ಯಾದಗಿರಿ | ಜಾತಿ ನಿಂದನೆ ಆರೋಪ: ವ್ಯಕ್ತಿ ವಿರುದ್ಧ ಪ್ರಕರಣ ದಾಖಲು
ಶಹಾಪೂರ : ಸಮಾಜದ ಶೋಷಿತ ವರ್ಗದವರ ವಿರುದ್ಧ ನಿಂದನಾತ್ಮಕ ಪದ ಬಳಸಿ ಅಪಮಾನ ಮಾಡಿದ ಘಟನೆಯೊಂದು ಶಹಾಪೂರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಕುಟುಂಬದ ಒಳಗಿನ ವೈಯಕ್ತಿಕ ಕಲಹದ ವೇಳೆ ಮೇಲ್ವರ್ಗದ ವ್ಯಕ್ತಿಯೊಬ್ಬರು ಹೊಲೆಯ-ಮಾದಿಗ ಎಂದು ಜಾತಿ ನಿಂದನೆ ಮಾಡಿದ ಘಟನೆ ಚಟ್ನಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಚಟ್ನಳಿ ಗ್ರಾಮದ ಅಶೋಕ ತಂದೆ ಅಮೀನರೆಡ್ಡಿ ಪಾಟೀಲ ಎಂಬವರು ತಮ್ಮ ಮನೆಯ ಕೌಟುಂಬಿಕ ಜಗಳದ ವೇಳೆ ಪರಿಶಿಷ್ಟ ಜಾತಿಯ ಉಪಜಾತಿಗಳಾದ ಹೊಲೆಯ ಮತ್ತು ಮಾದಿಗ ಸಮುದಾಯದವರ ವಿರುದ್ಧ ಅವಹೇಳನಕಾರಿ ಶಬ್ದ ಬಳಕೆ ಮಾಡಿದ ಆರೋಪ ಕೇಳಿಬಂದಿದ್ದು, ಅದರ ದೃಶ್ಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎನ್ನಲಾಗಿದೆ.
ಈ ಕುರಿತು ಜುಮ್ಮಣ್ಣ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕಾಶೀನಾಥ ನಾಟೇಕಾರ್ ಅವರ ನೇತೃತ್ವದಲ್ಲಿ ಶಹಾಪೂರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.