5, 8, 9, 11 ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ: ಸರಕಾರದ ಅವೈಜ್ಞಾನಿಕ, ಅನಾಹುತಕಾರಿ ಶಿಕ್ಷಣ ನೀತಿ

11-18ನೇ ವಯಸ್ಸಿನ ಮಕ್ಕಳನ್ನು ಈ ರೀತಿಯಾಗಿ ಕೇಂದ್ರೀಕೃತ ಪಬ್ಲಿಕ್ ಪರೀಕ್ಷೆಗೆ ಒಳಪಡಿಸುವುದು ಅವರ ಕಲಿಕೆಗೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ವಾಸ್ತವದಲ್ಲಿ ಸರಕಾರವು ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವುದಿಲ್ಲ. (ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆಯಲ್ಲಿ 50,000ಕ್ಕೂ ಹೆಚ್ಚಿನ ಶಿಕ್ಷಕರ ಕೊರತೆಯಿದೆ). ತನ್ನ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದಿಲ್ಲ, ಉತ್ತಮ ಗುಣಮಟ್ಟದ ಬೋಧನೆಗೆ ಶ್ರಮಿಸುವುದಿಲ್ಲ. ವಂಚಿತ ಸಮುದಾಯಗಳಿಗೆ ವ್ಯಾಸಂಗಕ್ರಮ (ಪೆಡಗಾಜಿ) ರೂಪಿಸುವುದಿಲ್ಲ. ಎಲ್ಲಾ ಹಂತಗಳಲ್ಲೂ ಸರಕಾರಿ ಶಾಲೆಗಳನ್ನು ದುರ್ಬಲಗೊಳಿಸಲಾಗಿದೆ. ಇಂತಹ ಅನನುಕೂಲ ವಾತಾವರಣದಲ್ಲಿ ಓದುವ 11-18ನೇ ವಯಸ್ಸಿನ ಬಡ ಕುಟುಂಬದ, ತಳ ಸಮುದಾಯದ ಮಕ್ಕಳು ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಅನುಕೂಲವಂತ ವರ್ಗಗಳ ಹಿನ್ನೆಲೆಯ ಮಕ್ಕಳೊಂದಿಗೆ ಸ್ಪರ್ಧಿಸಬೇಕು ಎನ್ನುವ ಶಿಫಾರಸು ಅಮಾನವೀಯವಾಗಿದೆ.

Update: 2023-10-03 07:47 GMT

ಇತ್ತೀಚಿನ ಬೆಳವಣಿಗೆ

ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾರ್ವಜನಿಕ ಶಿಕ್ಷಣದ ಕುರಿತು ಯಾವುದೇ ನಂಬಿಕೆ ಇಲ್ಲದ ಹಿಂದಿನ ಬಿಜೆಪಿ ಸರಕಾರವು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು, 10ನೇ ತರಗತಿಯಲ್ಲಿ ಮಕ್ಕಳ ಉತ್ತೀರ್ಣ ಪ್ರಮಾಣವನ್ನು ಹೆಚ್ಚಿಸಲು 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಿದ್ದರು. ಇದಕ್ಕೆ ಅವರು ಎನ್ಇಪಿ-2020 ಶಿಫಾರಸಿನ ಅಡಿಯಲ್ಲಿ ಜಾರಿಗೊಳಿಸುವುದಾಗಿ ಹೇಳಿದ್ದರು. ಶಿಕ್ಷಣದ ಕುರಿತು ಯಾವುದೇ ತಲೆಬುಡ ಗೊತ್ತಿಲ್ಲದ ಆಗಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಮತ್ತು ಬಿ.ಸಿ.ನಾಗೇಶ್ ತನ್ನ ಆರೆಸ್ಸೆಸ್ ಸಿದ್ಧಾಂತದ ಪರ ಒಲವನ್ನು ಶಿಕ್ಷಣದಲ್ಲಿ ಜಾರಿಗೊಳಿಸಲು ಪ್ರಯತ್ನಿಸಿದ್ದರು. ಯಾವುದೇ ಉತ್ತರದಾಯಿತ್ವ ಇಲ್ಲದೆ ಬೇಕಾಬಿಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿರುವುದರ ಮೂಲಕ ಇಲ್ಲಿನ ಮಕ್ಕಳನ್ನು ಬಲಿಪಶುವಾಗಿಸಿದ್ದರು.

ಈಗ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವೂ ಅದೇ ನೀತಿಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ದುರಂತದ ಸಂಗತಿ. ಈಗಿನ ರಾಜಕೀಯ- ಸಾಮಾಜಿಕ-ಆರ್ಥಿಕ ಬಿಕ್ಕಟ್ಟುಗಳ ಗಾಯದ ಮೇಲೆ ಬರೆ ಎಳೆದಂತೆ ಈಗಿನ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರೂ ಹೊಸ ದೃಷ್ಟಿಕೋನ, ಪರಿಕಲ್ಪನೆಗಳ ಕುರಿತು ಗಮನ ಹರಿಸದೆ ಈ ಬಾರಿ 9 ಮತ್ತು 11ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ ಎಂದು ಪತ್ರಿಕೆೆಗಳಲ್ಲಿ ವರದಿಯಾಗಿದೆ. ಪ್ರಭುತ್ವದ ಈ ಸಂವಿಧಾನ ವಿರೋಧಿ ನಿರ್ಧಾರದಿಂದಾಗಿ ತಳ ಸಮುದಾಯದ, ದಲಿತ, ಆದಿವಾಸಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ.

