×
Ad

ತೆರಿಗೆ ವಸೂಲಿ: 74.56 ಕೋಟಿ ರೂ.ಗೂ ಅಧಿಕ ಮೊತ್ತ ನಷ್ಟ

Update: 2025-05-22 10:30 IST

ಬೆಂಗಳೂರು, ಮೇ 21: ರಾಜ್ಯದ 27 ಜಿಲ್ಲೆಗಳಲ್ಲಿನ ಗ್ರಾಮ ಪಂಚಾಯತ್‌ಗಳು ಆದಾಯ ತೆರಿಗೆ, ಮಾರಾಟ ತೆರಿಗೆ, ರಾಜಧನ, ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ನಿಧಿ, ಕಾರ್ಮಿಕ ಕಲ್ಯಾಣ ನಿಧಿ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ವಿಧಿಸಿರುವ ಶಾಸನಬದ್ಧ ತೆರಿಗೆ ಮೊತ್ತಕ್ಕಿಂತಲೂ ಕಡಿಮೆ ತೆರಿಗೆಯನ್ನು ಕಟಾಯಿಸಿವೆ.

ಅದೇ ರೀತಿ 24 ಜಿಲ್ಲೆಗಳಲ್ಲಿನ ಗ್ರಾಮ ಪಂಚಾಯತ್‌ಗಳು ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿವೆ. ಶಾಸನಬದ್ಧ ತೆರಿಗೆಯಲ್ಲಿ ಕಡಿಮೆ ಕಟಾಯಿಸಿರುವುದು ಮತ್ತು ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಆಗಿರುವ ಪ್ರಕರಣಗಳಲ್ಲಿ 74.56 ಕೋಟಿ ರೂ.ಗೂ ಅಧಿಕ ಮೊತ್ತ ನಷ್ಟವಾಗಿರುವುದನ್ನು ಪತ್ತೆ ಹಚ್ಚಿದೆ.

ಅಲ್ಲದೇ ಶಾಸನಬದ್ಧ ತೆರಿಗೆಗಳನ್ನು ಕಟಾಯಿಸಿ ಸರಕಾರದ ಇಲಾಖೆಗಳಿಗೆ ಜಮೆ ಮಾಡಿಲ್ಲ. ಹೀಗಾಗಿ 29.83 ಕೋಟಿ ರೂ.ಗೂ ಅಧಿಕ ಮೊತ್ತವು ದುರುಪಯೋಗವಾಗಿದೆ. ಇದರಿಂದಾಗಿ ಇಲಾಖೆಗಳಿಗೆ ಆದಾಯದಲ್ಲೂ ನಷ್ಟವಾಗಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಿದೆ.

ಹಿಂದಿನ ಬಿಜೆಪಿ ಸರಕಾರದ ಅವಧಿಯ (2022-23) ಗ್ರಾಮ ಪಂಚಾಯತ್‌ಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಿಡುಗಡೆ ಮಾಡಿರುವ ಲೆಕ್ಕ ಪರಿಶೋಧನೆ ವರದಿಯಲ್ಲಿ ಈ ಮಾಹಿತಿಗಳಿವೆ.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ರಾಜ್ಯದ 2,916 ಗ್ರಾಮ ಪಂಚಾಯತ್‌ಗಳು ವಾರ್ಷಿಕ ಆಯವ್ಯಯವನ್ನು ತಯಾರಿಸಿರಲಿಲ್ಲ ಮತ್ತು 1,363 ಗ್ರಾಮ ಪಂಚಾಯತ್‌ಗಳು ನಗದು ಪುಸ್ತಕವನ್ನೇ ನಿರ್ವಹಿಸಿರಲಿಲ್ಲ ಮತ್ತು ವಸೂಲಾತಿಯಲ್ಲಿ ಪಂಚಾಯತ್‌ಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದ್ದರ ಬೆನ್ನಲ್ಲೇ ಪಂಚಾಯತ್‌ಗಳ

ಬೇಡಿಕೆ, ವಸೂಲಾತಿ ಮತ್ತು ಬಾಕಿ ಉಳಿಸಿಕೊಂಡಿರುವ ಮೊತ್ತ ಪತ್ತೆ ಹಚ್ಚಿದ್ದ ಲೆಕ್ಕ ಪರಿಶೋಧನಾ ಇಲಾಖೆಯು ಶಾಸನಬದ್ಧ ತೆರಿಗೆಯಲ್ಲಿಯೇ ಕಡಿಮೆ ತೆರಿಗೆ ಕಟಾಯಿಸಿರುವ ಪ್ರಕರಣಗಳನ್ನೂ ಬಹಿರಂಗಗೊಳಿಸಿದೆ.

