ಆಹಾರ ಧಾನ್ಯಗಳ ಖರೀದಿ: 41,186 ರೈತರಿಗೆ ಇನ್ನೂ 384.23 ಕೋಟಿ ರೂ. ಪಾವತಿ ಬಾಕಿ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ 2024-25ನೇ ಸಾಲಿನಲ್ಲಿ ಆಹಾರ ಧಾನ್ಯಗಳನ್ನು ಖರೀದಿ ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರವು 41,186 ರೈತರಿಗೆ ಇನ್ನೂ 384.23 ಕೋಟಿ ರೂ.ಗಳನ್ನು ಪಾವತಿಸಲು ಬಾಕಿ ಉಳಿಸಿಕೊಂಡಿದೆ.
ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಪರಿಶೀಲಿಸಲು ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿಯು 2025ರ ಜೂನ್ 5ರಂದು ನಡೆಸಿದ್ದ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಸಭೆಯ ನಡವಳಿಗಳು ‘the-file.in’ಗೆ ಲಭ್ಯವಾಗಿದೆ.
ಸರಕಾರ ಹಿಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ರೈತರಿಂದ ಭತ್ತ, ರಾಗಿ ಮತ್ತು ಬಿಳಿ ಜೋಳ ಖರೀದಿ ಮಾಡಿತ್ತು. ಕನಿಷ್ಠ ಬೆಂಬಲ ಯೋಜನೆಯಡಿಯಲ್ಲಿ 13,175 ರೈತರು ನೋಂದಣಿಯಾಗಿದ್ದರು. ಈ ಪೈಕಿ 1,079 ರೈತರಷ್ಟೇ ಆಹಾರ ಧಾನ್ಯಗಳನ್ನು ನೀಡಿದ್ದರು. ಈ ರೈತರಿಂದ 70,463.50 ಕ್ವಿಂಟಾಲ್ ಪ್ರಮಾಣದಷ್ಟು ಆಹಾರ ಧಾನ್ಯವನ್ನು ಖರೀದಿಸಿತ್ತು. ಇದರ ಪ್ರಮಾಣ 23.75 ಕೋಟಿ ರೂಪಾಯಿಯಷ್ಟಿತ್ತು ಎಂಬುದು ನಡಾವಳಿಯಿಂದ ತಿಳಿದು ಬಂದಿದೆ.
2,300 ಕ್ವಿಂಟಾಲ್ ಭತ್ತ, 3,371 ಕ್ವಿಂಟಾಲ್ ಬಿಳಿ ಜೋಳ ಖರೀದಿಸಲಾಗಿತ್ತು. ಈ ಪೈಕಿ ಕೇವಲ 5 ಮಂದಿ ರೈತರು ನೋಂದಣಿಯಾಗಿದ್ದರು. ಬಿಳಿ ಜೋಳ ಮಾರಾಟ ಮಾಡಲು 13,175 ರೈತರು ನೋಂದಣಿಯಾಗಿದ್ದರು.
ಮುಂಗಾರು ಹಂಗಾಮಿನಲ್ಲಿ 47,78,328.50 ಕ್ವಿಂಟಾಲ್ನಷ್ಟು ರಾಗಿ, ಬಿಳಿ ಜೋಳ ಮತ್ತು ಭತ್ತವನ್ನು 2,02,376 ರೈತರಿಂದ ಖರೀದಿಸಿತ್ತು. ಈ ಆಹಾರ ಧಾನ್ಯದ ಮೌಲ್ಯ ರೂ.1,622.11 ಕೋಟಿಯಷ್ಟಿತ್ತು. ಈ ಪೈಕಿ 1,61,190 ರೈತರಿಗೆ ಡಿಬಿಟಿ ಮೂಲಕ ರೂ.1,237.88 ಕೋಟಿ ಪಾವತಿ ಮಾಡಲಾಗಿತ್ತು. ಇನ್ನೂ 41,186 ರೈತರಿಗೆ ರೂ.384.23 ಕೋಟಿಯಷ್ಟು ಡಿಬಿಟಿ ಮೂಲಕ ಪಾವತಿ ಮಾಡಲು ಬಾಕಿ ಇರುವುದು ನಡಾವಳಿಯಿಂದ ಗೊತ್ತಾಗಿದೆ.
