ಸರ್ವಪಕ್ಷ ಸಭೆಯಲ್ಲೂ ಸುಳ್ಳು ಹೇಳಿತೇ ಮೋದಿ ಸರಕಾರ?
PHOTO : PTI
ಹೊಸದಿಲ್ಲಿ: ಜಮ್ಮುಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ 26 ಪ್ರವಾಸಿಗಳ ಕಗ್ಗೊಲೆಗೆ ಕಾರಣವಾದ್ದ ಭದ್ರತಾ ಲೋಪಗಳ ಕುರಿತು ಪ್ರಶ್ನೆಗಳು ಹೆಚ್ಚುತ್ತಿದ್ದಂತೆ ಕೇಂದ್ರ ಸರಕಾರ ಮತ್ತು ಉನ್ನತ ಅಧಿಕಾರಿಗಳು ಸಂವಹನ ಕೊರತೆಯನ್ನು ದೂಷಿಸುತ್ತಿದ್ದಾರೆ. ಎ.24ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಬೈಸರನ್ ಕಣಿವೆ ಮಾರ್ಗವನ್ನು ಪ್ರವಾಸಿಗಳಿಗಾಗಿ ಎ.20ರಂದು ತೆರೆಯಲಾಗಿದ್ದು ತಮಗೆ ತಿಳಿದಿರಲಿಲ್ಲ ಎಂದು ಹಿರಿಯ ಭದ್ರತಾ ಅಧಿಕಾರಿಗಳು ಹೇಳಿದ್ದಾರೆನ್ನಲಾಗಿದೆ. ಈ ಭದ್ರತಾ ಲೋಪವು ಪ್ರದೇಶದಲ್ಲಿ ಸೇನೆಯ ಅನುಪಸ್ಥಿತಿಯನ್ನು ವಿವರಿಸುತ್ತದೆ.
ಜೂನ್ ನಲ್ಲಿ ಅಮರನಾಥ ಯಾತ್ರಿಕರಿಗೆ ಸಂಪೂರ್ಣ ಮಾರ್ಗ ತೆರೆಯಲಾಗುತ್ತದೆ. ಆದರೆ ಈ ಬಾರಿ ಪ್ರವಾಸ ನಿರ್ವಾಹಕರು ಯಾರಿಗೂ ಹೇಳದೆ ತಾವೇ ಅದನ್ನು ತೆರೆದು ಬುಕಿಂಗ್ ತೆಗೆದುಕೊಳ್ಳಲು ಪ್ರಾರಂಭಿಸಿದರು ಎಂದು ಸರ್ಕಾರ ಹೇಳಿತು. ಜೂನ್ ತಿಂಗಳಿನಲ್ಲಿ ಅಲ್ಲಿ ಭದ್ರತೆ ಒದಗಿಸಲಾಗುತ್ತಿತ್ತು. ಸರ್ಕಾರಕ್ಕೆ ಈ ವಿಷಯದ ಬಗ್ಗೆ ತಿಳಿದೇ ಇರಲಿಲ್ಲ ಎಂದು ಸಭೆಯಲ್ಲಿ ಸರ್ಕಾರ ಒಪ್ಪಿಕೊಂಡಿತ್ತು ಎಂದು ವರದಿಯಾಗಿತ್ತು.
ಆದರೆ ʼದಿ ಹಿಂದೂʼ ಪತ್ರಕರ್ತೆ ವಿಜೇತಾ ಸಿಂಗ್ ಬಹಳ ಆಘಾತಕಾರಿ ಸಂಗತಿ ಬಹಿರಂಗಪಡಿಸಿದ್ದಾರೆ. ಅವರು ತಮ್ಮ ವರದಿಯಲ್ಲಿ, ಬೈಸರನ್ ಪ್ರದೇಶ ಯಾವಾಗಲೂ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಅಲ್ಲಿ ಹೋಗಲು ಪೊಲೀಸರು ಅಥವಾ ಭದ್ರತಾ ಪಡೆಗಳ ಅನುಮತಿಯೇ ಬೇಕಿರುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಅಧಿಕಾರಿಯೊಬ್ಬರು ಹೇಳಿರುವುದನ್ನು ಉಲ್ಲೇಖಿಸಿದ್ದಾರೆ.