ದುಷ್ಪರಿಣಾಮಗಳು

11-18ನೇ ವಯಸ್ಸಿನ ಮಕ್ಕಳನ್ನು ಈ ರೀತಿಯಾಗಿ ಕೇಂದ್ರೀಕೃತ ಪಬ್ಲಿಕ್ ಪರೀಕ್ಷೆಗೆ ಒಳಪಡಿಸುವುದು ಅವರ ಕಲಿಕೆಗೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ವಾಸ್ತವದಲ್ಲಿ ಸರಕಾರವು ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವುದಿಲ್ಲ. (ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆಯಲ್ಲಿ 50,000ಕ್ಕೂ ಹೆಚ್ಚಿನ ಶಿಕ್ಷಕರ ಕೊರತೆಯಿದೆ). ತನ್ನ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದಿಲ್ಲ, ಉತ್ತಮ ಗುಣಮಟ್ಟದ ಬೋಧನೆಗೆ ಶ್ರಮಿಸುವುದಿಲ್ಲ. ವಂಚಿತ ಸಮುದಾಯಗಳಿಗೆ ವ್ಯಾಸಂಗಕ್ರಮ (ಪೆಡಗಾಜಿ) ರೂಪಿಸುವುದಿಲ್ಲ. ಎಲ್ಲಾ ಹಂತಗಳಲ್ಲೂ ಸರಕಾರಿ ಶಾಲೆಗಳನ್ನು ದುರ್ಬಲಗೊಳಿಸಲಾಗಿದೆ. ಇಂತಹ ಅನನುಕೂಲ ವಾತಾವರಣದಲ್ಲಿ ಓದುವ 11-18ನೇ ವಯಸ್ಸಿನ ಬಡ ಕುಟುಂಬದ, ತಳ ಸಮುದಾಯದ ಮಕ್ಕಳು ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಅನುಕೂಲವಂತ ವರ್ಗಗಳ ಹಿನ್ನೆಲೆಯ ಮಕ್ಕಳೊಂದಿಗೆ ಸ್ಪರ್ಧಿಸಬೇಕು ಎನ್ನುವ ಶಿಫಾರಸು ಅಮಾನವೀಯವಾಗಿದೆ. ಯಾವುದೇ ತಯಾರಿ, ಬೆಂಬಲ ಇಲ್ಲದ ಮಕ್ಕಳು ಈ ಕೇಂದ್ರೀಕೃತ ಪಬ್ಲಿಕ್ ಪರೀಕ್ಷೆಗಳಿಂದ ಅನಗತ್ಯವಾಗಿ ಒತ್ತಡಕ್ಕೆ ಸಿಲುಕುತ್ತಾರೆ. ಉತ್ತಮ ಗುಣಮಟ್ಟದ ವ್ಯಾಸಂಗಕ್ರಮ ರೂಪಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಆ ಮೂಲಕ ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ಕಾಂಗ್ರೆಸ್ ಸರಕಾರದ ಮೊದಲ ಆದ್ಯತೆಯಾಗಿರಬೇಕಿತ್ತು ಮತ್ತು ಇದನ್ನು ಕಾರ್ಯಗತಗೊಳಿಸುವುದರ ಕುರಿತು ಮಧು ಬಂಗಾರಪ್ಪನವರು ಹೆಚ್ಚಿನ ಒತ್ತು ನೀಡಬೇಕಿತ್ತು. ಆದರೆ ಇವೆಲ್ಲವನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಮಕ್ಕಳನ್ನು ನೇರವಾಗಿ ಪಬ್ಲಿಕ್ ಸ್ಪರ್ಧಾತ್ಮಕ ಪರೀಕ್ಷೆಗೆ ತಳ್ಳುವುದು ಅನಾಹುತಕಾರಿ. ಇದರಿಂದ ಯಾವುದೇ ಸೌಕರ್ಯಗಳಿಲ್ಲದ, ಸಾಮಾಜಿಕ-ಆರ್ಥಿಕ ಬೆಂಬಲವಿಲ್ಲದ ತಳಸಮುದಾಯದ, ಬಡಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಉಳ್ಳವರು, ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮಕ್ಕಳು ಮಾತ್ರ ಶಿಕ್ಷಣ ಪಡೆ ಯುತ್ತಾರೆ. ಮೂಲಭೂತವಾಗಿ ಶಿಕ್ಷಣ, ವ್ಯಾಸಂಗ ಕ್ರಮವೆಂದರೆ ಅದು ಪರೀಕ್ಷಾ ಪದ್ಧತಿಯನ್ನು ಆಧರಿಸಬೇಕು ಎನ್ನುವುದೇ ತಪ್ಪು ಕಲ್ಪನೆ. ಇಲ್ಲಿ ಪರೀಕ್ಷೆ ಎನ್ನುವುದು ಒಂದು ಪ್ರಕ್ರಿಯೆ ಮಾತ್ರ. ಕಡೆಗೂ ಮುಖ್ಯವಾಗುವುದು ಮಕ್ಕಳ ಕಲಿಕಾ ಕ್ರಮ ಮತ್ತು ಶಿಕ್ಷಕರ ಬೋಧನ ಕ್ರಮ. ಇದರ ಕುರಿತು ಎಲ್ಲಿಯೂ ಮಾತನಾಡದ ಶಿಕ್ಷಣ ಇಲಾಖೆ ಮತ್ತು ಸಚಿವರು ಮತ್ತೆ ಮತ್ತೆ ಪರೀಕ್ಷೆಯನ್ನು ಮುಖ್ಯವಾದ ಅಂಶವೆಂದು ಅವೈಜ್ಞಾನಿಕವಾಗಿ ನಿರ್ಧರಿಸುತ್ತಾರೆೆ. ಇದು ಅಪೇಕ್ಷಣೀಯವಲ್ಲ.

