×
Ad

ನಾಗ್ಪುರದ ʼಬೀಫ್ʼ: ಗೋಮಾಂಸ ಉದ್ಯಮ ಜತೆ ನಿತಿನ್ ಗಡ್ಕರಿ ಕುಟುಂಬಕ್ಕೆ ನಂಟು!

caravanmagazine. in ತನಿಖಾ ವರದಿ

Update: 2026-03-04 15:45 IST

ನಿತಿನ್ ಗಡ್ಕರಿ | Photo Credit : PTI

ಮಹಾರಾಷ್ಟ್ರದ ಲೋನಾವಾಲ ಗ್ರಾಮೀಣ ಪೊಲೀಸ್ ಠಾಣೆಗೆ 2022ರ ಮಾರ್ಚ್ 10ರಂದು ಬೆಳಗಿನ ಜಾವ 3.30ರ ಸುಮಾರಿಗೆ ಒಂದು ಅನಾಮಧೇಯ ಕರೆ ಬಂದಿತ್ತು. ಪಶ್ಚಿಮ ಘಟ್ಟಗಳ ಮೂಲಕ ಪುಣೆ–ಮುಂಬೈ ಎಕ್ಸ್‌ಪ್ರೆಸ್‌ವೇ ಮಾರ್ಗವಾಗಿ ಗೋಮಾಂಸ ಸಾಗಿಸುತ್ತಿದ್ದ ಟ್ರಕ್ ಹೋಗಲಿದೆ ಎಂಬ ಮಾಹಿತಿ ಅದಾಗಿತ್ತು.

2015ರಲ್ಲಿ ಬಿಜೆಪಿ ಸರ್ಕಾರ ಮಹಾರಾಷ್ಟ್ರದಲ್ಲಿ ಪ್ರಾಣಿ ಸಂರಕ್ಷಣಾ ಕಾನೂನುಗಳನ್ನು ಕಠಿಣಗೊಳಿಸಿದ ನಂತರ, ಗೋಮಾಂಸ ಹೊಂದುವುದು ಗಂಭೀರ ಅಪರಾಧವಾಗಿ ಪರಿಗಣಿಸಲಾಯಿತು. ಆದ್ದರಿಂದ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಮುಂದಾದರು.

ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಕುತುಬುದ್ದೀನ್ ಗುಲಾಬ್ ಖಾನ್ ಸಿಂಹಗಡ್ ಕಾಲೇಜು ಬಳಿ ಕಾವಲು ಕಾಯುತ್ತಿದ್ದರು. ಆ ಸಂಜೆ NL-01-AB-5853 ಸಂಖ್ಯೆಯ ಟ್ರಕ್ ಬರುತ್ತಿರುವುದನ್ನು ಅವರು ಗಮನಿಸಿದರು. ಖಾನ್ ಟ್ರಕ್ ನಿಲ್ಲಿಸಲು ಸೂಚಿಸಿದರೂ ಅದು ನಿಲ್ಲಿಸಲಿಲ್ಲ. ಬಳಿಕ ಪೊಲೀಸರು ಬೆನ್ನಟ್ಟಿ ಟ್ರಕ್ ಅನ್ನು ಹಿಡಿದು ಚಾಲಕ ಮಾಗ್ನು ಅಶ್ರಫಿ ಪಾಸ್ವಾನ್ (35) ಮತ್ತು ಕ್ಲೀನರ್ ಶುಭಂ ಶರ್ಮಾ (25) ಅವರನ್ನು ಬಂಧಿಸಿದರು.

