×
Ad

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ: ಟೆಂಡ‌ರ್ ಇಲ್ಲದೆಯೇ ಕೋ.ರೂ.ಗೂ ಹೆಚ್ಚು ಮೊತ್ತ ವೆಚ್ಚ

Update: 2025-11-26 06:44 IST

ಬೆಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು 2023-24ನೇ ಸಾಲಿನಲ್ಲಿ ಟೆಂಡರ್ ಕರೆಯದೇ 7,42,29,260 ರೂ. ಮೊತ್ತದಲ್ಲಿ ಉತ್ತರ ಪತ್ರಿಕೆ ಮತ್ತು ಅಂಕಪಟ್ಟಿಗಳ ಮುದ್ರಣ ಮಾಡಿಸಿರುವುದು ಸೇರಿದಂತೆ ಟೆಂಡರ್ ಇಲ್ಲದೆಯೆ ಒಟ್ಟು 10 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ವೆಚ್ಚ ಮಾಡಿತ್ತು.

ಅಲ್ಲದೇ ಟೆಂಡರ್ ಇಲ್ಲದೆಯೇ 45,19,652 ರೂ. ಮೊತ್ತದ ಸೇವೆ ಪಡೆದಿರುವುದನ್ನು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ. ಅಲ್ಲದೇ ತರಬೇತಿ ಹೆಸರಿನಲ್ಲಿ ಮಾಡಿರುವ ವೆಚ್ಚಕ್ಕೂ ಮುನ್ನ ಯಾವುದೇ ಟೆಂಡರ್ ಕರೆದಿರಲಿಲ್ಲ ಎಂಬುದನ್ನೂ ಬಹಿರಂಗಗೊಳಿಸಿದ್ದಾರೆ.

ಪರೀಕ್ಷಾ ಮೇಲ್ವಿಚಾರಕರ ಸಂಭಾವನೆಗೆ ಸಂಬಂಧಿಸಿದ ಮೌಲ್ಯಮಾಪನ ಕಾರ್ಯಕ್ಕಾಗಿ ಮಾಡಿರುವ ವೆಚ್ಚವನ್ನು ಒರೆಗೆ ಹಚ್ಚಿದ್ದಾರೆ. ಹಾಗೆಯೇ ವಿಶ್ವವಿದ್ಯಾನಿಲಯದಲ್ಲಿ ಪರಿನಿಯಮಗಳನ್ನು ರಚಿಸಿಕೊಳ್ಳದೆಯೇ ಸ್ಥಳೀಯ ವಿಚಾರಣೆ ಸಮಿತಿ ಸದಸ್ಯರಿಗೆ ದಿನಭತ್ತೆ, ಪ್ರಯಾಣ ಭತ್ತೆಯನ್ನೂ ಪಾವತಿಸಿರುವುದನ್ನು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.

2023-24ನೇ ಸಾಲಿಗೆ ಸಂಬಂಧಿಸಿದಂತೆ ಪೂರ್ಣಗೊಂಡಿರುವ ಲೆಕ್ಕ ಪರಿಶೋಧನಾ ವರದಿಯು ವಿಶ್ವವಿದ್ಯಾನಿಲಯದ ವಿವಿಧ ಅಕ್ರಮಗಳನ್ನು ಹೊರಗೆಳೆದಿದೆ. ಈ ವರದಿಯ ಪ್ರತಿಯು "the-file.in"ಗೆ ಲಭ್ಯವಾಗಿದೆ.

