಿಸಿದ ನಂತರ, ವಾಣಿಜ್ಯ ಅಡುಗೆ ಅನಿಲ ಬಳಸುವ ಉದ್ಯಮಗಳ ನಿರ್ವಹಣಾ ವೆಚ್ಚ ಕಡಿಮೆಯಾಗಿದೆ. ಈ ಬೆಲೆ ಪರಿಷ್ಕರಣೆಯ ನಂತರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 2,930 ರೂಪಾಯಿಗಳಾಗಿದ್ದರೆ, 5 ಕೆಜಿ ಮುಕ್ತ ವ್ಯಾಪಾರ ಎಲ್‌ಪಿಜಿ ಸಿಲಿಂಡರ್ ಬೆಲೆ 13 ರೂಪಾಯಿ ಇಳಿಕೆಯಾಗಿ ಈಗ 808.50 ರೂಪಾಯಿಗಳಾಗಿದೆ. ಈ ಬೆಲೆ ಪರಿಷ್ಕರಣೆಯು ಕೇವಲ ವಾಣಿಜ್ಯ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯಿಸಲಿದ್ದು, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಪಾಸ್‌ಪೋರ್ಟ್ ಸೇವೆಗಳ ಶುಲ್ಕ ದುಬಾರಿ

ಜುಲೈ 1 ರಿಂದ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುವವರು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸರ್ಕಾರವು ಪಾಸ್‌ಪೋರ್ಟ್ ಸಂಬಂಧಿತ ಸೇವೆಗಳ ಶುಲ್ಕ ರಚನೆಯನ್ನು ಪರಿಷ್ಕರಿಸಿರುವುದೇ ಇದಕ್ಕೆ ಕಾರಣವಾಗಿದೆ. ಈ ನವೀಕೃತ ದರಗಳು ಭಾರತದೊಳಗೆ ಸಲ್ಲಿಸಲಾಗುವ ಸಾಮಾನ್ಯ ಮತ್ತು ತತ್ಕಾಲ್ ಅರ್ಜಿಗಳಿಗೂ ಹಾಗೂ ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಮೂಲಕ ಸಲ್ಲಿಸುವ ಅರ್ಜಿಗಳಿಗೂ ಅನ್ವಯಿಸುತ್ತವೆ. ಜುಲೈ 1 ರಿಂದ ಪಾಸ್‌ಪೋರ್ಟ್ ಅರ್ಜಿ ಶುಲ್ಕವನ್ನು ಹೆಚ್ಚಿಸಲಾಗಿದ್ದು, ಹೊಸದಾಗಿ ಅರ್ಜಿ ಸಲ್ಲಿಸುವುದು ಮತ್ತು ನವೀಕರಣ ಮಾಡುವುದು ಕೂಡಾ ದುಬಾರಿಯಾಗಲಿವೆ. ವಯಸ್ಕರಿಗೆ, ಸಾಮಾನ್ಯ ಯೋಜನೆಯಡಿ 36 ಪುಟಗಳ ಪಾಸ್‌ಪೋರ್ಟ್ ಶುಲ್ಕವನ್ನು 1,500 ರೂಪಾಯಿಗಳಿಂದ 2,500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ, ಹಾಗೆಯೇ 60 ಪುಟಗಳ ಪಾಸ್‌ಪೋರ್ಟ್ ಶುಲ್ಕವು 2,000 ರೂಪಾಯಿಗಳಿಂದ 3,500 ರೂಪಾಯಿಗಳಿಗೆ ಏರಿಕೆಯಾಗಿದೆ.

ತತ್ಕಾಲ್ ಯೋಜನೆಯಡಿ, 36 ಪುಟಗಳ ಪಾಸ್‌ಪೋರ್ಟ್ ಶುಲ್ಕವನ್ನು 3,500 ರೂಪಾಯಿಗಳಿಂದ 5,000 ರೂಪಾಯಿಗಳಿಗೆ ಹೆಚ್ಚಿಸಲಾಗಿದ್ದರೆ, 60 ಪುಟಗಳ ಪಾಸ್‌ಪೋರ್ಟ್ ಬಯಸುವ ಅರ್ಜಿದಾರರು ಈಗ 4,000 ರೂಪಾಯಿಗಳ ಬದಲಾಗಿ 6,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಬ್ಯಾಂಕುಗಳಿಗೆ ಕಟ್ಟುನಿಟ್ಟಾದ ಗ್ರಾಹಕ ಸಂರಕ್ಷಣಾ ನಿಯಮಗಳು