ಮಾಧ್ಯಮ ವರದಿಗಳಂತೆ,ಸಾಮಾನ್ಯವಾಗಿ ಬೈಸರನ್ ಕಣಿವೆಯು ಪ್ರವಾಸಿಗಳು ಮತ್ತು ಅಮರನಾಥ ಯಾತ್ರಿಗಳಿಗಾಗಿ ಜೂನ್ನಲ್ಲಿ ಮಾತ್ರ ತೆರೆದಿರುತ್ತದೆ ಎಂದು ಗುಪ್ತಚರ ಸಂಸ್ಥೆ(ಐಬಿ)ಯ ವಿಶೇಷ ನಿರ್ದೇಶಕರು ರಾಜಕೀಯ ನಾಯಕರಿಗೆ ತಿಳಿಸಿದ್ದರು. ಪೋಲಿಸರ ಅನುಮತಿಯಿಲ್ಲದೆ ಆ ಪ್ರದೇಶವನ್ನು ಪ್ರವಾಸಿಗಳಿಗಾಗಿ ತೆರೆಯಲಾಗಿತ್ತು ಮತ್ತು ಕೇವಲ ಎರಡು ದಿನಗಳಲ್ಲಿ ಸಾವಿರಕ್ಕೂ ಅಧಿಕ ಪ್ರವಾಸಿಗಳು ಅಲ್ಲಿಗೆ ಭೇಟಿ ನೀಡಿದ್ದರು ಎಂದೂ ಸಿಂಗ್ ಸಭೆಯಲ್ಲಿ ತಿಳಿಸಿದ್ದರು. ಇಂಡಿಯನ್ ಮುಸ್ಲಿಮ್ ಲೀಗ್ ಸಂಸದ ಹಾರಿಸ್ ಬೀರನ್ ಅವರೂ ಇದನ್ನು ದೃಢಪಡಿಸಿದ್ದಾರೆ.
ಆದಾಗ್ಯೂ,ಬೈಸರನ್ ವರ್ಷ ಪೂರ್ತಿ ತೆರದಿರುತ್ತದೆ ಎಂದು ಹೇಳುವ ಪ್ರವಾಸಿಗಳು ಮತ್ತು ಪ್ರವಾಸ ನಿರ್ವಾಹಕರು ಮಾತ್ರವಲ್ಲ,ಸಾಮಾಜಿಕ ಮಾಧ್ಯಮಗಳು ಮತ್ತು ಅಧಿಕೃತ ಸರಕಾರಿ ಪ್ರವಾಸೋದ್ಯಮ ವೆಬ್ಸೈಟ್ನಲ್ಲಿಯ ಪುರಾವೆಗಳೂ ಈಗ ಈ ಹೇಳಿಕೆಗಳನ್ನು ಪ್ರಶ್ನಿಸಿವೆ. ಎ.20ಕ್ಕಿಂತ ಮೊದಲೇ ಬೈಸರನ್ ಪ್ರವಾಸಿಗಳಿಂದ ಗಿಜಿಗುಡುತ್ತಿತ್ತು ಎನ್ನುವುದನ್ನು ನೂರಾರು ಫೋಟೊಗಳು ಮತ್ತು ವೀಡಿಯೊಗಳು ತೋರಿಸಿವೆ.
ಸರಳವಾದ ಗೂಗಲ್ ಹುಡುಕಾಟವು ‘ಬೈಸರನ್ ವ್ಯಾಲಿ‘ಗಾಗಿ ಲಿಸ್ಟಿಂಗ್ನಲ್ಲಿ 4,519 ವಿಮರ್ಶೆಗಳನ್ನು 4.5 ಸ್ಟಾರ್ ರೇಟಿಂಗ್ನ್ನು ತೋರಿಸುತ್ತದೆ. ಕೆಲವರು ದುಬಾರಿ ಮತ್ತು ಅಸುರಕ್ಷಿತ ಕುದುರೆ ಸವಾರಿಗಳನ್ನು ಉಲ್ಲೇಖಿಸಿದ್ದಾರಾದರೂ ಯಾವುದೇ ಪ್ರಯಾಣ ನಿರ್ಬಂಧಗಳನ್ನು ಯಾರೂ ಉಲ್ಲೇಖಿಸಿಲ್ಲ. ಇನ್ಸ್ಟಾಗ್ರಾಂ ಕೂಡ ಬೈಸರನ್ ಅನ್ನು ವರ್ಷಪೂರ್ತಿ ಪ್ರವಾಸಿ ತಾಣವಾಗಿ ಶಿಫಾರಸು ಮಾಡಿರುವ ಟ್ರಾವೆಲ್ ವ್ಲಾಗರ್ಗಳ ವೀಡಿಯೊಗಳಿಂದ ತುಂಬಿದೆ.
