ಯಾದಗಿರಿ | ಕಾಯಕ ಗ್ರಾಮ ಕಾರ್ಯಕ್ರಮಕ್ಕೆ ಸಿಇಓರಿಂದ ಚಾಲನೆ
ಯಾದಗಿರಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ ಯಾದಗಿರಿ, ತಾಪಂ ಶಹಾಪುರ ಹಾಗೂ ಗ್ರಾಪಂ ಉಕ್ಕನಾಳ ಇವರ ಸಹಯೋಗದಲ್ಲಿ ನ.6ರಂದು ಉಕ್ಕನಾಳ ಗ್ರಾಮದ ಸ.ಹಿ.ಪ್ರಾ ಶಾಲಾ ಆವರಣದಲ್ಲಿ ಹಮ್ಮಿಕೊಂಡ ಕಾಯಕ ಗ್ರಾಮ ಕಾರ್ಯಕ್ರಮಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲವೀಶ ಒರಡಿಯಾ ರವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇ-ಆಡಳಿತ ವಿಭಾಗ ಏಪ್ರಿಲ್ ತಿಂಗಳಲ್ಲಿ ತಯಾರಿಸುವ (Gram Panchayat Performance Ranking) ಪಟ್ಟಿಯಲ್ಲಿ ಹಿಂದುಳಿದ ಗ್ರಾಮ ಪಂಚಾಯಿತಿಗಳನ್ನು ಹಿರಿಯ ಅಧಿಕಾರಿಗಳು ದತ್ತು ಪಡೆದು 3 ವರ್ಷಗಳ ಕಾಲ ರಾಜ್ಯ ಹಾಗೂ ಕೇಂದ್ರ ಸರಕಾರದ ನಾನಾ ಅಭಿವೃದ್ಧಿ ಯೋಜನೆ, ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ ನಿಗಾವಹಿಸಿ ಅಭಿವೃದ್ಧಿಪಡಿಸುವುದು ಕಾಯಕ ಗ್ರಾಮ ಕಾರ್ಯಕ್ರಮದ ಮೂಲ ಉದ್ದೇಶ ಎಂದರು.
ಕಾಯಕ ಗ್ರಾಮ ಯೋಜನೆಯಡಿ ಮಾನ್ಯ ದತ್ತು ಪಡೆದ ಉಕ್ಕಿನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಮೂಲ ಸೌಲಭ್ಯಗಳ ಪಟ್ಟಿ ಮಾಡಿ, ಗ್ರಾಮಸ್ಥರ (ಸಮಸ್ಯೆಗಳ) ಕುಂದು-ಕೊರತೆಗಳ ಅಹವಾಲು ಆಲಿಸಿದರು.
ಈ ಸಂದರ್ಭದಲ್ಲಿ ಶಹಾಪುರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ, ಸಹಾಯಕ ನಿರ್ದೇಶಕರಾದ ಶಾರದಮ್ಮ ನಾಗ್ಲೋಟ್, ಜಿಪಂ SBM ಸಂಯೋಜಕ ಶಿವುಕುಮಾರ, ಗ್ರಾಮ ಪಂಚಾಯತ್ ಅಧ್ಯಕ್ಷ ಗೇನು ಸಿಂಗ್, ಪಿಡಿಒ ಮಡಿವಾಳಪ್ಪ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.