28 ಟನ್ ಮಾಂಸ ವಶ:

ಟ್ರಕ್ ದಾಖಲೆಗಳನ್ನು ಪರಿಶೀಲಿಸಿದಾಗ ಅದು ಹೈದರಾಬಾದ್‌ ನಿಂದ ಬರುತ್ತಿತ್ತು. ಟ್ರಕ್‌ನೊಳಗೆ 1,400 ಪೆಟ್ಟಿಗೆಗಳಲ್ಲಿ ಸಂಸ್ಕರಿಸಿದ ತಾಜಾ ಮಾಂಸ ಪತ್ತೆಯಾಯಿತು. ಪ್ರತಿಯೊಂದು ಪೆಟ್ಟಿಗೆ ಸುಮಾರು 20 ಕೆಜಿ ತೂಕವಿದ್ದು, ಒಟ್ಟಾರೆ ಸುಮಾರು 28 ಟನ್ ಮಾಂಸ ಇದ್ದಿತು. ಇದರ ಮೌಲ್ಯವನ್ನು ಪೊಲೀಸರು ಸುಮಾರು 60 ಲಕ್ಷ ರೂಪಾಯಿ ಎಂದು ಅಂದಾಜಿಸಿದರು.

ಆದರೆ ಚಾಲಕ ಮತ್ತು ಕ್ಲೀನರ್ ಬಳಿ ಸಾಗಣೆ ಸಂಬಂಧಿಸಿದ ಯಾವುದೇ ಪ್ರಮಾಣೀಕರಣ ಅಥವಾ ದಾಖಲೆಗಳಿರಲಿಲ್ಲ. ಮುಂಬೈ ಅಥವಾ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದ ರೆಹಾನ್ ಅಹ್ಮದ್ ಖುರೇಷಿ ಅಲಿಯಾಸ್ ರೆಹಾನ್ ಚೌಧರಿ ಎಂಬ ವ್ಯಕ್ತಿ ಸಾಗಣೆ ಮಾಡಲು ಹೇಳಿದ್ದಾನೆ ಎಂಬುದಷ್ಟೇ ಅವರಿಗೆ ತಿಳಿದಿತ್ತು.

ನ್ಯಾಯಾಲಯದ ಗಮನಕ್ಕೆ ಬಂದ ದಾಖಲೆಗಳಲ್ಲಿನ ವ್ಯತ್ಯಾಸ:

ಮುಂದಿನ ದಿನ ಪುಣೆ ಜಿಲ್ಲೆಯ ವಡ್ಗಾಂವ್ ಮಾವಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಯಿತು. ಮುಂಬೈನಲ್ಲಿ ನೋಂದಾಯಿತ ರೆಂಬಲ್ ಆಗ್ರೋ ಅಂಡ್ ಫುಡ್ಸ್ ಕಂಪನಿ ಟ್ರಕ್‌ನಲ್ಲಿ ವಶಪಡಿಸಿಕೊಂಡ ಮಾಂಸವನ್ನು ಬಿಡುಗಡೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿತು.

ಕಂಪನಿಯ ವಾದ ಪ್ರಕಾರ ಅದು ಗೋಮಾಂಸವಲ್ಲ, ಕೋಣದ ಮಾಂಸ (ಬಫ್) ಆಗಿದ್ದು ಕಾನೂನುಬದ್ಧವಾಗಿದೆ. ಮಾಲೀಕತ್ವದ ಬಿಲ್‌ಗಳನ್ನು ಸಹ ಸಲ್ಲಿಸಲಾಯಿತು. ಅವುಗಳ ಪ್ರಕಾರ ಮಾಂಸವನ್ನು ಉತ್ತರ ಪ್ರದೇಶದ ಅಲಿಗಢದಲ್ಲಿ ಖರೀದಿಸಿ, ನಂತರ ಹೈದರಾಬಾದ್‌ನಲ್ಲಿ ಸಂಸ್ಕರಿಸಿ ವಿಯೆಟ್ನಾಂಗೆ ರಫ್ತು ಮಾಡಲು ಮುಂಬೈಗೆ ಸಾಗಿಸಲಾಗುತ್ತಿತ್ತು.

