ಯಾದಗಿರಿ: ಗುರುಮಠಕಲ್ ಪಟ್ಟಣದಲ್ಲಿ ಇಂದು ಆರೆಸ್ಸೆಸ್ ಪಥ ಸಂಚಲನ
ಯಾದಗಿರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಕರ್ಮಭೂಮಿಯಾದ ಗುರುಮಠಕಲ್ ಪಟ್ಟಣದಲ್ಲಿ ಇಂದು (ಶುಕ್ರವಾರ) ಆರೆಸ್ಸೆಸ್ ವತಿಯಿಂದ ಪಥ ಸಂಚಲನ ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಲಕ್ಷ್ಮೀಬಾಯಿ ನರೇಂದ್ರ ರಾಠೋಡ್ ಲೇಔಟ್ನಿಂದ ಪಥ ಸಂಚಲನ ಆರಂಭವಾಗಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದ್ದು, ನೂರಾರು ಗಣವೇಷಧಾರಿಗಳು ಭಾಗವಹಿಸಲಿದ್ದಾರೆ.
ಪಟ್ಟಣದ ಬೀದಿಗಳಲ್ಲಿ ಕೇಸರಿ ಬಾವುಟ, ಬ್ಯಾನರ್ ಮತ್ತು ಬಟ್ಟಿಂಗ್ಸ್ ಅಳವಡಿಸಿ ಪಥ ಸಂಚಲನಕ್ಕೆ ತಯಾರಿ ಮಾಡಲಾಗಿದೆ. ಪಟ್ಟಣದ ಹಲವು ಹಂತಗಳಲ್ಲಿ ಸ್ಥಳೀಯರು ಸ್ವಾಗತ ಕಮಿಟಿಗಳನ್ನು ರಚಿಸಿದ್ದಾರೆ.
ಅ. 25ರಂದು ನಡೆಯಬೇಕಿದ್ದ ಪಥ ಸಂಚಲನವನ್ನು ಜಿಲ್ಲಾಡಳಿತದಿಂದ ಅನುಮತಿ ಸಿಗದ ಕಾರಣ ಮುಂದೂಡಲಾಗಿತ್ತು. ಬಳಿಕ ಮತ್ತೊಮ್ಮೆ ಅರ್ಜಿ ಸಲ್ಲಿಸಿದ ಸಂಘದ ಮುಖಂಡರಿಗೆ ಡಿಸಿ ಹರ್ಷಲ್ ಬೋಯರ್ ಅನುಮತಿ ನೀಡಿದ್ದಾರೆ.
ಪಥ ಸಂಚಲನದ ಸಂದರ್ಭದಲ್ಲಿ ಶಿಸ್ತು ಮತ್ತು ಶಾಂತಿಯುತ ವಾತಾವರಣ ಕಾಪಾಡಿಕೊಳ್ಳಲು ಪೊಲೀಸರಿಂದ ಭದ್ರತೆ ಕೈಗೊಳ್ಳಲಾಗಿದೆ.