ಸಂವಿಧಾನ ವಿರೋಧಿ

ಸಾರ್ವಜನಿಕ ಶಿಕ್ಷಣ ಇಲಾಖೆಯ ಈ ನಿರ್ಧಾರವು 54 ವಿಧಿಗಳನ್ನೊಳಗೊಂಡ ‘ಮಕ್ಕಳ ಹಕ್ಕಿಗಾಗಿ ವಿಶ್ವಸಂಸ್ಥೆಯ ಸಮಾವೇಶ’ (UNCRC)ದ ನೀತಿಗಳಿಗೆ ವಿರುದ್ಧವಾಗಿದೆ. ಮಕ್ಕಳು ತಮ್ಮ ಹಕ್ಕನ್ನು ಸಂಪೂರ್ಣವಾಗಿ ಅನುಭವಿಸುವಂತೆ ಸರಕಾರ ಮತ್ತು ಪೋಷಕರು ಎಲ್ಲ ಬಗೆಯ ಕಾರ್ಯವಿಧಾನಗಳನ್ನು ಜಾರಿಗೊಳಿಸಬೇಕು ಎಂಬುದು ಅದರ ನೀತಿಯಾಗಿದೆ. ಅದರ ವಿಧಿ 28ರ ಅನುಸಾರ ಪ್ರತೀ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ವಿಧಿ 3ರ ಅನುಸಾರ ಮಕ್ಕಳ ಹಿತಾಸಕ್ತಿಗೆ ಮೊದಲ ಆದ್ಯತೆ ಕೊಡಬೇಕು. ವಿಧಿ 12ರ ಅನುಸಾರ ತಮಗೆ ಪರಿಣಾಮ ಬೀರುವ ವಿಷಯಗಳಲ್ಲಿ ಮಕ್ಕಳ ಅಭಿಪ್ರಾಯ, ದೃಷ್ಟಿಕೋನವನ್ನು ಪರಿಗಣಿಸಬೇಕು. ಆದರೆ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪನವರ 5,8,9,11 ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರ ಈ UNCRC ನೀತಿಯ ಉಲ್ಲಂಘನೆಯಾಗಿದೆ. ಜೊತೆಗೆ ಭಾರತ ಸಂವಿಧಾನದ ವಿಧಿ 45, 21, 21ಎರ ಆಶಯಗಳನ್ನೂ ಕಡೆಗಣಿಸುತ್ತದೆ

‘ಆರ್ಟಿಇ 2009’ ಕಾಯ್ದೆಯ ಪರಿಚ್ಛೇದ 4ರ ಅನುಸಾರ ‘6ನೇ ವಯಸ್ಸಿನ ನಂತರವೂ ಶಾಲೆಗೆ ದಾಖಲಾಗದ ಮಕ್ಕಳಿಗೆ ಅಥವಾ 18ನೇ ವಯಸ್ಸಿಗಿಂತ ಮೊದಲು ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸುವ ಮಕ್ಕಳಿಗೆ ವಿಶೇಷ ಸೌಲಭ್ಯ ಕೊಡಬೇಕು, ಅಗತ್ಯ ಕಾರ್ಯಯೋಜನೆಗಳನ್ನು ರೂಪಿಸಬೇಕು’ ಎಂದು ವಿವರಿಸುತ್ತದೆ. ಆದರೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರ ಈ ಪರಿಚ್ಛೇದ 4ರ ಆಶಯಗಳಿಗೆ ವಿರುದ್ಧವಾಗಿದೆ.

ಮುಖ್ಯವಾಗಿ ಪಬ್ಲಿಕ್ ಪರೀಕ್ಷೆಯ ಮೂಲಕ ಮಕ್ಕಳಲ್ಲಿ ಪರೀಕ್ಷೆಯ ಭಯವನ್ನು ನಿವಾರಿಸುತ್ತೇವೆ ಎನ್ನುವ ಹೇಳಿಕೆ ವಿವೇಚನೆರಹಿತವಾಗಿದೆ. ಪರೀಕ್ಷೆಗಳ ಮೂಲಕ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನವನ್ನು ಉತ್ತಮಪಡಿಸುವ ನಿರ್ಧಾರವು ಸಹ ಅವಿವೇಕದ ಸಂಗತಿಯಾಗಿದೆ. ಉತ್ತಮ ಬೋಧನೆ, ಗುಣಮಟ್ಟದ ಕಲಿಕೆಯನ್ನು ರೂಪಿಸದೆ, ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳದೆ, ಅತ್ಯುತ್ತಮ ಪಠ್ಯಗಳನ್ನು ಸಿದ್ಧಪಡಿಸದೆ, ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳದೆ ಕೇವಲ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವುದು ಬಡ ಕುಟುಂಬದ ಮಕ್ಕಳ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಇದು ಸಾವಿರಾರು ಬಾರಿ ಚರ್ಚೆಯಾಗಿದೆ.