ಆದರೆ ನ್ಯಾಯಾಧೀಶರು ದಾಖಲೆಗಳಲ್ಲಿ ಹಲವು ಅನುಮಾನಾಸ್ಪದ ಅಂಶಗಳನ್ನು ಗಮನಿಸಿದರು. ಹೈದರಾಬಾದ್‌ನಿಂದ ಸಾಗಣೆ ಮಾಡುತ್ತಿದ್ದರೂ ಪಶುಸಂಗೋಪನಾ ಇಲಾಖೆಯ ಅನುಮತಿ ಇರಲಿಲ್ಲ. ಆರೋಗ್ಯ ಪ್ರಮಾಣಪತ್ರ ಅಲಿಗಢದ ಪಶುವೈದ್ಯರಿಂದ ನೀಡಲಾಗಿತ್ತು. ಇ-ವೇ ಬಿಲ್ ಅನ್ನು ರೆಹಾನ್ ಅವರ ಸಂಸ್ಥೆ ಚೌಧರಿ ಎಂಟರ್‌ಪ್ರೈಸಸ್ ಸಿದ್ಧಪಡಿಸಿತ್ತು.

ಟ್ರಕ್‌ನಲ್ಲಿದ್ದ ಮಾಂಸ ಹಸುವಿನದ್ದಲ್ಲ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳಿಲ್ಲ ಎಂದು ನ್ಯಾಯಾಲಯ ಗಮನಿಸಿ, ಪೊಲೀಸರು ಕೈಗಾರಿಕಾ ಖರೀದಿದಾರರನ್ನು ಪತ್ತೆಹಚ್ಚುವವರೆಗೆ ಮಾಂಸವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಲು ಆದೇಶಿಸಿತು.

 

ಗಡ್ಕರಿ ಕುಟುಂಬದ ಕಂಪನಿಗಳ ಸಂಪರ್ಕ:

ಈ ಪ್ರಕರಣದಲ್ಲಿ ಪ್ರಮುಖವಾಗಿದ್ದ ರೆಂಬಲ್ ಆಗ್ರೋ ಕಂಪನಿಯು ಈಗ ವೆನಾಡ್ ಫುಡ್ ಇಂಡಸ್ಟ್ರೀಸ್ ಎಂಬ ಹೆಸರಿನಿಂದ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕುಟುಂಬದ ವ್ಯವಹಾರ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕವಿದೆ ಎಂದು ದಾಖಲೆಗಳು ಸೂಚಿಸುತ್ತವೆ.

ನಿಖಿಲ್ ಗಡ್ಕರಿ ನಿರ್ವಹಿಸುವ ಸಿಯಾನ್ ಆಗ್ರೋ ಸಂಸ್ಥೆಯೊಂದಿಗೆ ರೆಂಬಲ್ ಆರ್ಥಿಕ ಸಂಬಂಧ ಹೊಂದಿದೆ ಎಂದು ತಿಳಿದು ಬಂದಿದೆ. ರೆಂಬಲ್ ನಿರ್ದೇಶಕರು ಮತ್ತು ಷೇರುದಾರರಿಗೆ ಗಡ್ಕರಿ ಸಂಬಂಧಿತ ಸಂಸ್ಥೆಗಳು ಹಣಕಾಸು ನೆರವು ಒದಗಿಸಿದ್ದರು. ಗಡ್ಕರಿಯವರ ಪತ್ನಿ ಕಾಂಚನ್ ಅಧ್ಯಕ್ಷತೆಯಲ್ಲಿರುವ ಸಮೃದ್ಧಿ ಸಹಕಾರಿ ಬ್ಯಾಂಕಿನಿಂದಲೂ ರೆಂಬಲ್ ಸಾಲ ಪಡೆದಿದೆ. ರೆಂಬಲ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ಕುಮಾರ್ ಪಿಳ್ಳೈ ಹಿಂದೆ ಗಡ್ಕರಿ ಸಂಸ್ಥೆಯೊಂದನ್ನು ಅದೇ ವಿಳಾಸದಲ್ಲಿ ನಿರ್ವಹಿಸಿದ್ದವರಾಗಿದ್ದಾರೆ.

