ತುಮಕೂರು: ಸಿದ್ದಗಂಗಾ ಮಠದ ಅಕ್ಕಿ ಸಾಲ ಪಡೆದು ವಿದ್ಯಾರ್ಥಿನಿಲಯಗಳಿಗೆ ಪೂರೈಕೆ ಪ್ರಕರಣ; ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅಮಾನತು

Update: 2024-02-21 02:51 GMT

ಬೆಂಗಳೂರು: ಸಿದ್ದಗಂಗಾ ಮಠದ ಅನಾಥಾಲಯದಿಂದ ಅಕ್ಕಿ ಸಾಲ ಪಡೆದು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಿಗೆ ಅಕ್ಕಿ ಪೂರೈಕೆ ಮಾಡಿದ್ದ ಪ್ರಕರಣದಲ್ಲಿ ತುಮಕೂರು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಸರಕಾರ, ಜಿಲ್ಲಾ ಕಲ್ಯಾಣಾಧಿಕಾರಿಯ ರಕ್ಷಣೆಗಿಳಿದಿದೆ ಎಂಬ ಆರೋಪ ಕೇಳಿ ಬಂದಿದೆ.

ತುಮಕೂರು ಜಿಲ್ಲೆಯ ಬಹುತೇಕ ವಿದ್ಯಾರ್ಥಿನಿಲಯಗಳಿಗೆ ಅಕ್ಕಿ ಹಂಚಿಕೆ ಮಾಡುವಲ್ಲಿ ಹಿಂದುಳಿದ ವರ್ಗಗಳ ಇಲಾಖೆಯು ವಿಫಲವಾಗಿತ್ತು. ಈ ಪ್ರಕರಣದಲ್ಲಿ ಜಿಲ್ಲಾ ಕಲ್ಯಾಣಾಧಿಕಾರಿಯ ಬೇಜವಾಬ್ದಾರಿ ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದರೆ, ಕೇವಲ ತಾಲೂಕು ಕಲ್ಯಾಣಾಧಿಕಾರಿಯನ್ನಷ್ಟೇ ಅಮಾನತುಗೊಳಿಸಿರುವ ಸರಕಾರವು 2024ರ ಫೆ.20ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ವಿದ್ಯಾರ್ಥಿನಿಲಯಗಳಲ್ಲಿ ಅಕ್ಕಿ ಕೊರತೆಯಾಗಿದ್ದರಿಂದ ನಿಲಯ ಪಾಲಕರು ತುಮಕೂರಿನ ಸಿದ್ದಗಂಗಾ ಮಠದ ಅನಾಥಾಲಯಕ್ಕೆ ಮಂಜೂರಾಗಿದ್ದ ಅಕ್ಕಿಯನ್ನು ಸಾಲ ಪಡೆದಿದ್ದರು. ವಿದ್ಯಾರ್ಥಿನಿಲಯಗಳಿಗೆ ಮಾಸಿಕ ಬೇಡಿಕೆ ಪಟ್ಟಿಯಂತೆ ಅಕ್ಕಿ ಹಂಚಿಕೆಯಾಗಿರಲಿಲ್ಲ. ಜಿಲ್ಲೆಯ ಕೆಲವು ವಿದ್ಯಾರ್ಥಿನಿಲಯಗಳಿಗೆ ಅಕ್ಕಿ ಹಂಚಿಕೆಯಾಗಿದ್ದರೂ ಬಿಡುಗಡೆ ಮಾಡಿಲ್ಲ. ಹಲವು ವಿದ್ಯಾರ್ಥಿನಿಲಯಗಳಿಗೆ ಅಕ್ಕಿಯನ್ನು ಎತ್ತುವಳಿ ಮಾಡಿಲ್ಲ. ಮೇಲಾಧಿಕಾರಿಗಳ ನಿರ್ಲಕ್ಷ್ಯವೇ ಅಕ್ಕಿ ಪರದಾಟಕ್ಕೆ ಮೂಲ ಕಾರಣ ಎನ್ನಲಾಗಿತ್ತು.

ಅಕ್ಕಿ ಹಂಚಿಕೆ, ಬಿಡುಗಡೆ, ಎತ್ತುವಳಿ ಪ್ರಮಾಣದ ಕುರಿತು ಉಸ್ತುವಾರಿ ಹೊತ್ತಿದ್ದ ಜಿಲ್ಲಾ ಕಲ್ಯಾಣಾಧಿಕಾರಿಯು ಈ ಬಗ್ಗೆ ಯಾವುದೇ ಕ್ರಮ ವಹಿಸಿರಲಿಲ್ಲ ಎಂದು ತಾಲೂಕು ಕಲ್ಯಾಣಾಧಿಕಾರಿಗಳೇ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರೊಂದಿಗಿನ ಮಾತುಕತೆಯಲ್ಲಿ ಬಹಿರಂಗಪಡಿಸಿದ್ದರು. ಈ ಆಡಿಯೋ ಮತ್ತು ಕೆಲವು ದಾಖಲೆಗಳನ್ನಾಧರಿಸಿ ‘the-file.in’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾಗುತ್ತಿದ್ದಂತೆ ವಿಧಾನಪರಿಷತ್‌ನ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಪ್ರಕರಣದ ಕುರಿತು ಪ್ರಸ್ತಾವಿಸಿದ್ದರು.

