×
Ad

ಇಳುವರಿ ಕುಂಠಿತ: ತೆಂಗಿನ ಕಾಯಿ ದರ ಶತಕದತ್ತ ದಾಪುಗಾಲು

Update: 2025-07-02 14:29 IST

ಮಂಗಳೂರು: ವರ್ಷದ ಆರಂಭದಲ್ಲಿ ಕೆ.ಜಿಗೆ 65 ರೂ. ಇದ್ದ ತೆಂಗಿನ ಕಾಯಿ ದರ ಈಗ 85 ರೂ. ದಾಟಿದ್ದು, ಧಾರಣೆ 100 ರೂ. ತಲುಪುವತ್ತ ಮುಂದುವರಿದಿದೆ.

ತೆಂಗಿನ ಕಾಯಿ ಧಾರಣೆ ಏರಿಕೆಯು ಬೆಳೆಗಾರರ ಪಾಲಿಗೆ ಒಂದು ರೀತಿಯಲ್ಲಿ ಉತ್ತಮ ಬೆಳವಣಿಗೆ ಆಗಿದ್ದರೂ ದಿನ ಬಳಕೆಗಾಗಿ ಅಂಗಡಿಯಿಂದ ಖರೀದಿಸುವವರ ಪಾಲಿಗೆ ಕಹಿ ಅನುಭವ. ಇಳುವರಿ ಕುಂಠಿತ ಆಗಿರುವ ಕಾರಣ ತೆಂಗಿನ ಬೆಳೆಗಾರರಿಗೆ ಈ ಬೆಲೆ ಏರಿಕೆಯ ಲಾಭ ದೊರಕುತ್ತಿಲ್ಲ. ಮಾತ್ರವಲ್ಲದೆ, ಬೆಲೆ ಏರಿಕೆ ಗ್ರಾಹಕರಿಗೂ ಹೊರೆಯಾಗುತ್ತಿದೆ.

ಅಧಿಕವಾದ ತೆಂಗಿನ ಎಣ್ಣೆ ಬಳಕೆ: ಕರಾವಳಿಯಲ್ಲಿ ತೆಂಗಿನ ಎಣ್ಣೆ ದರವೂ ಭಾರೀ ಪ್ರಮಾಣದಲ್ಲಿ ಏರಿಕೆ ಹಾದಿ ಹಿಡಿದಿದೆ. ದ.ಕ.ದಲ್ಲಿ ಕಳೆದ ವರ್ಷ ಶುದ್ಧ ತೆಂಗಿನ ಎಣ್ಣೆ ಮಾರುಕಟ್ಟೆ ದರ ಗರಿಷ್ಠ 170 ರೂ. ಇತ್ತು. ಆದರೆ, ಈಗ ದರ ದುಪ್ಪಟ್ಟಾಗಿದೆ. ದ.ಕ.ದಲ್ಲಿ ಇತ್ತೀಚಿನ ವರ್ಷಗಳಲ್ಲಿ ತೆಂಗಿನ ಎಣ್ಣೆ ಜಾಸ್ತಿ ಬೇಡಿಕೆ ಇರಲಿಲ್ಲ. ತಾಳೆ ಎಣ್ಣೆ, ಸೂರ್ಯಕಾಂತಿ ಸೇರಿದಂತೆ ಸಂಸ್ಕರಿತ ಎಣ್ಣೆಗಳನ್ನು ಬಳಕೆ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಜನರು ತೆಂಗಿನ ಎಣ್ಣೆಯ ಬಳಕೆಯ ಕಡೆಗೆ ಹೆಚ್ಚು ಒತ್ತು ನೀಡಿರುವ ಹಿನ್ನೆಲೆಯಲ್ಲಿ ತೆಂಗಿನ ಎಣ್ಣೆಗೆ ಬೇಡಿಕೆ ಸಹಜವಾಗಿ ಹೆಚ್ಚಾಗಿದೆ.

ಎಳನೀರು ಬೇಡಿಕೆ: ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಬಿಸಿ ವಾತಾವರಣದಲ್ಲಿ ಎಳನೀರು ಬೇಡಿಕೆ ಜಾಸ್ತಿ ಇತ್ತು. ಬೇಸಗೆಯಲ್ಲಿ ಒಂದು ಎಳನೀರು 70 ರೂ. ಇತ್ತು. ಆಗ ಎಳನೀರು ಬೇಡಿಕೆಯೂ ತೀವ್ರ ಪ್ರಮಾಣದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಮತ್ತು ಉತ್ತಮ ಧಾರಣೆಯ ಕಾರಣಕ್ಕಾಗಿ ಕಾಯಿ ಬೆಳೆಯಲು ಅವಕಾಶ ನೀಡದೆ ಎಳನೀರು ಹಂತದಲ್ಲೇ ಮಾರಿದರು.