ವ್ಯವಹಾರ ಜಾಲದ ಗೊಂದಲ:

ರೆಂಬಲ್ ಮತ್ತು ಅದರ ಮಾರ್ಕೆಟಿಂಗ್ ಪಾಲುದಾರ ಮಿತ್ರ್ ಇಂಟರ್‌ನ್ಯಾಷನಲ್ ನಡುವೆ ಕಚೇರಿ ಸ್ಥಳ, ಬ್ರ್ಯಾಂಡ್ ಮತ್ತು ವಾಣಿಜ್ಯ ಸಂಪರ್ಕಗಳಿವೆ. ಕೆಲವು ಜಾಹೀರಾತುಗಳಲ್ಲಿ ಉತ್ಪನ್ನಗಳನ್ನು ಕೋಣದ ಮಾಂಸ ಎಂದು ಗುರುತಿಸಿದ್ದರೆ, ಇನ್ನೂ ಕೆಲವು ಜಾಹೀರಾತುಗಳಲ್ಲಿ ಅದನ್ನು ಗೋಮಾಂಸ ಎಂದು ಹೇಳಲಾಗಿದೆ.

ಗಡ್ಕರಿ ಕೃಷಿ ವ್ಯವಹಾರ ಗುಂಪಿನ 27 ಕಂಪನಿಗಳ ಹಣಕಾಸು ದಾಖಲೆಗಳನ್ನು ಪರಿಶೀಲಿಸಿದಾಗ ಈ ರೀತಿಯ ಗೊಂದಲಗಳು ಕಂಡುಬಂದಿವೆ ಎಂದು ತನಿಖೆಯಲ್ಲಿ ಹೇಳಲಾಗಿದೆ.

 (ನಿತಿನ್ ಗಡ್ಕರಿ ತಮ್ಮ ಸ್ಟಾಲ್‌ಗೆ ಭೇಟಿ ನೀಡಿರುವ ಬಗ್ಗೆ ಮಿತ್ರ್ ಹಾಕಿರುವ ಪೋಸ್ಟ್)

ರೆಂಬಲ್ ವೇಗದ ಬೆಳವಣಿಗೆ:

2020ರಲ್ಲಿ ಆರಂಭವಾದ ರೆಂಬಲ್ ಸಂಸ್ಥೆ ಅಲ್ಪ ಅವಧಿಯಲ್ಲಿ ವೇಗವಾಗಿ ಬೆಳವಣಿಗೆಯಾಯಿತು. ಕೇವಲ ಮೂರು ವರ್ಷಗಳಲ್ಲಿ ಸಂಸ್ಥೆಯ ಆದಾಯ 72.56 ಕೋಟಿ ರೂಪಾಯಿಗೆ ಏರಿತು. ಇದರಿಂದ ಸರ್ಕಾರದಿಂದ ‘ಒನ್-ಸ್ಟಾರ್ ಎಕ್ಸ್‌ಪೋರ್ಟ್ ಹೌಸ್’ ಮಾನ್ಯತೆ ದೊರೆಯಿತು.

ರೆಂಬಲ್ ನಿರ್ದೇಶಕರಾದ ಮಹೇಶ್‌ಕುಮಾರ್ ಪಿಳ್ಳೈ, ಜಯಶ್ರೀ ಮೇಲುವೀಟ್ಟಿಲ್ ಮತ್ತು ರಾಮನ್ ನಾಯರ್ ಪ್ಲಾಕ್ಕೋಟ ಸಿಯಾನ್ ಆಗ್ರೋ ಸಂಸ್ಥೆಯ ಷೇರುಗಳಲ್ಲಿ ಹೂಡಿಕೆ ಮಾಡಿದ್ದರು.

ಜಯಶ್ರೀ ಮೇಲುವೀಟ್ಟಿಲ್ ಸುಮಾರು 9.5 ಲಕ್ಷ ಷೇರುಗಳನ್ನು ಸುಮಾರು 4.20 ಕೋಟಿ ರೂಪಾಯಿಗೆ, ಪ್ರತಿ ಷೇರಿಗೆ ಸುಮಾರು 50 ರೂಪಾಯಿ ದರದಲ್ಲಿ ಖರೀದಿಸಿದ್ದರು. ನಂತರ ಷೇರು ಬೆಲೆ ಏರಿಕೆಯೊಂದಿಗೆ ಅವರ ಪಾಲಿನ ಮೌಲ್ಯ ಸುಮಾರು 134 ಕೋಟಿ ರೂಪಾಯಿಗೆ ತಲುಪಿತು.