ಪ್ರಸಕ್ತ ಪರಿಸ್ಥಿತಿ

20ನೇ ಶತಮಾನದ ಮಹಾನ್ ಶಿಕ್ಷಣತಜ್ಞ ಮತ್ತು ದಾರ್ಶನಿಕ ಬ್ರೆಝಿಲ್ನ ಪೌಲ್ ಫ್ರೈರೆ ‘‘ಯಾವುದೇ ಬಗೆಯ ‘ವ್ಯಾಸಂಗಕ್ರಮ’ವು (ಪೆಡಗಾಜಿ) ಶೋಷಿತರನ್ನು ಅದೃಷ್ಟಹೀನರು ಎಂದು ಕರೆದು ಅವರಿಂದ ದೂರವುಳಿದು ಅಥವಾ ಅವರನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಿಸಿ ವಿಮೋಚನೆಯನ್ನು ಸಾಧಿಸಲು ಸಾಧ್ಯವಿಲ್ಲ. ವಿಮೋಚನೆಯ ಹೋರಾಟದಲ್ಲಿ ಶೋಷಿತರು ಸ್ವತಃ ಆ ‘ವ್ಯಾಸಂಗಕ್ರಮ’ದ ಭಾಗವಾಗಿರಬೇಕು’’ ಎಂದು ವಿವರಿಸಿದ. ಫ್ರೈರೆ 1972ರಲ್ಲಿ ಬರೆದ ಶೋಷಿತರ ವ್ಯಾಸಂಗಕ್ರಮ, 1985ರಲ್ಲಿ ಬರೆದ ಶಿಕ್ಷಣದ ರಾಜಕೀಯ ಕೃತಿಗಳು ಆಧುನಿಕ ಶಿಕ್ಷಣಕ್ಕೆ, ಕಲಿಕೆಯರಿಮೆಗೆ ಅಗತ್ಯವಾದ ಹೊಸ ಬಗೆಯ ಚಿಂತನೆ ಮತ್ತು ವೈಜ್ಞಾನಿಕ, ತಾತ್ವಿಕವಾದ ಅಧ್ಯಯನವನ್ನು ವಿವರಿಸುತ್ತದೆ. ಸಾಂಪ್ರದಾಯಿಕ ಶಾಲಾ ಶಿಕ್ಷಣವನ್ನು ಒಡೆದು ಹಾಕಿ ಅದನ್ನು ಪುನರೂಪಿಸಬೇಕು (deschooling) ಎಂದು ಚಿಂತಿಸಿದ ಮತ್ತೊಬ್ಬ ಶಿಕ್ಷಣ ತಜ್ಞ ಇವಾನ್ ಇಲಿಚ್ ವಿಯೆನ್ನಾದಲ್ಲಿ ಹುಟ್ಟಿದ. Deschooling Society, ಸಂಭ್ರಮದ ಹತಾರಗಳು, ಸಮತೆಯ ಚೈತನ್ಯ, ವೈದ್ಯಕೀಯ ಪ್ರತೀಕಾರ ಇತ್ಯಾದಿ ಪುಸ್ತಕಗಳನ್ನು ಬರೆದ. 1973ರಲ್ಲಿ ಪ್ರಟವಾದ ‘Deschooling Society’ ಪುಸ್ತಕದಲ್ಲಿ ‘ಶಾಲೆಗಳು ಮಕ್ಕಳಿಗೆ ಅದರಲ್ಲೂ ಬಡತನದ ಹಿನ್ನೆಲೆಯಿಂದ ಬಂದ ಮಕ್ಕಳಿಗೆ ಕಾರ್ಯವಿಧಾನವನ್ನು, ತಿರುಳನ್ನು ಗೊಂದಲಗೊಳಿಸುವ ವಿದ್ಯಾಭ್ಯಾಸ ನೀಡುತ್ತವೆ. ಇದು ಮಸುಕಾಗುತ್ತ ಹೋದ ಹಾಗೆ ಮತ್ತಷ್ಟು ಇಲಾಜು ಮಾಡಿದಷ್ಟು ಉತ್ತಮ ಫಲಿತಾಂಶ ಅಥವಾ ಮೇಲಕ್ಕೇರುವುದು ಯಶಸ್ಸಿಗೆ ದಾರಿ ಎನ್ನುವ ತರ್ಕವನ್ನು ಮುಂದಿಡುತ್ತಾರೆ. ಮಕ್ಕಳ ಕಲ್ಪನಾಶಕ್ತಿಯನ್ನು, ಭಾವನಾಶಕ್ತಿಯನ್ನು ಶೈಕ್ಷಣಿಕ ಶಿಸ್ತಿನೊಳಗೆ ಬಂಧಿಸಿ ಮೌಲ್ಯದ ಬದಲಿಗೆ ಸೇವೆಯನ್ನು ಒಪ್ಪಿಕೊ ಎಂದು ಕಲಿಸಲಾಗುತ್ತದೆ’ ಎಂದು ವಿವರಿಸುತ್ತಾನೆ.

ಇಂಡಿಯಾದಲ್ಲಿ ಬೆರಳೆಣಿಕೆಯಷ್ಟು ಹೊರತುಪಡಿಸಿ ಶೋಷಿತರ ಪರವಾಗಿ ಚಿಂತಿಸುವ ಫ್ರೈರೆ, ಇಲಿಚ್ ಮಾದರಿಯ ಶಿಕ್ಷಣ ತಜ್ಞರ ಕೊರತೆಯಿದೆ. ಇಂದು ಪ್ರಜಾಪ್ರಭುತ್ವದ ಮುಖ್ಯ ಅಡಿಪಾಯವಾದ ಸಾರ್ವಜನಿಕ ಶಿಕ್ಷಣವೆನ್ನುವುದು ಅವನತಿ ಹೊಂದುತ್ತಿದೆ. ಸರಕಾರ-ಖಾಸಗಿ ಶಿಕ್ಷಣ ಸಂಸ್ಥೆಗಳು-ಶಿಕ್ಷಣ ಇಲಾಖೆ ಎಂಬ ಈ ತ್ರಿವಳಿ ಅನೈತಿಕ ಸಂಬಂಧ ಸರಕಾರಿ ಶಾಲೆಗಳನ್ನು ಹಂತಹಂತವಾಗಿ ನಾಶ ಮಾಡುತ್ತಿವೆ. ಇದರ ವಿವರಗಳು ಸಾಕಷ್ಟು ಬಾರಿ ಚರ್ಚೆಯಾಗಿದೆ. ಆದರೆ ಎಲ್ಲರಿಗೂ ಉತ್ತಮ ಗುಣಮಟ್ಟದ ಉಚಿತ, ಕಡ್ಡಾಯ ಶಿಕ್ಷಣ ದೊರಕಬೇಕು ಎನ್ನುವ ಆಶಯದೊಂದಿಗೆ (ಸಂವಿಧಾನದ ಪರಿಚ್ಛೇದ 45, 21ಎ) 4, ಆಗಸ್ಟ್ 2009ರಂದು ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಜಾರಿಗೆ ಬಂತು. ಬಡತನ ರೇಖೆಗಿಂತ ಕೆಳಗಿರುವ ಶೇ. 25 ಪ್ರಮಾಣದ ಕುಟುಂಬಗಳ ಮಕ್ಕಳಿಗೆ ಉಚಿತ, ಕಡ್ಡಾಯ, ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬುದು ಇದರ ಮೂಲ ಆಶಯವಾಗಿದೆ. ‘ಆರ್ಟಿಇ’ನ ಲೋಪದೋಷಗಳ ಕುರಿತು ಇಲ್ಲಿ ಚರ್ಚಿಸುವುದಿಲ್ಲ. ಅದಕ್ಕೆ ಬೇರೆಯದೆ ವೇದಿಕೆ ಬೇಕಾಗುತ್ತದೆ.