ತರಬೇತಿ ನೀಡುವ ಉದ್ದೇಶದಿಂದ 2018-19ರಲ್ಲಿ ಟೆಂಡರ್ ಕರೆದಿತ್ತು. ಈ ಸಂಬಂದ 2020ರ ಅಕ್ಟೋಬರ್ 13ರಂದು ಚಿನ್ಮಯ ಪ್ರಭುದೇವ ಚಿಗಟೇರಿ, ಶುಭಾಂಗಿಣಿ ಚಿನ್ಮಯ ಚಿಗಟೇರಿ, ದೀಪ್ತಿ ಆರಾಧ್ಯ ಎಂಬವರು ನಿರ್ದೇಶಕ ರಾಗಿರುವ ಹೆಲ್ತ್ ಮೈಂಡ್ಸ್ ಕನ್ಸಲ್ಟಿಂಗ್ಸ್ ಪ್ರೈವೆಟ್ ಲಿಮಿಟೆಡ್‌ನ

ಜತೆ ಟೆಂಡರ್ ಕರಾರು ಮಾಡಿಕೊಂಡಿತ್ತು. ಇದೇ ಟೆಂಡರ್ ಕರಾರನ್ನು ನವೀಕರಿಸಿಕೊಂಡಿದ್ದ ವಿಶ್ವವಿದ್ಯಾ ನಿಲಯವು 2023-24ನೇ ಸಾಲಿನಲ್ಲಿಯೂ ಈ ಸೇವೆ ಪಡೆದಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ 1999ರ ನಿಯಮ 4(ಇ)(2)ರ ಅನ್ವಯ ಯಾವುದೇ ಖರೀದಿ ಹಾಗೂ ಸೇವೆಯ ಮೌಲ್ಯವು 5 ಲಕ್ಷ ರೂ. ಮೊತ್ತ ಮೀರುವಂತಿದ್ದರೇ ಈ ಸೇವೆಯನ್ನು ಟೆಂಡರ್ ಮುಖಾಂತರ ಪಡೆಯಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ವಿಶ್ವವಿದ್ಯಾನಿಲಯವು ಯಾವುದೇ ಟೆಂಡರ್ ಆಹ್ವಾನಿಸದೆಯೇ ಟೆಂಡರ್ ಕರಾರನ್ನು ನವೀಕರಿಸಿದೆ. ಹೀಗಾಗಿ ಕಾರ್ಮಿಕ ಇಲಾಖೆಯು 2017ರಲ್ಲಿ ಹೊರಡಿಸಿದ್ದ ಸುತ್ತೋಲೆಯನ್ನು ಉಲ್ಲಂಘಿಸಿರುವುದನ್ನು ಲೆಕ್ಕ ಪರಿಶೋಧನೆಯು ಪತ್ತೆ ಹಚ್ಚಿದೆ.

ಅಲ್ಲದೇ ಕೆಟಿಪಿಪಿ ಕಾಯ್ದೆ ನಿಯಮ 12(3) ಅನ್ವಯ ಟೆಂಡರ್ ಅವಧಿಯನ್ನು ಶೇ. 25ರಷ್ಟು ಅಂದರೇ 3 ತಿಂಗಳ ವರೆಗೆ ವಿಸ್ತರಿಸಲು ಅವಕಾಶವಿದೆ. ಆದರೆ ಟೆಂಡರ್ ಪ್ರಕ್ರಿಯೆ ನಡೆಸದೇ ಅವಧಿಯನ್ನು ವಿಸ್ತರಿಸಿರುವ ಔಚಿತ್ಯವೇನು ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಲೆಕ್ಕ ಪರಿಶೋಧಕರು ನೋಟೀಸ್ ಜಾರಿಗೊಳಿಸಿದ್ದರು. ಆದರೆ ಇದಕ್ಕೆ ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ ಲೆಕ್ಕ ಪರಿಶೋಧಕರು 45,19, 652 ರೂ.ಯನ್ನು ಆಕ್ಷೇಪಣೆಯಲ್ಲಿರಿಸಿರುವುದು ತಿಳಿದು ಬಂದಿದೆ.