ಇಲಾಖೆಯು ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯು "the-file.in"ಗೆ ಲಭ್ಯವಾಗಿದೆ. ಸರಕಾರದ ನಿಯಮಗಳ ಪ್ರಕಾರ ಗ್ರಾಮ ಪಂಚಾಯತ್‌ಗಳು ಪ್ರತಿಯೊಂದು ಬಿಲ್‌ಗಳನ್ನು ಪಾವತಿಸುವಾಗ ಅನ್ವಯಿಸುವ ಶಾಸನಬದ್ಧ ಕಟಾವಣೆಗಳಾಗಿರುವ ಆದಾಯ ತೆರಿಗೆ, ಮಾರಾಟ ತೆರಿಗೆ, ರಾಜಧನ, ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ನಿಧಿ, ಕಾರ್ಮಿಕ ಕಲ್ಯಾಣ ನಿಧಿ ಕಟಾವಣೆ ಮಾಡಬೇಕು. ಕೆಲವು ಗ್ರಾಮ ಪಂಚಾಯತ್‌ಗಳು ಕಡಿಮೆ ಕಟಾಯಿಸಿವೆ ಮತ್ತು ಹಲವು ಗ್ರಾಮ ಪಂಚಾಯತ್‌ಗಳು ಈ ಶಾಸನಬದ್ಧ ತೆರಿಗೆ ಮೊತ್ತವನ್ನು ಕಟಾಯಿಸಿಯೇ ಇಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

‘ಕೆಲವು ಗ್ರಾಮ ಪಂಚಾಯತ್‌ಗಳ ನಿರ್ಲಕ್ಷ್ಯತನದಿಂದ ಕಟಾಯಿಸದೇ ಇರುವುದು, ಕಡಿಮೆ ಕಟಾಯಿಸಿರುವುದು, ಶಾಸನಬದ್ಧ ಕಟಾವಣೆಗಳನ್ನು ಸರಕಾರದ ಸಂಬಂಧಪಟ್ಟ ಇಲಾಖೆಗಳಿಗೆ ಜಮೆ ಮಾಡದೇ ಇರುವುದು, ದುರುಪಯೋಗಪಡಿಸಿಕೊಂಡಿರುವುದು ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದಿದೆ,’ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

ಇದಕ್ಕೆ ಗ್ರಾಮ ಪಂಚಾಯತ್‌ಗಳ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿರುವ ಲೆಕ್ಕಪರಿಶೋಧನೆ ಇಲಾಖೆಯು ಇಂತಹ ಲೋಪದೋಷಗಳಿಂದ ಸಂಬಂಧಪಟ್ಟ ಇಲಾಖೆಗಳಿಗೆ ಆದಾಯ ನಷ್ಟವಾಗುತ್ತಿದೆ ಎಂದೂ ಹೇಳಿದೆ.

27 ಜಿಲ್ಲೆಗಳಲ್ಲಿ 2,798 ಪಂಚಾಯತ್‌ಗಳಲ್ಲಿ ವಸೂಲಿ ಮಾಡಬೇಕಾಗಿದ್ದ ಶಾಸನಬದ್ಧ ತೆರಿಗೆಗಳಲ್ಲಿ ಕಡಿಮೆ ಕಟಾಯಿಸಿರುವುದು ಮತ್ತು ಕಟಾಯಿಸದೇ ಇರುವ ಮೊತ್ತ ಒಟ್ಟು 30.00 ಕೋಟಿ ರೂಪಾಯಿಯಷ್ಟಿದೆ.

ದಾವಣಗೆರೆ, ಚಾಮರಾಜನಗರ, ಕೋಲಾರ ಮತ್ತು ಬೆಳಗಾವಿ ಜಿಲ್ಲೆಯಲ್ಲಿನ 10 ಗ್ರಾಮ ಪಂಚಾಯತ್‌ಗಳಲ್ಲಿ ಕಾನೂನಿಗೆ ವಿರುದ್ಧವಾಗಿ 4 ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ಸಂದಾಯ ಮಾಡಿವೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಣೆಹಳ್ಳಿ ಪಂನಲ್ಲಿ 2.32 ಕೋಟಿ ರೂ., ಹಾಲೇಕಲ್ಲು ಪಂನಲ್ಲಿ 55.06 ಲಕ್ಷ ರೂ., ಗುತ್ತಿದುರ್ಗ ಪಂ ನಲ್ಲಿ 50.44 ಲಕ್ಷ ರೂ., ಪಲ್ಲಾಗಟ್ಟೆಯಲ್ಲಿ 76. 45 ಲಕ್ಷ ರೂ., ಚನ್ನಗಿರಿ ತಾಲೂಕಿನ ದಾಗಿನಕಟ್ಟೆಯಲ್ಲಿ 14.88 ಲಕ್ಷ ರೂ., ಸಂತೆಬೆನ್ನೂರಿನಲ್ಲಿ 87.66 ಲಕ್ಷ ರೂ., ನಲ್ಲೂರಿನಲ್ಲಿ 57.71 ಲಕ್ಷ ರೂ., ಬಿದರಕೆರೆಯಲ್ಲಿ 57.64 ಲಕ್ಷ ರೂ., ಬಸವನಕೋಟೆಯಲ್ಲಿ 54.65 ಲಕ್ಷ ರೂ.ಗಳನ್ನು ಕಾನೂನಿಗೆ ವಿರುದ್ಧವಾಗಿ ಸಂದಾಯ ಮಾಡಿವೆ.