ಭಾರತೀಯ ರಿಸರ್ವ್ ಬ್ಯಾಂಕ್ ಪರಿಚಯಿಸಿರುವ ಹೊಸ ನಿಯಂತ್ರಣ ಚೌಕಟ್ಟು, ಹಣಕಾಸು ಉತ್ಪನ್ನಗಳನ್ನು ಮಾರಾಟ ಮಾಡುವಾಗ ಬ್ಯಾಂಕುಗಳನ್ನು ಹೆಚ್ಚು ಜವಾಬ್ದಾರರನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಈ ನಿಯಮಗಳ ಪ್ರಕಾರ, ಬ್ಯಾಂಕುಗಳು ಗ್ರಾಹಕರಿಗೆ ಅವರ ಹಣಕಾಸಿನ ಅಗತ್ಯಗಳಿಗೆ ಸೂಕ್ತವಾದ ಉತ್ಪನ್ನಗಳನ್ನೇ ನೀಡುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಯಾವುದೇ ಉತ್ಪನ್ನವನ್ನು ತಪ್ಪು ಮಾಹಿತಿ ನೀಡಿ ಅಥವಾ ಹಾದಿತಪ್ಪಿಸುವ ಸಲಹೆಗಳ ಮೂಲಕ ಮಾರಾಟ ಮಾಡಿರುವುದು ಕಂಡುಬಂದಲ್ಲಿ, ಅದರಿಂದ ತೊಂದರೆಗೊಳಗಾದ ಗ್ರಾಹಕರು ಹಣದ ಮರುಪಾವತಿ ಮತ್ತು ಆದ ಆರ್ಥಿಕ ನಷ್ಟಕ್ಕೆ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಇಂಧನ ಮಾರಾಟದ ಮೇಲಿದ್ದ ನಿರ್ಬಂಧಗಳ ತೆರವು

ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನತೆಯಿಂದಾಗಿ ಇತ್ತೀಚೆಗೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿದ್ದ ಅಡಚಣೆಯ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ಹೇರಲಾಗಿದ್ದ ತಾತ್ಕಾಲಿಕ ನಿಯಂತ್ರಣಗಳನ್ನು ಸರ್ಕಾರವು ಕೊನೆಗೊಳಿಸಿದೆ. ಸಾರಾಸಗಟು ಖರೀದಿ, ದಾಸ್ತಾನು ಮತ್ತು ಇಂಧನದ ದುರ್ಬಳಕೆಯನ್ನು ತಡೆಯಲು ಈ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರಲ್ಲಿ ಚಿಲ್ಲರೆ ಪಂಪ್‌ಗಳಲ್ಲಿ ಡೀಸೆಲ್ ಖರೀದಿಗೆ ದಿನಕ್ಕೆ 200 ಲೀಟರ್‌ಗಳ ಮಿತಿ ಮತ್ತು ಕೈಗಾರಿಕಾ ಗ್ರಾಹಕರಿಗೆ ಪ್ರತ್ಯೇಕ ಖರೀದಿ ವ್ಯವಸ್ಥೆಗಳು ಸೇರಿದ್ದವು. ಇಂಧನ ಲಭ್ಯತೆಯು ಸಹಜ ಸ್ಥಿತಿಗೆ ಮರಳಿರುವುದರಿಂದ, ಕೇಂದ್ರ ಸರ್ಕಾರವು ಜೂನ್ 29 ರ ಪತ್ರಿಕಾ ಪ್ರಕಟಣೆಯ ಪ್ರಕಾರ, ಜುಲೈ 1 ರಿಂದ ಈ ಕ್ರಮಗಳನ್ನು ಹಿಂಪಡೆದಿದ್ದು, ದೇಶಾದ್ಯಂತ ಸಾಮಾನ್ಯ ಮಾರಾಟವನ್ನು ಮರುಸ್ಥಾಪಿಸಿದೆ.

ಸಿಸ್ಟಮ್ ಅಪ್‌ಗ್ರೇಡ್ ನಂತರ ಇಪಿಎಫ್‌ಒ ಆನ್‌ಲೈನ್ ಸೇವೆ ಪುನರಾರಂಭ

ನೌಕರರ ಭವಿಷ್ಯ ನಿಧಿ ಸಂಸ್ಥೆಯು (EPFO) ಜೂನ್ 26 ಮತ್ತು ಜೂನ್ 30 ರ ನಡುವೆ ನಡೆಸಿದ ನಿಗದಿತ ಸಿಸ್ಟಮ್ ಅಪ್‌ಗ್ರೇಡ್ ಮತ್ತು ಡೇಟಾಬೇಸ್ ಕ್ರೋಡೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ತನ್ನ ಆನ್‌ಲೈನ್ ಸೇವೆಗಳನ್ನು ಪುನರಾರಂಭಿಸಲು ಸಜ್ಜಾಗಿದೆ. ಈ ಐದು ದಿನಗಳ ನಿರ್ವಹಣಾ ಅವಧಿಯಲ್ಲಿ, ಇಪಿಎಫ್‌ಒನ ಸದಸ್ಯರ ಮತ್ತು ಉದ್ಯೋಗದಾತರ ಪೋರ್ಟಲ್‌ಗಳು ಸೇರಿದಂತೆ ಹಲವು ಆನ್‌ಲೈನ್ ಸೇವೆಗಳು ಲಭ್ಯವಿರಲಿಲ್ಲ. ಸಿಸ್ಟಮ್ ಕಾರ್ಯಕ್ಷಮತೆಯನ್ನು ಸುಧಾರಿಸಲು, ಭದ್ರತೆಯನ್ನು ಬಲಪಡಿಸಲು ಮತ್ತು ಒಟ್ಟಾರೆ ಸೇವೆ ಒದಗಿಸುವಿಕೆಯನ್ನು ಉತ್ತಮಗೊಳಿಸಲು ಈ ಅಪ್‌ಗ್ರೇಡ್ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ನಿರ್ವಹಣಾ ಚಟುವಟಿಕೆಗಳು ಮುಗಿದ ನಂತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ರಾತ್ರಿ 23.59 ಗಂಟೆಗೆ ಕಾರ್ಯನಿರ್ವಹಣೆಯನ್ನು ಪುನರಾರಂಭಿಸಲಿವೆ.

ಕೃಪೆ: Times of India

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News