ಈ ಶಿಕ್ಷಣ ಹಕ್ಕು ಕಾಯ್ದೆಯ ಪರಿಚ್ಛೇದ 16ರ ಅನುಸಾರ ‘ಟಿo ಜeಣeಟಿಣioಟಿ ಠಿoಟiಛಿಥಿ’ (ಫೇಲು ಮಾಡುವಂತಿಲ್ಲ) ನೀತಿಯನ್ನು ಅಳವಡಿಸಲಾಗಿದೆ. ಈ ಅನುಚ್ಛೇದದ ಪ್ರಕಾರ 8ನೇ ತರಗತಿಯವರೆಗೂ ಬಾಲಕ/ಬಾಲಕಿಯನ್ನು ಫೇಲು ಮಾಡುವ ಹಾಗಿಲ್ಲ ಮತ್ತು ಶಾಲೆಯಿಂದ ಹೊರ ಹಾಕುವ ಹಾಗಿಲ್ಲ. ಇನ್ನೂ ಸರಳವಾಗಿ ಹೇಳಬೇಕೆಂದರೆ ಯಾವುದೇ ವಿದ್ಯಾರ್ಥಿಯನ್ನು ವ್ಯಾಸಂಗದಿಂದ ತಡೆಹಿಡಿಯುವ ಹಾಗಿಲ್ಲ. ಮಕ್ಕಳಿಗೆ ಅವರ 14ನೇ ವಯಸ್ಸಿನವರೆಗೂ (1-8 ತರಗತಿ) ಶಿಕ್ಷಣವು ಕಡ್ಡಾಯವಾಗಿ ದೊರಕಬೇಕು.

3 ಜನವರಿ 2019ರಂದು ರಾಜ್ಯಸಭೆಯಲ್ಲಿ ಈ ‘no detention policy’ ಅಥವಾ no-fail ನೀತಿಯಡಿ ‘ಆರ್ಟಿಇ’ ಕಾಯ್ದೆಯ ಪರಿಚ್ಛೇದ 16ಕ್ಕೆ ತಿದ್ದುಪಡಿ ತಂದು 5ನೇ ತರಗತಿಯಲ್ಲಿಯೇ (11ನೇ ವಯಸ್ಸಿನಲ್ಲಿ) ಮಕ್ಕಳನ್ನು ಫೇಲು ಮಾಡಬಹುದು ಎನ್ನುವ ಹೊಸ ನೀತಿಯು ಅಂಗೀಕಾರವಾಗುತ್ತದೆ ಮತ್ತು ಇದು ಎಲ್ಲಾ ರಾಜ್ಯ ಸರಕಾರಗಳ ಶಿಕ್ಷಣ ಇಲಾಖೆಗಳಿಗೂ ಅನ್ವಯಿಸುತ್ತದೆ ಮತ್ತು ಇದನ್ನು ಜಾರಿಗೊಳಿಸುವ ವಿವೇಚನೆಯನ್ನು ಆಯಾ ರಾಜ್ಯ ಸರಕಾರಗಳಿಗೆ ವಹಿಸಲಾಗಿದೆ. ಈ ತಿದ್ದುಪಡಿಯು ಈಗಾಗಲೇ ಅವಸಾನ ಹೊಂದುತ್ತಿರುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಕಡೆಯ ಮೊಳೆ ಹೊಡೆಯುತ್ತದೆ. ಈ ತಿದ್ದುಪಡಿಯನ್ನು ಪ್ರಸ್ತಾಪಿಸಿದ ಕೇಂದ್ರ ಸರಕಾರ ಮತ್ತು ಅದನ್ನು ಅನುಮೋದಿಸುವ ಸಂಸತ್ತು ಮತ್ತು ಅದನ್ನು ಜಾರಿಗೊಳಿಸುವ ರಾಜ್ಯ ಸರಕಾರಗಳು ಸ್ವತಃ ಕೈಯಾರೆ ಮುಂದೆ ನಿಂತು ಮಕ್ಕಳು ಶಾಲೆ ತೊರೆಯುವಂತೆ, ವ್ಯಾಸಂಗ ಮೊಟಕುಗೊಳಿಸುವುದಕ್ಕೆ ಕಾರಣರಾಗುತ್ತಾರೆ. ಬಡ ಮಕ್ಕಳ ಭವಿಷ್ಯ ಅತಂತ್ರವಾಗುವುದಕ್ಕೆ ಜವಾಬ್ದಾರರಾಗುತ್ತಾರೆ.

ಯಾತಕ್ಕೆ ‘no detention policy’ ಅಳವಡಿಸಿ ಕೊಂಡರು ಎನ್ನುವ ಪ್ರಶ್ನೆಗೆ ಉತ್ತರಿಸುವ ಮೊದಲು ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ

ಯಾವ ಕಾರಣಗಳಿಗೆ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ?

ಕುಟುಂಬದ ಬಡತನದ ಕಾರಣಕ್ಕೆ, ಲಿಂಗ ತಾರತಮ್ಯದ ಕಾರಣಕ್ಕೆ, ಜಾತಿ, ಧರ್ಮ ಕಾರಣಕ್ಕೆ, ಪೋಷಕರ ನಿರಾಸಕ್ತಿಯ ಕಾರಣದಿಂದ (ಗ್ರಾಮೀಣ ಭಾಗಗಳಲ್ಲಿ ಇದು ಹೆಚ್ಚು), ದುಬಾರಿ ಶುಲ್ಕದ ಕಾರಣದಿಂದ, ಮೂಲಭೂತ ಸೌಕರ್ಯಗಳ ಕೊರತೆಯ ಕಾರಣದಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ ಅಥವಾ ಡ್ರಾಪ್ಔಟ್ ಆಗುತ್ತಾರೆ. ಅಲ್ಲದೆ ತರಗತಿಯೊಳಗಿನ ಜಾತಿ, ಧರ್ಮ, ವರ್ಗ ತಾರತಮ್ಯದ ಕಾರಣಕ್ಕೆ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ.