ಕೊಬ್ಬರಿಯ ಕೊರತೆಯ ಕಾರಣಕ್ಕಾಗಿ ಈಗ ತೆಂಗಿನ ಕಾಯಿ ಮತ್ತು ತೆಂಗಿನ ಎಣ್ಣೆಗೆ ಬೇಡಿಕೆ ಏರಿಕೆಯಾಗಿದೆ. ತೆಂಗಿನ ಕಾಯಿ ಬೆಲೆ ಏರುತ್ತಲೇ ಇರುವುದರಿಂದ ತೆಂಗಿನ ಕಾಯಿಯ ಉಪ ಉತ್ಪನ್ನಗಳಾದ ತೆಂಗಿನ ಎಣ್ಣೆ ಮತ್ತು ತೆಂಗಿನ ಹಿಂಡಿಯ ದರವೂ ಸಹಜವಾಗಿ ಏರಿಕೆಯಾಗಿದೆ.

ಸ್ಥಳೀಯ ಉತ್ಪಾದಕರ ಬಳಿ 350-400 ರೂ. ಇದೆ. ಇದೀಗ ಕ್ಯಾಂಪ್ಕೊದ ಉತ್ತಮ ಗುಣಮಟ್ಟದ ‘ಕಲ್ಪ’ ಬ್ರ್ಯಾಂಡ್ ತೆಂಗಿನ ಎಣ್ಣೆ ದರ ಲೀಟರ್‌ಗೆ ರೂ. 480-490 ರೂ. ಇದೆ. ದ.ಕ. ತೆಂಗು ರೈತ ಉತ್ಪಾದಕರ ಸಂಸ್ಥೆಯ ‘ತೆಂಗು ರೈತ’ ಎಣ್ಣೆಗೆ ಲೀಟರ್ ದರ 480 ರೂ. ಆಗಿದೆ.

ಬೇಡಿಕೆ ಜಾಸ್ತಿ: ಕರಾವಳಿ ಜಿಲ್ಲೆಗಳಲ್ಲಿ ತೆಂಗಿನ ಕಾಯಿ ಬಳಕೆ ಜಾಸ್ತಿ ಇದೆ. ತೆಂಗಿನ ಕಾಯಿಗೆ ಧಾರಣೆ ಏರಿಕೆ ರಾಜ್ಯದ ತೆಂಗು ಬೆಳೆಗಾರರಿಗೆ ಖುಷಿ ನೀಡಿದ್ದರೂ, ಇಳುವರಿಯಲ್ಲಿ ಕುಸಿತವಾಗಿರುವುದರಿಂದ ಬೆಲೆ ಏರಿಕೆಯ ಪ್ರಯೋಜನ ಬೆಳೆಗಾರರಿಗೆ ಸಿಗದಂತಾಗಿದೆ.

ಕಾಡು ಪ್ರಾಣಿಗಳ ಹಾವಳಿ: ಇಲಿ, ಮಂಗ, ಕಾಡು ಹಂದಿಗಳ ಹಾವಳಿ, ಪ್ರಾಕೃತಿಕ ವಿಕೋಪವು ತೆಂಗಿನ ಕಾಯಿ ಇಳುವರಿ ಕುಸಿತಕ್ಕೆ ಕಾರಣವಾಗಿದೆ.

ತೆಂಗಿನ ಕಾಯಿಯ ಮೌಲ್ಯವರ್ಧಿತ ಉತ್ಪನ್ನಗಳು ಕೂಡಾ ಹೆಚ್ಚುತ್ತಿರುವ ಜತೆಗೆ, ಬೆಳೆಗಾರರು ಎಳ ನೀರಿಗಾಗಿಯೂ ಬಹು ಪ್ರಮಾಣದ ಇಳುವರಿಯನ್ನು ಬಳಸುತ್ತಿರುವ ಕಾರಣದಿಂದಾಗಿ ತೆಂಗಿನಕಾಯಿಗೆ ಈಗ ಬರ ಕಂಡು ಬಂದಿದೆ. ಎಳನೀರಿಗಾಗಿ ದ.ಕ.ಜಿಲ್ಲೆಯು ನೆರೆಯ ರಾಜ್ಯಗಳನ್ನು ಹೊರತುಪಡಿಸಿ ಹೊರ ಜಿಲ್ಲೆಗಳಾದ ಮಂಡ್ಯ, ಮದ್ದೂರಿನಿಂದಲೂ ಅಮದು ಮಾಡಿಕೊಳ್ಳುತ್ತಿದೆ.