ಹೊನ್ನಾಳಿ ತಾಲೂಕಿನ ಹಿರೇಗೋಣೀಗೆರೆಯಲ್ಲಿ 14.05 ಲಕ್ಷ ರೂ., ಬೆಂಗಳೂರು ದಕ್ಷಿಣದ ಕೆ.ಗೊಲ್ಲರಹಳ್ಳಿಯಲ್ಲಿ 63.33 ಲಕ್ಷ ರೂ., ಯಾದಗಿರಿಯ ಗುರುಮಿಟ್ಕಲ್ ತಾಲೂಕಿನ ಗಾಜರಕೋಟೆಯಲ್ಲಿ 59.96 ಲಕ್ಷ ರೂ.ಗಳನ್ನು ಕಾನೂನಿಗೆ ವಿರುದ್ಧವಾಗಿ ಸಂದಾಯ ಮಾಡಿರುವುದನ್ನು ಲೆಕ್ಕ ಪರಿಶೋಧಕರು ಬೆಳಕಿಗೆ ತಂದಿರುವುದು ವರದಿಯಿಂದ ಗೊತ್ತಾಗಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿಯಲ್ಲಿ 17.19 ಲಕ್ಷ ರೂ., ಬಂಗಾರಪೇಟೆ ತಾಲೂಕಿನ ಬಲಮಂದೆ ಪಂಚಾಯತ್‌ಯಲ್ಲಿ 13.37 ಲಕ್ಷ ರೂ., ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ದಿನ್ನಹಳ್ಳಿಯಲ್ಲಿ 13.67 ಲಕ್ಷ ರೂ., ಬೆಳಗಾವಿಯ ರಾಮದುರ್ಗ ತಾಲೂಕಿನ ಬಟಕುರ್ಕಿಯಲ್ಲಿ 11.97 ಲಕ್ಷ ರೂ.ಗಳನ್ನು ಕಾನೂನಿಗೆ ವಿರುದ್ಧವಾಗಿ ಸಂದಾಯ ಮಾಡಿವೆ.

ಕೆಟಿಪಿಪಿ ಕಾಯ್ದೆ ಉಲ್ಲಂಘನೆ

ಟೆಂಡರ್ ಮೌಲ್ಯ 5 ಲಕ್ಷ ರೂ. ಮೀರುವ ಸಂದರ್ಭದಲ್ಲಿ ಖರೀದಿ ಮತ್ತು ಸೇವೆಯನ್ನು ಪಾರದರ್ಶಕತೆ ನಿಯಮ ಅನುಸರಿಸಿ ಇ-ಟೆಂಡರ್ ಮೂಲಕ ನಿರ್ವಹಿಸಬೇಕು. ಆದರೆ ಗ್ರಾಪಂಗಳು ನೀರು ಸರಬರಾಜು, ಬೀದಿ ದೀಪ ಖರೀದಿ, ರಿಪೇರಿ, ಸಾಮಗ್ರಿಗಳ ಖರೀದಿಯಲ್ಲಿ ಟೆಂಡರ್/ಕೊಟೇಷನ್‌ಗಳನ್ನು ಆಹ್ವಾನಿಸಿಲ್ಲ. ಕೊಟೇಷನ್‌ಗಳಿಗೆ ಸಹಿ ಇಲ್ಲದೇ ಖರೀದಿ ಮತ್ತು ರಿಪೇರಿ ಪ್ರಕ್ರಿಯೆ ನಡೆಸಿವೆ. ಇದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999 ಮತ್ತು ನಿಯಮ 200 ಕೆಟಿಪಿಪಿ ಕಾಯ್ದೆಯನ್ನು ನೇರವಾಗಿ ಉಲ್ಲಂಘಿಸಿರುವುದು ಕಂಡು ಬಂದಿದೆ.