ಮುಖ್ಯವಾಗಿ 5ರಿಂದ 6ನೇ ತರಗತಿಗೆ 7ರಿಂದ 8ನೇ ತರಗತಿಗೆ ಮತ್ತು 9ರಿಂದ 10ನೇ ತರಗತಿಗೆ ಪ್ರವೇಶಿಸುವ transition ಹಂತಗಳಲ್ಲಿನ ಗೊಂದಲಗಳು, ಶೈಕ್ಷಣಿಕ ಬಿಕ್ಕಟ್ಟುಗಳ ಕಾರಣಕ್ಕೆ ಶಾಲೆಯಿಂದ ಹೊರಗುಳಿಯುತ್ತಾರೆ.

ಮಕ್ಕಳು ಯಾವ ಕಾರಣಗಳಿಗೆ ಫೇಲಾಗುತ್ತಾರೆ?

ಗುಣಮಟ್ಟ ಬೋಧನೆಯ, ಕಲಿಕೆಯ ಕೊರತೆಯ ಕಾರಣದಿಂದ, ಶಿಕ್ಷಕರ ಕೊರತೆಯಿಂದ, ಏಕೋಪಾಧ್ಯಾಯ ಶಾಲೆಗಳಿಂದ, ಅವೈಜ್ಞಾನಿಕ ಪಠ್ಯಪುಸ್ತಕಗಳ ಕಾರಣದಿಂದ, ಪಠ್ಯಪುಸ್ತಕಗಳ ಕೊರತೆಯಿಂದ, ಮೂಲಭೂತ ಸೌಕರ್ಯಗಳ ಕೊರತೆಯ ಕಾರಣದಿಂದ, ಶಿಕ್ಷಕರ ಬೇಜವಾಬ್ದಾರಿ ಕಾರಣದಿಂದ, ಅಪೌಷ್ಟಿಕತೆಯ ಕಾರಣದಿಂದ, ಕುಟುಂಬದ ಪ್ರತಿಕೂಲ ಪರಿಸ್ಥಿತಿಯ ಕಾರಣದಿಂದ ಇತ್ಯಾದಿಗಳ ಕಾರಣಕ್ಕೆ ಮಕ್ಕಳು ಫೇಲ್ ಆಗುತ್ತಾರೆ.

ಈ ಕಾಯ್ದೆಯ ಸೆಕ್ಷನ್ 27ರ ಅನುಸಾರ ಶಿಕ್ಷಕ/ಶಿಕ್ಷಕಿಯನ್ನು ಪಾಠ ಮಾಡುವ ಜವಾಬ್ದಾರಿಯಿಂದ ಹೊರತಂದು ಬೋಧನೇತರ ಚಟುವಟಿಕೆಗಳಾದ ಜನಗಣತಿ, ಚುನಾವಣೆ, ವಿಕೋಪ ಪರಿಹಾರ ಕಾರ್ಯಗಳಲ್ಲಿ ಬಳಸಿಕೊಳ್ಳಬಾರದು ಎಂದು ಹೇಳಿದೆ. ಆದರೆ ಎಲ್ಲಾ ಸರಕಾರಿ ಶಾಲೆಗಳಲ್ಲಿ ಈ ನೀತಿಸಂಹಿತೆಯ ವಿರುದ್ಧವಾದ ನಿಯಮಗಳಿವೆ. ಶಿಕ್ಷಕರು ಬೋಧಕೇತರ ಚಟುವಟಿಕೆಗಳು ಅವರ ದಿನದ ಬಹುಪಾಲು ಸಮಯವನ್ನು ಬೋಧನೆಯಿಂದ ವಂಚಿತಗೊಳಿಸುತ್ತದೆ. ಈ ಕಾಯ್ದೆಯು ಗುತ್ತಿಗೆ ಆಧಾರದ ಮೇಲೆ ಶಿಕ್ಷಕ/ಶಿಕ್ಷಕಿಯರ ನೇಮಕಾತಿಗೆ ಅವಕಾಶ ಮಾಡಿಕೊಡುತ್ತದೆ ಮತ್ತು ಆ ಮೂಲಕ ಗೌರವಯುತವಾದ ಸಂಬಳ ಮತ್ತು ಸೌಲಭ್ಯಗಳನ್ನು ನಿರಾಕರಿಸಲಾಗುತ್ತದೆ. ಈ ಕಾರಣಗಳಿಗಾಗಿಯೂ ಮಕ್ಕಳು ಫೇಲ್ ಆಗುತ್ತಾರೆ

ಮೇಲೆ ತಿಳಿಸಿದಂತೆ ತರಗತಿಯೊಳಗಿನ ಜಾತಿ, ಧರ್ಮ, ವರ್ಗ ತಾರತಮ್ಯದ ಕಾರಣಕ್ಕೆ, 5 ರಿಂದ 6ನೇ ತರಗತಿಗೆ, 7ರಿಂದ 8ನೇ ತರಗತಿಗೆ ಮತ್ತು 9ರಿಂದ 10ನೇ ತರಗತಿಗೆ ಪ್ರವೇಶಿಸುವ transition ಹಂತಗಳಲ್ಲಿನ ಗೊಂದಲಗಳು, ಶೈಕ್ಷಣಿಕ ಬಿಕ್ಕಟ್ಟುಗಳ ಕಾರಣಕ್ಕೆ ಫೇಲಾಗುತ್ತಾರೆ.

ಆದರೆ ವೈರುಧ್ಯವೆಂದರೆ ಈ ಆರ್ಟಿಇ ಕಾಯ್ದೆ ಜಾರಿಗಾಗಿ ಬೋಧನ ಮತ್ತು ಪಠ್ಯಕ್ರಮಗಳ ವಲಯದಲ್ಲಿ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳದೆ (ಉದಾಹರಣೆಗೆ ನಿಧಾನ ಕಲಿಕೆಯ ಪ್ರವೃತ್ತಿಯ ಮಕ್ಕಳಿಗಾಗಿ ಬ್ರಿಡ್ಜ್ ಕೋರ್ಸ್ಗಳನ್ನು ಪ್ರಾರಂಭಿಸುವುದು) ಈ no-fail ನೀತಿಯನ್ನು ಕುರುಡಾಗಿ ಅನುಸರಿಸಿದರೆ ಅದು ಟೊಳ್ಳುತನದ ಪ್ರದರ್ಶನವಾಗುತ್ತದೆ.