ಪ್ರವಾಸ ನಿರ್ವಾಹಕರು ಮತ್ತು ಎ.20ಕ್ಕೆ ಮುನ್ನ ಬೈಸರನ್ ಕಣಿವೆಗೆ ಭೇಟಿ ನೀಡಿದ್ದ ಪ್ರಯಾಣಿಕರು ಅದು ಅಮರನಾಥ ಯಾತ್ರಾ ಋತು ಸೇರಿದಂತೆ ವರ್ಷಪೂರ್ತಿ ತೆರೆದಿರುತ್ತದೆ ಎನ್ನುವುದನ್ನು ದೃಢಪಡಿಸಿದ್ದಾರೆ. ಅವರಲ್ಲಿ ಹೆಚ್ಚಿನವರಿಗೆ ಪ್ರದೇಶದಲ್ಲಿ ಯಾವುದೇ ನಿರ್ಬಂಧಗಳ ಬಗ್ಗೆ ತಿಳಿದಿಲ್ಲ.
ತನ್ನ ಸಂಸ್ಥೆಯು ಬೈಸರನ್ಗೆ ನಿಯಮಿತವಾಗಿ ಪ್ರವಾಸಿಗಳನ್ನು ಕಳುಹಿಸಿತ್ತು ಎಂದು ಹೇಳಿದ ಕೇರಳದ ಪ್ರವಾಸಿ ಸಂಸ್ಥೆ ‘ಪರವ ಡೆಸ್ಟಿನೇಷನ್ಸ್’ನ ನಿರ್ದೇಶಕಿ ಝಿಝಿಲಾ ಕಾಲಡಿ ಅವರು,ಕಳೆದ ವರ್ಷ ಮಾತ್ರ ಕೆಲವು ನಿರ್ವಹಣಾ ಕಾರ್ಯಗಳಿಗಾಗಿ ಅದನ್ನು ಮುಚ್ಚಲಾಗಿತ್ತು ಎಂದರು. ಅವರ ಪತಿ ಸಾಜಿದ್ ಪರ್ವೇಶ್ ಅವರು ಅಧಿಕೃತವಾಗಿ ಉದ್ಘಾಟನಾ ದಿನಾಂಕದ ಹಲವು ದಿನಗಳ ಮುನ್ನವೇ ಎ.2ರಂದು ತನ್ನ ಸ್ನೇಹಿತರೊಂದಿಗೆ ಬೈಸರನ್ಗೆ ಭೇಟಿ ನೀಡಿದ್ದರು.
ಜಮ್ಮುಕಾಶ್ಮೀರ ಪ್ರವಾಸೋದ್ಯಮ ಇಲಾಖೆಯ ವೆಬ್ಸೈಟ್ ಕೂಡ ಬೈಸರನ್ ಕಣಿವೆಯನ್ನು ಪಹಲ್ಗಾಮ್ನಲ್ಲಿ ಭೇಟಿ ನೀಡಬೇಕಾದ ಪ್ರಮುಖ ಪ್ರವಾಸಿ ತಾಣ ಎಂದು ಪಟ್ಟಿ ಮಾಡಿದೆ. ಆದರೆ ಋತುಮಾನಕ್ಕೆ ಅನುಗುಣವಾದ ಯಾವುದೇ ಪ್ರವೇಶ ನಿರ್ಬಂಧಗಳನ್ನು ಅದು ಉಲ್ಲೇಖಿಸಿಲ್ಲ.
‘ಕಾಶ್ಮೀರದ ಇತರ ಭಾಗಗಳಲ್ಲಿ ಸಶಸ್ತ್ರ ಪಡೆಗಳ ಗಸ್ತನ್ನು ನಾನು ನೋಡಿದ್ದೇನೆ,ಆದರೆ 20 ದಿನಗಳ ಹಿಂದೆ ಬೈಸರನ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿ ಸಶಸ್ತ್ರ ಪಡೆಗಳ ಯಾವುದೇ ಉಪಸ್ಥಿತಿ ಕಂಡು ಬಂದಿರಲಿಲ್ಲ ’ ಎಂದು ಪ್ರವಾಸಿಗಳ ಪೈಕಿ ಮಹಿಳೆಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು. ಈ ಪ್ರದೇಶಕ್ಕೆ ಪ್ರತಿ ದಿನ ನೂರಾರು ಪ್ರವಾಸಿಗಳು ಭೇಟಿ ನೀಡುತ್ತಿದ್ದರು,ಆದರೆ ಕೇವಲ ಸ್ಥಳೀಯರು ಮತ್ತು ಕುದುರೆಗಳ ನಿರ್ವಾಹಕರು ಮಾತ್ರ ಅಲ್ಲಿದ್ದರು ಎಂದರು.