37,35,897 ಕ್ವಿಂಟಾಲ್ ಪ್ರಮಾಣದಲ್ಲಿ ರಾಗಿಯನ್ನು 1,87,241 ರೈತರು ನೀಡಿದ್ದರು. ಇದರ ಮೌಲ್ಯ ರೂ. 1,271.24 ಕೋಟಿಯಷ್ಟಿತ್ತು. ಈ ಪೈಕಿ 1,52,258 ರೈತರಿಗೆ 1,021.76 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಪಾವತಿಸಲಾಗಿತ್ತು. 18,87,399.50 ಕ್ವಿಂಟಾಲ್ ಬಿಳಿ ಜೋಳವನ್ನು 14,976 ರೈತರು ನೀಡಿದ್ದರು. ಇದರ ಮೌಲ್ಯ ರೂ. 349.71 ಕೋಟಿಯಷ್ಟಿತ್ತು. 8,776 ರೈತರಿಗೆ ರೂ.214.98 ಕೋಟಿ ಪಾವತಿ ಮಾಡಲಾಗಿತ್ತು. 5,031 ಕ್ವಿಂಟಾಲ್ ಭತ್ತವನ್ನು 2,02,376 ರೈತರಿಂದ ಖರೀದಿಸಲಾಗಿತ್ತು. ಇದರ ಮೌಲ್ಯ ರೂ.1,622.11 ಕೋಟಿಯಷ್ಟಿತ್ತು. ಈ ಪೈಕಿ 1,61,190 ರೈತರಿಗೆ 1,237.88 ಕೋಟಿ ರೂ.ಗಳನ್ನು ಪಾವತಿಸಲಾಗಿತ್ತು.
ಏನಿದು ಕನಿಷ್ಟ ಬೆಂಬಲ ಯೋಜನೆ?: ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಎಂಬುದು ಕೃಷಿ ಉತ್ಪನ್ನದ ಬೆಲೆಯಲ್ಲಿ ಯಾವುದೇ ತೀವ್ರ ತರಹದ ಕುಸಿತ ಉಂಟಾದಾಗ ಕೃಷಿ ಉತ್ಪಾದಕರ ಸಹಾಯಕ್ಕೆ ಧಾವಿಸುವ ಹಣಕಾಸಿನ ನೆರವಿನ ರೂಪ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ ಕೆಲವು ಬೆಳೆಗಳಿಗೆ ಬಿತ್ತನೆ ಕಾಲದ ಆರಂಭದಲ್ಲಿ ಭಾರತ ಸರಕಾರವು ಕನಿಷ್ಠ ಬೆಂಬಲ ಬೆಲೆಗಳನ್ನು ಘೋಷಿಸುತ್ತದೆ. ಉತ್ಪಾದನೆ ಭಾರಿ ಹೆಚ್ಚಳವಾದ ವರ್ಷಗಳಲ್ಲಿ ಅತಿಯಾದ ಬೆಲೆ ಕುಸಿತವಾದ ಸಂದರ್ಭಗಳಲ್ಲಿ ಉತ್ಪಾದಕ ರೈತರನ್ನು ರಕ್ಷಿಸುವ ಉದ್ದೇಶದಿಂದ ಕನಿಷ್ಟ ಬೆಂಬಲ ಬೆಲೆಯನ್ನು ಭಾರತ ಸರಕಾರ ನಿಗದಿಪಡಿಸುತ್ತದೆ. ಕನಿಷ್ಠ ಬೆಂಬಲ ಬೆಲೆಗಳು ಸರಕಾರದಿಂದ ಕೃಷಿ ಉತ್ಪನ್ನಗಳಿಗೆ ಮಾರಾಟದ ಖಾತರಿ ನೀಡುತ್ತದೆ. ಕೃಷಿ ಉತ್ಪನ್ನಗಳ ಮಾರಾಟದ ಸಂದರ್ಭಗಳಲ್ಲಿ ಎದುರಾಗುವ ಅಡೆತಡೆಗಳನ್ನು ಕನಿಷ್ಠ ಬೆಂಬಲ ಬೆಲೆ ನಿವಾರಣೆ ಮಾಡಲಿದೆ. ಒಂದೊಮ್ಮೆ ಭಾರೀ ಬೆಳೆ ಉತ್ಪಾದನೆಯಾಗಿ ಸರಕುಗಳ ಮಾರುಕಟ್ಟೆ ಬೆಲೆ ಘೋಷಿತ ಕನಿಷ್ಠ ಬೆಲೆಗಿಂತ ಕಡಿಮೆಯಾಗುವ ಸಂದರ್ಭಗಳಲ್ಲಿರೈತರು ನೀಡುವ ಸಂಪೂರ್ಣ ಪ್ರಮಾಣದ ಬೆಳೆಯನ್ನು ಘೋಷಿಸಿದ ಕನಿಷ್ಠ ಬೆಲೆಗೆ ಸರಕಾರಿ ಸಂಸ್ಥೆಗಳೇ ನೇರವಾಗಿ ಖರೀದಿಸುತ್ತವೆ.