24 ಜಿಲ್ಲೆಗಳ 594 ಪಂಚಾಯತ್‌ಗಳು ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿವೆ. ಕಾನೂನಿಗೆ ವಿರುದ್ಧವಾಗಿ (ಸೆಕ್ಷನ್ ಎ) 29.26 ಲಕ್ಷ ರೂ. ಸಂದಾಯ ಮಾಡಿರುವುದು ಮತ್ತು ಕಾನೂನು ಬಾಹಿರವಾಗಿ (ಸೆಕ್ಷನ್ ಬಿ ) 44.72 ಕೋಟಿ ರೂ. ಮೊತ್ತವನ್ನು ಪಾವತಿಸಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಬೆಳವಾಯಿ ಗ್ರಾಮ ಪಂಚಾಯತ್‌ಯಲ್ಲಿ 1 ಲಕ್ಷ ರೂ. ಮೇಲ್ಪಟ್ಟ ಎಲ್ಲ ಸಾಮಗ್ರಿ ಖರೀದಿ, ಸೇವೆ ಮತ್ತು ಕಾಮಗಾರಿಗಳನ್ನು ಕೆಟಿಪಿಪಿ ಕಾಯ್ದೆ ನಿರ್ವಹಿಸಿಲ್ಲ. ಗ್ರಾಮ ಪಂಚಾಯತ್ ನಿಧಿಯಿಂದ ದಾರಿದೀಪ ನಿರ್ವಹಣೆ, ದುರಸ್ತಿ ಸೇವೆಗೆ ಎಪ್ರಿಲ್ ತಿಂಗಳಿನಿಂದ ಫೆಬ್ರವರಿವರೆಗೆ 4,29,055 ರೂ.ಗಳ ಮೊತ್ತದ ಸೇವೆಗಳನ್ನು ಯಾವುದೇ ಟೆಂಡರ್ ಕರೆಯದೇ ಪಡೆದಿದೆ. ಮತ್ತು ಇಷ್ಟೂ ಮೊತ್ತವನ್ನು ಪಾವತಿಸಿದೆ. ಇದು ನಿಯಮಗಳ ನೇರ ಉಲ್ಲಂಘನೆ ಎಂದು ಲೆಕ್ಕ ಪರಿಶೋಧನೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಬಾಗಲಕೋಟೆ ತಾಲೂಕಿನ ನೀರಲಕೇರಿ ಗ್ರಾಮ ಪಂಚಾಯತ್‌ಯಲ್ಲಿ 15ನೇ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ಬೀದಿ ದೀಪ, ವಿದ್ಯುತ್ ಸಾಮಗ್ರಿ ಮತ್ತು ಎಸ್‌ಸಿ, ಎಸ್‌ಟಿ ಕಾಲನಿಗೆ ಹೈಲೈಟ್ ಮತ್ತು ಸೋಲಾರ್ ಬೀದಿ ದೀಪ, ಅಂಗವಿಕಲ ಚೇತನರಿಗೆ ಸ್ಟೀಲ್ ಅಲ್ಮೇರಾ ಮತ್ತು ಲ್ಯಾಪ್ಟಾಪ್ಗಳನ್ನು ಕೊಟೇಷನ್ ಕೂಡ ಕರೆದಿಲ್ಲ. ನಿಯಮಗಳನ್ನು ಉಲ್ಲಂಘಿಸಿ ಈ ಸಾಮಗ್ರಿಗಳನ್ನು 4,23,077 ಲಕ್ಷ ರೂ.ಗಳ ವೆಚ್ಚದಲ್ಲಿ ಖರೀದಿಸಿದೆ. ಇದು ಸಹ ನಿಯಮಗಳ ನೇರ ಉಲ್ಲಂಘನೆಯಾಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಹೇಳಲಾಗಿದೆ.

2021-22ರಲ್ಲಿಯೂ 147 ಪಂಚಾಯತ್‌ಗಳು ದಾಖಲೆ ನಿರ್ವಹಣೆಯಲ್ಲಿ ಮತ್ತು ಲೆಕ್ಕ ಪರಿಶೋಧನೆಗೆ ದಾಖಲೆಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದವು. ಅದೇ ರೀತಿ ಲೆಕ್ಕಪರಿಶೋಧನೆಗೆ 251.99 ಕೋಟಿ ರೂ.ಗಳ ಜಮೆ ಮತ್ತು ವೆಚ್ಚಕ್ಕೆ ಸಂಬಂಧಿಸಿ ಯಾವುದೇ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಿರಲಿಲ್ಲ ಎಂಬುದನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಪತ್ತೆ ಹಚ್ಚಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ.ಮಹಾಂತೇಶ್

contributor

Similar News