ಇದಲ್ಲದೇ ಉತ್ತರ ಪತ್ರಿಕೆ ಮತ್ತು ಅಂಕಪಟ್ಟಿಗಳ ಮುದ್ರಣ ಮಾಡಲೂ ಸಹ ಟೆಂಡರ್ ಕರೆದಿರಲಿಲ್ಲ. ಇದಕ್ಕಾಗಿ 7,42,29,260 ರೂ.ಯನ್ನು ವೆಚ್ಚ ಮಾಡಿತ್ತು. ಹೈದರಾ ಬಾದ್ ಮೂಲದ ಹೈಟೆಕ್ ಪ್ರಿಂಟ್ ಸಿಸ್ಟಂ ಲಿಮಿಟೆಡ್‌ನಿಂದ 2022ರ ಫೆ.21ರಿಂದ 2023ರ ಫೆ.20ರವರೆಗೆ ಒಂದು ವರ್ಷದ ಅವಧಿಗೆ ಕರಾರು ಮಾಡಿಕೊಂಡಿತ್ತು. ಈ ಕರಾರು ಅವಧಿ ಮುಕ್ತಾಯಗೊಂಡಿದ್ದರೂ ಸಹ 2023-24ನೇ ಸಾಲಿನಲ್ಲಿಯೂ ಈ ಸೇವೆಯನ್ನು ಇದೇ ಕಂಪೆನಿ ಯಿಂದ ಪಡೆದುಕೊಂಡಿತ್ತು.

ಕೆಟಿಪಿಪಿ ಕಾಯ್ದೆ 1999ರ ನಿಯಮ 12(3)ರ ಅನ್ವಯ ಟೆಂಡರ್ ಅವಧಿಯನ್ನು ಶೇ. 25ರಷ್ಟು ಅಂದರೇ 3 ತಿಂಗಳವರೆಗೆ ವಿಸ್ತರಿಸಲು ಅವಕಾಶವಿದೆ. ಆದರೆ ಟೆಂಡರ್ ಪ್ರಕ್ರಿಯೆ ನಡೆಸದೇ ಅವಧಿಯನ್ನು ವಿಸ್ತರಿಸಿರುವ ಔಚಿತ್ಯವೇನು ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಲೆಕ್ಕಪತ್ರ ವಿಚಾರಣೆ ನೋಟೀಸ್ ಜಾರಿಗೊಳಿಸಿತ್ತು. ಆದರೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ 7,42,29,260 ರೂ.ಯನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿರುವುದು ವರದಿಯಿಂದ ಗೊತ್ತಾಗಿದೆ.

ಪರೀಕ್ಷಾ ಮೇಲ್ವಿಚಾರಕರ ಸಂಭಾವನೆಯಲ್ಲಿಯೂ ಅಕ್ರಮ?: ಪರೀಕ್ಷಾ ಮೇಲ್ವಿಚಾರಕರ ಸಂಭಾವನೆಗೆ ಸಂಬಂಧಿಸಿದ ಮೌಲ್ಯಮಾಪನ ಕಾರ್ಯಕ್ಕಾಗಿ ವಿಶ್ವವಿದ್ಯಾ ನಿಲಯವು ಆಂತರಿಕ ಮತ್ತು ಬಾಹ್ಯ ಮೌಲ್ಯ ಮಾಪಕರಿಗೆ 73,29,54,360 ರೂ.ಯನ್ನು ಪಾವತಿಸ ಲಾಗಿತ್ತು. ಆದರೆ ಈ ಪಾವತಿಗಳಿಗೆ ಸಂಬಂಧಿಸಿದ ವೋಚರ್ ದಾಖಾತಿಗಳನ್ನು ಹಾಗೂ ದರಗಳನ್ನು ಅನುಸರಿಸಲು ಮಾನ ದಂಡಗಳು ಹಾಗೂ ಇದಕ್ಕೆ ಸರಕಾರದ ಅನುಮೋದನೆ ಪಡೆದಿರುವ ವಿವರ ಹಾಗೂ ಸದರಿ ಪಾವತಿಗಳನ್ನು ಮಾಡಲು ರಚಿಸಿಕೊಂಡಿರುವ ಪರಿನಿಯಮಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಬೇಕು ಎಂದು ಸೂಚಿಸಿದೆ.