‘ಪಹಲ್ಗಾಮ್ ತಲುಪುವ ಮುನ್ನ ಹಲವಾರು ಮಿಲಿಟರಿ ಔಟ್ಪೋಸ್ಟ್ಗಳನ್ನು ನಾವು ದಾಟಿದ್ದೆವು,ಆದರೆ ಬೈಸರನ್ ಕಣಿವೆಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗಳ ಆಗಮನದ ಬಗ್ಗೆ ಭದ್ರತಾ ಪಡೆಗಳಿಗೆ ತಿಳಿದಿರಲಿಲ್ಲ ಎನ್ನುವುದನ್ನು ನಂಬಲು ಸಾಧ್ಯವಿಲ್ಲ’ ಎಂದು ಅವರು ಬೆಟ್ಟು ಮಾಡಿದರು.
ಈ ಇಡೀ ವಿಷಯದ ಬಗ್ಗೆ ವಿರೋಧ ಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ. ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್, ಸರ್ವಪಕ್ಷ ಸಭೆಯಲ್ಲಿ ಸರ್ಕಾರ ಭದ್ರತಾ ಲೋಪವನ್ನು ಒಪ್ಪಿಕೊಂಡಿದೆ. ಬೈಸರನ್ ಪ್ರದೇಶವನ್ನು ಜೂನ್ ವರೆಗೆ ಪ್ರವಾಸಿಗರಿಗೆ ತೆರೆಯಬಾರದು. ಆದರೆ ಭದ್ರತಾ ನಿಯೋಜನೆ ಮತ್ತು ಅನುಮತಿಯಿಲ್ಲದೆ ಅದನ್ನು ತೆರೆಯಲಾಗಿದೆ ಎಂದು ಸರ್ಕಾರ ಹೇಳಿದೆ. ಹಾಗಿದ್ದಲ್ಲಿ, ಜನರು ಅಲ್ಲಿಗೆ ಬಹಿರಂಗವಾಗಿ ಬರುತ್ತಿದ್ದರೆ, ಪೊಲೀಸರು ಏಕೆ ಕಣ್ಣು ಮುಚ್ಚಿಕೊಂಡಿದ್ದರು? ಆದರೆ ಇದು ನಿಜವಲ್ಲ. ಪಹಲ್ಗಾಮ್ ಅಧಿಕಾರಿಗಳು, ಪ್ರವಾಸ ನಿರ್ವಾಹಕರು ಮತ್ತು ಕುದುರೆ ಸವಾರರು ಹೇಳುವ ಪ್ರಕಾರ, ಬೈಸರನ್ ಮೈದಾನ ಯಾವಾಗಲೂ ತೆರೆದಿರುತ್ತದೆ ಮತ್ತು ಯಾವುದೇ ಭದ್ರತಾ ಅನುಮತಿಯ ಅಗತ್ಯವಿಲ್ಲ. ಪಹಲ್ಗಾಮ್ ಗೆ ಬರುವ ಪ್ರವಾಸಿಗರಲ್ಲಿ ಶೇ. 70 ರಷ್ಟು ಜನರು ಖಂಡಿತವಾಗಿಯೂ ಬೈಸರನ್ ಮೈದಾನಕ್ಕೆ ಭೇಟಿ ನೀಡುತ್ತಾರೆ. ಸರ್ವಪಕ್ಷ ಸಭೆಯಲ್ಲಿ ಆಧಾರರಹಿತ ಸುಳ್ಳುಗಳನ್ನು ಹೇಳುವ ಮೂಲಕ ಗೃಹ ಸಚಿವರು, ರಕ್ಷಣಾ ಸಚಿವರು ಮತ್ತು ಕೇಂದ್ರದಲ್ಲಿರುವ ಮೋದಿ ಸರ್ಕಾರ ಇಡೀ ದೇಶವನ್ನು ದಾರಿತಪ್ಪಿಸಲು ಪ್ರಯತ್ನಿಸಿದೆಯೇ? ಇಷ್ಟೊಂದು ದೊಡ್ಡ ಭದ್ರತೆ ಮತ್ತು ಗುಪ್ತಚರ ವೈಫಲ್ಯದ ನಂತರವೂ ಸುಳ್ಳುಗಳನ್ನು ಏಕೆ ಹೇಳಲಾಗುತ್ತಿದೆ? ಎಂದು ಕೇಳಿದ್ದಾರೆ.