ಇಲ್ಲಿ ಕಡೆಗೆ ಮಕ್ಕಳ ಬುದ್ಧಿವಂತಿಕೆ, ಗ್ರಹಣ ಶಕ್ತಿ, ನೆನಪಿನ ಶಕ್ತಿಗಳ ನ್ಯೂನತೆ ಅವರು ಫೇಲಾಗುವುದಕ್ಕೆ ಅಂತಿಮ ಕಾರಣಗಳು. ಅವು ಪ್ರಮುಖ ಕಾರಣಗಳಲ್ಲ.

ತಮಗೆ ಸಂಬಂಧಿಸಿರದ, ತಾವು ಜವಾಬ್ದಾರರಲ್ಲದ ಕಾರಣಗಳಿಗೆ ಮಕ್ಕಳು ಶಾಲೆಯಿಂದ ಹೊರಗುಳಿಯುವ, ಡ್ರಾಪ್ಔಟ್ ಆಗುವ, ಫೇಲ್ ಆಗುವ ಈ ಪ್ರವೃತ್ತಿಗೆ ಕಡಿವಾಣ ಹಾಕಬೇಕೆನ್ನುವುದು ಈ ‘no detention policy’ ಅಥವಾ no-fail ನೀತಿಯ ಮೂಲ ಉದ್ದೇಶ. ಮತ್ತೊಂದು ಕಡೆ ವ್ಯಾಸಂಗದಲ್ಲಿ ದುರ್ಬಲ, ಪ್ರತಿಭೆಯ ಕೊರತೆ ಎನ್ನುವ ನೆಪವನ್ನೊಡ್ಡಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಬಡಮಕ್ಕಳ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸುವ ದುರುದ್ದೇಶಕ್ಕೂ ಕಡಿವಾಣ ಹಾಕಬೇಕೆನ್ನುವುದು ಇದರ ಉದ್ದೇಶ.

ಆದರೆ 8ನೇ ತರಗತಿಯವರೆಗಿನ ಈ ‘no detention policy’ಯನ್ನು ವಿರೋಧಿಸುವ ಕೆಲ ಶಿಕ್ಷಣತಜ್ಞರು ‘‘ನಂತರ 9ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಕಠಿಣ ಸ್ಪರ್ಧೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಆ ಒತ್ತಡವನ್ನು ನಿಭಾಯಿಸಲು ವಿಫಲರಾಗುತ್ತಾರೆ ಮತ್ತು ನಿರಂತರವಾಗಿ ಫೇಲಾಗುತ್ತಾರೆ, ಶಾಲೆಯಿಂದ ಹೊರಗುಳಿಯುತ್ತಾರೆ’’ ಎಂದು ಅಭಿಪ್ರಾಯಪಡುತ್ತಾರೆ. ಮುಂದುವರಿದು ‘‘ಇದರ ಕಾರಣಕ್ಕಾಗಿ ಮಕ್ಕಳು ಶಿಕ್ಷಣದ ಮೇಲೆ ಆಸಕ್ತಿ ತೋರುವುದಿಲ್ಲ, ಕಲಿಕೆ ಗುಣಮಟ್ಟ ಕುಂದುತ್ತ ಹೋಗುತ್ತದೆ, ಶಿಕ್ಷಕರಿಗೆ ಉತ್ತರದಾಯಿತ್ವ ಇರುವುದಿಲ್ಲ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಭವಿಷ್ಯಕ್ಕೆ ಅಂಧಕಾರ ಕವಿಯುತ್ತದೆ’’ ಎಂದು ವಾದಿಸುತ್ತಾರೆ. ಆದರೆ no-fail ನೀತಿಯನ್ನು ವಿರೋಧಿಸುವವರು ಮೇಲೆ ತಿಳಿಸಿದ ಸಾರ್ವಜನಿಕ ಶಿಕ್ಷಣದ ವೈಫಲ್ಯತೆ, ಸಮಾಜೋ-ಆರ್ಥಿಕ ಕಾರಣಗಳ ದುರಂತ ಕುರಿತು ಪ್ರಶ್ನಿಸಿದಾಗ ನಿರುತ್ತರರಾಗುತ್ತಾರೆ.

ಶಿಕ್ಷಣದ ಖಾಸಗೀಕರಣವೂ ಈ ದುರಂತಕ್ಕೆ ಕಾರಣವಲ್ಲವೆ ಎನ್ನುವ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಅಲ್ಲದೆ ಫೇಲ್ ಮಾಡಿದ ನಂತರ ಅದೇ ತರಗತಿಯಲ್ಲಿ ಪುನರಾವರ್ತನೆಯಾದರೆ ಮಕ್ಕಳ ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆಯೇ ಎನ್ನುವುದಕ್ಕೆ ಯಾವುದೇ ಅಂಕಿಅಂಶಗಳ ಪುರಾವೆ ಇಲ್ಲ.