ಸಂಭಾವನೆಯನ್ನು ಪಡೆದ ಸಿಬ್ಬಂದಿಯಿಂದ ಸ್ವೀಕೃತಿ ಪಡೆದಿರುವ ಮಾಹಿತಿ, ಸಂಭಾವನೆ ಬಿಲ್‌ಗಳಲ್ಲಿ ಕುಲಸಚಿವರು (ಮೌಲ್ಯಮಾಪನ) ದೃಢೀಕರಿಸಿರುವುದು, ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ನೀಡಿರುವ ಸಂಭಾವನೆಗೆ ಸಂಬಂಧಿಸಿದಂತೆ ಒಟ್ಟು ಪ್ರಶ್ನೆ ಪತ್ರಿಕೆಗಳ ಸಂಖ್ಯೆ, ಹಾಜರಾದ ಅಭ್ಯರ್ಥಿಗಳ ವಿವರ, ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಒಟ್ಟು ಉತ್ತರ ಪತ್ರಿಕೆಗಳ ಸಂಖ್ಯೆ, ಮೌಲ್ಯಮಾಪನ ಮಾಡಿದ ಉತ್ತರಪತ್ರಿಕೆಗಳ ಸಂಖ್ಯೆ, ಬೋಧಕ ಸಿಬ್ಬಂದಿಗಳ ವಿವರಗಳನ್ನು ಒದಗಿಸಬೇಕಿತ್ತು.

ಚೀಫ್ ಸೂಪರಿಟೆಂಡೆಂಟ್, ಡೆಪ್ಯುಟಿ ಚೀಫ್ ಸೂಪರಿ ಟೆಂಡೆಂಟ್, ಗುಮಾಸ್ತ ಸೇವೆ ನೀಡಿದ್ದ ಸಿಬ್ಬಂದಿ ನೇಮಕಾತಿ ಮಾಡಲು ವಿಶ್ವವಿದ್ಯಾನಿಲಯವು ಅನುಸರಿಸಿರುವ ಮಾನದಂಡಗಳ ಕುರಿತು ವಿವರ ಒದಗಿಸಬೇಕು. ಪರೀಕ್ಷಾ ಕಾರ್ಯಗಳಿಗಾಗಿ ವಿಶ್ವವಿದ್ಯಾನಿಲಯದ ಅಧಿಕಾರಿ, ಸಿಬ್ಬಂದಿಗೆ ನೀಡಿರುವ ಮುಂಗಡ ಗಳ ಕುರಿತು ವಿವರ ಒದಗಿಸಬೇಕು ಎಂದು ಸೂಚಿಸಿತ್ತು.

ಅಲ್ಲದೇ ಈ ಸಂಭಾವನೆಯನ್ನು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ (ತಿದ್ದುಪಡಿ) ಅಧಿನಿಯಮ 2013ರ ಕಲಂ (33)ರ ಅನ್ವಯ ಪರಿನಿಯಮಗಳನ್ನು ರಚಿಸಿ ಪರಿನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆಯೇ ಹಾಗೂ ಕಲಂ 34(3)ರಂತೆ ಸದರಿ ಪರಿನಿಯಮಗಳಿಗೆ ಕುಲಾಧಿಪತಿಯಿಂದ ಒಪ್ಪಿಗೆ ಪಡೆದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ನಂತರ ಪಾವತಿಸಿರುವ ಬಗ್ಗೆ ರಾಜ್ಯಪತ್ರದ ಪ್ರತಿಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಬೇಕು ಎಂದು ಸೂಚಿಸಿತ್ತು.

ಪರಿನಿಯಮ ರಚಿಸಿ ಪಾವತಿಗೆ ಅವಕಾಶ ಕಲ್ಪಿಸಿಕೊಳ್ಳದೇ ಮೌಲ್ಯಮಾಪನ ಕಾರ್ಯಕ್ಕಾಗಿ ವಿಶ್ವವಿದ್ಯಾನಿಲಯವು ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪಕರಿಗೆ 73,29,54,360 ರೂ.ಯನ್ನು ಪಾವತಿಸಿರುವುದನ್ನು ಆಕ್ಷೇಪಣೆಯಲ್ಲಿರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ. ಮಹಾಂತೇಶ್

contributor

Similar News