ರಾಮನ್ ನಾಯರ್ ಪ್ಲಾಕ್ಕೋಟ ಸುಮಾರು 8.76 ಲಕ್ಷ ಷೇರುಗಳನ್ನು ಸುಮಾರು 3.85 ಕೋಟಿ ರೂಪಾಯಿಗೆ, ಪ್ರತಿ ಷೇರಿಗೆ ಸುಮಾರು 44 ರೂಪಾಯಿ ದರದಲ್ಲಿ ಖರೀದಿಸಿದ್ದರು. ನಂತರ ಅವರ ಷೇರುಗಳ ಮೌಲ್ಯ 113 ಕೋಟಿ ರೂಪಾಯಿಗೆ ಏರಿತು.

ಮಹೇಶ್‌ಕುಮಾರ್ ಪಿಳ್ಳೈ ಕೂಡ ನಂತರದ ಹಂತದಲ್ಲಿ 510 ರೂಪಾಯಿ ದರದಲ್ಲಿ ದೊಡ್ಡ ಪ್ರಮಾಣದ ಷೇರುಗಳನ್ನು ಖರೀದಿಸಿ, ಒಟ್ಟು ಹೂಡಿಕೆಯನ್ನು 10.47 ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡಿದ್ದರು. ಅವರ ಷೇರುಗಳ ಮೌಲ್ಯ ನಂತರ 49.5 ಕೋಟಿ ರೂಪಾಯಿಗೆ ತಲುಪಿತ್ತು.

ಇನ್ನೊಂದೆಡೆ, ಸಿಯಾನ್ ಆಗ್ರೋ ಸಂಸ್ಥೆಯ ಆದಾಯವು 2024-25ರಲ್ಲಿ ಆರು ಪಟ್ಟು ಏರಿ 1,053 ಕೋಟಿ ರೂಪಾಯಿಗೆ ತಲುಪಿತು. ಕಂಪನಿಯ ಷೇರು ಬೆಲೆ 3,663 ರೂಪಾಯಿವರೆಗೆ ಏರಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು.

ಈ ವ್ಯವಹಾರವನ್ನು ಕೆಲವರು “ಗಡ್ಕರಿ ಜೂಜು” ಎಂದು ಕರೆಯುತ್ತಾರೆ. ಕಾರಣ, ಸಿಯಾನ್ ಆಗ್ರೋದಲ್ಲಿ ಅಲ್ಪ ಬೆಲೆಗೆ ಖರೀದಿಸಿದ ಷೇರುಗಳ ಮೌಲ್ಯ ನಂತರ ಭಾರೀ ಏರಿಕೆಯಾಗಿ ನಿರ್ದೇಶಕರಿಗೆ ಅಪಾರ ಸಂಪತ್ತು ತಂದಿತು. ತಮ್ಮ ಷೇರುಗಳನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಮಾತ್ರ ಮಾರಾಟ ಮಾಡಿದ ಕಾರಣ ಈ ಲಾಭ ಮತ್ತಷ್ಟು ಹೆಚ್ಚಾಯಿತು.

ನಿತಿನ್ ಗಡ್ಕರಿ ಅವರ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರ ಮತ್ತು ಆರ್ಥಿಕ ದುರುಪಯೋಗದ ಆರೋಪಗಳು ಕಾಲಕಾಲಕ್ಕೆ ಕೇಳಿಬಂದಿವೆ. ಉದಾಹರಣೆಗೆ, ಸ್ವೀಡನ್‌ನ ಸ್ಕ್ಯಾನಿಯಾ ಕಂಪನಿ ಅವರ ಮಗಳ ಮದುವೆಗೆ ಐಷಾರಾಮಿ ಬಸ್ ಉಡುಗೊರೆಯಾಗಿ ನೀಡಿದ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದರೂ ಇಂತಹ ವಿವಾದಗಳು ಸಾಮಾನ್ಯವಾಗಿ ದೀರ್ಘಕಾಲಿಕ ಕಾನೂನು ಅಥವಾ ರಾಜಕೀಯ ಪರಿಣಾಮಗಳಿಲ್ಲದೆ ನಿಧಾನವಾಗಿ ಮಸುಕಾಗುತ್ತವೆ.