ಸದನದಲ್ಲಿ ಸರಕಾರಕ್ಕೆ ಆಗಿದ್ದ ಮುಜುಗರದಿಂದ ಪಾರಾಗಲು ಇಲಾಖೆಯು ಕೆಳ ಹಂತದ ಅಧಿಕಾರಿಗಳನ್ನಷ್ಟೇ ತರಾಟೆಗೆ ತೆಗೆದುಕೊಂಡಿತ್ತು. ಆದರೆ, ಜಿಲ್ಲಾ ಕಲ್ಯಾಣಾಧಿಕಾರಿಗೆ ಕೇವಲ ನೋಟೀಸ್ ನೀಡಿ ಕೈ ತೊಳೆದುಕೊಂಡಿತ್ತು. ಆದರೀಗ ಈ ಪ್ರಕರಣದಲ್ಲಿ ತಾಲೂಕು ಕಲ್ಯಾಣಾಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವುದು ಜಿಲ್ಲಾ ಕಲ್ಯಾಣಾಧಿಕಾರಿಯನ್ನು ಈ ಪ್ರಕರಣದಲ್ಲಿ ರಕ್ಷಣೆಗಿಳಿದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.


ಅಮಾನತು ಆದೇಶದಲ್ಲೇನಿದೆ?

ಸಿದ್ದಗಂಗಾ ಮಠದ ಅನಾಥಾಲಯಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಹಂಚಿಕೆಯಾಗಿದ್ದ ಅಕ್ಕಿ ಮತ್ತು ಗೋಧಿ ಪೈಕಿ ಅಕ್ಕಿಯನ್ನು ತುಮಕೂರು ತಾಲೂಕಿನ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅವರ ಹಂತದಲ್ಲೇ ಪತ್ರ ವ್ಯವಹಾರದ ಮೂಲಕ ತಾಲೂಕಿನ ವಿದ್ಯಾರ್ಥಿನಿಲಯಗಳ ನಿಲಯಾರ್ಥಿಗಳ ಊಟೋಪಾಚರಕ್ಕೆ ಎರವಲು ಪಡೆಯಲಾಗಿರುತ್ತದೆ.

ಈ ರೀತಿ ಎರವಲು ಪಡೆಯಲಾಗಿದ್ದ ಪಡಿತರ ಅಕ್ಕಿಯ ದಾಸ್ತಾನು ವಿದ್ಯಾರ್ಥಿನಿಲಯದಲ್ಲಿ ಇದ್ದುದ್ದರಿಂದ ಹಾಗೂ ಸದರಿ ಅಕ್ಕಿಯನ್ನು ವಿದ್ಯಾರ್ಥಿನಿಲಯಗಳಲ್ಲಿ ಊಟೋಪಚಾರಕ್ಕೆ ಉಪಯೋಗಿಸುತ್ತಿದ್ದುದ್ದರಿಂದ ಅಕ್ಟೋಬರ್ 2023ರ ಮಾಹೆಯಿಂದ ಮಾರ್ಚಿ 2024 ಮಾಹೆಯವರೆಗೆ ಹಂಚಿಕೆಯಾಗಿದ್ದ ಅಕ್ಕಿ ಮತ್ತು ಗೋಧಿಯನ್ನು ಎತ್ತುವಳಿ ಮಾಡಿರುವುದಿಲ್ಲ.

ಪ್ರಸ್ತುತ ತುಮಕೂರು ತಾಲೂಕಿನ ವಿದ್ಯಾರ್ಥಿನಿಲಯಗಳಿಗೆ ಹಂಚಿಕೆಯಾಗಿದ್ದ ಅಕ್ಕಿ ಮತ್ತು ಗೋಧಿಯನ್ನು ಎತ್ತುವಳಿ ಮಾಡಲು ಹಾಗೂ ಸಿದ್ದಗಂಗಾ ಮಠದಿಂದ ಎರವಲು ಪಡೆಯಲಾಗಿದ್ದ ಅಕ್ಕಿಯನ್ನು ಹಿಂತಿರುಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ವರದಿ ಮಾಡಿದ್ದರು.

ಇಲಾಖಾ ವಿದ್ಯಾರ್ಥಿನಿಲಯಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ವರ್ಷಕ್ಕೆ ಎರಡು ಬಾರಿ ಅಂದರೆ ಎಪ್ರಿಲ್ ಹಾಗೂ ಅಕ್ಟೋಬರ್‌ನಲ್ಲಿ ಹಂಚಿಕೆಯಾಗುವ ಪಡಿತರ ಅಕ್ಕಿ ಹಾಗೂ ಗೋಧಿಯನ್ನು ನಿಗದಿತ ಸಮಯದಲ್ಲಿ ವಿದ್ಯಾರ್ಥಿನಿಲಯಗಳಲ್ಲಿ ಎತ್ತುವಳಿ ಮಾಡಬೇಕಾಗಿರುವುದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದ್ದು ತುಮಕೂರು ತಾಲೂಕಿನ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಗೀತಮ್ಮ ಅವರು ಇದನ್ನು ಪಾಲಿಸಿರುವುದಿಲ್ಲ.

ಹಾಗೂ ಸಿದ್ದಗಂಗಾ ಮಠದಿಂದ ಅಕ್ಕಿಯನ್ನು ತುಮಕೂರು ತಾಲೂಕಿನ ವಿದ್ಯಾರ್ಥಿನಿಲಯಗಳಿಗೆ ಎರವಲು ಪಡೆದಿರುವುದು ನಿಯಮಬಾಹಿರವಾದ ಕೆಲಸವಾಗಿರುತ್ತದೆ. ಈ ರೀತಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿರುವ ಹಿನ್ನೆಲೆಯಲ್ಲಿ ಇಲಾಖೆಯ ಆಯುಕ್ತ ಕೆ.ಎ.ದಯಾನಂದ ಅವರು 2024ರ ಫೆ.20ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News