ಆದರೆ ಈ ಎಲ್ಲ ಈ ಕೊರತೆಗಳನ್ನು ನೀಗಿಸಲೆಂದೇ ಈ ಕಾಯ್ದೆಯ ಪರಿಚ್ಛೇದ 29(2)(ಎ)ರಲ್ಲಿ ವಿಸ್ತಾರವಾದ ಮತ್ತು ನಿರಂತರವಾದ ಮೌಲ್ಯಮಾಪನ (ಸಿಸಿಇ) ಪದ್ಧತಿಯನ್ನು ಜಾರಿಗೆ ತರಲಾಯಿತು. ಇದರ ಆಶಯವೆಂದರೆ ಶಿಕ್ಷಕ ಒಂದು ಸಿಲಬಸ್ನ ಒಂದು ಭಾಗವನ್ನು ಮುಗಿಸಿದ ನಂತರವಷ್ಟೇ ಮೌಲ್ಯಮಾಪನವನ್ನು ಕೈಗೊಳ್ಳಬೇಕು. ಈ ಪದ್ಧತಿಯಿಂದ ಶಿಕ್ಷಕನಿಗೆ ತಾನು ಹೇಗೆ ಬೋಧಿಸಿದ್ದೇನೆ ಎಂದು ಆ ಕೂಡಲೇ ಅರಿವಾಗುತ್ತದೆ. ಒಂದು ವೇಳೆ ನಿರೀಕ್ಷಿತ ಮಟ್ಟದಲ್ಲಿ ಕಲಿಕೆ ಇಲ್ಲದಿದ್ದ ಪಕ್ಷದಲ್ಲಿ ಬದಲಾವಣೆಗೊಂಡ ಪಠ್ಯದೊಂದಿಗೆ ಆ ಭಾಗವನ್ನು ಮರಳಿ ಬೋಧಿಸಬೇಕಾಗುತ್ತದೆ. ಇದೂ no-fail ಸಿದ್ಧಾಂತಕ್ಕಾಗಿ ಮೂಲಭೂತ ಸೌಲಭ್ಯಗಳನ್ನು ಮತ್ತು ಇನ್ನಿತರ ಸೌಕರ್ಯಗಳನ್ನು ಬಯಸುತ್ತದೆ. ಇದನ್ನು ಸಾಧಿಸಲು ಶಿಥಿಲಗೊಳ್ಳುತ್ತಿರುವ, ವ್ಯಾಪಾರೀಕರಣಗೊಳ್ಳುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ಶೀಘ್ರವಾಗಿ ಸರಿಪಡಿಸಬೇಕಾಗುತ್ತದೆ. ಆದರೆ ಈ ಕಾಯ್ದೆಯಲ್ಲಿ ಈ ಸುಧಾರಣೆಗಳಿಗೆ ಅವಕಾಶಗಳಿಲ್ಲ. ಅದರೆ ಈ ನೀತಿಯಲ್ಲಿರುವ ಅನೇಕ ತೊಡಕುಗಳನ್ನು ನಿವಾರಿಸಲು ಸಹ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿಫಲವಾಯಿತು.

ಉಪ ಸಂಹಾರ

ಇಂದಿನ ಅಸಮಾನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಎನ್ನುವುದು ಒಂದು ಭಯಂಕರ ದುಃಸ್ವಪ್ನದಂತೆ. ಅಂಚಿನಲ್ಲಿ ವಾಸಿಸುತ್ತಿರುವ ಸಮುದಾಯದ ಬಡಕುಟುಂಬದ ಮಕ್ಕಳಲ್ಲಿ ಇದು ಭಯವನ್ನು ಹುಟ್ಟಿಸುತ್ತದೆ. ಇದು ಅಕ್ಷರ ವಂಚಿತರನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತಷ್ಟು ದುರ್ಬಲಗೊಳಿಸುತ್ತದೆ. ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿರುವಾಗ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪನವರ ಈ ಅಸೂಕ್ಷ್ಮ ನಿರ್ಧಾರದಿಂದಾಗಿ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಭವಿಷ್ಯಕ್ಕೆ ದೊಡ್ಡ ಮಟ್ಟದ ಕೊಡಲಿ ಏಟು ಬೀಳುತ್ತದೆ. ಇದು ಖಾಸಗೀಕರಣಕ್ಕೆ ಮುನ್ನುಡಿ ಬರೆದಂತಿದೆ. ಶಿಕ್ಷಣ ತಜ್ಞ ಅನಿಲ್ ಸದ್ಗೋಪಾಲ್ ಅವರು ‘‘ಫಿನ್ಲ್ಯಾಂಡ್ನಿಂದ ಪಾಠ ಕಲಿಯಬೇಕಿದೆ. ಪ್ರಜಾತಾಂತ್ರಿಕವಾದ, ವಿಕೇಂದ್ರೀ ಕೃತವಾದ, ಪಾಲ್ಗೊಳ್ಳುವಿಕೆಯ ಮಾದರಿಯ ನೆರೆಹೊರೆಯ ಶಾಲೆಗಳ ಆಧಾರದ ಮೇಲೆ ಈಗಿನ ಶಾಲಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸಾರ್ವಜನಿಕ ಹೂಡಿಕೆಯ ಸಮಾನ ಶಾಲಾ ವ್ಯವಸ್ಥೆಯನ್ನಾಗಿ ಪರಿವರ್ತಿಸಬೇಕಾಗಿದೆ. ಶಿಕ್ಷಣದ ವ್ಯಾಪಾರೀಕರಣ ಮತ್ತು ಸಾರ್ವಜನಿಕ ಹೂಡಿಕೆಯನ್ನು ಹಿಂದೆಗೆದುಕೊಂಡು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಸಿದ್ಧಾಂತ ಎನ್ನುವ ಎರಡು ಅಪಾಯಕಾರಿ ನೀತಿಗಳು ಬದಲಾಗಬೇಕು. ಇದನ್ನು ಜಾರಿಗೊಳಿಸಲು ಈಗಿನ ಶಿಕ್ಷಣ ಹಕ್ಕು ಕಾಯ್ದೆಯನ್ನು ಹಿಂದೆಗೆದುಕೊಂಡು ಹೊಸ ಕಾಯ್ದೆಯನ್ನು ರೂಪಿಸಬೇಕಾಗಿದೆ’’ ಎಂದು ವಿವರಿಸುತ್ತಾರೆ

ಸಮಾನ ಶಿಕ್ಷಣದ ಅಂತಿಮ ಗುರಿಯಾದ ನೆರೆಹೊರೆ ಶಾಲಾ ವ್ಯವಸ್ಥೆಯನ್ನು ಜಾರಿಗೊಳಿಸುವುದೇ ಈಗ ಉಳಿದಿರುವ ಒಂದೇ ದಾರಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಬಿ. ಶ್ರೀಪಾದ ಭಟ್

contributor

Similar News