ರೆಂಬಲ್ ಕುರಿತ ತನಿಖೆ ಗಡ್ಕರಿ ಅವರ ರಾಜಕೀಯ ನಿಲುವು ಮತ್ತು ಕುಟುಂಬದ ವ್ಯವಹಾರಗಳ ನಡುವಿನ ವಿರೋಧಾಭಾಸವನ್ನು ಎತ್ತಿ ತೋರಿಸುತ್ತದೆ. ಗೋ ರಕ್ಷಣೆಯನ್ನು ಪ್ರಮುಖ ರಾಜಕೀಯ ಘೋಷಣೆಯಾಗಿ ಬಳಸುವ ಬಿಜೆಪಿಯ ಹಿರಿಯ ನಾಯಕರಾಗಿರುವ ಗಡ್ಕರಿ ಅವರ ಕುಟುಂಬದ ವ್ಯವಹಾರ ಜಾಲವು ಗೋಮಾಂಸ ರಫ್ತಿನಿಂದ ಗಮನಾರ್ಹ ಆದಾಯ ಪಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಭಾರತವು ಜಾಗತಿಕ ಗೋಮಾಂಸ ರಫ್ತಿನಲ್ಲಿ ಸುಮಾರು 12 ಶೇಕಡಾ ಪಾಲು ಹೊಂದಿರುವ ಪ್ರಮುಖ ದೇಶವಾಗಿದ್ದರೂ, ದೇಶೀಯ ರಾಜಕೀಯದಲ್ಲಿ “ಪವಿತ್ರ ಹಸು” ಎಂಬ ಘೋಷಣೆ ಇನ್ನೂ ಪ್ರಭಾವಿ ರಾಜಕೀಯ ಸಂಕೇತವಾಗಿದೆ.

ಈ ತನಿಖೆಯ ಮತ್ತೊಂದು ಲಕ್ಷಣವೆಂದರೆ ಮೂಲಗಳ ಹಠಾತ್ ಮೌನ. ಆರಂಭದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲು ಸಿದ್ಧರಾಗಿದ್ದ ರೆಹಾನ್ ನಂತರ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿದರು. ಇದೇ ವೇಳೆ ಗಡ್ಕರಿ ಮತ್ತು ಮಹೇಶ್‌ಕುಮಾರ್ ಪಿಳ್ಳೈ ಅವರಿಗೆ ಕಳುಹಿಸಲಾದ ಅಧಿಕೃತ ಪ್ರಶ್ನಾವಳಿಗಳಿಗೆ ಯಾವುದೇ ಪ್ರತಿಕ್ರಿಯೆ ಲಭಿಸಲಿಲ್ಲ.

ಇದರ ನಡುವೆಯೂ ಅಂಜಲಿ ದಮಾನಿಯಾ ಅವರಂತಹ ಕಾರ್ಯಕರ್ತರು ಗಡ್ಕರಿ ಅವರ ಮೇಲೆ ಮಾಡಿರುವ ಆರೋಪಗಳು ಸಾರ್ವಜನಿಕ ಅಭಿಪ್ರಾಯದಲ್ಲಿ ದೊಡ್ಡ ಬದಲಾವಣೆಯನ್ನು ತರಲಿಲ್ಲ. ಗಡ್ಕರಿ ಅವರ ನಿಷ್ಠಾವಂತ ಬೆಂಬಲಿಗರು ಈ ಆರೋಪಗಳನ್ನು ತಳ್ಳಿಹಾಕುತ್ತಿರುವುದರಿಂದ, ಎಷ್ಟೇ ಪುರಾವೆಗಳು ಮುಂದಿಡಲಾದರೂ ಅವು ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂಬ ನಿರಾಶೆ ವಿಮರ್ಶಕರಲ್ಲಿ ವ್ಯಕ್ತವಾಗಿದೆ.

ಕೃಪೆ: caravanmagazine. in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News