ಅಡಿಕೆಗೆ ಒತ್ತು: ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಅಡಿಕೆಯೊಂದಿಗೆ ತೆಂಗನ್ನು ಬೆಳೆಯಲಾಗುತ್ತದೆ. ಅಡಿಕೆ ಧಾರಣೆ ಚೆನ್ನಾಗಿದೆ.ತೆಂಗಿನ ಕಾಯಿಗೂ ಧಾರಣೆ ಏರಿದೆ. ಆದರೆ ಅಡಿಕೆಯಂತೆ ತೆಂಗಿನ ಬೆಳೆಯ ಕಡೆಗೆ ಒತ್ತು ನೀಡದ ಹಿನ್ನೆಲೆಯಲ್ಲಿ ಸದ್ಯ ಬೇಡಿಕೆ ಇದ್ದರೂ ತೆಂಗಿನ ಕಾಯಿ ಇಳುವರಿ ಕಡಿಮೆಯಾಗಿದೆ. ಇಳುವರಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದರ ಏರಿಕೆಯ ಪ್ರಯೋಜನ ಬೆಳೆಗಾರರ ಪಾಲಿಗೆ ದೂರವಾಗಿದೆ.

ದಾಸ್ತಾನು ಇನ್ನೂ ಇದೆ: ತೆಂಗಿನ ಕಾಯಿಗೆ ಇನ್ನೂ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕೆಲವು ಬೆಳೆಗಾರರು, ಮಾರಾಟಗಾರರು ಇನ್ನೂ ತಮ್ಮಲ್ಲಿರುವ ಸ್ಟಾಕ್‌ನ್ನು ಖಾಲಿ ಮಾಡಿಲ್ಲ. ಹಿಂದೂಗಳ ಹಬ್ಬದ ಸೀಸನ್ ಇನ್ನು ಬರಬೇಕಷ್ಟೆ. ಆಗ ತೆಂಗಿನ ಕಾಯಿಯ ದರ ಇನ್ನಷ್ಟು ಏರಬಹುದು.

ಅಧಿಕ ಸಂಖ್ಯೆಯ ಧಾರ್ಮಿಕ ಕೇಂದ್ರಗಳನ್ನೂ ಹೊಂದಿರುವ ದ.ಕ. ಜಿಲ್ಲೆಯಲ್ಲಿ ತೆಂಗಿನ ಕಾಯಿಗೆ ಇನ್ನಿಲ್ಲದಂತೆ ಬೇಡಿಕೆ ಇದೆ. ಬಹುತೇಕವಾಗಿ ದೇವಸ್ಥಾನ, ಮಂದಿರಗಳಲ್ಲಿ ಬಳಕೆಯಾಗುವ ತೆಂಗಿನಕಾಯಿಯನ್ನು ದ.ಕ. ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆಗಳಾದ ತಿಪಟೂರು, ಚಾಮರಾಜನಗರ, ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡಿನಿಂದ ತರಿಸಿಕೊಳ್ಳಲಾಗುತ್ತಿದೆ.

ತೆಂಗಿನ ಕಾಯಿಗೆ ಬೇಡಿಕೆ ಯಾವತ್ತೂ ಕಡಿಮೆಯಾಗದು. ತೆಂಗಿನ ಕಾಯಿ ಕೆ.ಜಿಗೆ ಮೂರು ವರ್ಷಗಳ ಹಿಂದೆ 18 ರೂ ಇತ್ತು. ಇದೀಗ 85 ರೂ. ದಾಟಿದೆ. ದಕ್ಷಿಣ ಕನ್ನಡ, ಕಾಸರಗೋಡು ಭಾಗದ ತೆಂಗಿನ ಕಾಯಿಗಳ ಗುಣಮಟ್ಟ ಉತ್ತಮವಾಗಿದೆ. ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಇಲ್ಲಿನ ತೆಂಗಿನ ಕಾಯಿಗಳಿಗೆ ಭಾರೀ ಬೇಡಿಕೆ ಇದೆ. ಪ್ರಾಕೃತಿಕ ವಿಕೋಪದಿಂದಾಗಿ ತೆಂಗು ಬೆಳೆಯ ಇಳುವರಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.

- ಕುಸುಮಾಧರ್, ದ.ಕ. ತೆಂಗು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇಬ್ರಾಹೀಂ ಅಡ್ಕಸ್ಥಳ

contributor

Similar News