ಯಾದಗಿರಿ | ರಾಜ್ಯ ಮಟ್ಟದ ಯುವಜನೋತ್ಸವ ಸಂಘಟಿಸಲು ಸಕಲ ಸಿದ್ಧತೆ ಮಾಡಿಕೊಳ್ಳಿ : ಡಿಸಿ ಹರ್ಷಲ್ ಭೋಯರ್
ಯಾದಗಿರಿ: ಡಿ.3 ಹಾಗೂ 4 ರಂದು ರಾಜ್ಯ ಮಟ್ಟದ ಯುವಜನೋತ್ಸವನ್ನು ಯಾದಗಿರಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಸರ್ವ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಹಮ್ಮಿಕೊಳ್ಳುವ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾದಗಿರಿಯಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಸಂಘಟನೆಗೆ ಸರ್ಕಾರದ ನಿರ್ದೇಶನವಿರುವ ಹಿನ್ನೆಲೆಯಲ್ಲಿ , ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು. ಮುಖ್ಯ ಸಮಾರಂಭದ ಉದ್ಘಾಟನೆಗೆ ಮಾನ್ಯ ಮುಖ್ಯಮಂತ್ರಿಗಳು ಆಗಮಿಸುವುದರಿಂದ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅವರು ಸೂಚಿಸಿದರು.
ಮುಖ್ಯ ಸಮಾರಂಭಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಮುಖ್ಯ ವೇದಿಕೆ, ಶಾಮಿಯಾನ, ವಿದ್ಯುತ್, ಅಲಂಕಾರ, ವಿವಿಧ ವಸತಿ ನಿಲಯ, ಸಮುದಾಯ ಭವನ ಗಳಲ್ಲಿ, ವಸತಿ, ಊಟೋಪಚಾರ, ಸಾರಿಗೆ , ಸೇರಿದಂತೆ ಅವಶ್ಯಕ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ ಅವರು, ಏಳು ವಿವಿಧೆಡೆ ಕಾರ್ಯಕ್ರಮಗಳ ವೇದಿಕೆಗಳನ್ನು ಸಿದ್ದಗೊಳಿಸ ಬೇಕು ಎಂದರು.
ಪೂರ್ವ ಸಿದ್ಧತೆಗಳನ್ನು ನೋಡಿಕೊಳ್ಳಲು ಸ್ವಾಗತ ಸಮಿತಿ, ನೋಂದಣಿ ಸಮಿತಿ, ವಸತಿ ಸಮಿತಿ, ಸಾರಿಗೆ ಸಮಿತಿ, ಊಟೋಪಚಾರ ಸಮಿತಿ, ಹಣಕಾಸು, ಶಿಷ್ಟಾಚಾರ ಸಮಿತಿ,ವೇದಿಕೆ ನಿರ್ಮಾಣ ಹಾಗೂ ಅಲಂಕಾರ ಸಮಿತಿ, ತೀರ್ಪುಗಾರರ ಸಮಿತಿ, ರಕ್ಷಣಾ ಸಮಿತಿ, ಆರೋಗ್ಯ ಸಮಿತಿ,ಪ್ರಚಾರ ಸಮಿತಿ, ವಿಜ್ಞಾನ, ವಸ್ತುಪ್ರದರ್ಶನ ಸಮಿತಿ, ಸ್ವಯಂ ಸೇವಕರ ಸಮಿತಿಗಳನ್ನು ರಚಿಸಲಾಗಿದ್ದು, ಈ ಸಮಿತಿಗಳ ಅಧ್ಯಕ್ಷರು ತುರ್ತಾಗಿ ಸಭೆ ಕರೆದು ಸಮಿತಿ ಸದಸ್ಯರೊಂದಿಗೆ ಸಮನ್ವಯ ಸಾಧಿಸಿ ಸೂಕ್ತ ಕ್ರಮ ಕೈಗೊಂಡು ಮುಂದಿನ ಸಭೆಯಲ್ಲಿ ಮಾಹಿತಿ ಒದಗಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ರಾಜು ಬಾವಿ ಹಳ್ಳಿ ಅವರು, ಯುವಜನೋತ್ಸವದಲ್ಲಿ 15 ರಿಂದ 29 ವರ್ಷ ವಯೋಮಾನದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಯುವಕ, ಯುವತಿ ಸಂಘದ ಸದಸ್ಯರು, ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ವಿಜೇತರಾದ ಪ್ರತಿ ಜಿಲ್ಲೆಯಿಂದ 32 ಜನ ಸ್ಪರ್ಧಾಳುಗಳಂತೆ ಸುಮಾರು 1200 ಜನ ಯುವಕ, ಯುವತಿಯರು, ಅಧಿಕಾರಿ, ಸಿಬ್ಬಂದಿಗಳು ಒಳಗೊಂಡಂತೆ 1,500 ಜನ ರಾಜ್ಯದ ಎಲ್ಲ ಜಿಲ್ಲೆಗಳಿಂದ ಭಾಗವಹಿಸಲಿದ್ದಾರೆ. ಜಾನಪದ ನೃತ್ಯ ,ಜಾನಪದ ಗೀತೆ,(ಪ್ರಾದೇಶಿಕ ಭಾಷೆ ) ಕಥೆ ಬರೆಯುವುದು,( ಹಿಂದಿ, ಆಂಗ್ಲ,ಪ್ರಾದೇಶಿಕ ಭಾಷೆ ಯಲ್ಲಿ), ಭಾಷಣ, ಕವಿತೆ ಬರೆಯುವುದು , ವಿಜ್ಞಾನ ಮೇಳ ಹಾಗೂ ವಸ್ತು ಪ್ರದರ್ಶನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ್, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್, ಜಿ.ಪಂ ಮುಖ್ಯ ಯೋಜನಾಧಿಕಾರಿ ದೇವರಮನಿ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.